ಆ ನಟ ಮದುವೆ ಆದಾಗ ಮನೆ ಮುಂದೆ ಹೋಗಿ ಅತ್ತು ರಾದ್ಧಾಂತ ಮಾಡಿದ್ದೆ- ಅನುಪಮಾ
ನಟಿ, ನಿರೂಪಕಿ ಅನುಪಮಾ ಗೌಡ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆಯೇ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಾರೆ. 2019ನೇ ಸಾಲಿನ ಕರ್ನಾಟಕದ ಚಲನಚಿತ್ರ ರಾಜ್ಯ ಪ್ರಶಸ್ತಿ ಘೋಷಣೆ ಆಗಿದೆ. 'ತ್ರಯಂಬಕಂ' ಚಿತ್ರದ ನಟನೆಗಾಗಿ ಅನುಪಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಬೆಂಗಳೂರಿನಲ್ಲಿ ಓದಿ ಬೆಳೆದವರು ಅನುಮಪಾ ಗೌಡ. ಚಿಕ್ಕಂದಿನಿಂದ ಸಾಕಷ್ಟು ಕಷ್ಟ ಎದುರಿಸಿ ಬೆಳೆದವರು ಅನುಪಮಾ. ಸದ್ಯ ಆರ್ಜೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಜೊತೆ ಜೊತೆಗೆ ಕಿರುತೆರೆ, ಹಿರಿತೆರೆ ಪಯಣದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೊದಲ ಸೆಲೆಬ್ರೆಟಿ ಕ್ರಶ್ ಬಗ್ಗೆಯೂ ಹೇಳಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರಿಗೆ ಅಭಿಮಾನಿಗಳಿರುತ್ತಾರೆ. ಕೆಲವರಂತೂ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಡುತ್ತಾರೆ. ಅಪ್ಪಿ ತಪ್ಪಿ ತಾನು ಇಷ್ಟಪಟ್ಟ ನಟ ಅಥವಾ ನಟಿಗೆ ಮದುವೆ ಆಗಿಬಿಟ್ಟರೆ ಆಘಾತಕ್ಕೊಳಗಾಗುವವರು ಇದ್ದಾರೆ. ರಂಪ ರಾಮಾಯಣ ಮಾಡುವವರು ಇರ್ತಾರೆ. ತಮ್ಮ ಮೊದಲ ಸೆಲೆಬ್ರೆಟಿ ಕ್ರಶ್ ಮದುವೆ ಆದಾಗ ಅವರ ಮನೆ ಬಳಿ ಹೋಗಿ ಅತ್ತಿದ್ದೆ ಎಂದು ಅನುಪಮಾ ಗೌಡ ನೆನಪಿಸಿಕೊಂಡಿದ್ದಾರೆ.
ಪಿಯುಸಿಯಲ್ಲಿ ಫೇಲ್ ಆದ ಬಳಿಕ ಸಿನಿಮಾ ಕಡೆ ಇಂಟ್ರೆಸ್ಟ್ ಶುರುವಾಯಿತು. ಆಗ ಓದಲು ಇಷ್ಟವಿರಲಿಲ್ಲ. 'ಮುಂಗಾರುಮಳೆ' ಸಿನಿಮಾ ಬಿಡುಗಡೆ ಆಗಿದ್ದ ಸಮಯ. ನನ್ನ ಮೊದಲ ಸೆಲಬ್ರೆಟಿ ಕ್ರಶ್ ಅಂದರೆ ವಿಜಯ್ ರಾಘವೇಂದ್ರ. ಅದು ಬರೀ ಕ್ರಶ್ ಅಲ್ಲ ಅವರನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ. ಅದು ಅವರಿಗೂ ಗೊತ್ತು. ಇತ್ತೀಚೆಗೆ ಒಂದು ಪ್ರಾಜೆಕ್ಟ್ ಅಲ್ಲಿ ಕೆಲಸ ಮಾಡುವಾಗ ಎಲ್ಲರ ಮುಂದೆ ಆ ಘಟನೆ ಹೇಳುವಂತೆ ವಿಜಯ್ ರಾಘವೇಂದ್ರ ಹೇಳಿದ್ದರು ಎಂದು ಅನುಪಮಾ ತಿಳಿಸಿದ್ದಾರೆ.
