Amruthadhare ; ಅಂದುಕೊಂಡಂತೆ ಜೈದೇವ್ ಕಪಿಮುಷ್ಠಿಯಲ್ಲಿ ಸಿಲುಕಿದ ಆಕಾಶ್ ; ಆಸ್ತಿಗಾಗಿ ಎಷ್ಟೊಂದು ಸರ್ಕಸ್-ಮುಂದೇನು ?
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪ್ಲಾನ್ ಬುಡಮೇಲಾಗಿದೆ. ಅಜ್ಜಿಯ ಆಸ್ತಿ ಕೊಳ್ಳೆ ಹೊಡೆಯಲು ತುದಿಗಾಲಿನಲ್ಲಿ ನಿಂತಿದ್ದ ಜೈದೇವ್ ಕೈಗೆ ಈಗ ಚಿಪ್ಪು ಸಿಕ್ಕಿದೆ. ತಾನೇ ತನ್ನ ಕೈಯಾರೆ ತಪ್ಪಿನಿಂದಾಗಿ ಜೈದೇವ್ ಕೈ ಕೈ ಹಿಸುಕಿಕೊಂಡಿದ್ದು ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಲು ಬಂದ ಜೈದೇವ್ಗೆ ಅಜ್ಜಿ ಶಾಕ್ ನೀಡಿದ್ದು ನನ್ನ ಎಲ್ಲ ಆಸ್ತಿಯನ್ನು ಗೌತಮ್ಗೆ ಬರೆದಾಗಿದೆ, ನೀನು ಏನೂ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದಿದ್ದಾಳೆ.
ಎಂಥ ದಡ್ಡ ಇದೀಯೋ ನೀನು ಯಾವ ಬೆರಳು ಒತ್ತಿಸಿಕೊಳ್ಳಬೇಕು ಎನ್ನುವುದು ಕೂಡ ನಿನಗೆ ಗೊತ್ತಿಲ್ಲವಲ್ಲ ಎಂದು ನಗಾಡುತ್ತಾಳೆ. ನಿನ್ನ ಕೈಗೆ ಚಿಪ್ಪೇ ಗತಿ, ನಿನ್ನ ನೋಡಿದರೆ ಪಾಪ ಅನ್ಸುತ್ತೆ ಎಂದು ಹೇಳುತ್ತಾಳೆ. ನೀನು ಏಲು ಕೇರಿ ನೀರು ಕುಡಿದಿರಬಹುದು ನಾನು ನೂರು ಕೆರೆ ಕಟ್ಟಿಸಿದವಳು ಎಂದು ಗುಡುಗುತ್ತಾಳೆ. ನನ್ನ ಆಸ್ತಿ ಏನೇ ಇದ್ದರೂ ನನ್ನ ಮೊಮ್ಮಗ ಗೌತಮ್ಗೆ ಸಿಗಬೇಕು, ಅವನೇ ನಿಜವಾದ ವಾರಸ್ದಾರ ಎಂದು ಹೇಳುತ್ತಾಳೆ. ಇಲ್ಲಿಂದ ಕೂಡಲೇ ಜಾಗ ಖಾಲಿ ಮಾಡುವಂತೆ ಗದರುತ್ತಾಳೆ.

