Amruthadhaare: ಗೌತಮ್ ದಿವಾನ್ ಮದುವೆಯಲ್ಲಿ ಸಣ್ಣ ಬದಲಾವಣೆ ಮಾಡಿದ್ದೇನು..?
ಆನಂದ್ ಖುಷಿಯಿಂದ ಗೌತಮ್ನನ್ನು ಮಾತನಾಡಿಸುತ್ತಿರುತ್ತಾನೆ. ಅತ್ತಿಗೆ ಸಿಕ್ಕಿದ್ದು ನನಗೆ ಬಹಳ ಖುಷಿಯಾಯ್ತು. ಅವರು ಸಿಕ್ಕಿದ್ದು ನನಗೆ ತಾಯಿ ಸಿಕ್ಕಂತಾಯ್ತು ಎಂದು ಕೊಂಚ ಎಮೋಷನಲ್ ಆಗುತ್ತಾನೆ. ಭೂಮಿಕಾ ಮನೆಯವರು ಮದುವೆಯ ಬಗ್ಗೆ ಮಾತುಕತೆ ಮುಗಿದ ಮೇಲೆ ಗೌತಮ್ ಮನೆಯಿಂದ ವಾಪಸ್ ಹೊರಡುತ್ತಾರೆ. ಹಳೆಯ ಕಾರಿನಲ್ಲಿ ಐವರು ಕುಳಿತುಕೊಂಡು ಪ್ರಯಾಣ ಮಾಡುತ್ತಿರುತ್ತಾರೆ.
ಮಂದಾಕಿನಿ ಇಂದಾದರೂ ನಾವು ಐಷಾರಾಮಿ ಕಾರಿನಲ್ಲಿ ಮನೆಯವರೆಗೂ ಹೋಗಬಹುದಿತ್ತು. ಆದರೆ, ಭೂಮಿಕಾ ಮತ್ತು ಸದಾಶಿವನ ಸ್ವಾಭಿಮಾನದಿಂದ ಅದೂ ತಪ್ಪಿ ಹೋಯ್ತು ಎಂದುಕೊಳ್ಳುತ್ತಾಳೆ. ಓಬಿರಾಯನ ಕಾಲದಿಂದ ಇರುವ ಈ ಹಳೆಯ ಕಾರೇ ಗತಿ. ನಾವು ಯಾವಾಗ ಐಷಾರಾಮಿ ಕಾರಿನಲ್ಲಿ ಸುತ್ತಾಡುತ್ತೀವೋ ಎಂದು ಮಂದಾಕಿನಿ ಮಾತನಾಡುತ್ತಾಳೆ. ಆದರೆ, ಮನೆಯವರೆಲ್ಲಾ ನಿಮಗೆ ಈ ಗಾಡಿಯೇ ಸರಿ. ಕಾರನ್ನು ಓಡಿಸುವ ಬದಲು ಆಕ್ಸಿಡೆಂಟ್ ಮಾಡಿದ್ದೇ ಹೆಚ್ಚು ಎಂದು ಹೇಳುತ್ತಾರೆ.

ಮಂದಾಕಿನಿ ಮಾತ್ರ ಹೊಸ ಕಾರನ್ನು ಖರೀದಿಸುವ ಬಗ್ಗೆ ಪೀಠಿಕೆ ಹಾಕುತ್ತಾಳೆ. ಬಳಿಕ ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ದೇವಸ್ಥಾನದಲ್ಲಿ ಭೂಮಿಕಾ ಹೆಸರಲ್ಲಿ ಅರ್ಚನೆ ಮಾಡಿಸುತ್ತಾರೆ. ಎಲ್ಲರೂ ಭೂಮಿಕಾ ಖುಷಿಯಾಗಿರಲಿ. ಅವಳ ಮುಂದಿನ ಬದುಕು ಸುಖವಾಗಿರಲಿ ಎಂದು ದೇವರ ಬಳಿ ಬೇಡಿಕೊಳ್ಳುತ್ತಾರೆ. ಆದರೆ, ಭೂಮಿಕಾ ತನಗಿಂತಲೂ ತನ್ನ ಮನೆಯವರಿಗೆ ಖುಷಿ, ಸುಖ, ನೆಮ್ಮದಿ ಸಿಗಲಿ ಎಂದು ಕೇಳಿಕೊಳ್ಳುತ್ತಾರೆ.
ಭೂಮಿಕಾಗೆ ಗೌತಮ್ ಕರೆ
ಬಳಿಕ ಎಲ್ಲರೂ ಐಸ್ ಕ್ರೀಮ್ ತಿನ್ನಲು ಹೋಗುತ್ತಾರೆ. ಆಗ ಸದಾಶಿವ ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾನೆ. ಅವರ ಸಾಧನೆಯನ್ನು ನೋಡಿದ್ದೆವು, ಆದರೆ, ಅವರ ಮನಸ್ಸನ್ನು ಇಂದು ತಿಳಿದುಕೊಂಡಂತಾಯ್ತು ಎಂದು ಹೇಳುತ್ತಾರೆ. ನಂತರ ಭೂಮಿಕಾಳನ್ನು ಗೌತಮ್ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಎಲ್ಲರೂ ಕೇಳುತ್ತಾರೆ. ಆದರೆ, ಭೂಮಿಕಾ ಏನೂ ಹೇಳದೇ ಸುಮ್ಮನೆ ನಿಂತಿರುತ್ತಾಳೆ. ನಾಚಿಕೊಂಡು ಏನೂ ಹೇಳದೇ ಇರುವ ಸಮಯಕ್ಕೆ ಸರಿಯಾಗಿ ಭೂಮಿಕಾಳಿಗೆ ಗೌತಮ್ ಕರೆ ಮಾಡುತ್ತಾನೆ.

