Amruthadhare ; ಮೂರು ವರ್ಷದಲ್ಲಿ ಎರಡನೇ ಬಾರಿ ಬದಲಾದ ಮಹಿಮಾ ; ಇಶಿತಾ ಜಾಗಕ್ಕೆ ಬಂದ ಚೆಲುವೆ ಯಾರು ?
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಕೆಲವರು ಸಂಭಾವನೆ ವಿಚಾರದಿಂದ ಧಾರಾವಾಹಿಯಿಂದ ಹೊರ ಬಂದರೆ, ಇನ್ನೂ ಕೆಲವರು ಧಾರಾವಾಹಿಯ ವಾತಾವರಣ ಇಷ್ಟವಾಗದೇ ಹೊರ ಬರುತ್ತಾರೆ.
ಕೆಲವರು ಕಿರಿಕ್ ಮಾಡಿಕೊಂಡು ತಮಗೆ ಹೆಸರು ನೀಡಿದ ಧಾರಾವಾಹಿಗೆ ಗುಡ್ ಬೈ ಹೇಳಿದರೆ, ಮತ್ತೂ ಕೆಲವರು ಸದ್ಯ ನಿರ್ವಹಿಸುತ್ತಿರುವ ಪಾತ್ರಕ್ಕಿಂತ ಉತ್ತಮವಾದ ಪಾತ್ರ ಸಿಕ್ಕಿದೆ ಎಂದು ಹೊರ ಬರುತ್ತಾರೆ. ಬದಲಾವಣೆ ಜಗದ ನಿಯಮ. ಉದಾಹರಣೆಗೆ ಇಶಿತಾ ವರ್ಷ.

ಹೌದು, ಇಶಿತಾ ವರ್ಷ.. ''ಸರಸು'', ''ಕೃಷ್ಣ ರುಕ್ಮಿಣಿ'', ''ತಂಗಾಳಿ'', ''ಮನಸು ಮಮತಾ'', ಸೇರಿ ಹಲವು ಧಾರಾವಾಹಿ ಮಾಡಿರುವ ಇಶಿತಾ ಅವರ ಬದುಕಿಗೆ ''ಅಗ್ನಿಸಾಕ್ಷಿ'' ಭದ್ರ ಬುನಾದಿ ಹಾಕಿತ್ತು. ''ಅಗ್ನಿಸಾಕ್ಷಿ'' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಇಶಿತಾ ಮಿಂಚಿದ್ದರು. ಇವತ್ತು ಕೂಡ ಇವರನ್ನು ಅನೇಕರು ಮಾಯಾ ಎಂದೇ ಕರೆಯುತ್ತಾರೆ.
''ಅಗ್ನಿಸಾಕ್ಷಿ'' ಧಾರಾವಾಹಿ ನಂತರ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇಶಿತಾ ಇದೇ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತಮಗೆ ಡ್ಯಾನ್ಸ್ ಕಲಿಸಿದ ಮುರುಘನ್ ಅವರಿಗೆ ಮನ ಸೋತರು. ಇಬ್ಬರೂ ಪ್ರೇಮ ಲೋಕದಲ್ಲಿ ಸತತವಾಗಿ ಆರು ವರ್ಷಗಳ ಕಾಲ ಕಳೆದರು. 2019ರಲ್ಲಿ ಇಬ್ಬರೂ ಮದುವೆಯಾದರು. ಮದುವೆಯಾದ ಬಳಿಕ ಕಿರುತೆರೆಯಿಂದ ಕೊಂಚ ದೂರ ಉಳಿದರೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು.ಮದುವೆಯಾದ ಬಳಿ ರಾಜಾ-ರಾಣಿ ಸೀಸನ್ 1 ರಲ್ಲಿ ಪತಿ ಮುರುಘನ್ ಜೊತೆಗೆ ಇಶಿತಾ ಅವರು ಭಾಗವಹಿಸಿದರು. ಇದರಲ್ಲಿ ರನ್ನರಪ್ ಆಗಿ ಹೊರ ಹೊಮ್ಮಿದರು.
ಹೀಗೆ ಮದುವೆ ನಂತರ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಇಶಿತಾ ಕಿರುತೆರೆಗೆ ಮರಳಿ ಬಂದಿದ್ದು ''ಅಮೃತಧಾರೆ'' ಧಾರಾವಾಹಿ ಮೂಲಕ. ''ಅಮೃತಧಾರೆ''ಯಲ್ಲಿ ಮಹಿಮಾ ಪಾತ್ರದ ಮೂಲಕ ಇಶಿತಾ ಮತ್ತೊಮ್ಮೆ ಮನೆ ಮಾತಾದರು.
