Amruthadhaare ; ಹಣದ ರಹಸ್ಯ ತಿಳಿಯುವ ಮುನ್ನವೇ ದಿಯಾ ಹೆಣ ಉರುಳಿಸಿದ ಜೈದೇವ್ ; ನೆಕ್ಸ್ಟ್ ಟಾರ್ಗೆಟ್ ಮಿಂಚು ?
'ಅಮೃತಧಾರೆ'' ಧಾರಾವಾಹಿ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಇನ್ನೇನು ಮಿಂಚು ರಹಸ್ಯ ಗೌತಮ್ಗೆ ಗೊತ್ತಾಗಬೇಕು, ಅಷ್ಟರಲ್ಲಿ ಲಕ್ಷ್ಮೀಕಾಂತ್ನನ್ನು ಜೈದೇವ್ ಕಿಡ್ನಾಪ್ ಮಾಡಿದ್ದಾನೆ. ಇನ್ನು ಇತ್ತ ಗೌತಮ್ ದಿವಾನ್ ತಂಗಿ ಮಹಿಮಾಗೆ ಮತ್ತೆ ಗರ್ಭಪಾತ ಆಗಿದೆ. ಈ ಹಿಂದೆ ಅವಳೇ ಗರ್ಭಪಾತ ಮಾಡಿಸಿಕೊಂಡಿದ್ದಳು. ಈಗ ಅವಳು ಬಯಸಿದರೂ ಕೂಡ ತಾಯಿ ಆಗೋಕೆ ಆಗ್ತಿಲ್ಲ. ತಾಯಿ ಆಗೋಕೆ ಆಗ್ತಿಲ್ಲ ಅನ್ನೋ ವಿಚಾರದಿಂದ ಮಹಿಮಾ ಕುಗ್ಗಿ ಹೋಗಿದ್ದಾಳೆ.
ಮಹಿಮಾ ಮೊಗದಲ್ಲಿ ಮತ್ತೆ ಮೊದಲಿನ ಉತ್ಸಾಹ, ಹುಮ್ಮಸ್ಸು ಕಂಡು ಬರಬೇಕಂದರೆ ಮಹಿಮಾ ಮಡಿಲಿಗೆ ಮಿಂಚುನ ಹಾಕಬೇಕು, ಅದೊಂದೇ ನಮ್ಮ ಮುಂದಿರುವ ಆಯ್ಕೆ ಎಂದು ಸದಾಶಿವ ದಂಪತಿ ಗೌತಮ್ ಮತ್ತು ಭೂಮಿಕಾಗೆ ಹೇಳಿದ್ದಾರೆ. ಇದರಿಂದ ಇಬ್ಬರಿಗೆ ಆಕಾಶ ಕಳಚಿ ಬಿದ್ದಂತಾಗಿದ್ದು ಒಲ್ಲದ ಮನಸಿಂದ ಮಿಂಚುವನ್ನು ದತ್ತು ಕೊಡಲು ಗೌತಮ್ ಮತ್ತು ಭೂಮಿಕಾ ಮುಂದಾಗುತ್ತಿದ್ದಾರೆ.

ಮತ್ತೊಂದು ಕಡೆ ಮಿಂಚು ಹಿನ್ನೆಲೆ ಜೈದೇವ್ಗೆ ಗೊತ್ತಾಗಬಾರದೆಂದು ಲಕ್ಷ್ಮೀಕಾಂತ್ ಪಡಬಾರದ ಕಷ್ಟವನ್ನೆಲ್ಲಾ ಪಡುತ್ತಿದ್ದಾನೆ. ಆದರೆ, ಸುಮ್ಮನೆ ಇರದ ಪಾರ್ಥ ನೇರಾ ಜೈದೇವ್ ಬಳಿ ಮಹಿಮಾ ಅನುಭವಿಸುತ್ತಿರುವ ನೋವಿನ ವಿಚಾರ ಪ್ರಸ್ತಾಪಿಸಿದ್ದಾನೆ. ಜೈದೇವ್ಗೆ ಇದರಿಂದ ಹಾಲು ಕುಡಿದಷ್ಟೇ ಸಂತೋಷವಾಗಿದ್ದು ಮಾವ ಲಕ್ಷ್ಮೀಕಾಂತ್ ಎದುರು ಗಹಗಹಿಸಿದ್ದಾನೆ.
ಶಕುನಿ ಮಾವ ಎಡವಟ್ಟು
ಮಿಂಚು ಇನ್ಮುಂದೆ ಮಹಿಮಾ ಪಾಲಾಗಲಿದ್ದಾಳೆ ಎನ್ನುವ ವಿಚಾರ ಅರಿತ ಲಕ್ಷ್ಮೀಕಾಂತ್ ಮನದಲ್ಲಿಯೇ ನೊಂದುಕೊಂಡು ಅಯ್ಯೋ ಇದೇನಾಗೋಯ್ತು, ಸ್ವಂತ ಮಗು ಮತ್ತೆ ದೂರವಾಗ್ತಾಳಾ ಎಂದು ಗೊಣಗುತ್ತಾನೆ. ಲಕ್ಷ್ಮೀಕಾಂತ್ ಆಡಿದ ಈ ಮಾತು ಜೈದೇವ್ ಕಿವಿಗೆ ಬಿದ್ದಿದ್ದು ಲಕ್ಷ್ಮೀಕಾಂತನ ಕೊರಳ ಪಟ್ಟಿ ಹಿಡಿದು ಕೇಳಿದ್ದಾನೆ. ಮಿಂಚು ರಹಸ್ಯ ಭೇದಿಸುವಲ್ಲಿ ಜೈದೇವ್ ಕೊನೆಗೂ ಯಶಸ್ವಿಯಾಗಿದ್ದಾನೆ.
