'ಅಮೃತಧಾರೆ'ಯಲ್ಲಿ ಮಲತಾಯಿಯಾಗಿ ವೀಕ್ಷಕರನ್ನು ಕೆರಳಿಸುತ್ತಿರೋ ವನಿತಾ ವಾಸು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'. ಈ ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಮಲತಾಯಿ ಶಕುಂತಲಾ ಆಗಿ ಅಭಿನಯಿಸುವ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ ಹಿರಿಯ ನಟಿ ವನಿತಾವಾಸು.
ನಾಯಕ ಗೌತಮ್ಗೆ ಮಲತಾಯಿ ಶಕುಂತಲಾ ಎಂದರೆ ತುಂಬಾ ಪ್ರೀತಿ. ಆದರೆ ಶಕುಂತಲಾ ಹಾಗಲ್ಲ, ಆಕೆಗೆ ತನ್ನ ಮಕ್ಕಳ ಏಳಿಗೆಯಷ್ಟೇ ಮುಖ್ಯ. ಮಲತಾಯಿಯಾಗಿರುವ ಆಕೆ ಯಾವತ್ತಿಗೂ ಗೌತಮನನ್ನು ತನ್ನ ಸ್ವಂತ ಮಗ ಎಂದು ಒಪ್ಪಿಕೊಳ್ಳಲೇ ಇಲ್ಲ. ಮಲತಾಯಿ ಧೋರಣೆ ಮಾಡುವ ಶಕುಂತಲಾ, ಗೌತಮ್ ದಿವಾನ್ ಬದುಕಿನ ಸೂತ್ರಧಾರಿಯೂ ಹೌದು ಎನ್ನಬಹುದು.

'ಮನೆಯೊಂದು ಮೂರು ಬಾಗಿಲು'
ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವನಿತಾವಾಸು ಆ ಪಾತ್ರದ ಮೂಲಕ ಈಗಲೂ ಕಿರುತೆರೆ ಜಗತ್ತಿನಲ್ಲಿ ಫೇಮಸ್ಸು! ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸರಸ್ವತಿ- ಲಕ್ಷ್ಮಿ ಪ್ರಿಯೆ ಧಾರಾವಾಹಿಯಲ್ಲಿ ಗಯ್ಯಾಳಿ ಅತ್ತೆ ಸರಸ್ವತಿ ಪಾತ್ರಕ್ಕೆ ಜೀವ ತುಂಬಿದ್ದ ವನಿತಾವಾಸು ತದ ನಂತರ ರೇವತಿಯಾಗಿ ಬದಲಾಗಿದ್ದರು.
ಗಯ್ಯಾಳಿ ಅತ್ತೆಯಾಗಿ ಮೋಡಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಕಿ ಆಲಿಯಾಸ್ ಲಕ್ಷ್ಮಣನ ದೊಡ್ಡಮ್ಮ ರೇವತಿಯಾಗಿ ನಟಿಸಿದ್ದ ವನಿತಾ ವಾಸು ಅಲ್ಲಿಯೂ ಗಯ್ಯಾಳಿ ಅತ್ತೆಯಾಗಿ ಮಿಂಚಿದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ಭೈರಾದೇವಿಯಾಗಿ ನಟಿಸಿದ ಈಕೆ ಭಕ್ತಿಪ್ರಧಾನ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ.
ದುರ್ಜರ ಪಾತ್ರದಲ್ಲಿ ಮೋಡಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ'ದಲ್ಲಿ ರಾಕ್ಷಸಿ ದುರ್ಜರ ಆಗಿ ಅಭಿನಯಿಸಿದ್ದ ವನಿತಾವಾಸು ಅಲ್ಲೂ ಕೂಡಾ ಸೈ ಎನಿಸಿಕೊಂಡ ಪ್ರತಿಭೆ. ಇದೀಗ ಶಕುಂತಲಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ವನಿತಾವಾಸು ಈಗಾಗಲೇ ಚಿತ್ರರಂಗದಲ್ಲಿಯೂ ಮೋಡಿ ಮಾಡಿದ್ದಾರೆ.

'ಆಗಂತುಕ' ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟ ವನಿತಾ ವಾಸು ಇಲ್ಲಿಯವರೆಗೆ ಸುಮಾರು ಅರುವತ್ತಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿರುವ ವನಿತಾ ವಾಸು 'ಹುಡುಗರು' ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.


Click it and Unblock the Notifications











