Exclusive: 2 ದಿನಗಳಿಂದ ನ್ಯೂಸ್ ನೋಡಿಲ್ಲ: 'ಜೊತೆಜೊತೆಯಲಿ' ಮೇಘಾ ಶೆಟ್ಟಿ ಪ್ರತಿಕ್ರಿಯೆ
'ಜೊತೆ ಜೊತೆಯಲಿ' ಧಾರಾವಾಹಿ ನಿರ್ಮಾಪಕರ ಜೊತೆ ಕಿರಿಕ್ ಮಾಡಿಕೊಂಡು ನಟ ಅನಿರುದ್ಧ್ ಜತ್ಕರ್ ತಂಡದಿಂದ ಹೊರಬಂದಿದ್ದಾರೆ. ಅನಿರುದ್ಧ್ ಕಿರಿಕಿರಿಗೆ ಬೇಸತ್ತು ನಿರ್ಮಾಪಕ ಅರೂರು ಜಗದೀಶ್ ವಾಹಿನಿ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಜೊತೆ ಚರ್ಚಿಸಿ ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ ಎಲ್ಲ ಒಳ್ಳೆಯದ್ದೇ ಆಗುತ್ತದೆ ಎನ್ನುವ ಭರವಸೆಯಲ್ಲಿ ಇರುವುದಾಗಿ ಫಿಲ್ಮಿಬೀಟ್ಗೆ ತಿಳಿಸಿದ್ದಾರೆ.
ತಂಡದಲ್ಲಿ ಕಿರಿಕ್ ರಾಜಿ ಸಂಧಾನ ಇದೇ ಮೊದಲಲ್ಲ. ಕೊರೊನಾ ಸಮಯದಲ್ಲಿ ಕರ್ನಾಟಕದಲ್ಲಿ ಲಾಕ್ಡೌನ್ ಜಾರಿಯಾಗಿ ಕಿರುತೆರೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಆಗ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಗೆ ಶಿಫ್ಟ್ ಆಗಿತ್ತು. ಆಗ ನಟಿ ಮೇಘಾ ಶೆಟ್ಟಿ ಕೂಡ ತಂಡದಲ್ಲಿ ಇದೇ ರೀತಿ ಗಲಾಟೆ ಮಾಡಿಕೊಂಡು ಧಾರಾವಾಹಿಯಿಂದ ಹೊರಬಂದಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ನಂತರ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ಮತ್ತೆ ನಟಿಸೋಕೆ ಒಪ್ಪಿಕೊಂಡಿದ್ದರಂತೆ. ಈ ವಿಚಾರವನ್ನು ನಿನ್ನೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ನಟ ಅನಿರುದ್ಧ್ ಕೂಡ ಇದೇ ರೀತಿ ಗಲಾಟೆ ಮಾಡಿಕೊಂಡು ಶೂಟಿಂಗ್ ಬಿಟ್ಟು ಹೋಗಿದ್ದ ಘಟನೆಗಳು ನಡೆದಿತ್ತಂತೆ. ಕೊನೆಗೆ ರಾಜಿ ಸಂಧಾನ ನಡೆದು, ಮತ್ತೆ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ರಾದ್ಧಾಂತವಾಗಿದೆ.
ವಿಭಿನ್ನ ಪ್ರೇಮಕಥೆಯ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಷ್ಟೇ ಅನು ಸಿರಿಮನೆ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಆ ಪಾತ್ರವನ್ನು ಮೇಘಾ ಶೆಟ್ಟಿ ಬಹಳ ಸೊಗಸಾಗಿ ನಿಬಾಯಿಸುತ್ತಿದ್ದಾರೆ. ಅನು ಸಿರಿಮನೆ ಅಂತಲೇ ಆಕೆ ಈಗ ಮನೆಮಾತಾಗಿದ್ದಾರೆ. ಈ ರೀತಿ ಘಟನೆಗಳು ನಡೆದಾಗ ಸ್ವತಃ ಅನಿರುದ್ಧ್, ಮೇಘಾ ಶೆಟ್ಟಿಯವರ ಪರ ಮಾತನಾಡಿ ಮತ್ತೆ ಧಾರಾವಾಹಿಯಲ್ಲಿ ನಟಿಸುವಂತೆ ಮಾಡಿದ್ದರಂತೆ. ಮೇಘಾ ಶೆಟ್ಟಿ ಮಾತ್ರವಲ್ಲ, ಛಾಯಾಗ್ರಾಹಕರೊಬ್ಬರನ್ನು ತಂಡದಿಂದ ಕೈಬಿಟ್ಟಾಗಲೂ ಅವರ ಬೆಂಬಲಕ್ಕೆ ನಿಂತಿದ್ದರಂತೆ. ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್ ಅವರೇ ಹೇಳಿದ್ದಾರೆ. ಇನ್ನು ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈಬಿಟ್ಟಿರುವ ಬಗ್ಗೆ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿರುವ ನಟಿ ಮೇಘಾ ಶೆಟ್ಟಿ ಎಲ್ಲಾ ಒಳ್ಳೆಯದೇ ಆಗುತ್ತದೆ ಎನ್ನುವ ಭರವಸೆಯಲ್ಲಿ ಇರುವುದಾಗಿ ಹೇಳಿದ್ದಾರೆ.

