ಅಣ್ಣಯ್ಯ' ವೀಕ್ಷಕರು ಮೆಚ್ಚಿದ ಅತ್ಯುತ್ತಮ ಸಹೋದರ; ಮೊದಲ ಅವಾರ್ಡ್ ಹಿರಿ ಹಿರಿ ಹಿಗ್ಗಿದ ವಿಕಾಶ್ ಉತ್ತಯ್ಯ
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡವೂ ಒಂದು. ಜೀ ಕನ್ನಡ ವಾಹಿನಿಯ ಹೆಮ್ಮೆಯ ಕಾರ್ಯಕ್ರಮಗಳ ಪೈಕಿ ಜೀ ಕುಟುಂಬ ಅವಾರ್ಡ್ಸ್ ಕೂಡಾ ಒಂದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜೀ ಕುಟುಂಬ ಅವಾರ್ಡ್ಸ್ ಬಹಳ ಅದ್ಧೂರಿಯಾಗಿ ನಡೆದಿದೆ.
ಸಂತಸದ ವಿಚಾರವೆಂದರೆ ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾದ ಧಾರಾವಾಹಿ 'ಅಣ್ಣಯ್ಯ' ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆದಿದೆ. 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕ ಶಿವು ಆಗಿ ನಟಿಸುತ್ತಿರುವ ವಿಕಾಶ್ ಉತ್ತಯ್ಯ 'ಬೆಸ್ಟ್ ಸಹೋದರ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದ ಹಾಗೇ ಇದು ವಿಕಾಶ್ ಅವರ ಮೊದಲ ಧಾರಾವಾಹಿ ಹೌದು!

ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ವಿಕಾಶ್ ಅವರು ನಾಲ್ಕು ಜನ ಮುದ್ದು ತಂಗಿಯರ ಅಣ್ಣನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ಸ್ವೀಕರಿಸಿರುವ ವಿಕಾಶ್ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ. ಜೀ ನ ಮೊದಲ ಕುಟುಂಬ, ಮೊದಲನೇ ಅವಾರ್ಡ್. ನನ್ನ ಆ್ಯಕ್ಟಿಂಗ್ ಕೆರಿಯರ್ನ ಮೊದಲ ಅವಾರ್ಡ್ ಇದು" ಎಂದು ವಿಕಾಶ್ ಉತ್ತಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
"ಈ ಅವಾರ್ಡ್ ಯಾವಾಗಲೂ ನನಗೆ ತುಂಬಾ ಸ್ಪೆಷಲ್ ಆಗಿರುತ್ತೆ. ಇನ್ನು ಈ ಅವಾರ್ಡ್ ಏನು ಬಂದಿದೆ, ಅದು ಜವಾಬ್ದಾರಿಯನ್ನು ಕೂಡಾ ಜಾಸ್ತಿ ಮಾಡಿದೆ. ಇನ್ನು ಮುಂದೆ ಇನ್ನಷ್ಟು ಚೆನ್ನಾಗಿ ಫರ್ಫಾರ್ಮ್ ಮಾಡೋದಕ್ಕೆ, ಇನ್ನಷ್ಟು ಚೆನ್ನಾಗಿ ನಿಮ್ಮನ್ನು ಎಂಟರ್ಟ್ರೈನ್ ಮಾಡುವುದಕ್ಕೆ ಏನು ಮಾಡ್ಬಹುದು ಆ ಜವಾಬ್ದಾರಿನ ಈ ಅವಾರ್ಡ್ ಕೊಟ್ಟಿದೆ. ಖಂಡಿತವಾಗ್ಲೂ ಅದನ್ನ ಮಾಡಿಯೇ ಮಾಡ್ತೇನೆ. ಧನ್ಯವಾದಗಳು" ಎಂದು ಹೇಳಿಕೊಂಡಿದ್ದಾರೆ ವಿಕಾಶ್ ಉತ್ತಯ್ಯ.

'ಅಣ್ಣಯ್ಯ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಶಿವಣ್ಣನಾಗಿ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ವಿಕಾಶ್ ಅವರ ನಟನೆಯ ನಂಟು ಶುರುವಾಗಿದ್ದು ಕಿರುಚಿತ್ರದ ಮೂಲಕ. 'ಕನಸಿನ ಮಳೆಯಾದಳು' ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಕೊಡಗಿನ ಕುವರ ನಂತರ ಹಾರಿದ್ದು ಸ್ಯಾಂಡಲ್ವುಡ್ಗೆ. 'ಆನ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡ ವಿಕಾಶ್ ಉತ್ತಯ್ಯ ತಮ್ಮ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದರು.
ಮುಂದೆ 'ಮೇರಿ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಮಂಜಿನ ನಗರಿಯ ಹುಡುಗ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಅಣ್ಣಯ್ಯ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈ ಹ್ಯಾಂಡ್ ಸಮ್ ಹುಡುಗ ಮುಂಚೆಯಿಂದಲೂ ನನಗೆ ಕಿರುತೆರೆಯಿಂದ ಅವಕಾಶಗಳು ಬರ್ತಿತ್ತು. ಯಾವುದೇ ಪಾತ್ರ ಅಥವಾ ಕಥೆ ನನ್ನನ್ನು ಅಷ್ಟು ಎಕ್ಸೈಟ್ ಮಾಡಿರಲಿಲ್ಲ. ನಾನು ಸಿನಿಮಾದಲ್ಲಿಯೂ ನಟಿಸ್ತಾ ಇದ್ದಿದ್ದರಿಂದ ನನಗೆ ಸೀರಿಯಲ್ನಲ್ಲಿ ಬಣ್ಣ ಹಚ್ಚಲು ಟೈಮ್ ಕೂಡ ಇರಲಿಲ್ಲ ಎಂದು ಈ ಹಿಂದೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ವಿಕಾಶ್ ಉತ್ತಯ್ಯ
ಅಷ್ಟೇ ಅಲ್ಲದೇ ಅಣ್ಣಯ್ಯ ಧಾರಾವಾಹಿಯ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದ ಕೂಡಲೇ ವಿಕಾಶ್ ಅವರಿಗೆ ಇಷ್ಟವಾಗಿ ನಟಿಸಲು ಅಸ್ತು ಎಂದರು. ಶಿವಣ್ಣನಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರು ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಮುಖ್ಯವಾದ ವಿಚಾರವೆಂದರೆ ಬಿ.ಎ, ಎಲ್.ಎಲ್. ಬಿ, ಎಲ್.ಎಲ್.ಎಂ ಪದವೀಧರರಾಗಿರುವ ಇವರು ಭಾರತೀಯ ಸಂವಿಧಾನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ.


Click it and Unblock the Notifications