ಜೀತದಾಳಲ್ಲ ಓರಿಜನಲ್ ಜೆಡಿ
ಆದರೆ, ಇದೇ ವೇಳೆ ಬದಲಾದ ಜೈದೇವ್ ವರ್ತನೆಯನ್ನು ಗಮನಿಸಿದ್ದ ದಿಯಾ ಬೇಬಿ ಜೈದೇವ್ ಹಿಂದೆ ಸೆಕ್ಯೂರಿಟಿಯನ್ನು ಕಳಿಸಿರುತ್ತಾಳೆ. ಆ ಸೆಕ್ಯೂರಿಟಿ ಮೂಲಕ ದಿಯಾಗೆ ಕೂಡ ಮಿಂಚು ವಿಷಯ ಗೊತ್ತಾಗಿದೆ. ಮಿಂಚು ರಹಸ್ಯ ಗೊತ್ತಾದ ಹಿನ್ನೆಲೆ ಸದ್ಯ ಜೈದೇವ್ ವರಸೆ ಮತ್ತೆ ಬದಲಾಗಿದ್ದು ದಿಯಾ ಮನೆಯಲ್ಲಿ ಜೀತದಾಳನಾಗಿದ್ದ ಜೈದೇವ್ ಮತ್ತೊಮ್ಮೆ ದಿಯಾ ಮುಂದೆ ಅಬ್ಬರಿಸಿದ್ದಾನೆ.
ಏಕಾಏಕಿ ಬದಲಾದ ದಿಯಾ
ಜೈದೇವ್ನ ಬದಲಾದ ಈ ವರ್ತನೆ ಕಂಡು ದಿಯಾ ಬೆಚ್ಚಿ ಬಿದ್ದಿದ್ದು ಗೌತಮ್ ಮತ್ತು ಭೂಮಿಕಾಗೆ ಎಲ್ಲ ವಿಚಾರ ಹೇಳಲು ಮುಂದಾಗುತ್ತಾಳೆ. ಏಕಾಏಕಿ ದಿಯಾಗೆ ಜ್ಞಾನೋದಯವಾಗಿದ್ಹೇಗೆ..? ದಿಯಾ ಒಳ್ಳೆಯವಳಾಗಿದ್ಹೇಗೆ..? ಎನ್ನುವುದಕ್ಕೆ ಉತ್ತರ ನಿರ್ದೇಶಕರಿಗೆ ಗೊತ್ತಾದರೂ, ದಿಯಾ ಪಾತ್ರಧಾರಿ ಶ್ವೇತಾ ಅವರ ರಿಯಲ್ ಲೈಫ್ ಮದುವೆ ಹಿನ್ನೆಲೆ ಈ ಪಾತ್ರಕ್ಕೊಂದು ಅಂತ್ಯ ಹಾಡಬೇಕಿತ್ತು. ಹೀಗಾಗಿ ದಿಯಾ ನೀಡಿದ ಹಿತವಚನ ಸಹಿಸದ ಜೈದೇವ್ ಸದ್ಯ ತನ್ನ ಬೇಬಿಯ ದಿಯಾ ಕಥೆಯನ್ನೇ ಮುಗಿಸಿದ್ದಾನೆ. ಆ ನಂತರ ಹಣದ ರಹಸ್ಯ ಗೊತ್ತಾಗುವ ಮುನ್ನವೇ ಹೆಣವಾದಳಲ್ಲ ಎಂದು ಗೋಳಾಡಿದ್ದಾನೆ.
ನೆಕ್ಸ್ಟ್ ಟಾರ್ಗೆಟ್ ಮಿಂಚು ?
ಸದ್ಯ ಜೈದೇವ್ಗೆ ಮಿಂಚುನೇ ಗೌತಮ್ ಮತ್ತು ಭೂಮಿಕಾ ಮಗಳೆನ್ನುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ಮಿಂಚು ಪ್ರಾಣಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ. ಇನ್ನು ಲಕ್ಷ್ಮೀಕಾಂತ್ ಕಥೆ ಗೌತಮ್ಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ಗೌತಮ್ ಕೈಗೆ ಲಕ್ಷ್ಮೀಕಾಂತ್ ಸಿಕ್ತಾನಾ..? ಅಪಾಯ ಎದುರಾಗುವ ಮೊದಲೇ ಗೌತಮ್ನ ಎಚ್ಚರಿಸುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ. ಜೈದೇವ್ ಪಾಪದ ಕೊಡ ಅದ್ಯಾವಾಗ ತುಂಬಿ ತುಳುಕುತ್ತೆ ಎನ್ನುವ ಪ್ರಶ್ನೆ ಕೂಡ ಸದ್ಯ ಧಾರಾವಾಹಿ ಪ್ರೇಕ್ಷಕರನ್ನು ಕಾಡುತ್ತಿದೆ. ಒಟ್ನಲ್ಲಿ ಸದ್ಯ ''ಅಮೃತಧಾರೆ'' ಕುತೂಹಲ ಕೆರಳಿಸಿದ್ದು ಕ್ಲೈಮ್ಯಾಕ್ಸ್ಗಾಗಿ ಹಲವರು ಕಾತುರದಿಂದ ಎದುರು ನೋಡುತ್ತಿದ್ಧಾರೆ.


Click it and Unblock the Notifications