ಜನ್ಯಾಜಿ, ಹೇಮಿಜಿ, ಪ್ರೇಮಿಜಿ ಯಾಕೆ?; ಹಿಂದಿ ಪದ ಬಳಸಿದ್ದಕ್ಕೆ ಆಂಕರ್ ಅನುಶ್ರೀ ಮೇಲೆ ಸಿಟ್ಟು
ಕನ್ನಡ ಕಿರುತೆರೆಯ ಅತ್ಯದ್ಭುತ ನಿರೂಪಕಿಯರಲ್ಲಿ ಅನುಶ್ರೀ ಕೂಡ ಒಬ್ಬರು. ಲವಲವಿಕೆಯಿಂದ ನಿರೂಪಣೆ ಮಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಅದರಲ್ಲೂ ಜೀ ಕನ್ನಡದಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋಗಳಲ್ಲಿ ಇವರದ್ದೇ ನಿರೂಪಣೆ. ಇದೂವರೆಗೂ ಇವರು ನಿರೂಪಣೆ ಮಾಡಿದ ಶೋಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಈ ಕಾರಣಕ್ಕೆ ಕನ್ನಡಿಗರ ಅಚ್ಚು ಮೆಚ್ಚಿನ ನಿರೂಪಕಿಯರಲ್ಲಿ ಇವರು ಟಾಪ್ ಸ್ಥಾನದಲ್ಲಿ ನಿಲ್ಲುತ್ತಾರೆ.
ಅನುಶ್ರೀ ಕೇವಲ ಟಿವಿಯಲ್ಲಷ್ಟೇ ನಿರೂಪಣೆ ಮಾಡುವುದಿಲ್ಲ. ಸಿನಿಮಾ ಸಮಾರಂಭಗಳು, ಇವೆಂಟ್ಗಳಿಗೂ ಇವರು ನಿರೂಪಣೆ ಮಾಡುತ್ತಾರೆ. ಸುಲಲಿತವಾಗಿ ಕನ್ನಡ ಮಾತಾಡುವ ಅನುಶ್ರೀ ವಿರುದ್ಧ ಕೆಲ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಇವರ ನಿರೂಪಣೆಯನ್ನು ಎಂಜಾಯ್ ಮಾಡುತ್ತಿರುವುದೇನೋ ನಿಜ. ಆದರೆ, ಅವರು ಬಳಸುವ ಒಂದು ಪದದ ಮೇಲೆ ತಕರಾರು ಇದೆ.

ರಿಯಾಲಿಟಿ ಶೋನಲ್ಲಿ ಹಿಂದಿ ಪದವನ್ನು ಬಳಸುತ್ತಿರುವುದಕ್ಕೆ ಅನುಶ್ರೀ ವಿರುದ್ಧ ನೆಟ್ಟಿಗರು ಅಸಮಧಾನ ಹೊರ ಹಾಕುತ್ತಿದ್ದಾರೆ. ಇಷ್ಟು ದಿನ ಎಂಜಾಯ್ ಮಾಡುತ್ತಿದ್ದ ಕನ್ನಡಿಗರಿಗೆ ಅನುಶ್ರೀ ಬಳಸುವ ಪದ ಯಾಕೆ ಇಷ್ಟ ಆಗುತ್ತಿಲ್ಲ. ಆ ಪದವನ್ನು ಯಾಕೆ ಬಳಸಬಾರದು ಎನ್ನುತ್ತಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅನುಶ್ರೀ ಸದ್ಯಕ್ಕೀಗ ಜೀ ಕನ್ನಡದ ಸ್ಟಾರ್ ಆಂಕರ್. ಇಲ್ಲಿ ಪ್ರಸಾರ ಆಗುವ ಬಹುತೇಕ ಎಲ್ಲಾ ರಿಯಾಲಿಟಿ ಶೋಗಳನ್ನು ಅವರೇ ನಿರೂಪಣೆ ಮಾಡುತ್ತಾರೆ. ಅದರಲ್ಲೂ 'ಸರಿಗಮಪ'ದಂತಹ ಮ್ಯೂಸಿಕ್ ರಿಯಾಲಿಟಿ ಶೋಗಳಿಗೆ ಜೀವ ತುಂಬುತ್ತಿರುವವರಲ್ಲಿ ಇವರು ಕೂಡ ಇಬ್ಬರು. ಅನುಶ್ರೀ ಹಾಗೂ ಅರ್ಜುನ್ ಜನ್ಯ ನಡುವಿನ ಸಂಭಾಷಣೆ ಸಂಗೀತದ ಮಧ್ಯೆ ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡುತ್ತಿದೆ.
