Amruthadhaare ; ಭೂಮಿಕಾಗೆ ಶಕುಂತಲಾ ಅಂದು ಕೊಟ್ಟ ಚೈನ್ ಇಂದು ಉರುಳಾಗುತ್ತಾ.?
ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚೆಗೆ ಭೂಮಿಕಾ ಮತ್ತು ಗೌತಮ್ ನಡುವೆ ಈಗ ಪ್ರೀತಿ, ಕಾಳಜಿ ಬಿಟ್ಟು ಬೇರೆ ಯಾವುದಕ್ಕೂ ಜಾಗವಿಲ್ಲದಂತಾಗಿದೆ. ಗೌತಮ್ ಭೂಮಿಕಾ ಮೇಲೆ ಪ್ರೀತಿಯನ್ನು ಹೆಚ್ಚಿಸಿಕೊಂಡಿರುವುದಲ್ಲದೇ, ಈಗ ಕಾಳಜಿಯನ್ನೂ ತೋರುತ್ತಿದ್ದಾನೆ. ತಮ್ಮ ಮಗುವಿಗೆ ತೊಂದರೆಯಾಗಬಾರದು ಎಂದು ಕಾಳಜಿವಹಿಸಿದ್ದಾನೆ. ಭೂಮಿಕಾ ಕೂಡ ತನ್ನ ಗರ್ಭದಲ್ಲಿರುವ ಕಂದನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದು, ಸದಾ ಗೌತಮ್ ಜೊತೆಗೆ ಇರಲು ಬಯಸುತ್ತಿದ್ದಾಳೆ.
ಜೀವನ್ ನಡವಳಿಕೆಯಿಂದ ಬೇಸತ್ತ ಮಹಿಮಾ
ಇತ್ತ ಜೀವನ್ ಕಥೆ ತಲೆ ಕೆಳಗಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ರಾಜೇಂದ್ರ ಭೂಪತಿ ಬೇಕಂತಲೇ ಜೀವನ್ ಗೆ ಕುಡಿಯುವ ಅಭ್ಯಾಸ ಮಾಡಿಸುತ್ತಿದ್ದಾನೆ. ಅಲ್ಲದೇ, ಮತ್ತಿನಲ್ಲಿರುವ ಜೀವನ್ ಗೆ ದಿವಾನ್ ಕುಟುಂಬದ ಬಗ್ಗೆ ಬೇಡದ ವಿಚಾರಗಳನ್ನು ತುಂಬುತ್ತಿದ್ದು, ಈಗ ಜೀವನ್ ಕೂಡ ತಮ್ಮ ಭಾವ ಗೌತಮ್ ಬಗ್ಗೆ ಕೇವಲವಾಗಿ ಮಾತನಾಡಲು ಶುರು ಮಾಡಿದ್ದಾನೆ. ಮನೆಗೆ ಪದೇ ಪದೇ ಜೀವನ್ ಕುಡಿದು ಬರುತ್ತಿರುವುದಕ್ಕೆ ಮಹಿಮಾ ಕೋಪ ಮಾಡಿಕೊಂಡಿದ್ದಾಳೆ. ಇದು ತಪ್ಪು ಎಂದು ಪ್ರಶ್ನೆ ಮಾಡಿದ್ದಕ್ಕೆ ಜೀವನ್ ಮಹಿಮಾ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಮಹಿಮಾ ಮಾಡಿದ ಪ್ರಶ್ನೆಗೆ ಸುಖಾ ಸುಮ್ಮನೆ ಅವರ ಕುಟುಂಬವನ್ನು ದೂರುತ್ತಿದ್ದಾನೆ. ಇದರಿಂದ ಮಹಿಮಾಳ ತಾಳ್ಮೆ ದಿನ ದಿನಕ್ಕೂ ಕ್ಷಿಣಿಸುತ್ತಿದ್ದು, ಜೀವನ್ ಹೊಸ ಸಮಸ್ಯೆಯನ್ನು ತಂದೊಡ್ಡುವುದರಲ್ಲಿ ಎರಡು ಮಾತಿಲ್ಲ.

