Bigg Boss: ಬಿಗ್ಬಾಸ್ ಶೋಗೆ ಸೆನ್ಸಾರ್ ಇಲ್ಲದಿದ್ದರೆ ಹೇಗೆ? ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ: ಹೈಕೋರ್ಟ್
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೇ ಸುದ್ದಿಯಲ್ಲಿ ಇರುತ್ತದೆ. 15 ವರ್ಷಗಳ ಹಿಂದೆ ಹಿಂದಿಯಲ್ಲಿ ಪ್ರಾರಂಭವಾಗಿದ್ದ ಶೋ ಮುಂದೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ ಗೆದ್ದಿದೆ. ಇದೀಗ ಆಂಧ್ರಪ್ರದೇಶ ಹೈಕೋರ್ಟ್ ಬಿಗ್ಬಾಸ್ ಶೋಗೆ ಸೆನ್ಸಾರ್ಶಿಪ್ ಬೇಕು ಎಂದು ಹೇಳಿದೆ. ಇದು ಹೊಸ ಚರ್ಚೆ ಹುಟ್ಟಾಕ್ಕಿದೆ.
ತೆಲುಗಿನಲ್ಲಿ ಬಿಗ್ಬಾಸ್ ಸೀಸನ್-7 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇಂತಹ ಹೊತ್ತಲ್ಲಿ ಶೋ ವಿರುದ್ಧ ದಾಖಲಾಗಿದ್ದ ಪಿಟಿಷನ್ ವಿಚಾರಣೆ ನಡೆಸಿರುವ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಮೊದಲಿನಿಂದಲೂ ಬಿಗ್ಬಾಸ್ ಶೋ ಬಗ್ಗೆ ಕೆಲವರು ಚಕಾರ ಎತ್ತುತ್ತಿದ್ದಾರೆ. ಈ ಶೋನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಕೆಲವೊಮ್ಮೆ ಅಶ್ಲೀಲ ಕಂಟೆಂಟ್ ಕೂಡ ಪ್ರಸಾರವಾಗುತ್ತದೆ ಎನ್ನುವ ಆರೋಪವಿದೆ. ತಮಿಳುನಾಡಿನಲ್ಲಿ ಶೋ ಪ್ರಸಾರ ಮಾಡದಂತೆ ಈ ಹಿಂದೆ ಪ್ರತಿಭಟನೆ ಕೂಡ ನಡೆದಿತ್ತು.

ಬಿಗ್ ಬಾಸ್ ಶೋ ಪ್ರಸಾರ ಮಾಡುವ ಮುನ್ನ ಸೆನ್ಸಾರ್ ಮಾಡುವ ಬಗ್ಗೆ ಕೇಂದ್ರಕ್ಕೆ ಸೂಕ್ತ ಸೂಚನೆ ನೀಡುವ ಅಂಶದ ಬಗ್ಗೆ ಪರಿಶೀಲಿಸುವುದಾಗಿ ಕೋರ್ಟ್ ಹೇಳಿದೆ. ಅಶ್ಲೀಲ ವಿಷಯ ಪ್ರಸಾರವಾದ ನಂತರ ಸಂಬಂಧಪಟ್ಟ ಚಾನೆಲ್ಗೆ ದೂರು ನೀಡಿ ಏನು ಪ್ರಯೋಜನ ಎಂದಿದೆ. ಬಿಗ್ ಬಾಸ್ ಶೋ ಪ್ರಸಾರ ಮಾಡುವ ಮುನ್ನ ಸೆನ್ಸಾರ್ ಮಾಡದಿದ್ದರೆ ಹೇಗೆ? ಎನ್ನುವಂತೆ ಶೋ ಪ್ರಸಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಟಿಷನ್ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಗ್ ಬಾಸ್ ಶೋ ಅಶ್ಲೀಲತೆಯನ್ನು ಉತ್ತೇಜಿಸುವಂತಿದೆ ಎಂದು ಆರೋಪಿಸಿ ತೆಲುಗು ಯುವಶಕ್ತಿ ಅಧ್ಯಕ್ಷ ಮತ್ತು ನಿರ್ಮಾಪಕ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ 2 ಅರ್ಜಿ ಸಲ್ಲಿಸಿದ್ದರು. ಆಂಧ್ರ ಹೈ ಕೋರ್ಟ್ ಅರ್ಜಿಗಳ ವಿಚಾರಣೆ ನಡೆಸಿತು. ಸೆನ್ಸಾರ್ ಇಲ್ಲದೆಯೇ ಶೋ ಪ್ರಸಾರವಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಕಾರ್ಯಕ್ರಮ ಪ್ರಸಾರ ಮಾಡುವಂತೆ ಕೋರಿದರು. ಸದ್ಯ ಬಿಗ್ಬಾಸ್ ಶೋ ಪ್ರಸಾರವಾಗುತ್ತಿಲ್ಲ, ಹಾಗಾಗಿ ಈ ಪಿಟಿಷನ್ ಬಗ್ಗೆ ಈಗ ವಿಚಾರಣೆ ಸರಿಯಲ್ಲ, ಇನ್ನು ಮುಂದೆ ಪ್ರಸಾರವಾಗುವ ಶೋ ಬಗ್ಗೆ ಆಕ್ಷೇಪ ಇದ್ದರೆ ಅರ್ಜಿ ಹಾಕಿಕುವಂತೆ ಪ್ರತಿವಾದಿ ಪರ ವಕೀಲರು ವಾದಿಸಿದ್ದಾರೆ.