ಈ ಕಾರಣಕ್ಕೆ ಅನುಶ್ರೀ ನಿರೂಪಣೆಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆದರೆ, ಇದೇ ರಿಯಾಲಿಟಿ ಶೋನಲ್ಲಿ ಅರ್ಜುನ್ ಜನ್ಯ ಸೇರಿದಂತೆ ಜಡ್ಜ್ಗಳನ್ನು ಅವರ ಹೆಸರಿನ ಜೊತೆ 'ಜೀ' ಅನ್ನೋ ಪದವನ್ನು ಸೇರಿಸಿ ಹೇಳುತ್ತಿದ್ದಾರೆ. ಇದು ನೆಟ್ಟಿಗರಿಗೆ ಯಾಕೋ ಇಷ್ಟ ಆಗುತ್ತಿಲ್ಲ. ಕನ್ನಡದ ಪದಗಳು ಅಥವಾ ಹೆಸರಿನ ಜೊತೆಗೆ ಉರ್ದು ಅಥವಾ ಹಿಂದಿ ಪದಗಳನ್ನು ಸೇರಿಸಿ ಹೇಳುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹದ ಪದಗಳನ್ನು ಬಳಸಬೇಡಿ ಅಂತ ಬೇಸರವನ್ನು ಹೊರ ಹಾಕುತ್ತಿದ್ದಾರೆ.
ಉಮೇಶ್ ಶಿವರಾಜು ಎಂಬ ನೆಟ್ಟಿಗರೊಬ್ಬರು ತನ್ನ ಎಕ್ಸ್ ಖಾತೆಯಲ್ಲಿ ಸಿಟ್ಟನ್ನು ಹೊರ ಹಾಕಿದ್ದಾರೆ. "ಅನುಶ್ರೀ ಎಂಬಾಕೆ ಒಳ್ಳೆ ಕನ್ನಡತಿಯೇ. ಆದರೆ ಆಕೆ ಜನ್ಯಾಜಿ, ಹೇಮಿಜಿ-ಪ್ರೇಮಿಜಿ ಅಂತ ಜಿ.. ಜಿ ಉರ್ದು(ಹಿಂದಿ) ಭಾಷೆ ಬಳಸೋದೇಕೆ? ಜನ್ಯ 'ಅವರು' ಎನ್ನಲಾಗದೆ. 'ಜಿ ಜಿ' ಎಂದು ಮಾತ್ರ ಹೇಳೋ ಕಜ್ಜಿರೋಗ ಈಕೆಗೆ ವಾಸಿ ಮಾಡಬೇಕಿದೆ. ಮನೆಯಲ್ಲಿ TV ನೋಡೋ ಸಣ್ಣ ಮಕ್ಕಳಿಗೂ ಕಜ್ಜಿರೋಗ ಹತ್ತಿಸುತ್ತಿದ್ದಾಳೆ." ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಆಕ್ರೋಶ ಹೊರ ಹಾಕುಕಿದ್ದಾರೆ.
ಹೆಸರಿಟ್ಟು ಕರೆಯುವುದಕ್ಕೆ ಕಷ್ಟವಾದರೆ ಕನ್ನಡದಲ್ಲಿಯೇ ಸಾಕಷ್ಟು ಪದಗಳು ಇವೆ. ಅವುಗಳನ್ನು ಬಳಸಬಹುದು ಎಂಬುದು ನೆಟ್ಟಿಗರ ವಾದ. ಹೆಸರಿನ ಹಿಂದೆ 'ಜಿ' ಅನ್ನೋ ಪದವನ್ನು ಸೇರಿಸುವುದರಿಂದ ಮುಂದಿನ ಪೀಳಿಗೆಯ ಮಕ್ಕಳು ಕೂಡ ಕನ್ನಡ ಭಾಷೆಯನ್ನು ಮರೆಯುತ್ತಾರೆ. ಈ ಕಾರಣಕ್ಕೆ ಅಚ್ಚ ಕನ್ನಡದ ಪದಗಳನ್ನು ಬಳಸಬೇಕು. ಮುಂದಿನ ಪೀಳಿಗೆಯ ಮಕ್ಕಳು ಆ ಪದಗಳನ್ನೇ ಬಳಸಬೇಕು ಅನ್ನೋದು ಇವರ ಆಸೆ.


Click it and Unblock the Notifications