ನನಗೆ ವಿಜಯ ರಾಘವೇಂದ್ರ ರೀತಿಯ ಹುಡುಗನನ್ನು ಮದುವೆ ಆಗುವ ಆಸೆ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಹಾಗೂ ಮುರಳಿ ಸರ್ ಇಬ್ಬರೂ ಬಂದಿದ್ದರು. ನಾನು ವಿಜಯ ರಾಘವೇಂದ್ರ ಸರ್ನ ಮಾತ್ರ ನೋಡ್ತಾ ನಿಂತಿದ್ದೆ. ನಾನು ಸೆಕೆಂಡ್ ಪಿಯುಸಿ ಇದ್ದಾಗಲೇ ವಿಜಯ್ ಸರ್ ಮದುವೆ ಆಗಿದ್ದರು. ಅವರ ಮನೆ ಹತ್ರ ಹೋಗಿ ಕಣ್ಣೀರು ಹಾಕಿ, ಇನ್ಮುಂದೆ ನಿಮ್ಮನ್ನು ಇಷ್ಟಪಡಲ್ಲ ಅಂತೆಲ್ಲಾ ಹೇಳಿದ್ದೆ. ಅವರೇ ನನ್ನ ಮೊದಲ ಸೆಲೆಬ್ರೆಟಿ ಕ್ರಶ್ ಎಂದು ಅನುಪಮಾ ಹೇಳಿದ್ದಾರೆ.

ಬಳಿಕ ಗಣೇಶ್ ಸರ್ ಅಭಿಮಾನಿ ಆಗಿದ್ದೆ. ಬಸ್ಪಾಸ್ಗೆ ಅಂತ ಹೇಳಿ ಮನೆಯಲ್ಲಿ ದುಡ್ಡು ತಗೊಂಡು ಒಂದು ಪಾಸ್ ದುಡ್ಡನ್ನು ಸಿನಿಮಾ ನೋಡಲು ಬಳಸಿದ್ದೆ. ನನ್ನ ಸ್ನೇಹಿತೆಗೆ ಪುನೀತ್ ಸರ್ ಇಷ್ಟ. 'ಮುಂಗಾರು ಮಳೆ' ಹಾಗೂ 'ಮಿಲನಾ' ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿತ್ತು. ಇಬ್ಬರೂ ಎರಡು ಸಿನಿಮಾಗಳನ್ನು ತಲಾ 11 ಬಾರಿ ನೋಡಿದ್ದೆವು. 'ಮುಂಗಾರು ಮಳೆ' ಸಿನಿಮಾ ನೋಡಿದ ಬಳಿಕ ಸಿನಿಮಾ ಹುಚ್ಚು ಹೆಚ್ಚಾಯಿತು ಎಂದು ಅನುಪಮಾ ವಿವರಿಸಿದ್ದಾರೆ.
'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ಅನುಪಮಾ ಗೌಡ ಬಾಲನಟಿಯಾಗಿ ಮಿಂಚಿದ್ದರು. ತಂದೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಣ್ಣದಲೋಕದ ನಂಟು ಬೆಳೆಯಲು ಸುಲಭವಾಯಿತು. 'ಆ ಕರಾಳ ರಾತ್ರಿ', 'ಪುಟ 109', 'ತ್ರಯಂಬಕಂ', 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾಗಳಲ್ಲಿ ಅನುಪಮಾ ನಟಿಸಿದ್ದಾರೆ.
'ಅಕ್ಕ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗಮನ ಸೆಳೆದರು. ಬಿಗ್ಬಾಸ್ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. 'ಮಜಾ ಭಾರತ', 'ರಾಜಾ-ರಾಣಿ', 'ನನ್ನಮ್ಮ ಸೂಪರ್ ಸ್ಟಾರ್' ಸೇರಿ ಕೆಲ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











