ಭಾಗ್ಯಗೋಸ್ಕರ ಹೊಸ ಅತಿಥಿಯ ಆಗಮನ: ಪ್ರೋಮೋ ನೋಡಿ ಖುಷಿ ಪಟ್ಟ ಅಭಿಮಾನಿಗಳು
'ಭಾಗ್ಯಲಕ್ಷ್ಮೀ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಭಾಗ್ಯಳ ಬಾಳಲ್ಲಿ ಹಲವು ತಿರುವುಗಳು ಪಡೆದುಕೊಳ್ಳುತ್ತಿವೆ. ಶ್ರೇಷ್ಠ ತಾಳಕ್ಕೆ ಕುಣಿಯುತ್ತಿರುವ ತಾಂಡವ್ನಿಂದಾಗಿ ಒಂದಾದ ಮೇಲೆ ಒಂದರಂತೆ ಭಾಗ್ಯ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಮುಗ್ಧ ಸೊಸೆಗೆ ಅತ್ತೆ ಕುಸುಮಾ ಬಹಳ ಸಪೋರ್ಟ್ ಮಾಡುತ್ತಿದ್ದಾಳೆ. ಕುಸುಮಾಳನ್ನು ಕೂಡ ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಧಾರಾವಾಹಿ ಬಹಳ ಸೊಗಸಾಗಿ ಮೂಡಿ ಬರುತ್ತಿದೆ.
ಈಗ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್ ಕಾಣಿಸಿಕೊಳ್ಳಲಿದೆ. ಧಾರಾವಾಹಿಗೆ ಹೊಸ ಗೆಸ್ಟ್ ಬರುತ್ತಿದ್ದು, ಇವರಿಂದ ಭಾಗ್ಯಳಿಗೆ ಸಹಾಯ ಆಗಬಹುದು ಎಂದು ವೀಕ್ಷಕರು ಗೆಸ್ ಮಾಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ತಂಡ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋವನ್ನು ಹರಿ ಬಿಟ್ಟಿದೆ. ಅದರ ಪ್ರಕಾರ ಈಗ ಭಾಗ್ಯಳ ಸಪೋರ್ಟ್ಗೆಂದೇ ಹೊಸ ಪಾತ್ರದ ಆಗಮನವಾಗಿದೆ.

ಈ ಪಾತ್ರ ಭಾಗ್ಯಳಿಗೆ ಎಷ್ಟು ಸಪೋರ್ಟ್ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಹೊಸ ಪಾತ್ರಧಾರಿಯನ್ನು ಮಾತ್ರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಭಾಗ್ಯನ ಮನೆಗೆ ಜಬರ್ದಸ್ತ್ ಎಂಟ್ರಿ; ನಿಮಗೆಲ್ಲಾ ಗೊತ್ತಿರೋ ವಿಷಯನೇ! ಎಂದು ಪ್ರೋಮೋ ಬಿಟ್ಟಿದ್ದು, ಸರ್ಪ್ರೈಸ್ ಗೆಸ್ಟ್ ಆಗ ಬಂದಿರುವುದು ಬೇರೆ ಯಾರೂ ಅಲ್ಲ. ಎಲ್ಲರ ನೆಚ್ಚಿನ ಕೋಳಿಮರಿ ಮೀರಾ. ಹೌದು.. 'ನಮ್ಮನೆ ಯುವರಾಣಿ' ನಟಿ ಅಂಕಿತಾ ಅಮರ್ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಪ್ರೋಮೋದಲ್ಲಿ ಅಂಕಿತಾರನ್ನು ನೋಡಿ ಎಲ್ಲರೂ ಖುಷ್ ಆಗಿದ್ದಾರೆ.
ಸೈಲೆಂಟ್ ಆಗಿ ಫೇಮಸ್ ಆದ ನಟಿ
ನಟಿ ಅಂಕಿತಾ ಅಮರ್ ತಮ್ಮ ನಟನಾ ಕೌಶಲ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದು, ಟಿವಿ ಶೋಗಳಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗಿನ ಕಿರುತೆರೆಯಲ್ಲೂ ನಟಿಸುತ್ತಿರುವ ಅಂಕಿತಾ, ಅಲ್ಲೂಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಪಾತ್ರವನ್ನು ಬೇಕಾದರೂ ನಟಿಸುವ ಅಂಕಿತಾ ಅಮರ್ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಸೈಲೆಂಟ್ ಆಗಿ ಫೇಮಸ್ ಆಗಿದ್ದಾರೆ. ಈಕೆ 'ಜಗಳಗಂಟಿಯರು', 'ತುಂಟ' ಸಿನಿಮಾಗಳಲ್ಲಿ ನಟಿಸಿದ್ದು, 'ಕುಲವಧು' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು.