ಮದುವೆ ಹಾಲ್ಗೆ ಎಸಿ ಬೇಕೆಂದ ಗೌತಮ್
ಇತ್ತ ಗೌತಮ್ಗೆ ಬಹಳ ಶೆಕೆ ಆಗುತ್ತಿರುತ್ತದೆ. ಎಸಿ ಹಾಕಿಕೊಳ್ಳುತ್ತಾನೆ. ಕೂಡಲೇ ಭೂಮಿಕಾಳಿಗೆ ಕಾಲ್ ಮಾಡುತ್ತಾನೆ. ಮದುವೆ ಬಗ್ಗೆ ಮಾತನಾಡುವಾಗ ನೀವೆಲ್ಲೇ ಮಾಡಿಕೊಟ್ಟರೂ ಸರಿಯೇ ಎಂದು ಹೇಳಿಬಿಟ್ಟೆ. ಆದರೆ, ಈಗ ಒಂದು ಬದಲಾವಣೆ ಮಾಡಬೇಕಿತ್ತು. ಮದುವೆಯ ಹಾಲ್ನಲ್ಲಿ ಎಸಿ ಇದ್ದರೆ ಒಳ್ಳೆಯದು. ನನಗೆ ಶೆಕೆಯನ್ನು ತಡೆದುಕೊಳ್ಳಲು ಆಗುವುದಿಲ್ಲ. ಶೆಕೆ ಎಂದರೆ ಅಲರ್ಜಿ, ಹಾಗಾಗಿ ಎಸಿ ಇರಲಿ ಎಂದು ಹೇಳುತ್ತಾನೆ. ಭೂಮಿಕಾ ಫೋನ್ ಕಟ್ ಮಾಡುತ್ತಿದ್ದಂತೆ ಎಲ್ಲರೂ ಏನಾಯ್ತು ಎಂದು ಕೇಳುತ್ತಾರೆ. ಆಗ ಭೂಮಿಕಾ ಮದುವೆಯಲ್ಲಿ ಎಸಿ ಬೇಕಂತೆ ಎಂದು ಹೇಳಿದಾಗ ಎಲ್ಲರೂ ಒಂದೇ ಸಲ ನಗುತ್ತಾರೆ.
ಮಂದಾಕಿನಿ ಜಂಭದ ಮಾತು
ಇನ್ನು ಮನೆಯಲ್ಲಿ ಭೂಮಿಕಾ ತನ್ನ ನಿಶ್ಚಿತಾರ್ಥದ ಉಂಗುರಕ್ಕೆ ದಾರ ಸುತ್ತಿ ಟೈಟ್ ಮಾಡಿಕೊಳ್ಳುತ್ತಿರುತ್ತಾಳೆ. ಆಗ ಅಪಾರ್ಟ್ಮೆಂಟ್ನ ಅಕ್ಕಪಕ್ಕದ ಮನೆಯವರು ಬರುತ್ತಾರೆ. ಮಂದಾಕಿನಿ ಈಗ ಜಂಭದಿಂದ ಮಾತನಾಡಲು ಶುರು ಮಾಡುತ್ತಾಳೆ. ಭೂಮಿಕಾ ಸಿಗುವುದಿಲ್ಲ ಬ್ಯುಸಿ ಇದ್ದಾಳೆ ಎಂದು ಬಾಗಿಲಿನಲ್ಲೇ ನಿಂತು ಮಾತನಾಡಿಸುತ್ತಿರುತ್ತಾಳೆ.
8 ಲಕ್ಷದ ಉಂಗುರ ಎಂದ ಮಂದಾಕಿನಿ
ಭೂಮಿಕಾಳ ಉಂಗುರ ನೋಡಿದ ಶೃತಿ ಚೆನ್ನಾಗಿದೆ ಎಂದು ಹೇಳಿದಾಗ ಮಂದಾಕಿನಿ ಬೇಕಂತಲೇ 8 ಲಕ್ಷದ ಡೈಮೆಂಡ್ ಉಂಗುರ ಎಂದು ಜಂಭದಲ್ಲಿ ಮಾತನಾಡುತ್ತಿರುತ್ತಾಳೆ. ನನ್ನ ಮಗಳ ಜಾತಕದ ಬಗ್ಗೆ ಈ ಹಿಂದೆ ಕೆಟ್ಟದಾಗಿ ಮಾತನಾಡಿದರೂ ಎಂಬ ಕಾರಣಕ್ಕೆ ಮಂದಾಕಿನಿಗೆ ಅವರೆಲ್ಲರ ಮೇಲೆ ಬೇಸರವಿರುತ್ತದೆ.


Click it and Unblock the Notifications











