ಅಮೃತಧಾರೆಯ ಭೂಮಿಕಾ ಪಾತ್ರಧಾರಿ ನಿರೂಪಕಿಯೂ ಹೌದು!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಆಗಿ ನಟಿಸುತ್ತಿರುವ ಛಾಯಾ ಸಿಂಗ್ ಜನಪ್ರಿಯ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಜನಪ್ರಿಯ ನಾಯಕ ನಟಿ ಪ್ರಶಸ್ತಿ ಪಡೆದುಕೊಂಡಿರುವ ಛಾಯಾ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
"ನಿಜ ಹೇಳಬೇಕೆಂದರೆ ನನಗೆ ಈ ಅವಾರ್ಡ್ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಥ್ಯಾಂಕ್ಯೂ ಸೋ ಮಚ್, ನೀವೆಲ್ಲಾ ನನ್ನ ಆ್ಯಕ್ಟಿಂಗ್ ಇಷ್ಟ ಪಟ್ಟು, ನನ್ನನ್ನು ಪ್ರೋತ್ಸಾಹಿಸಿ ನನಗೆ ವೋಟ್ ಮಾಡಿದ್ದೀರ. ತುಂಬಾನೇ ಖುಷಿಯಾಗುತ್ತಿದೆ. ಖುಷಿಯಲ್ಲಿ ನನಗೆ ಪದಗಳೇ ಬರುತ್ತಿಲ್ಲ. ನಿಮ್ಮ ಪ್ರೀತಿ, ಆಶೀರ್ವಾದ ಯಾವತ್ತಿಗೂ ನನ್ನ ಮೇಲೆ ಹೀಗಿರಲಿ" ಎಂದು ಹೇಳಿಕೊಂಡಿದ್ದಾರೆ.

'ಮುನ್ನುಡಿ' ಸಿನಿಮಾದ ಉನ್ನೀಸಾ ಆಗಿ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಛಾಯಾ ಸಿಂಗ್ ತದ ನಂತರ ನಾಯಕಿಯಾಗಿ ಸಿನಿಪ್ರಿಯರನ್ನು ರಂಜಿಸಿದ ಬೆಡಗಿ. ಕನ್ನಡ ಮಾತ್ರವಲ್ಲದೇ ಮಲಯಾಳಂ, ತಮಿಳು, ತೆಲುಗು ಹಾಗೂ ಬಂಗಾಳಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಛಾಯಾ ಸಿಂಗ್ ಅವರಿಗೆ ಕಿರುತೆರೆ ಹೊಸದೇನಲ್ಲ.
'ಸರೋಜಿನಿ' ಧಾರಾವಾಹಿಯಲ್ಲಿ ಸರೋಜಿನಿ ಆಗಿ ಮೋಡಿ ಮಾಡಿದ ಛಾಯಾ ಸಿಂಗ್ ಮುಂದೆ 'ಪ್ರೇಮಕಥೆಗಳು' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ತದ ನಂತರ ತಮಿಳಿನ 'ನಾಗಮ್ಮ' ಧಾರಾವಾಹಿಯಲ್ಲಿ ನಾಗಮ್ಮ ಪಾತ್ರಕ್ಕೆ ಜೀವ ತುಂಬಿದ್ದ ಛಾಯಾ ಸಿಂಗ್ ತೆಲುಗಿನ 'ಕಾಂಚನಾ ಗಂಗಾ', ತಮಿಳಿನ 'ರನ್', 'ಪೂವ್ವೆ ಉನ್ನಕಾಗ', 'ವಣಕ್ಕಂ ತಮಿಝಾ', 'ನಮ್ಮ ಮಾಧುರೈ ಸಿಸ್ಟರ್ಸ್' ಧಾರಾವಾಹಿಗಳಲ್ಲಿ ನಟಿಸಿ ಪರಭಾಷೆಯ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಂದಿನಿ'ಯಲ್ಲಿ ನಂದಿನಿ ಹಾಗೂ ಜನನಿ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಇದೀಗ 'ಅಮೃತಧಾರೆ'ಯ ಭೂಮಿಕಾ ಪಾತ್ರದಲ್ಲಿ ಮತ್ತೆ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಜೊತೆಗೆ ತೆಲುಗಿನ 'ಆನು ಆನೇ ನೇನು' ಎನ್ನುವ ಧಾರಾವಾಹಿಯಲ್ಲಿ ಅಕ್ಷರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕುಣಿಯೋಣು ಬಾರಾ' ರಿಯಾಲಿಟಿ ಶೋ ಜಡ್ಜ್ ಆಗಿ ಆಕೆ ಗಮನ ಸೆಳೆದಿದ್ದರು.

ಇನ್ನು ನಟನೆಯ ಜೊತೆಗೆ ನಿರೂಪಕಿಯಾಗಿಯೂ ಛಾಯಾ ಸಿಂಗ್ ಗಮನ ಸೆಳೆದ ಚೆಲುವೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಲು ಜೇನು ನಾನು ನೀನು' ಶೋನ ನಿರೂಪಕಿಯಾಗಿಯೂ ಛಾಯಾ ಸಿಂಗ್ ಮೋಡಿ ಮಾಡಿದ್ದರು. ಹಿರಿತೆರೆಯ ಮೂಲಕ ನಟನೆಗೆ ಕಾಲಿಟ್ಟು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಛಾಯಾ ಸಿಂಗ್ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಹಾಗೂ ಸಿನಿ ಪ್ರಿಯರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











