Annayya Jan 03: ಗುಂಡಮ್ಮಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ತಪ್ಪಿಸಲು ವೀರಭದ್ರಯ್ಯ ಕುತಂತ್ರ
ಶಿವಣ್ಣನ ಮನೆಯಲ್ಲಿ ಮದುವೆ ಸಂಭ್ರಮ ತುಂಬಿ ತುಳುಕಾಡುತ್ತಿದೆ. ತನ್ನ ಎರಡನೇ ತಂಗಿಗೆ ಮದುವೆ ಮಾಡುವ ತರಾತುರಿಯಲ್ಲಿ ಶಿವು ಇದ್ದಾನೆ. ಮೊದಲು ರತ್ನಳನ್ನು ನೋಡಲು ಬಂದಿದ್ದ ಗಂಡಿನ ಕಡೆಯವರು ರತ್ನಳನ್ನು ನೋಡಿದ ಕೂಡಲೇ ಆಕೆಗೆ ಬಹಳಷ್ಟು ಸಂಬಂಧ ಬಂದಿದೆ. ಆದರೆ ಆಕೆಯನ್ನು ಯಾರು ಒಪ್ಪಿಕೊಂಡಿಲ್ಲ. ಆ ಕಾರಣ ನಮಗೆ ರತ್ನಾ ಬೇಡ ಎಂದು ಹೇಳಿ ಬಿಡುತ್ತಾರೆ.
ಅವರ ಮಾತಿಗೆ ಶಿವು ಬಹಳಷ್ಟು ಬೇಸರ ಮಾಡಿಕೊಂಡರೂ ರತ್ನಾ ಮಾತ್ರ ಏನು ಬೇಸರ ಪಟ್ಟು ಕೊಳ್ಳದೆ ಗುಂಡಮ್ಮನನ್ನು ಇಷ್ಟಪಟ್ಟ ಗಂಡಿಗೆ ಮದುವೆ ಮಾಡಿಸುವಂತೆ ಅಣ್ಣಯ್ಯನ ಬಳಿ ಕೇಳಿ ಕೊಳ್ಳುತ್ತಾಳೆ. ಕೊಂಚ ಯೋಚನೆ ಮಾಡಿದ ಶಿವು ತಂಗಿಯ ಮಾತಿಗೆ ಒಪ್ಪಿಗೆ ನೀಡುತ್ತಾನೆ. ಇನ್ನೂ ವೀಕ್ಷಕರೆಲ್ಲ ಗುಂಡಮ್ಮಗೆ ಸೀನಾ ಬೆಸ್ಟ್ ಎಂದುಕೊಂಡು ಇದ್ದರು. ಆದರೆ ಆದದ್ದೇ ಬೇರೆ. ಗುಂಡಮ್ಮ ಬಹಳಷ್ಟು ಬೋಲ್ಡ್ ಮನಸ್ಥಿತಿಯ ಹುಡುಗಿ, ತಿಂಡಿ ಪೋತಿ. ಇದ್ದಿದ್ದನ್ನು ಇದ್ದ ಹಾಗೆಯೇ ಹೇಳುವ ನೇರ ನುಡಿಯವಳು. ಆಕೆಯನ್ನು ಕೈ ಹಿಡಿಯಲು ಬಂದ ಹುಡುಗನು ಕೂಡ ಬಹಳಷ್ಟು ಒಳ್ಳೆಯ ಮನುಷ್ಯ ಇದ್ದ ಹಾಗೆ ಕಾಣಿಸುತ್ತಿದ್ದಾನೆ. ಆದರೆ ವೀರಭದ್ರಯ್ಯ ಬೇರೆಯೇ ಕುತಂತ್ರ ಮಾಡುತ್ತಿದ್ದಾನೆ.

