Amruthadhaare ; ಮಲ್ಲಿ ಜಾಡು ಹಿಡಿದು ಹೊರಟ ಜೈದೇವ್ ಕಪಿಮುಷ್ಟಿಯಲ್ಲಿ ಮುಗ್ದ ಮಕ್ಕಳು- ಕೆರಳಿದ ಭೂಮಿಕಾ
''ಅಮೃತಧಾರೆ'' ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗೌತಮ್ ಮತ್ತು ಭೂಮಿಕಾ ನಡುವೆ ಇದ್ದ ಅಂತರ ಕಡಿಮೆಯಾಗುತ್ತಿದೆ. ತನ್ನ ಅತ್ತೆಯ ಮನೆಗೆ ಗೌತಮ್ ಹೋಗಿ ಬಂದಿದ್ದು ಅಪ್ಪ ಅಮ್ಮ ಹೇಗಿದ್ದಾರೆ ಎಂದು ಕೇಳಿದ ಭೂಮಿಕಾಗೆ ಗೌತಮ್ ಗದರಿದ್ದಾನೆ. ನೀವು ಮಾಡ್ತಿರುವುದು ಸರೀನಾ ಎಂದೆಲ್ಲಾ ಹತ್ತಾರು ಪ್ರಶ್ನೆ ಕೇಳಿದ್ದಾನೆ. ಗೌತಮ್ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಭೂಮಿಕಾ ತಲೆ ತಗ್ಗಿಸಿದ್ದಾಳೆ.
ಮತ್ತೊಂದು ಕಡೆ ಜೈದೇವ್ಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೇಗಾದರೂ ಮಾಡಿ ಮಲ್ಲಿಯ ಬಳಿ ಪ್ರಾಪರ್ಟಿ ಪೇಪರ್ಗೆ ಸಹಿ ಹಾಕಿಸಿಕೊಳ್ಳಬೇಕೆಂದು ಮಲ್ಲಿಯ ಫೋನ್ ನಂಬರ್ ಕಷ್ಟಪಟ್ಟು ಹುಡುಕಿ ತೆಗೆದು ಮಾತನಾಡಿದರೆ, ಮಲ್ಲಿ ಮನೆಗೆ ಬಂದವಳೇ ಡಿವೋರ್ಸ್ ಪೇಪರ್ಗೆ ಮೊದಲು ಸಹಿ ಹಾಕಿದರೆ ಮಾತ್ರ ಆಸ್ತಿ ಪತ್ರಕ್ಕೆ ಸಹಿ ಹಾಕುವುದಾಗಿ ಹೇಳಿ ಹೋಗಿದ್ದಾಳೆ.

ಮಲ್ಲಿ ಆಡಿದ ಈ ಮಾತುಗಳಿಂದ ಬಾಲ ಸುಟ್ಟ ಬೆಕ್ಕಿನಂತೆ ಜೈದೇವ್ ಚಡಪಡಿಸುತ್ತಿದ್ದಾನೆ. ಆದರೆ ಜೈದೇವ್ ಸೋಲು ಒಪ್ಪಿಕೊಂಡಿಲ್ಲ. ಆಸ್ತಿಯನ್ನು ಹೇಗಾದರೂ ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಮಲ್ಲಿಯ ವಾಸಸ್ಥಳ ಹುಡುಕುತ್ತಿದ್ದಾನೆ. ಮಲ್ಲಿಯ ಜಾಡು ಹುಡುಕುತ್ತಾ, ಹುಡುಕುತ್ತಾ ಅಲೆಯುತ್ತಿದ್ದಾನೆ.
ಜೈದೇವ್ ಎಂತಹ ಕುತಂತ್ರಿ ಎನ್ನುವುದು ಗೊತ್ತಿದ್ದರೂ ಅವನನ್ನು ಕಡೆಗಣಿಸಿರುವ ಮಲ್ಲಿ ಸದ್ಯ ಆಕಾಶ್ ಮತ್ತು ಮಿಂಚುನ ಕರ್ಕೊಂಡು ಮಾಲ್ ಗೆ ಬಂದಿದ್ದಾಳೆ. ಇದೇ ಮಾಲ್ಗೆ ಜೈದೇವ್ ಕೂಡ ಬಂದಿದ್ದು, ಜೈದೇವ್ ಜೊತೆ ಇದ್ದು ಪಕ್ಷ ಬದಲಿಸಿರುವ ಮಾವ ಲಕ್ಕಿ ಲಕ್ಷ್ಮೀಕಾಂತ್ ಆತಂಕಕ್ಕೀಡಾಗಿದ್ದಾನೆ. ಹೇಗಾದರೂ ಮಾಡಿ ಮಲ್ಲಿಯನ್ನು ಬಚಾವ್ ಮಾಡಬೇಕೆಂದುಕೊಂಡು ಮಲ್ಲಿಯನ್ನೇನೋ ಸೈಡ್ ಗೆ ಕರೆತಂದಿದ್ದಾನೆ.
ಆದರೆ.. ಜೈದೇವ್ ಇದೇ ವೇಳೆ ಆಕಾಶ್ ಮತ್ತು ಮಿಂಚು ಬಳಿ ತಲುಪಿದ್ದಾನೆ. ಜೈದೇವ್ನ ಪೂರ್ವಾಪರ ಗೊತ್ತಿರದ ಆಕಾಶ್ ಮತ್ತು ಮಲ್ಲಿ ಬಳಿ ಬಂದು ಜೈದೇವ್ ಮಲ್ಲಿಯ ಫೋಟೊ ತೋರಿಸಿದ್ದಾನೆ. ಇವರನ್ನು ನೋಡಿದ್ದೀರಾ ಎಂದು ಕೇಳಿದ್ದಾನೆ.
ಸದ್ಯ ಜೈದೇವ್ನ ಈ ನಡೆ ಕುತೂಹಲ ಕೆರಳಿಸಿದ್ದು, ಜೈದೇವ್ ತೋಡಿದ ಹಳ್ಳಕ್ಕೆ ಮಲ್ಲಿ ತಾನಾಗಿಯೇ ಬಂದು ಬೀಳುತ್ತಾಳಾ..? ಅಥವಾ ಜೈದೇವ್ ಕಪಿಮುಷ್ಟಿಯಲ್ಲಿರುವ ಆಕಾಶ್ ಮತ್ತು ಮಿಂಚುನಾ ಪಾರು ಮಾಡುತ್ತಾಳಾ..? ಎನ್ನುವುದನ್ನು ನೋಡಬೇಕಿದೆ. ಇನ್ನು..ಇದೇ ಸಮಯದಲ್ಲಿ ಆಕಾಶ್ ಮತ್ತು ಮಿಂಚು ಸತ್ಯ ಹೇಳಿದರೆ..? ಮಲ್ಲಿ ನನ್ನ ಚಿಕ್ಕಿ ಎಂದು ಆಕಾಶ್ ಅಪ್ಪಿ-ತಪ್ಪಿ ಹೇಳಿದರೆ..? ಮುಂದೇನಾಗಬಹುದು..? ಎನ್ನುವ ಚಿಂತೆ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.

