Amruthadhaare ; ಕರ್ಮ ಯಾರನ್ನೂ ಬಿಡಲ್ಲ- ಜೈದೇವ್ಗೆ ಖೆಡ್ಡಾ, ದಿಯಾ ಜೊತೆ ಕೈ ಜೋಡಿಸ್ತಾನಾ ಶಕುನಿ ಮಾವ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್ ಮತ್ತು ಭೂಮಿಕಾ ವಠಾರದಲ್ಲಿದ್ದಾರೆ. ದೂರ ಇದ್ದರೂ ಕೂಡ ಇಬ್ಬರು ಹತ್ತಿರವಾಗಿದ್ದಾರೆ. ಗೌತಮ್ ಬದುಕಿನಲ್ಲಿ ಮಿಂಚಿನ ಸಂಚಾರ ಇದ್ದರೆ ಭೂಮಿಕಾ ಕನಸು 'ಆಕಾಶ'ದೆತ್ತರಕ್ಕಿದೆ. ತಮ್ಮ ತಮ್ಮ ಬದುಕಿನಲ್ಲಿ ಇಬ್ಬರು ಸದ್ಯ ಖುಷಿಯಾಗಿದ್ದು ಮಿಂಚು ಮತ್ತು ಆಕಾಶ್ ನಡುವೆ ಹಾವು ಮುಂಗುಸಿಯಂತಹ ಸಂಬಂಧ ಬೆಳೆದಿದೆ. ಇದರ ನಡುವೆ ಗೌತಮ್..
ತನ್ನ ಹತ್ತಿರ ಬಂದಂತೆ ಹಣೆಗೆ ಮುತ್ತು ನೀಡಿದಂತೆ, ಪ್ರೀತಿಯ ಸಾಂತ್ವಾನದ ನುಡಿ ನುಡಿದಂತೆ ಭೂಮಿಕಾಗೆ ಕನಸು ಬಿದ್ದಿದೆ. ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಭೂಮಿಕಾಗೆ ಗೌತಮ್ ಮಲ್ಲಿಗೆ ಹೂವನ್ನು ಕೂಡ ತಲುಪಿಸಿಯಾಗಿದೆ.

ಆದರೆ ಇದೇ ಸಮಯದಲ್ಲಿ ಮತ್ತೊಂದು ಕಡೆ ಹಣದ ದಾಹ ದಿಯಾ ಅಸಲಿಯತ್ತನ್ನೂ ಬಯಲಿಗೆಳೆದಿದೆ. ಹಣದ ಮೇಲಿನ ವ್ಯಾಮೋಹಕ್ಕೆ ಕಟ್ಟಿಕೊಂಡ ಗಂಡ ಜೈದೇವ್ ಮತ್ತು ನಂಬಿರುವ ಅತ್ತೆ ಶಕುಂತಲಾಗೆ ದಿಯಾ ಖೆಡ್ಡಾ ತೋಡುತ್ತಿದ್ದಾಳೆ. ಇಬ್ಬರನ್ನೂ ಬೀದಿಗೆ ತರುವ ಶಪಥ ಮಾಡಿದ್ದಾಳೆ. ಇಷ್ಟೇ ಅಲ್ಲ ವ್ಯಾಪಾರ ವ್ಯವಹಾರ ಎಂದು ತಲೆಕೆಡಿಸಿಕೊಳ್ಳಬೇಕಿದ್ದ ಜೈದೇವ್ ನನ್ನು ಮಧ್ಯದ ಅಮಲಿನಲ್ಲಿ ತೇಲುವಂತೆ ನೋಡಿಕೊಳ್ಳುತ್ತಿರುವ ದಿಯಾ ಎಣ್ಣೆಯಲ್ಲಿ ಪೌಡರ್ ಮಿಕ್ಸ್ ಮಾಡಿ ಜೈದೇವ್ ಗೆ ನೀಡುತ್ತಿದ್ದಾಳೆ.
ಇನ್ನೂ ಭೂಮಿಕಾ ಮತ್ತು ಗೌತಮ್ ಮನೆಯಾಚೆ ಹೋದ ನಂತರ ಶಕುಂತಲಾಗೆ ಜೂಜು ಆಡು ಹುಚ್ಚು ಹಿಡಿದಿದೆ. ದಿನವೂ ಕ್ಲಬ್ನಲ್ಲಿ ಲಕ್ಷಾಂತರ ಹಣ ನೀರಿನಂತೆ ಖರ್ಚು ಮಾಡುತ್ತಿದ್ಧಾಳೆ. ಇದನ್ನು ತಿಳಿದ ದಿಯಾ ಪ್ರಶ್ನೆ ಮಾಡಲು ಹೋದಾಗ ಶಕುಂತಲಾ ಕೆರಳಿ ಕೆಂಡವಾಗಿದ್ದಾಳೆ. ನಿನ್ನ ಪಾಡಿಗೆ ನೀನು ಇದ್ದರೆ ನಿನಗೂ ಒಳ್ಳೆಯದು ಈ ಮನೆಗೂ ಒಳ್ಳೆಯದು ಎಂದು ಗದರಿದ್ಧಾಳೆ.
