ಹತ್ತಾರು ಆಡಿಷನ್ಗಳಲ್ಲಿ ರಿಜೆಕ್ಟ್ ಆಗಿದ್ದ ನಟಿ ಸುಚಿತ್ರಾ; ಕಿರುತೆರೆಯ ಸ್ಟಾರ್ ಆಗಿದ್ದೇಗೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರಾವಾಹಿಗಳ ಪೈಕಿ 'ಎಡೆಯೂರು ಶ್ರೀಸಿದ್ಧಲಿಂಗೇಶ್ವರ' ಕೂಡಾ ಒಂದು. ಪ್ರಸ್ತುತ ಆ ಧಾರಾವಾಹಿಯಲ್ಲಿ ಚಂದ್ರವಲ್ಲಿಯಾಗಿ ನಟಿಸುತ್ತಿರುವ ಅಮೃತಾಮೂರ್ತಿ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತಳು ಕೂಡ ಹೌದು. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕ ಹರ್ಷನ ತಂಗಿ ಸುಚಿತ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ನಟಿ ಅಮೃತಾಮೂರ್ತಿ ಕಾಲಿಟ್ಟಿದ್ದರು.
ಮೊದಲ ಧಾರಾವಾಹಿಯಲ್ಲಿಯೇ ಪೋಷಕ ಪಾತ್ರದಲ್ಲಿ ಅಮೃತಾ ಕಾಣಿಸಿಕೊಂಡಿದ್ದರೂ ತೂಕದ ಪಾತ್ರ ಅದಾಗಿತ್ತು. ಅಣ್ಣ ಅತ್ತಿಗೆಯನ್ನು ಒಂದು ಮಾಡುವ ಪಾತ್ರ ಅದಾಗಿತ್ತು. 'ಕನ್ನಡತಿ' ಧಾರಾವಾಹಿ ಮುಗಿದ ಬಳಿಕ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿಯೂ ಆಕೆ ನಟಿಸಿ ಸೈ ಎನಿಸಿಕೊಂಡಿದ್ದರು. ಅದು ಕೂಡಾ ಪೋಷಕ ಪಾತ್ರ.

ಮುಂದೆ ನಾಯಕಿಯಾಗಿ ಭಡ್ತಿ ಪಡೆದ ದಿಯಾ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೇನುಗೂಡು' ಧಾರಾವಾಹಿಯಲ್ಲಿ ನಾಯಕಿ ದಿಯಾ ಆಗಿ ನಟಿಸುತ್ತಿದ್ದ ನಿತ್ಯಾ ಗೌಡ ಅವರು ಕಾರಣಾಂತರಗಳಿಂದ ಆ ಪಾತ್ರಕ್ಕೆ ವಿದಾಯ ಹೇಳಿದರು. ಆ ಸಮಯದಲ್ಲಿ ಅಮೃತಾಮೂರ್ತಿ ಅವರು ಆ ಪಾತ್ರಕ್ಕೆ ಆಯ್ಕೆಯಾದರು. ಜೊತೆಗೆ ಅಮೃತಾಮೂರ್ತಿ ಅವರಿಗೂ, ದಿಯಾ ಪಾತ್ರಕ್ಕೂ ಸಾಮ್ಯತೆ ಇರುವುದರಿಂದ ಖುಷಿಯಿಂದ ಆಕೆ ನಟಿಸಿದರು.
ನಟನೆಯ ಹೊರತಾಗಿ ಅಮೃತಾಮೂರ್ತಿ ಅವರು ಮಾಡೆಲಿಂಗ್ನಲ್ಲಿಯೂ ಗುರುತಿಸಿಕೊಂಡಾಕೆ. ಫ್ಯಾಷನ್ ಫೀಲ್ಡ್ನಲ್ಲಿ ಗುರುತಿಸಿಕೊಂಡಿದ್ದ ಈಕೆ ಮಾಡೆಲಿಂಗ್ ಮಾಡುತ್ತಿದ್ದರು. ಯಾವತ್ತಿಗೂ ಫ್ಯಾಷನ್ ಫೀಲ್ಡ್ ನನಗಿಷ್ಟ ಎಂದು ಹೇಳುವ ಅಮೃತಾಮೂರ್ತಿ ನಟನೆಯನ್ನು ಕೇವಲ ತನ್ನ ಪ್ಯಾಷನ್ ಆಗಿ ಸ್ವೀಕರಿಸಿದ್ದಾರೆ.
ಇನ್ನು 'ಅಪರಾಧಿ ನಾನಲ್ಲ' ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಹಿರಿತೆರೆಗೂ ಈಕೆ ಕಾಲಿಟ್ಟಿದ್ದಾರೆ. 'ಅಪರಾಧಿ ನಾನಲ್ಲ' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಅರ್ಜುನ್ ಕಾಪಿಕಾಡ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು 'ಕನ್ನಡತಿ' ಧಾರಾವಾಹಿಯ ಸುಚಿತ್ರಾ ಪಾತ್ರಕ್ಕೆ ಆಯ್ಕೆಯಾಗುವ ಮೊದಲು ಅಮೃತಾಮೂರ್ತಿ ಅವರು ಹತ್ತಕ್ಕೂ ಹೆಚ್ಚು ಆಡಿಶನ್ಗಳಲ್ಲಿ ರಿಜೆಕ್ಟ್ ಆಗಿದ್ದರಂತೆ. ಮೊದಲಿಗೆ ಸೃಜನ್ ಲೋಕೇಶ್ ಅವರ ಪ್ರೊಡಕ್ಷನ್ನ ಆಡಿಶನ್ಗೆ ಹೋದ ಅಮೃತಾ ಅಲ್ಲಿ ರಿಜೆಕ್ಟ್ ಆಗಿದ್ದರು. ತದ ನಂತರ ಹೋದ ಹತ್ತಕ್ಕೂ ಹೆಚ್ಚಿನ ಆಡಿಶನ್ನಲ್ಲಿ ಆಕೆ ಪಾಸ್ ಆಗಲಿಲ್ಲ. ನಂತರ ಕನ್ನಡತಿಯ ಸುಚಿತ್ರಾ ಪಾತ್ರಕ್ಕೆ ಆಕೆ ಆಯ್ಕೆಯಾದರು.

ಸದ್ಯ ಚಂದ್ರವಲ್ಲಿಯಾಗಿ ನಟಿಸುತ್ತಿರುವ ಅಮೃತಾಮೂರ್ತಿ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಷ್ಟೇ ಆದರೂ ತಮ್ಮ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.


Click it and Unblock the Notifications











