"ಅನುಶ್ರೀಗೆ ಬೇಗ ಮಗು ಮಾಡಿಕೊಳ್ಳಿ" ಎಂದು ಸಲಹೆ; ನಾಚಿ ನೀರಾದ ಮಾತಿನ ಮಲ್ಲಿ
ನಟಿ, ನಿರೂಪಕಿ ಅನುಶ್ರೀ ಇತ್ತೀಚೆಗೆ ಹಸೆಮಣೆ ಏರಿದ್ದರು. ರೋಷನ್ ಎಂಬುವವರನ್ನು ಪ್ರೀತಿಸಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಆಪ್ತರು, ಚಿತ್ರರಂಗದ ತಾರೆಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ನವ ಜೋಡಿಗೆ ಶುಭ ಕೋರಿದ್ದರು. ಕಲ್ಯಾಣೋತ್ಸವ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮದುವೆ ಬಳಿಕ ಅನುಶ್ರೀ ಮತ್ತೆ ತಮ್ಮ ನಿರೂಪಣೆ ಕೆಲಸ ಮುಂದುವರೆಸಿದ್ದಾರೆ. ಜೀ ಕನ್ನಡದ ವಾಹಿನಿಯ 'ನಾವು ನಮ್ಮವರು' ರಿಯಾಲಿಟಿ ಶೋನಲ್ಲಿ ಸಮೀರ್ ಆಚಾರ್ಯ ಹಾಗೂ ಪತ್ನಿ ಶ್ರಾವಣಿ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ. ನಿರಂಜನ್ ನಿರೂಪಣೆಯ ಕಾರ್ಯಕ್ರಮ ನಿಧಾನವಾಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇನ್ನು ಇತ್ತೀಚೆಗೆ ಜೀ ಕನ್ನಡ ಸಿಬ್ಬಂದಿಗೆ ಅನುಶ್ರೀ ಮದುವೆ ಊಟ ಹಾಕಿಸಿದ್ದಾರೆ. ಈ ವೇಳೆ ಸಮೀರ್ ಆಚಾರ್ಯ ದಂಪತಿ ಕೂಡ ಇದ್ದರು.

ತಮ್ಮ ಮಗಳ ಜೊತೆ ಸಮೀರ್ ಆಚಾರ್ಯ ದಂಪತಿ ಊಟಕ್ಕೆ ಕೂತಿದ್ದರು. ಈ ವೇಳೆ ಅನುಶ್ರೀ ಬಂದು ಮಾತನಾಡಿಸಿದ್ದಾರೆ. ಅವರ ಮುದ್ದು ಮಗಳನ್ನು ನೋಡಿ ಖುಷಿಯಾಗಿದ್ದಾರೆ. ಈ ವೇಳೆ "ಆದಷ್ಟು ಬೇಗ ಇಂತಾದೊಂದು ಮಗು ಬರಲಿ" ಎಂದು ಶ್ರಾವಣಿ ಸಲಹೆ ನೀಡಿದ್ದಾರೆ. ಅದಕ್ಕೆ ನಾಚಿದ ಅನುಶ್ರೀ ಓಕೆ, ನಿಮ್ಮೆಲ್ಲರ ಆಶೀರ್ವಾದ ಎಂದಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ. ಕೆಲ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಅವರು ರೋಷನ್ ರಾಮಮೂರ್ತಿ ಎಂಬುವವರನ್ನು ಪ್ರೀತಿಸುತ್ತಿದ್ದರು. ಕೊಡಗಿನ ಮೂಲದ ರೋಷನ್ ಉದ್ಯಮಿ ಎಂದೇ ಬಹುತೇಕರು ಭಾವಿಸಿದ್ದರು. ಆದರೆ ಅವರ ಹಿನ್ನೆಲೆ ಬಗ್ಗೆ ಮದುವೆ ಬಳಿಕ ಸ್ವತಃ ಅನುಶ್ರೀ ಸ್ಪಷ್ಟನೆ ನೀಡಿದ್ದರು.
ನಾನು ಉದ್ಯಮಿ ಅಲ್ಲ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀನಿ ಎಂದು ರೋಷನ್ ಮದುವೆ ಬಳಿಕ ಮಾಹಿತಿ ನೀಡಿದ್ದರು. ನಗರದ ಕಗ್ಗಲಿಪುರ ಬಳಿ ಇರುವ ಖಾಸಗಿ ರೆಸಾರ್ಟ್ನಲ್ಲಿ ಇಬ್ಬರ ಮದುವೆ ನೆರವೇರಿತ್ತು. ನಾದಬ್ರಹ್ಮ ಹಂಸಲೇಖ, ನಟಿ ರಚಿತಾ ರಾಮ್, ನಟ ಶಿವರಾಜ್ಕುಮಾರ್- ಗೀತಾ ದಂಪತಿ, ಗಾಯಕ ವಿಜಯ ಪ್ರಕಾಶ್, ನಟ ವಿಜಯ್ ರಾಘವೇಂದ್ರ, ನಟ ಧನಂಜಯ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಿರ್ದೇಶಕ- ನಟ ರಾಜ್ ಬಿ ಶೆಟ್ಟಿ ಸೇರಿದಂತೆ ಹಲವರು ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭ ಕೋರಿದ್ದರು.
ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಹಾಗೂ ರೋಷನ್ ಕ್ಲಾಸ್ಮೇಟ್ ಆಗಿದ್ದವರು. 'ಪುನೀತ ಪರ್ವ' ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದ್ದರು. ಅದೇ ಸಮಯದಲ್ಲಿ ರೋಷನ್ ಅವರನ್ನು ಭೇಟಿ ಆಗಿದ್ದರು. ಆ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. ಮುಂದೆ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಮದುವೆ ಮುದ್ರೆ ಬಿದ್ದಿದೆ. ಅನುಶ್ರೀ ಹಾಗೂ ರೋಷನ್ ಇಬ್ಬರೂ ಅಪ್ಪು ಅವರ ಅಭಿಮಾನಿಗಳು.
ಮೊದಲು ಇಬ್ಬರೂ ಫ್ರೆಂಡ್ಸ್ ಆಗಿದ್ವಿ. ಕಾಫಿಗೆ ಹೋಗಿದ್ವಿ, ಲವ್ ಮಾಡಿ ಮದುವೆ ಆದ್ವಿ. 'ಪುನೀತ ಪರ್ವ' ಕಾರ್ಯಕ್ರಮದ ವೇಳೆ ಭೇಟಿ ಆಗಿದ್ವಿ. ಹಾಗಾಗಿ ಅಪ್ಪು ಸರ್ ನಮ್ಮಿಬ್ಬರನ್ನು ಸೇರಿಸಿದಂತಾಯ್ತು ಎಂದು ಅನುಶ್ರೀ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟಿದ್ದರು. ಮಂಗಳೂರಿನ 'ನಮ್ಮ ಟಿವಿ' ವಾಹಿನಿಯಲ್ಲಿ ನಿರೂಪಣೆ ಮಾಡಲು ಆರಂಭಿಸಿದ ಅನುಶ್ರೀ ಬಳಿಕ ಹಂತ ಹಂತವಾಗಿ ಏರಿ ಬಂದು ಈಗ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ ಎನಿಸಿಕೊಂಡಿದ್ದಾರೆ.


Click it and Unblock the Notifications