ಪೋಷಕರೂ ರಂಗಭೂಮಿ ಕಲಾವಿದರು
ಈಗಾಗಲೇ ಬಾಲ ನಟಿಯಾಗಿ ಶಂಕರ್ ನಾಗ್ ಅವರ ಜೊತೆಗೆ ನಟಿಸಿದ್ದ ಅಂಕಿತಾ ಅವರು, 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದರು. ಅಂಕಿತಾ ಈಗ ಸಿನಿಮಾ, ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಂಕಿತಾ ಅಭಿನಯದ ಜೊತೆಗೆ ಗಾಯಕಿ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ನಟನೆಗಷ್ಟೇ ಸೀಮಿತವಾಗಿರದೇ, ನಿರೂಪಣೆಯನ್ನೂ ಮಾಡಿದ್ದಾರೆ. 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿ ಜನರ ಮನ ಗೆದ್ದಿದ್ದರು. ಅಂಕಿತಾ ಅಮರ್ ಅವರ ತಂದೆ ತಾಯಿ ಕೂಡ ರಂಗಭೂಮಿಯವರು. ಇದು ಅಂಕಿತಾ ಅವರ ಬಣ್ಣದ ಲೋಕದ ಪಯಣಕ್ಕೆ ಸಹಕಾರಿಯಾಗಿದೆ.
ಗೆಸ್ಟ್ ರೋಲ್ ಅಷ್ಟೇನಾ..?
ಅಂಕಿತಾ ಅಮರ್ ಮೆಡಿಕಲ್ ಬಯೋ ಕೆಮಿಸ್ಟ್ರಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಪಡೆದವರು. ಮುಂದೆ ಪಿಎಚ್ಡಿ ಮಾಡುವ ಆಸೆ ಇದೆಯಂತೆ. ಆದರೆ, ನಟನೆಯಲ್ಲಿ ಬ್ಯುಸಿಯಾಗಿರುವುದರಿಂದ ಓದುವುದು ಸಾಧ್ಯವಾಗುತ್ತಿಲ್ಲ. 'ಅಬ ಜಬ ದಬ' ಸಿನಿಮಾದಲ್ಲಿ ನಟಿಸಿರುವ ಅಂಕಿತಾ, ಇನ್ನೂ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಬ್ಯೂಸಿಯಾಗಿರುವಾಗಲೇ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.
ಅಂಕಿತಾ ಅಮರ್ ಪಾತ್ರ ಏನು?
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಭಾಗ್ಯಳ ಬಾಳಿಗೆ ಅಂಕಿತಾ ಅಮರ್ ಯಾವ ರೀತಿಯ ತಿರುವು ನೀಡುತ್ತಾಳೆ ಎಂಬ ಕುತೂಹಲ ಮೂಡಿದೆ. ಈ ಧಾರಾವಾಹಿಯಲ್ಲಿ ಅಂಕಿತಾ ಅಮರ್ ಸುಮಾರು ಒಂದು ತಿಂಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಪಾತ್ರವೇನು? ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.


Click it and Unblock the Notifications











