Amruthadhaare ; ಹಾವು ಸಾಯಬಾರದು ಕೋಲು ಮುರಿಯಬಾರದು, ಹೊಸ ಪ್ಲಾನ್ ಮಾಡಿದ ಶಕುಂತಲಾ- ಹೆಚ್ಚಾಯ್ತು ಭೂಮಿಕಾ ಅನುಮಾನ
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಕೈಯಿಂದ ಮಗುವನ್ನು ಭೂಮಿಕಾ ಕಿತ್ತುಕೊಂಡಿದ್ದಾಳೆ. ಇದರಿಂದ ಕೋಪ ಮಾಡಿಕೊಂಡಂತೆ ಡ್ರಾಮಾ ಮಾಡುವ ಶಕುಂತಲಾ, ಗೌತಮ್ ಏನು ಇದೆಲ್ಲ ಎಂದು ಪ್ರಶ್ನೆ ಮಾಡಿದ್ದಾಳೆ. ಭಾಗ್ಯಕ್ಕ ಆರೋಗ್ಯ ಸರಿಯಾಗಿಲ್ಲ ಬದಲಿಗೆ ಇನ್ನು ಹಾಳಾಗುತ್ತಿದೆ ಅವರನ್ನು ಡಾಕ್ಟರ್ ಕಡೆ ತೋರಿಸುವುದು ಒಳ್ಳೆಯದು ಎಂದು ಹೇಳುತ್ತಾಳೆ. ಶಕುಂತಲಾ .. ಭಾಗ್ಯಮ್ಮ ಮತ್ತು ಭೂಮಿಕಾ ನಡುವೆ ಗೌತಮ್ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿದ್ದಾನೆ.
ಭೂಮಿಕಾ ಮಾಡಿದ್ದು ತಪ್ಪು ಆದರೆ ಭೂಮಿಕಾ ಪರಿಸ್ಥಿತಿ ನಿಮಗೆ ಗೊತ್ತು, ಅವರು ಈ ತರ ಮಾಡಬಾರದಿತ್ತು ಎನ್ನುವುದು ನಿಜಾ ಆದರೆ ಮಗು ವಿಚಾರದಲ್ಲಿ ಭೂಮಿಕಾ ತುಂಬಾ ಪೊಸೆಸಿವ್ ಆಗಿದ್ದಾರೆ, ನಿಮ್ಮ ಮೇಲೆ ಬೇಜಾರ ಇಲ್ಲ ನೀವು ಬೇಜಾರ ಮಾಡ್ಕೋಬೇಡಿ ಎನ್ನುತ್ತಾನೆ. ಭೂಮಿಕಾ ಮತ್ತು ಮಗು ವಿಚಾರದಲ್ಲಿ ಸ್ವಲ್ಪ ಹುಷಾರಾಗಿರಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಾನೆ.

ಭಾಗ್ಯಮ್ಮ ನಡೆಯಿಂದ ಭೂಮಿಕಾಗೆ ಹೆಚ್ಚಾಯ್ತು ಅನುಮಾನ
ಈ ಕಡೆ ಶಕುಂತಲಾ ಕೈಯಿಂದ ಮಗು ಕಿತ್ಕೊಂಡು ಬಂದ ಭೂಮಿಕಾ, ನನ್ನ ಮಗುನ ಜೋಪಾನ ಮಾಡಬೇಕು.. ನನ್ನ ಮಗುನ ಯಾರಾದರೂ ಕಿತ್ಕೊಂಡು ಹೋಗ್ತಾರೆ ಎಂದು ನನಗೆ ಅನಸ್ತಿದೆ ಎಂದು ಗೌತಮ್ ಎದುರು ಹೇಳುತ್ತಾಳೆ. ನನಗೆ ಭಯ ಆಗ್ತಿದೆ. ನಾನು ಇವನನ್ನು ಜೋಪಾನ ಮಾಡಬೇಕು ಎನ್ನುತ್ತಾಳೆ.