ಆದರೆ ಈಗ ಇಶಿತಾ ''ಅಮೃತಧಾರೆ'' ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಕೇವಲ ಧಾರಾವಾಹಿ ಮಾತ್ರವಲ್ಲ ಜೀ ಕನ್ನಡಗೆ ಗುಡ್ ಬೈ ಹೇಳಿ ಸ್ಟಾರ್ ಸುವರ್ಣಗೆ ಬಂದಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ''ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'' ಧಾರಾವಾಹಿಯಲ್ಲಿ ಯಲ್ಲಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಹಿನ್ನೆಲೆ ಇಶಿತಾ ವರ್ಷ ಅವರ ಜಾಗಕ್ಕೆ ''ಅಮೃತಧಾರೆ''ಯಲ್ಲಿ ಈಗ ರೋಹಿಣಿ ಕೃಷ್ಣ ಬಂದಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ''ಅಮೃತಧಾರೆ'' ಧಾರಾವಾಹಿಯಲ್ಲಿ ಮಹಿಮಾ ಪಾತ್ರ ಕೂಡ ಪ್ರಾಮುಖ್ಯತೆ ಹೊಂದಿರುವಂತಹ ಪಾತ್ರ. ಮುದ್ದಾಗಿ ಬೆಳೆದ, ಸ್ವಲ್ಪ ಹಠಮಾರಿ ಸ್ವಭಾವದ, ಅಣ್ಣನ ಅಚ್ಚುಮೆಚ್ಚಿನ ತಂಗಿಯಾಗಿ ಈ ಪಾತ್ರ ಪ್ರೇಕ್ಷಕರಿಗೆ ಹತ್ತಿರವಾಗಿದೆ.
ವಿಶೇಷ ಅಂದರೆ ''ನಮ್ಮ ಲಚ್ಚಿ'' ಧಾರಾವಾಹಿಗೆ ದಿಡೀರನೇ ಗುಡ್ ಬೈ ಹೇಳಿ ''ಅಮೃತಧಾರೆ''ಗೆ ಬಂದಿದ್ದ ಸಾರಾ ಅಣ್ಣಯ್ಯ ಈ ಮಹಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ ಕಳೆದ ವರ್ಷ ಜೂನ್ನಲ್ಲಿ ಸಾರಾ ಅಣ್ಣಯ್ಯ ಹೊರ ಬಂದರು. ಆ ನಂತರ ಸಾರಾ ಅಣ್ಣಯ್ಯ ಜಾಗಕ್ಕೆ ಇಶಿತಾ ವರ್ಷ ಬಂದಿದ್ದರು. ಈಗ 2026ರ ಆರಂಭದಲ್ಲಿ ರೋಹಿಣಿ ಕೃಷ್ಣ ಅವರು ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಅಂದ್ಹಾಗೇ ರೋಹಿಣಿ ಕೃಷ್ಣಗೆ ಕಿರುತೆರೆ ಹೊಸದೇನಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿರುವ ರೋಹಿಣಿ ಈ ಹಿಂದೆ ''ಗೌರಿಪುರದ ಗಯ್ಯಾಳಿಗಳು'', ''ಪಾರು'', ''ಸತ್ಯ'', ''ನಿನಗಾಗಿ'', ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ''ಅಮೃತಧಾರೆ''ಯ ಅಂಗಳಕ್ಕೆ ರೋಹಿಣಿ ಕೃಷ್ಣ ಬಂದಿದ್ದಾರೆ. ಒಟ್ನಲ್ಲಿ ಸದ್ಯ ಇಶಿತಾ ಅವರ ಜಾಗಕ್ಕೆ ರೋಹಿಣಿ ಬಂದಿದ್ದು ಮಹಿಮಾ ಪಾತ್ರದಲ್ಲಿ ರೋಹಿಣಿ ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಸಾರಾ, ಇಶಿತಾ ಅಥವಾ ರೋಹಿಣಿ.. ಈ ಮೂವರಲ್ಲಿ ಮಹಿಮಾ ಪಾತ್ರಕ್ಕೆ ಯಾರು ಹೆಚ್ಚು ಸೂಕ್ತ? ಕಾಮೆಂಟ್ ಮೂಲಕ ತಿಳಿಸಿ


Click it and Unblock the Notifications