ಶಕುಂತಲಾ ಮಾತುಗಳಿಂದ ಕೊತ ಕೊತ ಕುದ್ದಿರುವ ದಿಯಾ, ನನಗೆ ಹದ್ದು ಬಸ್ತಿನಲ್ಲಿರುವಂತೆ ಇರುವಂತೆ ಹೇಳುತ್ತೀರಾ ಇಂದಲ್ಲ.. ನಾಳೆ.. ನಿಮ್ಮ ಇಬ್ಬರನ್ನು ಬೀದಿ ಪಾಲು ಮಾಡದೇ ಇದ್ದರೆ ನನ್ನ ಹೆಸರು ದಿಯಾನೇ ಅಲ್ಲಾ ಎಂದು ಶಪಥ ಮಾಡಿದ್ದಾಳೆ.
ಸದ್ಯ ತನ್ನ ಈ ಗುರಿಯನ್ನು ತಲುಪಲು ಹೆಜ್ಜೆ ಇಡುತ್ತಿರುವ ದಿಯಾ, ಬೆಳಗ್ಗೆಯೇ ತನ್ನ ಗಂಡ ಜೈದೇವ್ಗೆ ಎಣ್ಣೆ ತಂದು ನೀಡಿದ್ದಾಳೆ. ಮಲ್ಲಿಯಿಂದ ದೂರವಾದ ಜೈದೇವ್ ಸದ್ಯ ದಿಯಾ ಪ್ರೀತಿಯಲ್ಲಿ ಕುರುಡನಾಗಿದ್ದು ದಿಯಾ ತಂದು ಕೊಟ್ಟ ಎಣ್ಣೆಯನ್ನು ಕಣ್ಣು ಮುಚ್ಚಿ ಮತ್ತೊಮ್ಮೆ ಕುಡಿದಿದ್ದಾನೆ. ಬೇಬಿ ನೀನೆಷ್ಟು ಒಳ್ಳೆಯವಳು.. ನಿನ್ನಂತೆ ಯಾರು ಇಲ್ಲ.. ಎಂದೆಲ್ಲ ಕನವರಿಸುತ್ತಾ ಸೋಫಾ ಮೇಲೆಯೇ ಮಲಗಿದ್ದಾನೆ.

ಈ ಕಡೆ ಬದಲಾಗಿರುವ ಶಕುನಿ ಮಾಮ, ಲಕ್ಕಿ ಲಕ್ಷ್ಮೀಕಾಂತ್.. ಪ್ರಯಾಸಪಟ್ಟು ಆನಂದ್ನ ಸಹಾಯದಿಂದ ಮಲ್ಲಿ ಹತ್ತಿರ ಮಾತನಾಡಿ ಎಚ್ಚರಿಕೆಯನ್ನು ನೀಡಿದ್ದಾನೆ. ಗೌತಮ್ ಮತ್ತು ಭೂಮಿಕಾ ಇಬ್ಬರನ್ನು ಒಂದು ಮಾಡಲು ತಂತ್ರವನ್ನು ಕೂಡ ಹೆಣೆದು ಮರಳಿ ಮನೆಗೆ ಬಂದಿದ್ದಾನೆ.
ಇದೇ ಸಮಯದಲ್ಲಿ ಕನವರಿಸುತ್ತಾ ಸೋಫಾ ಮೇಲೆ ಕುಂತ ಜೈದೇವ್ನನ್ನು ನೋಡಿರುವ ಲಕ್ಷ್ಮೀಕಾಂತ್, ನಾನು ಇವನನ್ನು ಬೀದಿಗೆ ತರುವುದು ಬೇಡ, ಇವನೇ ಬೀದಿಗೆ ಬರುತ್ತಾನೆ ಎಂದುಕೊಳ್ಳುತ್ತಾನೆ. ಆಗ ರೂಮ್ನಲ್ಲಿ ಶಬ್ದ ಕೇಳಿ ಬಂದ ಹಿನ್ನೆಲೆ ಎಲ್ಲೋ ಸೌಂಡ್ ಕೇಳುತ್ತಿದೆಯಲ್ಲಾ ಎಂದುಕೊಂಡು ಜೈದೇವ್ ರೂಮ್ನತ್ತ ಲಕ್ಷ್ಮೀಕಾಂತ್ ಹೆಜ್ಜೆ ಹಾಕುತ್ತಾನೆ.
ಜೈದೇವ್ ರೂಮ್ನಲ್ಲಿ ದಿಯಾ ಯಾವುದೋ ಪತ್ರಕ್ಕಾಗಿ ತಡಕಾಡುತ್ತಿದ್ದು, ಸದ್ಯ ಲಕ್ಷ್ಮೀಕಾಂತ್ ರೂಮ್ಗೆ ಬಂದು ದಿಯಾನ ಮಾತನಾಡಿಸಿದ್ದಾನೆ. ಲಕ್ಷ್ಮೀಕಾಂತ್ ಕಂಡು ದಿಯಾ ಬೆಚ್ಚಿ ಬಿದ್ದಿದ್ದು, ಮುಂಬರುವ ದಿನಗಳಲ್ಲಿ ಶತ್ರುವಿನ ಶತ್ರು ಮಿತ್ರ ಎಂದು ಇಬ್ಬರು ಕೈ ಜೋಡಿಸುತ್ತಾರಾ..? ಜೈದೇವ್ ಮತ್ತು ಶಕುಂತಲಾ ಇಬ್ಬರನ್ನು ಇವರಿಬ್ಬರು ಸೇರಿ ಬೀದಿಗೆ ತಳ್ಳುತ್ತಾರಾ..? ಎನ್ನುವ ಪ್ರಶ್ನೆ ಸದ್ಯ ''ಅಮೃತಧಾರೆ'' ಅಭಿಮಾನಿಗಳನ್ನು ಕಾಡುತ್ತಿದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