ಭೂಮಿಕಾ ಹಾವ ಭಾವ ನೋಡಿ ಮಾತು ಕೇಳಿ ಇಷ್ಟಕ್ಕೆ ಹೀಗೆ ಆಡ್ತಿದ್ದಾರೆ, ಮಗು ಕಳೆದುಹೋದ ವಿಚಾರ ಗೊತ್ತಾದರೆ ಏನಾಗಬಹುದು ನೆನಸಿಕೊಂಡರೆ ಭಯವಾಗುತ್ತಿದೆ ಎಂದು ಗೌತಮ್ ಮನದಲ್ಲಿಯೇ ಅಂದುಕೊಳ್ಳುತ್ತಾನೆ. ಇತ್ತ ಭಾಗ್ಯ ಅತ್ತೆ ಏನೂ ಆಗದೇ ಆ ತರ ರಿಯ್ಯಾಕ್ಟ್ ಮಾಡಲು ಸಾಧ್ಯವೇ ಇಲ್ಲ. ಅವರು ಬಂದು ನನ್ನತ್ರ ಏನೋ ಹೇಳುವ ಪ್ರಯತ್ನ ಮಾಡಿದ್ದಾರೆ ಅಂದರೆ ಏನೋ ಆಗಿದೆ ಅಂತಾನೇ ಅರ್ಥ ಎಂದು ಭೂಮಿಕಾ ಮನದಲ್ಲಿ ಯೋಚನೆ ಮಾಡುತ್ತಾಳೆ.
ಭಾಗ್ಯಗೆ ಮತ್ತೆ ಬೆದರಿಕೆ ಹಾಕುವ ಶಕುಂತಲಾ
ಇನ್ನೊಂದು ಕಡೆ ಭಾಗ್ಯ ರೂಮ್ಗೆ ಶಕುಂತಲಾ ಬಂದಿದ್ದು ನನ್ನನೇನು ದಡ್ಡಿ ಅಂದುಕೊಂಡಿದ್ದೀಯಾ, ನಾನು ಒಳಗೆ ಬಂದಿದ್ದು ಮಗುಗೆ ಏನೂ ಮಾಡೋಕೆ ಅಲ್ಲ, ನೀನು ಸರಿ ಹೋಗಿದಿಯಾ ಎನ್ನುವ ಅನುಮಾನ ನನಗೆ ಇತ್ತು ಅದೀಗ ನಿಜಾ ಆಯ್ತು ಎನ್ನುತ್ತಾಳೆ. ನನ್ನ ಅದೃಷ್ಟಕ್ಕೆ ನಿನಗೆ ಮಾತು ಬರ್ತಿಲ್ಲ, ಹಾಗಂಥ ನಾನು ಮೈ ಮರಿಯುತ್ತೇನೆ ಎಂದುಕೊಳ್ಳಬೇಡ ಎನ್ನುತ್ತಾಳೆ.
ಮೊದಲು ನಿನ್ನ ಇಲ್ಲಿಂದ ಎತ್ತಂಗಡಿ ಮಾಡಿಸ್ತೀನಿ ಆ ದೇವರೆ ಬಂದರೂ ನಿನ್ನ ಮಗನ್ನ.. ನಿನ್ನ ಸೊಸೆಯನ್ನ, ನಿನ್ನ ಮೊಮ್ಮಗನನ್ನು ಉಳಿಸೋಕಾಗಲ್ಲ ಎನ್ನುತ್ತಾಳೆ. ನಾನ್ಯಾಕಾದರೂ ಸರಿ ಹೋದೆ ಅಂತ ನಿನಗೆ ಅನಿಸಬೇಕು ಆ ತರ ಮಾಡ್ತೀನಿ ಎಂದು ಬೆದರಿಕೆ ಹಾಕಿ ಹೋಗುತ್ತಾಳೆ. ಶಕುಂತಲಾ ಮಾತುಗಳಿಗೆ ಭಾಗ್ಯಮ್ಮ ಕಣ್ಣೀರು ಹಾಕುತ್ತಾಳೆ.

ಡಾಕ್ಟರ್ನ ಕರೆಸಿದ ಗೌತಮ್
ಶಕುಂತಲಾ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಗೌತಮ್, ಮನೆಗೆ ಡಾಕ್ಟರ್ನ ಕರೆಸಿದ್ದಾನೆ. ಭಾಗ್ಯಮ್ಮನ ಚೆಕಪ್ ಮಾಡಿಸುತ್ತಿದ್ದಾನೆ. ಭಾಗ್ಯಮ್ಮ ಆರೋಗ್ಯ ತಪಾಸಣೆ ಮಾಡುವ ಡಾಕ್ಟರ್ ಮೊದಲು ನೀಡಿದ್ದ ಮಾತ್ರೆಗಳು ಕರೆಕ್ಟ್ ಆಗಿವೆ. ಇದರಲ್ಲಿಯೇ ಇವರ ಆರೋಗ್ಯ ಸರಿ ಹೋಗಬೇಕಿತ್ತು. ಆದರೂ ಸರಿಯಾಗಿಲ್ಲ ಅಂದರೆ ಇವರ ಆರೋಗ್ಯ ಹದಗೆಡುತ್ತಿದೆ ಎಂದೇ ಅರ್ಥ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಈ ತರಹದ ಕೇಸ್ಗಳಲ್ಲಿ ಮೊದ ಮೊದಲು ಪರಿಚಯಸ್ಥರ ಮೇಲೆಯೇ ವೈಲೆಂಟ್ ಆಗಿ ವರ್ತಿಸಲು ಶುರು ಮಾಡುತ್ತಾರೆ ಎಂದು ಹೇಳುತ್ತಾರೆ. ಡಾಕ್ಟರ್ ಮಾತು ಕೇಳಿ ಗೌತಮ್ ಆತಂಕ ಹೆಚ್ಚಾಗಿದೆ.
