ಸುಧಾರಾಣಿಯೊಂದಿಗೆ ಬಾಲ ನಟನಾಗಿ ನಟಿಸಿದ್ದ ಈ ನಟ ಈಗ ಕಿರುತೆರೆಯ ಸ್ಟಾರ್; ಯಾರಿವರು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'. ಇದರಲ್ಲಿ ನಾಯಕ ಗೌತಮ್ ದಿವಾನ್ ತಮ್ಮ ಜೈದೇವ್ ಪಾತ್ರದಲ್ಲಿ ಅಭಿನಯಿಸುತ್ತಿರುವ ರಾಣವ್ ಗೌಡ ಬಾಲ ಕಲಾವಿದನಾಗಿ ಕಿರುತೆರೆಗೆ ಪರಿಚಿತರಾದ ಹುಡುಗ.
ಗೌತಮ್ ದಿವಾನ್ ಚಿಕ್ಕಮ್ಮ ಶಕುಂತಲಾನ ಮಗ ಆಗಿರುವ ಜೈದೇವ್ ಅಮ್ಮನಂತೆಯೇ ದುರಾಸೆ ವ್ಯಕ್ತಿ. ಅಣ್ಣ ಗೌತಮ್ ಸಾಧಿಸಿದ್ದಲ್ಲವೆನ್ನು ತನ್ನ ಸ್ವತ್ತು ಮಾಡಿಕೊಳ್ಳಬೇಕು ಎಂದು ಬಯಸಿರುವ ಕುತಂತ್ರಿ. ಅಮ್ಮ ಶಕುಂತಲಾ ಮಾತೇ ವೇದವಾಕ್ಯ. ನಗುನಗುತ್ತಲೇ ತನ್ನ ಅಣ್ಣ ಗೌತಮ್ ಮೇಲೆ ಮಸಲತ್ತು ಮಾಡುವಷ್ಟು ಚಾಲಾಕಿ. ಇದು ಜೈದೇವ್ ಪಾತ್ರದ ಸಂಕ್ಷಿಪ್ತ ಪರಿಚಯ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತುಳಸಿ' ಧಾರಾವಾಹಿಯಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಾಣವ್ ಗೌಡ ಆರನೇ ಕ್ಲಾಸ್ ವಿದ್ಯಾರ್ಥಿಯಾಗಿದ್ದರು. ಆಗ ಸುಧಾರಾಣಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ರಾಣವ್ಗೆ ಆಗಿನಿಂದಲೇ ನಟನಾಗಿ ಮೋಡಿ ಮಾಡುವ ಬಯಕೆ. ನಂತರ ನಟನೆಯಿಂದ ದೂರ ಉಳಿದಿದ್ದ ರಾಣವ್ ಅವರಿಗೆ ಪಠ್ಯಕ್ಕಿಂತಲೂ ಪಠ್ಯೇತರ ವಿಷಯದಲ್ಲಿ ಒಲವು ಜಾಸ್ತಿ.
ಅದೇ ಕಾರಣದಿಂದ ಇಂಜಿನಿಯರಿಂಗ್ ಸೇರಿದ ರಾಣವ್ ಗೌಡ ಓದಿಗೆ ಅರ್ಧಕ್ಕೆ ತಿಲಾಂಜಲಿ ಹೇಳಿ ನಟನೆಯತ್ತ ಮುಖ ಮಾಡಿದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ' ಧಾರಾವಾಹಿಯಲ್ಲಿ ನಾಯಕನ ಫ್ರೆಂಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ನಂತರ ಬಿ.ಸುರೇಶ್ ಅವರ 'ಜೀವನದಿ' ಧಾರಾವಾಹಿಯಲ್ಲಿ ಖಳನಾಯಕನ ಮಗನ ಸ್ನೇಹಿತನಾಗಿ ರಾಣವ್ ಸೈ ಎನಿಸಿಕೊಂಡರು.

ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಕುಮಾರಿ' ಧಾರಾವಾಹಿಯಲ್ಲಿ ಎರಡನೇ ನಾಯಕನಾಗಿ ರಾಣವ್ ಗೌಡ ನಟಿಸಿದ್ದರು. ನಾಯಕಿಯ ತಂಗಿಯ ಪ್ರಿಯತಮನಾಗಿ ನಟಿಸಿದ್ದ ರಾಣವ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಜೀವ ತುಂಬಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ನಾಯಕ ರಾಮಣ್ಣನ ತಮ್ಮ ನಂಜಂಡ ಆಲಿಯಾಸ್ ಕನ್ವರ್ ಆಗಿ ನಟಿಸಿದ್ದ ರಾಣವ್ 'ಮತ್ತೆ ವಸಂತ' ಧಾರಾವಾಹಿಯಲ್ಲಿಯೂ ನಟಿಸಿದ್ದರು.
ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಮಲಿ' ಧಾರಾವಾಹಿಯಲ್ಲಿ ಅಂಬಿಕಾ ಆಲಿಯಾಸ್ ಅಂಬಿ ಅಣ್ಣ ಅಮರ್ ಆಗಿ ಅಭಿನಯಿಸಿ, ಅಲ್ಲೂ ವೀಕ್ಷಕರ ಮನ ಸೆಳೆದಿದ್ದ ರಾಣವ್ ಗೌಡ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ಯಾದಾನ'ದಲ್ಲಿ ವಿಜಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಕಿರುತೆರೆಯ ಹೊರತಾಗಿ ಹಿರಿತೆರೆಯಲ್ಲಿಯೂ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. 'ಶ್ರೀಕಂಠ', 'ಮತ್ತೆ ಬಾ ಉಪೇಂದ್ರ', 'ವಿರಾಟ್' ಸಿನಿಮಾಗಳಲ್ಲಿ ನಟಿಸಿರುವ ಇವರು ಇದೀಗ ಜೈದೇವ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. "ನಾನು ಇಲ್ಲಿಯವರೆಗೆ ಮಾಡಿರುವಂತಹ ಎಲ್ಲಾ ಕ್ಯಾರೆಕ್ಟರ್ಗಳು ಕೂಡಾ ನನಗೆ ಇಷ್ಟ. ಎಲ್ಲ ಧಾರಾವಾಹಿಗಳಲ್ಲೂ ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುವ ಸುವರ್ಣಾವಕಾಶ ದೊರಕಿದೆ" ಎಂದು ಫಿಲ್ಮಿಬೀಟ್ ಜೊತೆಗೆ ರಾಣವ್ ಗೌಡ ಹೇಳಿಕೊಂಡಿದ್ದಾರೆ.
"ನಾನು ಇಲ್ಲಿಯ ತನಕ ನಟಿಸಿರುವಂತಹ ಎಲ್ಲಾ ಪಾತ್ರಗಳನ್ನು ಕೂಡಾ ನಾನು ಎಂಜಾಯ್ ಮಾಡಿಕೊಂಡೆ ನಟಿಸಿದ್ದೇನೆ. ಸತ್ಯ ಹೇಳಬೇಕೆಂದರೆ ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ. ಮಾತ್ರವಲ್ಲ ತುಂಬಾ ಖುಷಿಯಿಂದ ಕೆಲಸ ಮಾಡುತ್ತೇನೆ. ಚಿಕ್ಕ ವಯಸ್ಸಿನಲ್ಲಿ ನಟನಾಗಬೇಕು ಎಂದು ಬಯಸಿದ್ದು ಇದೀಗ ನನಸಾಗಿದೆ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ತುಂಬಾ ಲಕ್ಕಿ" ಎಂದು ರಾಣವ್ ಗೌಡ ಅವರು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.


Click it and Unblock the Notifications