ಬಿಗ್ ಬಾಸ್ ಶೋ ಪ್ರಸಾರ ಮಾಡುವ ಮುನ್ನ ಸೆನ್ಸಾರ್ ವ್ಯವಸ್ಥೆ ಇರಲಿಲ್ಲ. ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯ್ದೆ ಪ್ರಕಾರ ದೂರುಗಳನ್ನು ಪರಿಶೀಲಿಸುವ ವ್ಯವಸ್ಥೆ ಇದೆ ಎಂದು ಪ್ರತಿವಾದಿ ಪರ ವಕೀಲರು ಹೇಳಿದ್ದಾರೆ. ಒಂದು ವೇಳೆ ಪ್ರಸಾರಕ್ಕೂ ಮುನ್ನ ಸೆನ್ಸಾರ್ಶಿಪ್ ಮಾಡಬೇಕಾದರೆ ಕೇಂದ್ರ ಕಾನೂನು ರೂಪಿಸಬೇಕು ಎಂದು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ಬಿಗ್ ಬಾಸ್ನಂತಹ ಶೋ ಇಷ್ಟವಾಗದಿದ್ದರೆ ಟಿವಿ ಚಾನೆಲ್ ಬದಲಾಯಿಸಬಹುದು. ಅಭಿವ್ಯಕ್ತಿ ಸ್ವಾಂತಂತ್ರವನ್ನು ನಿರಾಕರಿಸುವಂತಿಲ್ಲ. ಹಾಗಾಗಿ ಈ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ವ್ಯಾಪ್ತಿ ಕಡಿಮೆ ಎಂದಿದ್ದಾರೆ.
ವಾದ ಆಲಿಸಿದ ಬಳಿಕ ಆಕ್ಷೇಪಾರ್ಹ ಪ್ರಸಾರಕ್ಕೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಶೋ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಆಗದಿದ್ದರೆ ಹೇಗೆ? ಕೇಂದ್ರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಅಭಿಪ್ರಾಯಪಟ್ಟಿದೆ. ಶೋ ಪ್ರಸಾರವಾದ ಬಳಿಕ ಕ್ರಮ ಕೈಗೊಳ್ಳುವುದರಿಂದ ಏನು ಪ್ರಯೋಜನ? ಕಿರುತೆರೆ ವಾಹಿನಿಗಳಲ್ಲಿ ಅಶ್ಲೀಲತೆಯಿಂದ ಕೂಡಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದರ ಮೇಲೆ ನಿಗಾ ಇಡಬಾರದೇ? ಎಂದು ಪೀಠ ಕೇಳಿದೆ. ಸಮರ್ಪಕವಾದ ಮೇಲ್ವಿಚಾರಣೆ ಇಲ್ಲದಿದ್ದರೆ ಹೇಗೆ? ನೈತಿಕ ಮೌಲ್ಯಗಳನ್ನು ರಕ್ಷಿಸದಿದ್ದರೆ ಹೇಗೆ? ಎಂದು ಪ್ರಶ್ನಿಸಿದೆ. ಈ ಕುರಿತು ಆಳವಾದ ತನಿಖೆ ನಡೆಸುವುದಾಗಿ ಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಅಧಿಕಾರ ವ್ಯಾಪ್ತಿಗೆ ಅನುಗುಣವಾಗಿ ಬಿಗ್ ಬಾಸ್ ಶೋ ಪ್ರಸಾರ ಮಾಡುವ ಮುನ್ನ ಸೆನ್ಸಾರ್ ಮಾಡುವ ವಿಚಾರವನ್ನು ಪರಿಗಣಿಸಿ ಕೇಂದ್ರಕ್ಕೆ ಸೂಕ್ತ ಸೂಚನೆ ನೀಡುವ ಬಗ್ಗೆ ಚಿಂತಿಸುವುದಾಗಿ ಕೋರ್ಟ್ ಹೇಳಿದೆ. ಇಲ್ಲಿ ಬೆಕ್ಕಿನ ಕೊರಳಿಗೆ ಯಾರು ಗಂಟೆ ಕಟ್ಟುತ್ತಾರೆ? ಎನ್ನುವುದು ಮುಖ್ಯ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ಸಂಪೂರ್ಣ ವಿವರಗಳೊಂದಿಗೆ ಕೌಂಟರ್ ಅರ್ಜಿ ಸಲ್ಲಿಸುವಂತೆ ಸಂಬಂಧಪಟ್ಟ ಚಾನಲ್, ಶೋ ಆಯೋಜಕರು ಮತ್ತು ನಟ ನಾಗಾರ್ಜುನಗೆ ಕೋರ್ಟ್ ಆದೇಶಿಸಿದೆ. ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ತೆಲುಗಿನಲ್ಲಿ ಈಗಾಗಲೇ ಬಿಗ್ಬಾಸ್ ಶೋ 6 ಸೀಸನ್ ಮುಕ್ತಾಯವಾಗಿದೆ, ಸೆಪ್ಟೆಂಬರ್ ಮೊದಲ ವಾರ 7ನೇ ಸೀಸನ್ ಆರಂಭಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಪ್ರೋಮೊ ಸಹ ರಿಲೀಸ್ ಆಗಿದೆ. ಕನ್ನಡ ಬಿಗ್ಬಾಸ್ ಸೀಸನ್ 9ರಲ್ಲಿ ನವೀಣರು, ಪ್ರವೀಣರನ್ನು ಸೇರಿಸಿದಂತೆ ತೆಲುಗಿನಲ್ಲೂ ಪ್ರಯತ್ನ ನಡೀತಿದೆ. ಈ ಬಾರಿ ಯಾರೆಲ್ಲಾ ತೆಲುಗು ಬಿಗ್ಬಾಸ್ ಮನೆ ಪ್ರವೇಶಿಸುತ್ತಾರೆ ಎನ್ನುವ ಕುತೂಹಲವಿದೆ.


Click it and Unblock the Notifications











