ಪರಿಸರವಾದಿಯಾಗಿ ಕಿರುತೆರೆಗೆ ಅನಂತ್ ನಾಗ್ ಹೆಜ್ಜೆ

ಈಟಿವಿ ಕನ್ನಡ ವಾಹಿನಿ ಪ್ರಸಾರ ಮಾಡಲಿರುವ ನೂತನ ಧಾರಾವಾಹಿ 'ಚಿಟ್ಟೆ ಹೆಜ್ಜೆ'ಯಲ್ಲಿ ಅವರು ಅಭಿನಯಿಸಿದ್ದಾರೆ. ಈ ಧಾರಾವಾಹಿ ಸೆಪ್ಟೆಂಬರ್ 23ರಿಂದ ಪ್ರಸಾರವಾಗಲಿದೆ. ಖ್ಯಾತ ಪತ್ರಕರ್ತ, ಲೇಖಕ ಗಿರೀಶ್ ರಾವ್ (ಜೋಗಿ) ಅವರ ಕಾದಂಬರಿ 'ಚಿಟ್ಟೆ ಹೆಜ್ಜೆ ದಾರಿ' ಆಧಾರವಾಗಿ ಧಾರಾವಾಹಿ ಕಥೆಯನ್ನು ಹೆಣೆಯಲಾಗಿದೆ.
ವಿನು ಬಳಂಜ ಅವರ ನಿರ್ದೇಶನ ಹಾಗೂ ಚಿತ್ರಕಥೆ ಈ ಧಾರಾವಾಹಿಗಿದೆ. ಈ ಹಿಂದೆ 'ಪ್ರೀತಿ ಇಲ್ಲದೆ ಮೇಲೆ' ಧಾರಾವಾಹಿಯನ್ನೂ ವಿನು ಬಳಂಜ ನಿರ್ದೇಶಿಸಿದ್ದರು. ಈಗ 'ಚಿಟ್ಟೆ ಹೆಜ್ಜೆ' ಮೂಲಕ ಮತ್ತೆ ಈ ಅನುರೂಪ ಜೋಡಿ ಒಂದಾಗಿದೆ.
ಈಟಿವಿ ಕನ್ನಡದಲ್ಲಿ ಈಗ ರಾತ್ರಿ 9 ಗಂಟೆ ಪ್ರಸಾರವಾಗುತ್ತಿರುವ 'ಶುಭ ಮಂಗಳ' ಧಾರಾವಾಹಿ ಸ್ಲಾಟ್ ನಲ್ಲಿ 'ಚಿಟ್ಟೆ ಹೆಜ್ಜೆ' ಮೂಡಿಬರಲಿದೆ. "ನೀಲಿ ಹೂವು ಖಾಲಿ ಹೃದಯ, ಕಾಡು ಹುಡುಗಿ ಮೋಡ ಗೆಳೆಯ, ಚಿಗುರು ಪಾದ ಹಗುರ ಹೆಜ್ಜೆ, ಬೆಟ್ಟ ಬಯಲು ಕವಲುದಾರಿ, ಒಡಲ ಒಳಗೆ ಚಿಟ್ಟೆ ಹೆಜ್ಜೆ..." ಎಂದು ಸಾಗುವ ಶೀರ್ಷಿಕೆಗೀತೆ ಯೂಟ್ಯೂಬ್ ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ನಟ ಅನಂತ್ ನಾಗ್. ಶಂಕರ್ ನಾಗ್ ನಿರ್ದೇಶಿಸಿ, ನಟಿಸಿದ್ದ 'ಮಾಲ್ಗುಡಿ ಡೇಸ್' ಮೂಲಕ ಆರಂಭವಾದ ಅವರ ಕಿರುತೆರೆ ಪಯಣ ಈಗ 'ಚಿಟ್ಟೆ ಹೆಜ್ಜೆ'ವರೆಗೂ ಸಾಗಿಬಂದಿದೆ. ಪ್ರಕಾಶ್ ಬೆಳವಾಡಿ ಅವರ 'ಗರ್ವ' ಧಾರಾವಾಹಿಯಲ್ಲಿ ಅವರ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
'ಪ್ರೀತಿ ಇಲ್ಲದೆ ಮೇಲೆ' ಧಾರಾವಾಹಿಯಲ್ಲಿ ಅನಂತ್ ಅವರು ಲೋಕಾಯುಕ್ತ ಅಧಿಕಾರಿ. ಈಗ 'ಚಿಟ್ಟೆ ಹೆಜ್ಜೆ'ಯಲ್ಲಿ ಪರಿಸರವಾದಿ. ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣವಾದ ಪಶ್ಚಿಮ ಘಟ್ಟ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ ಬಗ್ಗೆ ಈ ಧಾರಾವಾಹಿ ಬೆಳಕು ಚೆಲ್ಲುತ್ತದೆ.
ಧಾರಾವಾಹಿಯ ಬಹುತೇಕ ಭಾಗವನ್ನು ಸಕಲೇಶಪುರ ತಾಲೂಕಿನ ಗುಂಡ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರು, ಹಾಸನದ ರಮಣೀಯ ತಾಣಗಳಲ್ಲೂ ಸೆರೆಹಿಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಿನು ಬಳಂಜ. (ಒನ್ಇಂಡಿಯಾ ಕನ್ನಡ)


Click it and Unblock the Notifications











