ಶೋನಲ್ಲಿ ಬಾಡಿ ಶೇಮಿಂಗ್, ಮಂಗಾಟ ನನಗೆ ಇಷ್ಟವಾಗಲಿಲ್ಲ: ಅನಸೂಯಾ
ತೆಲುಗು ಕಿರುತೆರೆಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ಜಬರ್ದಸ್ತ್. ಹಲವು ವರ್ಷಗಳಿಂದ ಈ ಕಾರ್ಯಕ್ರಮ ವೀಕ್ಷಕರನ್ನು ರಂಜಿಸುತ್ತಿದೆ. 9 ವರ್ಷಗಳ ಕಾಲ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನಸೂಯಾ ಭಾರಧ್ವಜ್ ಇತ್ತೀಚೆಗೆ ಶೋ ಬಿಟ್ಟು ಹೊರ ಬಂದಿದ್ದರು. ಇದೇ ಮೊದಲ ಬಾರಿಗೆ ಅದಕ್ಕೆ ಕಾರಣ ಏನು ಅನ್ನುವುದನ್ನು ಆಕೆ ಬಹಿರಂಗ ಪಡಿಸಿದ್ದಾರೆ.
'ರಂಗಸ್ಥಳಂ' ಹಾಗೂ 'ಪುಷ್ಪ' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ನಟಿ ಅನಸೂಯ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದಕ್ಕೂ ಮೊದಲು ಆಕೆ ಕಿರುತೆರೆ ನಿರೂಪಕಿಯಾಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಬಿಂದಾಸ್ ಡ್ಯಾನ್ಸ್ನಿಂದ ಆಕೆ ಶೋ ಆರಂಭಿಸುತ್ತಿದ್ದರು. ಆಕೆಯ ಡ್ಯಾನ್ಸ್ ನೋಡಲು ಕೆಲವರು ಕಾದು ಕೂರುತ್ತಿದ್ದರು. ಜಬರ್ದಸ್ತ್ ಕಾಮಿಡಿ ಶೋವನ್ನು ಹಲವು ವರ್ಷಗಳಿಂದ ಆಕೆ ನಿರೂಪಣೆ ಮಾಡುತ್ತಾ ಬಂದಿದ್ದರು. ಆದರೆ ಕಾರಣಾಂತರಗಳಿಂದ ಆಕೆ ಆ ಶೋಗೆ ಗುಡ್ಬೈ ಹೇಳಿದ್ದರು. ಇದು ಆಕೆಯ ಅಭಿಮಾನಿಗಳಿಗೂ ಅಚ್ಚರಿ ತಂದಿತ್ತು.
ಶೋನಲ್ಲಿ ಕೆಲಸ ಮಾಡುವ ಎಲ್ಲರೂ ಎಷ್ಟೇ ಕೇಳಿಕೊಂಡರೂ ಅನಸೂಯ ನಿರೂಪಕಿಯಾಗಿ ಮುಂದುವರೆಯಲು ಒಪ್ಪಿರಲಿಲ್ಲ. ಕೊನೆ ಎಪಿಸೋಡ್ನಲ್ಲಿ ಕಣ್ಣೀರು ಹಾಕುತ್ತಲೇ ಹೊರ ನಡೆದಿದ್ದರು. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಆಕೆ ಸೂಪರ್ ಹಿಟ್ ಶೋನಿಂದ ಹೊರ ಬರಲು ಕಾರಣ ಏನು ಅನ್ನುವುದನ್ನು ತಿಳಿಸಿದ್ದಾರೆ. ಎರಡು ವರ್ಷಗಳಿಂದಲೂ ಶೋನಿಂದ ಹೊರ ಬರಬೇಕು ಅಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಕೊನೆಗೂ ಗಟ್ಟಿ ನಿರ್ಧಾರ ಮಾಡಿದೆ ಎಂದಿದ್ದಾರೆ.

ಬಾಡಿ ಶೇಮಿಂಗ್ ಒಪ್ಪಲು ಸಾಧ್ಯವಿಲ್ಲ
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಅನಸೂಯಾ "ಎರಡು ವರ್ಷಗಳಿಂದ ಜಬರ್ದಸ್ತ್ನಿಂದ ಹೊರ ಬರಬೇಕು ಎಂದುಕೊಂಡಿದ್ದೆ. ನನ್ನ ಮೇಲೆ ಹಾಕುತ್ತಿದ್ದ ಪಂಚ್ಗಳಿಂದ ಕೆಲವೊಮ್ಮೆ ಸೀರಿಯಸ್ ಕೂಡ ಆಗ್ತಿದ್ದೆ. ನನಗೆ ಬಾಡಿ ಶೇಮಿಂಗ್, ಹುಚ್ಚು ಚೇಷ್ಟೆ ಇಷ್ಟವಾಗುತ್ತಿರಲಿಲ್ಲ. ಪಂಚ್ಗಳು ಇಷ್ಟವಾಗದೇ ಕೆಲವೊಮ್ಮೆ ಕಸಿವಿಸಿ ಆಗುತ್ತಿತ್ತು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೆ. ಆದರೆ ಅದನ್ನೆಲ್ಲಾ ಎಡಿಟಿಂಗ್ನಲ್ಲಿ ತೆಗೆದು ಬಿಡುತ್ತಿದ್ದರು. ಕ್ರಿಯೇಟಿವ್ ಫೀಲ್ಡ್ ಅಂದ ಮೇಲೆ ಇದೆಲ್ಲ ಕಾಮನ್. ಆದರೆ ನನಗೆ ಅದರಲ್ಲಿ ಸಿಲುಕಿಕೊಳ್ಳಲು ಇಷ್ಟವಿರಲಿಲ್ಲ. ನಟ ನಾಗಬಾಬು ಹಾಗೂ ನಟಿ ರೋಜಾ ಶೋನಿಂದ ಹೊರಬಂದರು ಅನ್ನುವ ಕಾರಣಕ್ಕೆ ನಾನು ಹೊರ ಬಂದಿಲ್ಲ" ಎಂದಿದ್ದಾರೆ.