ಮೇಘಾ ಶೆಟ್ಟಿ ಹೊರಗಿಡುವ ಬಗ್ಗೆ ನಿರ್ಧಾರ?
ಸಿಕ್ಕಾಪಟ್ಟೆ ಕಿರಿಕಿರಿ ಮಾಡುವ ಕಾರಣಕ್ಕೆ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯುವಾಗಲೇ ಮೇಘಾಶೆಟ್ಟಿ ಅವರನ್ನು ಕೈ ಬಿಡುವ ಮಟ್ಟಕ್ಕೆ ಚರ್ಚೆ ನಡೆದಿತ್ತಂತೆ. ನಿರ್ಮಾಪಕರಾದ ಅರೂರು ಜಗದೀಶ್ ಕಣ್ಣೀರು ಹಾಕಿಕೊಂಡು ತಮ್ಮ ನೋವನ್ನು ಬೇರೆ ನಿರ್ಮಾಪಕರ ಬಳಿ ತೋಡಿಕೊಂಡಿದ್ದರಂತೆ. ಆಗ ನಿರ್ಮಾಪಕರ ಸಂಘದವರೆಲ್ಲಾ ಚರ್ಚಿಸಿ, ಆಕೆಯನ್ನು ಧಾರಾವಾಹಿಯಿಂದ ಕೈ ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತಂತೆ. ಈ ವಿಚಾರವನ್ನು ಆಕೆಗೂ ಹೇಳಿದ್ದರಂತೆ. ಈ ಮಾತನ್ನು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹೇಳಿಕೆ ನೀಡಿದ್ದರು.

ತಪ್ಪಿನ ಅರಿವಾಗಿ ಮೇಘಾ ಶೆಟ್ಟಿ ಕ್ಷಮೆ!
ಒಂದು ಮನೆ, ತಂಡ ಅಂದಮೇಲೆ ಭಿನ್ನಾಭಿಪ್ರಾಯಗಳು ಸಹಜ. ಒಂದು ಮಾತು ಬರುತ್ತದೆ. ಒಂದು ಮಾತು ಹೋಗುತ್ತದೆ. ಎಲ್ಲರೂ ಅನುಸರಿಕೊಂಡು ಮುಂದೆ ಸಾಗಬೇಕು. ಹೈದರಾಬಾದ್ನಲ್ಲೂ ತಮ್ಮನ್ನು ತಂಡದಿಂದ ಕೈ ಬಿಡುತ್ತಾರೆ ಎಂದಾಗ ತಪ್ಪಿನ ಅರಿವಾಗಿ ಮೇಘಾ ಶೆಟ್ಟಿ ಕ್ಷಮೆ ಕೇಳಿದ್ದರಂತೆ. ಹಾಗಾಗಿ ಮತ್ತೆ ಅವರನ್ನು ಧಾರಾವಾಹಿಯಲ್ಲಿ ಮುಂದುವರೆಸಲಾಗಿತ್ತು. ಇಂದಿಗೂ ಅವರು ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮುಂದುವರೆದಿದ್ದಾರೆ.

ಎಲ್ಲಾ ಒಳ್ಳೆಯದ್ದೇ ಆಗುತ್ತದೆ- ಮೇಘಾ ಶೆಟ್ಟಿ
ಒಂದು ಜನಪ್ರಿಯ ಧಾರಾವಾಹಿಯ ನಾಯಕ ನಟನನ್ನು ಕೈಬಿಡುವುದು ಅಂದರೆ ತಮಾಷೆಯ ಮಾತಲ್ಲ. ಆದರೆ 'ಜೊತೆ ಜೊತೆಯಲಿ' ತಂಡ ಇಂತಹದೊಂದು ರಿಸ್ಕ್ ತಗೊಂಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿರುದ್ಧ್ ನಮ್ಮ ತಂಡದ ಸಾಕಷ್ಟು ಜನ ನನ್ನ ಬೆಂಬಲಕ್ಕೆ ಇದ್ದಾರೆ. ನೀವು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಫೋನ್ ಮಾಡಿ ಮೆಸೇಜ್ ಮಾಡಿ ನನಗೆ ಹೇಳುತ್ತಿದ್ದಾರೆ ಎಂದಿದ್ದರು. ನಟಿ ಮೇಘಾ ಶೆಟ್ಟಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಫಿಲ್ಮಿಬೀಟ್ಗೆ ಮಾತನಾಡಿದ ನಟಿ ಎಲ್ಲಾ ಒಳ್ಳೆಯದೇ ಆಗುತ್ತದೆ ಅನ್ನುವ ನಂಬಿಕೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.

ನಾನು 2 ದಿನದಿಂದ ನ್ಯೂಸ್ ನೋಡಿಲ್ಲ
ಈ ಹಿಂದೆ ತಮ್ಮ ವಿಚಾರದಲ್ಲಿ ಆದ ರಾಜಿ ಸಂಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಮೇಘಾಶೆಟ್ಟಿ "ನಾನು ಎರಡು ದಿನಗಳಿಂದ ಯಾವುದೇ ನ್ಯೂಸ್ ನೋಡಿಲ್ಲ. ಯಾರು ಏನು ಹೇಳಿದ್ದಾರೋ, ಆ ಮಾಹಿತಿ ನನಗಿಲ್ಲ. ಹಿಂದೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗಲೂ ಏನು ಆಗಿಲ್ಲ. ಎಲ್ಲವೂ ಚೆನ್ನಾಗಿಯೇ ಇದೆ. ಸ್ವಲ್ಪ ಸಮಯ ಬೇಕು ಅಷ್ಟೇ, ಎಲ್ಲಾ ಸರಿ ಹೋಗುತ್ತದೆ" ಎಂದಿದ್ದಾರೆ.


Click it and Unblock the Notifications