ಕೆರಳಿ ಕೆಂಡವಾ ಭೂಮಿಕಾ
ಮತ್ತೊಂದು ಕಡೆ ಆಕಾಶ್ ಮತ್ತು ಮಿಂಚುನ ಅವರದ್ದೇ ಕ್ಲಾಸಿನ ಹುಡುಗನೊಬ್ಬ ಹಂಗಿಸಿದ್ದ. ಗೌತಮ್ಗೆ ಅವಮಾನವಾಗುವಂತೆ ಮಾತನಾಡಿದ್ದ. ಕ್ಯಾಬ್ ಡ್ರೈವರ್ ಎಂದು ಹೀಯಾಳಿಸಿದ್ದ. ಈ ವಿಷಯಕ್ಕೆ ಆಕಾಶ್ ಮತ್ತು ಮಿಂಚು ಆ ಹುಡುಗನ ಜೊತೆ ರಂಪ ರಾಮಾಯಣ ಮಾಡಿದ್ದರು.
ಇದೀಗ ಅದೇ ಹುಡುಗನ ತಾಯಿ ಭೂಮಿಕಾ ಬಳಿ ಬಂದು ಕಿರಿಕ್ ಮಾಡಿದ್ದಾಳೆ. ಡ್ರೈವರ್ ಪರ ಮಾತಾಡೋಕೆ ಅವರೇನು ನಿಮ್ಮ ಗಂಡಾನಾ..? ಎಂದೆಲ್ಲಾ ಕೆಣಕಿದ್ದಾಳೆ. ಇದರಿಂದ ಭೂಮಿಕಾ ಕೆರಳಿದ್ದು ತನ್ನನ್ನೂ ಪ್ರಶ್ನಿಸಲು ಬಂದ ಮಹಿಳೆಯ ಮೈಚಳಿ ಬಿಡಿಸಿದ್ದಾಳೆ. ಭೂಮಿಕಾ ಈ ರೌದ್ರಾವತಾರ ಕಂಡು ಗೌತಮ್ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರು ಕೂಡ ಭೂಮಿಕಾ ಸಹಿಸುವುದಿಲ್ಲ ಎನ್ನುವ ವಿಚಾರ ಆಕಾಶ್ ಮತ್ತು ಮಿಂಚುಗೆ ಮನದಟ್ಟಾಗಿದೆ.
ಒಟ್ನಲ್ಲಿ ಸದ್ಯ ಜೈದೇವ್ ಕೈಯಲ್ಲಿ ಆಕಾಶ್ ಮತ್ತು ಮಿಂಚು ಸಿಕ್ಕಿಹಾಕಿಕೊಂಡಿದ್ದು, ಮುಂದೇನಾಗುತ್ತೆ ಎನ್ನುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ. ಜೈದೇವ್ ಮತ್ತೆ ತನ್ನ ಹಳೆಯ ಕಿಡ್ನ್ಯಾಪ್ ಶೈಲಿಯನ್ನು ಮುಂದುವರೆಸುತ್ತಾನಾ..? ಆಕಾಶ್ ಮತ್ತು ಮಿಂಚುನ ಮಲ್ಲಿ ಕಾಪಾಡುತ್ತಾಳಾ..? ಜೈದೇವ್ ವಕ್ರದೃಷ್ಟಿ ತಮ್ಮ ಮೇಲೆ ಬಿದ್ದಿದೆ ಎನ್ನುವ ವಿಚಾರವನ್ನು ಭೂಮಿಕಾಗೆ ಮಲ್ಲಿ ಹೇಳುತ್ತಾಳಾ..? ಅಪ್ಪಿ ತಪ್ಪಿಜೈದೇವ್ ಮಾಡಿರುವ ಈ ಕುತಂತ್ರ ಗೌತಮ್ಗೆ ಗೊತ್ತಾದರೆ ಮುಂದೇನು..? ಹೀಗೆ ಸದ್ಯ ಹಲವು ಪ್ರಶ್ನೆಗಳು ''ಅಮೃತಧಾರೆ'' ಧಾರಾವಾಹಿಯನ್ನು ನೋಡುವ ಪ್ರೇಕ್ಷಕರಿಗೆ ಕಾಡುತ್ತಿದೆ.


Click it and Unblock the Notifications