ಜೈದೇವ್ ಜೊತೆ ಹೊಸ ಪ್ಲಾನ್ ಚರ್ಚೆ ಮಾಡುವ ಶಕುಂತಲಾ
ಜೈದೇವ್ ಮನೆಗೆ ಶಕುಂತಲಾ ಬಂದಿದ್ದು ಭಾಗ್ಯ ಸರಿ ಹೋಗಿರುವ ವಿಚಾರ ಹೇಳುತ್ತಾಳೆ. ಇತ್ತೀಚೆಗೆ ನಾವು ಮಾಡಿರುವ ಕೆಲಸ ಎಲ್ಲ ಅವಳಿಗೆ ಗೊತ್ತಾಗಿದೆ. ಮಾತು ಬರ್ತಾ ಇಲ್ಲ ಅದಕ್ಕೆ ನಾವು ಸೇಫ್ ಆಗಿದೀವಿ ಎಂದು ಹೇಳುತ್ತಾಳೆ. ಅವಳು ಸರಿ ಹೋಗಿಲ್ಲ ಎಂದುಕೊಂಡು ಮಗುನ ಕಿಡ್ನಾಪ್ ಮಾಡಿರುವ ನಾನು ಅವಳಿಗೆ ಹೇಳಿ ಬಿಟ್ಟಿದೀನಿ ಎಂದು ಹೇಳುತ್ತಾಳೆ.
ಇದಕ್ಕೆ ಜೈದೇವ್ ಯಾಕೆ ಹೆದರಿಕೊಳ್ತೀಯಾ ಎನ್ನುತ್ತಾನೆ. ಆಗ ಮನೆಯಲ್ಲಿ ನಡೆದಿದ್ದನ್ನೆಲ್ಲ ಶಕುಂತಲಾ ವಿವರಿಸಿದ್ದು ಜೈದೇವ್ ರಿಸ್ಕ್ ತಗೊಳ್ಳೋದು ಬೇಡ ಹೇಗಾದರೂ ಮಾಡಿ ಅವಳನ್ನು ಮುಗಿಸಿ ಬಿಡೋಣ ಎನ್ನುತ್ತಾನೆ. ಆಗ ಶಕುಂತಲಾ ಹಾವು ಸಾಯಬೇಕು ಕೋಲು ಮುರಿಯಬಾರದು ಎನ್ನುವಂತೆ ನಾನೊಂದು ಪ್ಲಾನ್ ಮಾಡಿದ್ದೀನಿ ಎನ್ನುತ್ತಾಳೆ.
ಸದ್ಯ ಗೌತಮ್ ಡಾಕ್ಟರ್ ಮಾತುಗಳನ್ನು ಕೇಳಿ ಆತಂಕಗೊಂಡಿದ್ದು, ಭೂಮಿಕಾ ಜೊತೆ ಆಸ್ಪತ್ರೆಗೆ ಭಾಗ್ಯಮ್ಮನ ಸೇರಿಸುವ ಕುರಿತು ಚರ್ಚೆಯನ್ನು ಮಾಡಿದ್ದಾನೆ. ಭೂಮಿಕಾ ಭಾಗ್ಯ ಅತ್ತೆ ಯಾರ ಮೇಲೆ ಹಲ್ಲೆ ಮಾಡಿಲ್ಲ, ಈ ವಿಚಾರ ದೊಡ್ಡದು ಮಾಡೋದು ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ ಎಂದು ಹೇಳುತ್ತಾಳೆ. ಭಾಗ್ಯಮ್ಮನ ಗೌತಮ್ ಆಸ್ಪತ್ರೆಗೆ ಸೇರಿಸುತ್ತಾನಾ ? ಶಕುಂತಲಾ ಮತ್ತು ಜೈದೇವ್ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