ನನ್ನ ಗಮನ ಈಗ ಸಿನಿಮಾ ಕಡೆಗೆ
ಜಬರ್ದಸ್ತ್ ಶೋ ನಡುವೆಯೂ ಅನುಸೂಯಾ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಂಗಸ್ಥಳಂ' ಚಿತರ್ದ ರಂಗಮ್ಮ ಮತ್ತು 'ಪುಷ್ಪ' ದಾಕ್ಷಾಯಿಣಿ ಪಾತ್ರಗಳು ಒಳ್ಳೆ ಹೆಸರು ತಂದುಕೊಟ್ಟಿತ್ತು. ಜಬರ್ದಸ್ತ್ ಶೋ ನಡುವೆ ಸಿನಿಮಾಗಳಿಗೆ ಕಾಲ್ಶೀಟ್ ಕೊಡುವುದು ಕಷ್ಟವಾಗಿತ್ತು. ಸಿನಿಮಾಗಳ ಕಡೆ ಹೆಚ್ಚು ಫೋಕಸ್ ಮಾಡಬೇಕು ಅನ್ನುವ ಕಾರಣಕ್ಕೂ ಆ ಶೋನಿಂದ ಹೊರ ಬಂದೆ ಎಂದು ಅನಸೂಯಾ ಹೇಳಿದ್ದಾರೆ. ಸದ್ಯ ಚಿರಂಜೀವಿ ನಟನೆಯ 'ಗಾಡ್ ಫಾದರ್' ಹಾಗೂ 'ಪುಷ್ಪ- 2' ಆಕೆ ನಟಿಸುತ್ತಿದ್ದಾರೆ.

ಅನಸೂಯಾ ಹೇಳಿಕೆಗೆ ಅಸಮಾಧಾನ
ನಿರೂಪಕಿ ಅನಸೂಯಾ ಮಾಡಿರುವ ಆರೋಪಗಳ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 9 ವರ್ಷಗಳ ನಂತರ ನಿನಗೆ ಇದೆಲ್ಲಾ ಅವಮಾನ ಅನ್ನಿಸುತ್ತಿದ್ಯಾ? ಒಂದು ವೇಳೆ ನಿನಗೆ ಇಷ್ಟು ಫೇಮ್, ನಟಿಯಾಗಿ ಅವಕಾಶಗಳು ಇಲ್ಲದೇ ಇದ್ದಿದ್ದರೆ ಶೋ ಬಿಡುತ್ತಿದ್ದಾ? ದಡ ಸೇರಿದ ಮೇಲೆ ದೋಣಿ ಬಿಟ್ಟಂತೆ ಕರಿಯರ್ನಲ್ಲಿ ಸೆಟ್ಲ್ ಆದಮೇಲೆ ಜಬರ್ದಸ್ತ್ ಶೋ ಬಿಟ್ಟಿದ್ದೀಯಾ. ಬೇರೆ ಶೋಗಳಲ್ಲಿ ಕೊಡುವ ಸಂಭಾವನೆಗಿಂತ ಜಬರ್ದಸ್ತ್ನಲ್ಲಿ ಹೆಚ್ಚು ಕೊಡ್ತೀವಿ ಅಂದರೆ ಮತ್ತೆ ಎದ್ದು ಬಿದ್ದು ಬರ್ತಾರೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಜಬರ್ದಸ್ತ್ ಶೋಗೆ ಬೇರೆ ನಿರೂಪಕಿ
ಗುರುವಾರ ಹಾಗೂ ಶುಕ್ರವಾರ ಜಬರ್ದಸ್ತ್ ಹಾಗೂ ಎಕ್ಸ್ಟ್ರಾ ಜಬರ್ದಸ್ತ್ ಹೆಸರಿನಲ್ಲಿ ಎರಡು ಭಾಗಗಳಾಗಿ ಶೋ ಪ್ರಸಾರವಾಗುತ್ತದೆ. ಜಬರ್ದಸ್ತ್ ಶೋ ಅನಸೂಯಾ ಭಾರಧ್ವಜ್ ನಡೆಸಿಕೊಟ್ಟರೆ ಎಕ್ಸ್ಟ್ರಾ ಜಬರ್ದಸ್ತ್ ಶೋ ರಶ್ಮಿ ನಡೆಸಿಕೊಡುತ್ತಿದ್ದರು. ಅನಸೂಯ ಶೋನಿಂದ ಹೊರ ಬಂದ ಮೇಲೆ ಆ ಜಾಗಕ್ಕೆ ಹೊಸ ನಿರೂಪಕಿ ಬರ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸದ್ಯ ಎರಡೂ ಶೋಗಳಿಗೆ ರಶ್ಮಿ ನಿರೂಪಕಿಯಾಗಿದ್ದಾರೆ.


Click it and Unblock the Notifications