ಉರುಳಾಯ್ತು ಸುಳ್ಳು ಹೇಳಿ ಕೊಟ್ಟಿದ್ದ ಚೈನ್
ಶಕುಂತಲಾ ಇಷ್ಟ ವರ್ಷಗಳ ಕಾಲ ತನಗೆ ಬೇಕಾದಂತೆ ಪರಿಸ್ಥಿತಿಯನ್ನು ತಂದುಕೊಳ್ಳುತ್ತಿದ್ದಳು. ತನಗೆ ಬೇಕಾದಂತೆ ಎಲ್ಲಾ ಸಂದರ್ಭಗಳನ್ನು ಮಾರ್ಪಾಡು ಮಾಡುತ್ತಿದ್ದಳು. ಹಾಗೆ ಬದುಕಿ, ದಿವಾನ್ ಕುಟುಂಬದ ಒಡತಿಯಾಗಿ ಮೆರೆಯುತ್ತಿದ್ದಳು. ಆದರೆ ಈಗ ಭೂಮಿಕಾ ಮನೆಗೆ ಎಂಟ್ರಿ ಕೊಟ್ಟ ಬಳಿಕ ಶಕುಂತಲಾ ಲೆಕ್ಕಾಚಾರಗಳು ಉಲ್ಟಾ ಆಗುತ್ತಿದೆ. ಈ ಹಿಂದೆ ದಿವ್ಯಾ ಗೌತಮ್ ತಾಯಿ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳಿದಾಗ, ತನ್ನ ಬಣ್ಣ ಬಯಲಾಗುತ್ತದೆ ಎಂದು ಭೂಮಿಕಾಳಿಗೆ ಮೈಕ್ ಇರುವ ಬಂಗಾರದ ಚೈನ್ ಅನ್ನು ನೀಡಿದ್ದಳು. ಈ ಚೈನ್ ಈಗ ಶಕುಂತಲಾ ಕೊರಳಿಗೆ ಉರುಳಾಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ.
ಶಕುಂತಲಾಳಿಗೆ ಕ್ಲಾಸ್ ತೆಗೆದುಕೊಂಡ ಭೂಮಿಕಾ
ಗೌತಮ್ ಗೆ ಆ ಚೈನ್ ಅನ್ನು ನೀಡಿದ್ದ ಶಕುಂತಲಾ, ಇದು ನಿಮ್ಮ ತಂದೆ ಈ ಮನೆಯ ಮೊದಲ ಸೊಸೆಗೆ ಎಂದು ಆಸೆಪಟ್ಟು ಮಾಡಿಸಿದ್ದು. ಹಾಗಾಗಿ ಇದನ್ನು ಭೂಮಿಕಾ ಕೊರಳಿಗೆ ಹಾಕು ಎಂದಿದ್ದಳು. ಅದರಂತೆ ಭೂಮಿಕಾ ತನಗೆ ಇಷ್ಟವಿಲ್ಲದಿದ್ದರೂ ಆ ಚೈನ್ ಅನ್ನು ಬಳಸುತ್ತಿದ್ದಳು. ಇದರಿಂದ ದಿವ್ಯಾ ಜೊತೆಗೆ ಭೂಮಿಕಾ ಮಾತನಾಡುತ್ತಿದ್ದ ಮಾತುಗಳನ್ನು ಶಕುಂತಲಾ ಕೇಳಿಸಿಕೊಂಡು ಪರೀಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿದ್ದಳು. ಇದೀಗ ಗೌತಮ್ ಮತ್ತದೇ ಚೈನ್ ಅನ್ನು ಭೂಮಿಕಾಳಿಗೆ ನೀಡಿದ್ದಾನೆ. ಇದನ್ನು ನೋಡಿದ ಭೂಮಿಕಾಳಿಗೆ ಅನುಮಾನ ಬಂದಿದೆ. ಹೀಗಾಗಿ ಚೈನ್ ಅನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ ಮೈಕ್ ಇರುವುದನ್ನು ತಿಳಿದುಕೊಂಡಿದ್ದಾಳೆ. ಅತ್ತೆ ಶಕುಂತಲಾಳಿಗೆ ಕ್ಲಾಸ್ ತೆಗೆದುಕೊಳ್ಳಲು ಮುಂದಾಗಿದ್ದಾಳೆ.
ಕೊನೆಯಾಗುತ್ತಾ ಶಕುಂತಲಾ ಆಟಗಳು
ಚೈನ್ ನಲ್ಲಿ ಮೈಕ್ ಇಟ್ಟಿರುವುದಕ್ಕೆ ಭೂಮಿಕಾಳಿಗೆ ಶಕುಂತಲಾಳ ಎಲ್ಲಾ ಲೆಕ್ಕಾಚಾರಗಳೂ ಅರ್ಥವಾಗಿದೆ. ಹೀಗೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾಳೆ. ಈ ಮೂಲಕ ಗೌತಮ್ ಬಾಳಲ್ಲಿ ಏನೆಲ್ಲಾ ಆಟವಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಈಗ ಶಕುಂತಲಾ ಬಣ್ಣವನ್ನು ಬಯಲು ಮಾಡಲು ಭೂಮಿಕಾ ಮುಂದಾಗಿದ್ದಾಳೆ. ಇದರಿಂದ ಶಕುಂತಲಾ ಆಟಗಳಿಗೆ ಆದಷ್ಟು ಬೇಗನೇ ಬ್ರೇಕ್ ಬೀಳುವ ಎಲ್ಲಾ ಸಾಧ್ಯತೆಗಳೂ ಇವೆ.


Click it and Unblock the Notifications