ಪಾರುಗೆ ತನ್ನ ತಂದೆಯ ಮೇಲೆ ಕಿಂಚಿತ್ತೂ ವಿಶ್ವಾಸವಿಲ್ಲ. ತನ್ನ ತಂದೆ ಶಿವು ಹಾಗೂ ಆತನ ಮನೆಯವರನ್ನು ಮಟ್ಟ ಹಾಕಲು ಯೋಚನೆ ಮಾಡುತ್ತಿದ್ದಾರೆ ಎನ್ನುವುದು ಪಾರುಗೆ ತಿಳಿದಿದೆ. ಪಾರು ಅದೆಷ್ಟೋ ಬಾರಿ ತನ್ನ ತಂದೆಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾಳೆ. ಆದರೆ ವೀರಭದ್ರಯ್ಯ ಮಾತ್ರ ಪಿತೂರಿ ಮೇಲೆ ಪಿತೂರಿ ಮಾಡುತ್ತಿದ್ದಾನೆ. ತನ್ನ ಸ್ವಂತ ತಂಗಿಯನ್ನೇ ಬಿಡದ ವೀರಭದ್ರಯ್ಯ, ಇನ್ನೂ ಮಗಳನ್ನು ಬಿಡುತ್ತಾನಾ ಎನ್ನುವುದೇ ವೀಕ್ಷಕರ ಪ್ರಶ್ನೆ. ಇದೀಗ ಶಿವು ಮನೆಯಲ್ಲಿ ಗುಂಡಮ್ಮನ ನಿಶ್ಚಿತಾರ್ಥದ ಸಂಭ್ರಮ ರಂಗೇರಿದೆ. ತನ್ನ ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಶಿವು ತನ್ನ ಮಾವನಿಗೆ ಆಹ್ವಾನವನ್ನೂ ನೀಡಿದ್ದಾನೆ.
ಶಿವು ಮನೆಯಲ್ಲಿ ಸಂಭ್ರಮ
ವೀರಭದ್ರಯ್ಯನಿಗೆ ಶಿವು ತಾವೇ ಮುಂದೆ ನಿಂತು ಈ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಹೇಳುತ್ತಾನೆ. ಅದಕ್ಕೆ ವೀರಭದ್ರಯ್ಯ ಮನದಲ್ಲಿ ಏನೋ ಕುತಂತ್ರ ಮಾಡುತ್ತಾ, ಶಿವು ಮನೆಗೆ ಬರುತ್ತೇನೆ ಎನ್ನುವ ಭರವಸೆ ಕೊಡುತ್ತಾನೆ. ಶಿವುಗೆ ಮಾವ ಎಂದರೆ ಬಹಳಷ್ಟು ಗೌರವ. ಆದರೆ, ವೀರಭದ್ರಯ್ಯಗೆ ಶಿವು ಮುಖ ಕಂಡರೆ ಆಗುವುದಿಲ್ಲ. ಶಿವು ಜೀವನದಲ್ಲಿ ಕೆಟ್ಟದಾಗಲು ವೀರಭದ್ರಯ್ಯನ ಪಾಲು ಬಹಳಷ್ಟಿದೆ. ಆದರೆ, ಪಾಪ ಶಿವುಗೆ ಇದೆಲ್ಲ ಅರ್ಥ ಆಗುತ್ತಿಲ್ಲ. ಮರುದಿನ ಗಂಡಿನ ಮನೆಯವರೆಲ್ಲ ಆಗಮಿಸುತ್ತಾರೆ. ಊರವರನ್ನು ಮನೆಗೆ ಆಹ್ವಾನಿಸಿದ ಶಿವು ಖುಷಿಗೆ ಪಾರವೇ ಇಲ್ಲ. ಆದರೆ, ವೀರಭದ್ರಯ್ಯ ಇದೆಲ್ಲವನ್ನೂ ಮಣ್ಣು ಪಾಲು ಮಾಡಲು ಮಸಲತ್ತು ಮಾಡುತ್ತಿರುತ್ತಾನೆ.

ಗುಂಡಮ್ಮನ ಮುಖದಲ್ಲಿ ನಾಚಿಕೆ
ಹುಡುಗ ಹುಡುಗಿಯನ್ನು ಕರೆ ತರುತ್ತಾರೆ. ಈ ವೇಳೆ ವೀರಭದ್ರಯ್ಯ ಕೊಡುವ ತೆಗೆದುಕೊಳ್ಳುವ ವಿಚಾರದ ಬಗ್ಗೆ ಮಾತನಾಡಿದಾಗ ಗಂಡಿನ ಕಡೆಯವರು ನಮಗೆ ಹುಡುಗಿ ಕೊಟ್ಟರೆ ಸಾಕು ಬೇರೆ ಏನೂ ಬೇಡ ಎಂದು ಹೇಳುತ್ತಾರೆ. ಇದೆಲ್ಲವನ್ನೂ ಕೇಳಿದ ಮನೆಯವರಿಗೆ ಮತ್ತಷ್ಟು ಖುಷಿ ಆಗುತ್ತದೆ. ಗುಂಡಮ್ಮನ ಮೊಗದಲ್ಲಿ ಮದುಮಗಳ ಕಳೆ ಉಕ್ಕಿ ಹರಿಯುತ್ತಿತ್ತು. ಗುಂಡಮ್ಮಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿರುವುದರಿಂದ ಎಲ್ಲರ ಜೊತೆ ಬಹಳ ಖುಷಿಯಾಗಿಯೇ ಕಾಲ ಕಳೆಯುತ್ತಿದ್ದಾಳೆ.


Click it and Unblock the Notifications











