ನಮ್ಮನ್ನು ಡ*ರ್ ಅಂದ್ರೆ ಹೇಗನಿಸುತ್ತೆ; ನೋವು ತೋಡಿಕೊಂಡ ಆಂಕರ್ ಅನುಶ್ರೀ
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಅತಿಯಾಗುತ್ತಿದೆ. ಯಾವುದೋ ಮೂಲೆಯಲ್ಲಿ ಕೂತು ಬಾಯಿಗೆ ಬಂದಂತೆ ಕೆಲವರು ಕಾಮೆಂಟ್ ಮಾಡುತ್ತಾರೆ. ಖ್ಯಾತ ನಟ, ನಟಿಯರಿಗೆ ಅಸಭ್ಯ ಪದಗಳನ್ನು ಬಳಸಿ ಕಿರುಕುಳ ಕೊಡುತ್ತಾರೆ. ಸಾಕಷ್ಟು ಜನ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಟಿ ಅನುಶ್ರೀ ಈ ರೀತಿಯ ಮಾನಸಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದಾರೆ.
ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಟ್ಟಹಾಸ ಮೆರೆಯುತ್ತಾರೆ. ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಕೆಟ್ಟದಾಗಿ ಕಾಮೆಂಟ್, ಟ್ರೋಲ್ ಮಾಡುತ್ತಾರೆ. ನಾನು ಕಾಮೆಂಟ್ ಮಾಡಿದ್ರೆ ಏನಾಗುತ್ತೆ, ನನ್ನನ್ನು ಯಾರು ಕೇಳ್ತಾರೆ ಎಂದು ಕೊಳಕು ಪದಗಳನ್ನು ಕಾಮೆಂಟ್ ಸೆಕ್ಷನ್ಗಳಲ್ಲಿ ಬಳಸುತ್ತಾರೆ. ಇದಕ್ಕೆ ಕಡಿವಾಣ ಹಾಕುವುದು ನಿಜಕ್ಕೂ ಕಷ್ಟ ಎನ್ನುವಂತಾಗಿದೆ. ಸೈಬರ್ ಕ್ರೈಂ ಪೊಲೀಸರು ಕೂಡ ಪ್ರತಿ ಪೋಸ್ಟ್, ಪ್ರತಿ ಕಾಮೆಂಟ್ ನೋಡುತ್ತಾ ಕೂರಲು ಸಾಧ್ಯವಿಲ್ಲ. ಕಿಡಿಗೇಡಿಗಳಿಗೆ ಇದೇ ವರವಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡುವುದರ ಬಗ್ಗೆ ನಿರೂಪಕಿ ಅನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದ ಬಹುಬೇಡಿಕೆಯ ನಿರೂಪಕಿಯಾಗಿ ಅನುಶ್ರೀ ಗುರ್ತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ. ಆಕೆಯ ಬಗ್ಗೆ ಕಿಡಿಗೇಡಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಾರೆ. ಇದೇ ವಿಚಾರವಾಗಿ 'ಗೋಲ್ಡ್ ಕ್ಲಾಸ್ ವಿತ್ ಮಯೂರ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡುವ ಬಗ್ಗೆ ಪ್ರಶ್ನೆ ಎದುರಾಗಿದೆ.
