'ಮುದ್ದುಲಕ್ಷ್ಮೀ' ನಟನ ವಿರುದ್ದ ಮತ್ತೊಂದು ದೂರು ದಾಖಲು, ಚರಿತ್ ಬಾಳಪ್ಪ ನಾಪತ್ತೆ!
ಮುದ್ದುಲಕ್ಷ್ಮೀ ಧಾರಾವಾಹಿಯ ಮೂಲಕ ಮನೆ ಮಾತಾದವರು ಚರಿತ್ ಬಾಳಪ್ಪ. ಕನ್ನಡದಲ್ಲಿ ಆಕ್ಟ್ ಮಾಡುತ್ತಲೇ ತೆಲುಗು ಕಿರುತೆರೆಯತ್ತ ಕೂಡ ಹೋದ ಚರಿತ್ ಮೇಲೆ ಕೆಲ ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಆರೋಪ-ಪ್ರತ್ಯಾರೋಪವನ್ನು ಮಾಡಲಾಗಿತ್ತು. ಲೈಂಗಿಕ ದೌರ್ಜನ್ಯದ ಆರೋಪದ ಮೇರೆಗೆ ಸೀರಿಯಲ್ ನಟ ಚರಿತ್ ಅವರನ್ನು ಬಂಧಿಲಾಗಿತ್ತು.
ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚರಿತ್ ಆ ಯುವತಿಗೆ ಪ್ರೀತಿಸುವುದಾಗಿ ಹೇಳಿ, ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕಥೆಯ ಕ್ಲೈಮ್ಯಾಕ್ಸ್ ಇನ್ನು ಕುತೂಹಲಕಾರಿಯಾಗಿದೆ. ಇದರ ನಡುವೆ ಈಗ ಮತ್ತೊಬ್ಬ ಯುವತಿ ಚರಿತ್ ಬಾಳಪ್ಪ ಚರಿತ್ರೆ ಸರಿ ಇಲ್ಲ ಎಂದು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಚರಿತ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಸಮಯದಲ್ಲಿ ಮಹಿಳೆ ಚಿತ್ರೀಕರಣ ನೋಡಲು ಹೋಗಿದ್ದರು. ಈ ಸಮಯದಲ್ಲಿ ಚರಿತ್ ಬಾಳಪ್ಪ ಪರಿಚಯವಾಗಿತ್ತು ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.
ಆದರೆ ಆಗ ಚರಿತ್ ಸಂಸಾರಸ್ಥರಾಗಿದ್ದರು. ಪತ್ನಿಯ ಜೊತೆ ಇದ್ದರು. ಹೀಗಾಗಿ ನಡುವೆ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದರು ಕೂಡ ದೈಹಿಕ ಸಂಪರ್ಕಕ್ಕೆ ಚರಿತ್ ಒತ್ತಾಯ ಮಾಡುತ್ತಿದ್ದರು ಎನ್ನುವ ಆರೋಪ ಈಗ ಕೇಳಿ ಬರುತ್ತಿದೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಚರಿತ್ ಗಲಾಟೆ ಕೂಡ ಮಾಡಿದ್ದು ಮಹಿಳೆ ಆಗ ಪೊಲೀಸರಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರನ್ನು ನೀಡಿದ್ದರು ಎನ್ನಲಾಗಿದೆ.
ದೂರು ದಾಖಲಾದ ಹಿನ್ನೆಲೆ ಕೆಲ ದಿನ ಸುಮ್ಮನೆ ಇದ್ದ ಚರಿತ್ ಆ ನಂತರ ಮೂರು ವರ್ಷಗಳ ಹಿಂದೆ ಪತ್ನಿಗೆ ಡಿವೋರ್ಸ್ ನೀಡಿ ಮತ್ತೆ ಈ ಮಹಿಳೆಯ ಹಿಂದೆ ಅಲೆದಾಡಲು ಶುರು ಮಾಡಿದರು, ಪ್ರೀತಿಸುವಂತೆ ಪೀಡಿಸುತ್ತಿದ್ದರು, ಇಷ್ಟೇ ಅಲ್ಲದೇ ತನ್ನೊಂದಿಗೆ ದೈಹಿಕವಾಗಿ ಸಹಕರಿಸುವಂತೆ ದುಂಬಾಲು ಬಿದ್ದಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಯಾವುದಕ್ಕೂ ಒಪ್ಪದೇ ಇದ್ದಾಗ ಖಾಸಗಿ ಫೋಟೊಗಳನ್ನು ತೋರಿಸಿ ಹಿಂಸೆ ಕೊಡುತ್ತಿದ್ದ, ತನ್ನೊಂದಿಗೆ ಇರುವ ಫೋಟೊ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಹಣಕ್ಕೆ ಬೇಡಿಕೆಯನ್ನು ಇಟ್ಟು ಬ್ಲ್ಯಾಕ್ ಮೇಲೆ ಮಾಡಿ ನಿರಂತರವಾಗಿ ಹಣ ಆಭರಣಗಳನ್ನು ಕೂಡ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ, ಪದೇ ಪದೇ ಕಿರುಕುಳ ನೀಡಿದ್ದರಿಂದ ಬೇಸತ್ತು ಪೊಲೀಸರಿಗೆ ಮಹಿಳೆ ಈಗ ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನು ದೂರು ದಾಖಲಾದ ಬೆನ್ನಲ್ಲೇ ಚರಿತ್ ನಾಪತ್ತೆಯಾಗಿದ್ದು ಪೊಲೀಸರು ಚರಿತ್ಗೆ ಬಲೆ ಬೀಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂದ್ಹಾಗೇ ಚರಿತ್ ಬಾಳಪ್ಪ ಕಿರುತೆರೆಯಲ್ಲಿ ಮಿಂಚಬೇಕಿದ್ದ ಪ್ರತಿಭೆ. ಆದರೆ ಸದ್ಯ ಇವರ ಮೇಲೆ ಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಒಮ್ಮೆ ಅರೆಸ್ಟ್ ಆಗಿಯೂ ಹೊರಬಂದಿದ್ದಾರೆ. ಚರಿತ್ ಅವರ ಸಂಸಾರದಲ್ಲಿ ಬಿರುಕು ಮೂಡಿ, ಡಿವೋರ್ಸ್ ಕೂಡ ಪಡೆದುಕೊಂಡಿದ್ದರು. ಆದರೆ, ಕೋರ್ಟ್ ನಿರ್ದೇಶನಕ್ಕೆ ಪತ್ನಿ ಹಾಕಿದ್ದ ಜೀವನಾಂಶದ ನೋಟಿಸ್ ವಿಚಾರವಾಗಿ ಚರಿತ್ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲೂ ಕೇಸ್ ದಾಖಲಾಗಿತ್ತು.


Click it and Unblock the Notifications