ಅಜ್ಜಿಯ ಮಾತು ಕೇಳಿ ಇಂಗು ತಿಂದ ಮಂಗನಂತಾದ ಜೈದೇವ್ ಆಶ್ರಮದಿಂದ ಹೊರ ಬಂದಿದ್ದು ಮಿಂಚು ಮಾಡಿದ ಎಡವಟ್ಟಿನಿಂದಾಗಿ ಎಲ್ಲರೂ ನಿರೀಕ್ಷೆ ಮಾಡಿದಂತೆ ಮಲ್ಲಿ, ಭೂಮಿಕಾ ಮತ್ತು ಆಕಾಶ್ ಇರುವ ಫೋಟೋ ಸಿಕ್ಕಿದೆ. ಫೋಟೊ ನೋಡಿ ಜೈದೇವ್ಗೆ ಶಾಕ್ ಆಗಿದೆ. ಗೌತಮ್ ಮತ್ತು ಭೂಮಿಕಾ ಮಗಾನೇ ಆಕಾಶ್, ಆಕಾಶ್ನೇ ಅಪ್ಪು ಎನ್ನುವ ವಿಚಾರ ಕೂಡ ಗೊತ್ತಾಗಿದೆ. ಬಿಡಲ್ಲ ಅಪ್ಪು ನಿನ್ನನ್ನ ಎಂದು ಜೈದೇವ್ ಪ್ರತಿಜ್ಞೆ ಮಾಡಿದ್ದಾನೆ. ಬಾಲ ಹಿಡಿದು ಎಳೆದೆ ಅಂದರೆ ಭೂಮಿಕಾ ಎಲ್ಲಿಯೇ ಇದ್ದರೂ ತಾನಾಗಿಯೇ ಆಚೆ ಬರುತ್ತಾಳೆ ಎಂದು ಲೆಕ್ಕ ಹಾಕುತ್ತಾನೆ.
ಮುಂದುವರೆದು ತನ್ನ ಪ್ಲಾನ್ನ ಕಾರ್ಯರೂಪಕ್ಕೆ ತರಲು ಮುಂದಾಗಿರುವ ಜೈದೇವ್, ಆಕಾಶ್ನ ಹುಡುಕಿಕೊಂಡು ಶಾಲೆಗೆ ಬಂದಿದ್ದಾನೆ. ಮಲ್ಲಿ ತನಗೆ ಸಿಕ್ಕ ವಿಚಾರ ಹೇಳುತ್ತಾನೆ. ಜೈದೇವ್ ಮಾತುಗಳನ್ನು ಕೇಳಿ ಆಕಾಶ್ ಅವರೆಲ್ಲಿದ್ದಾರೆ ಎಂದು ಕೇಳಿದ್ದು, ನಮಗೆ ಇಷ್ಟೆಲ್ಲಾ ತೊಂದರೆ ನೀಡಿದವಳನ್ನು ನಿನಗೆ ತೋರಿಸದೇ ಬಿಡ್ತೀನಾ, ಬಾ ಎಂದು ತನ್ನ ಜೊತೆ ಕರೆದುಕೊಂಡು ಹೋಗಿದ್ದಾನೆ.
ಇನ್ನೊಂದು ಕಡೆ ಆಕಾಶ್ ಕಾಣಿಸದ ಹಿನ್ನೆಲೆ ಭೂಮಿಕಾ ಆತಂಕಗೊಂಡಿದ್ದು ಮಿಂಚುಗೆ ಈ ಕೆಲಸದ ಹಿಂದೆ ಜೈದೇವ್ ಕೈವಾಡ ಇರಬಹುದು ಎನ್ನುವ ಅನುಮಾನ ಬಂದಿದೆ. ಕೂಡಲೇ ಮಿಂಚು ಚಿತ್ರವನ್ನು ಬಿಡಿಸಿ ಭೂಮಿಕಾಗೆ ತೋರಿಸಿದ್ದಾಳೆ. ಜೈದೇವ್ ಚಿತ್ರವನ್ನು ನೋಡಿ ಭೂಮಿಕಾ ಆತಂಕ ಇನ್ನೂ ಹೆಚ್ಚಾಗಿದ್ದು ಸದ್ಯ ಆಕಾಶ್ನ ಜೈದೇವ್ನ ಕಪಿಮುಷ್ಠಿಯಿಂದ ಪಾರು ಮಾಡಲು ಜೈದೇವ್ ಮನೆಗೆ ಮಲ್ಲಿ ಜೊತೆ ಭೂಮಿಕಾ ಬಂದಿದ್ದಾಳೆ.

ಜೈದೇವ್ ಈಗ ಯಾವ ದಾಳ ಉರುಳಿಸುತ್ತಾನೆ ಎನ್ನುವುದನ್ನು ನೋಡಬೇಕಿದೆ. ಎಲ್ಲರ ನಿರೀಕ್ಷೆಯಂತೆ ಆಕಾಶ್ನ ಮುಂದಿಟ್ಟುಕೊಂಡು ಗೌತಮ್ ಹೆಸರಿಗೆ ಮಾಡಿದ್ದೇನೆ ಎಂದು ಹೇಳಿದ್ದ ಅಜ್ಜಿಯ ಆಸ್ತಿಯನ್ನು ಜೈದೇವ್ ಕೇಳಬಹುದು. ಇನ್ನು ಮಲ್ಲಿ ಆಸ್ತಿ ಕೂಡ ಇನ್ನೂ ಜೈದೇವ್ ಕೈ ಸೇರಿಲ್ಲ. ಹೀಗಾಗಿ ಮಲ್ಲಿ ಆಸ್ತಿ ಕೂಡ ಜೈದೇವ್ ಕಬಳಿಸಬಹುದು.
ಮತ್ತೊಂದು ಕಡೆ ಆಕಾಶ್ನ ಜೈದೇವ್ ಕರೆದುಕೊಂಡು ಹೋಗಿರುವ ವಿಚಾರ ಗೌತಮ್ಗೆ ಗೊತ್ತಾದಂತೆ ಇಲ್ಲ. ಗೊತ್ತಾದ ಮೇಲೆ ಗೌತಮ್ ಹೇಗೆ ರಿಯ್ಯಾಕ್ಟ್ ಮಾಡುತ್ತಾನೆ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ. ಒಟ್ನಲ್ಲಿ ಸದ್ಯ ಅಮೃತಧಾರೆ ಮತ್ತೊಂದು ತಿರುವು ಪಡೆದಿದ್ದು ಒಬ್ಬರ ಜೊತೆ ಒಬ್ಬರಿರಲಿ ಹಂಬಲಿಸುತ್ತಿರುವ ಗೌತಮ್ ಮತ್ತು ಭೂಮಿಕಾ ತಮ್ಮ ಮಗನನ್ನು ಹೇಗೆ ಪಾರು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ನಡೆದ ಈ ಘಟನೆಯಿಂದ ಭೂಮಿಕಾ ಮತ್ತೆ ಗೌತಮ್ನಿಂದ ದೂರವಾಗ್ತಾಳಾ ಎನ್ನುವುದಕ್ಕೆ ಉತ್ತರ ಕೂಡ ಸಿಗಬೇಕಿದೆ.


Click it and Unblock the Notifications