ನಿರೂಪಕ ಮಯೂರ ಮಾತನಾಡಿ ಆನ್ಲೈನ್ನಲ್ಲಿ 'ಡಿ' ಎನ್ನುವ ಪದ ಬಳಸಿ ಟ್ರೋಲ್ ಮಾಡ್ತಾರೆ ಎನ್ನುತ್ತಿದ್ದಂತೆ ಆ ಪದವನ್ನು ಪೂರ್ತಿಯಾಗಿ ಹೇಳಿ ಎಂದು ಅನುಶ್ರೀ ಹೇಳಿದ್ದಾರೆ. ಡ*ರ್ ಎನ್ನುತ್ತಿದ್ದಂತೆ "ನೋಡಿದ್ರಾ ನಿಮಗೆ ಅದನ್ನು ಹೇಳಲು ಎಷ್ಟು ಕಷ್ಟ ಆಗುತ್ತೆ.. ನಮ್ಮನ್ನು ಆ ರೀತಿ ಕರೆದಾಗ ನಮಗೆ ಹೇಗನಿಸುತ್ತೆ ಹೇಳಿ" ಎಂದು ಅನುಶ್ರೀ ನೋವು ತೋಡಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ಬಗ್ಗೆ ಹೇಗೆಲ್ಲಾ ಜನ ಕಾಮೆಂಟ್ ಮಾಡುತ್ತಾರೆ ಎಂದು ಅನುಶ್ರೀ ವಿವರಿಸಿದ್ದಾರೆ. ಮಯೂರ ಒಂದು ಕೋಟಿ ಮನೆ ತಗೊಂಡ್ರೆ ಸಾಧನೆ, ಅದೇ ಅನುಶ್ರೀ ಒಂದು ಕೋಟಿ ಮನೆ ತಗೊಂಡ್ರೆ, ಅದರ ಬಗ್ಗೆ ಬಹಳ ಹಗುರವಾಗಿ ಮಾತನಾಡ್ತಾರೆ.. ಅದು ಸಾಧನೆ, ಅಲ್ಲ ಬೇರೆನೆ ಅಂತಾರೆ.. ಫಿಸಿಕಲ್ ರೇ*ಪ್ ಬೇರೆ, ಮೆಂಟಲ್ ರೇ*ಪ್ ಕೂಡ ಇದೆ. ಕಿತ್ತು ತಿನ್ನುವಷ್ಟು ಮಾತುಗಳು, ಕೆಲ ಸೈಕೋಪಾತ್ಗಳು ಕೆಟ್ಟ ಕೆಟ್ಟ ಕಾಮೆಂಟ್ಸ್ ಮಾಡ್ತಾರೆ.. ಕರ್ಕೊಂಡ್ ಹೋಗಿ ಅವಳಿಗೆ ಕಾರದ ಪುಡಿ ಹಾಕಿ.... ಒಂದು ಹಂತಕ್ಕೆ ಡಿಪ್ರೆಶನ್ಗೆ ಹೋಗುವಂತಾಗಿತ್ತು ಎಂದು ಅನುಶ್ರೀ ಕಣ್ಣೀರಾಗಿದ್ದಾರೆ.
ತಮ್ಮ ತಂದೆ ಬಗ್ಗೆ ಕೂಡ ಅನುಶ್ರೀ ಮಾತನಾಡಿದ್ದಾರೆ. "25 ವರ್ಷ ನಾವು ಬದುಕಿದ್ದೀವಾ, ಸತ್ತಿದ್ದೀವಾ, ಊಟ ಮಾಡಿದ್ವಾ ಇಲ್ವಾ ಎಂದು ಕೇಳದ ವ್ಯಕ್ತಿ ದಿಢೀರನೆ ಬಂದಾಗ ಏನು ಅಂತ ಒಪ್ಪಿಕೊಳ್ಳಬೇಕು.. 25 ವರ್ಷಗಳ ಹಿಂದೆ ಇದ್ದಕ್ಕಿದಂತೆ ಬಿಟ್ಟು ಹೋದ ವ್ಯಕ್ತಿ, ವಾಪಸ್ ಬರುವಂತಿದ್ದರೆ ನಮ್ಮ ಬಳಿ ಬರಬೇಕಿತ್ತು.. ಮಾಧ್ಯಮಗಳ ಮುಂದೆ ಹೋಗುವುದಲ್ಲ ಎಂದು ಅನುಶ್ರೀ ಹೇಳಿದ್ದಾರೆ. ಸದ್ಯ ಸಂದರ್ಶನದ ಪ್ರೋಮೊ ವೈರಲ್ ಆಗ್ತಿದೆ. ಸಂಪೂರ್ಣ ಸಂದರ್ಶನ ಶೀಘ್ರದಲ್ಲೇ ಅಪ್ಲೋಡ್ ಆಗಲಿದೆ.
ಈಟಿವಿ ಕನ್ನಡ ವಾಹಿನಿಯ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮದ ನಿರೂಪಕಿಯಾಗಿ ಗುರ್ತಿಸಿಕೊಂಡಿದ್ದ ಅನುಶ್ರೀ ಬಳಿಕ ಹಂತ ಹಂತವಾಗಿ ಒಂದೊಂದೆ ಮೆಟ್ಟಿಲು ಏರಿ ಬಂದರು. ಜೀ ಕನ್ನಡ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿ ಮೋಡಿ ಮಾಡಿದ್ದಾರೆ. ಬಿಗ್ಬಾಸ್ ಶೋ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಕೆಲ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.


Click it and Unblock the Notifications











