ಮಹಾರಾಜ ಗೊಂಬೆಯ ಕತ್ತನ್ನೇ ಮುರಿದ ಸೌಭಾಗ್ಯ : ದಿಗಂತ್ ಈ ಸ್ಥಿತಿಗೆ ಯಾರುಕಾರಣ?
ಅದಿತಿಗೆ ಏನಾದರೂ ಮಾಡಿ ದಿಗಂತ್ನನ್ನು ಸರಿ ಮಾಡಲೇಬೇಕೆಂಬ ಹಠ ಹುಟ್ಟಿದೆ. ಅದ ಕಾರಣಕ್ಕೆ ಬನಶಂಕರಿ ತಾಯಿ ಮಡಿಲಿಗೆ ಹಾಕಿದ್ದಾಳೆ. ಒಂದೊಳ್ಳೆ ಕೆಲಸಕ್ಕೆ ನೂರಾರು ವಿಘ್ನಗಳು ಬರುವುದು ಸಹಜ. ಆ ವಿಘ್ನಗಳನ್ನೆಲ್ಲಾ ದಾಟಿಕೊಂಡು ಹೋಗುವ ಶಕ್ತಿಯನ್ನು ಕರೆಸಿಕೊಳ್ಳುವ ದೇವರೆ ಕೊಡಬೇಕು. ಅದೇ ರೀತಿ ಅದಿತಿಗೂ ದೇವರ ಆಶೀರ್ವಾದ ಇತ್ತು ಅನ್ಸುತ್ತೆ. ಅದಕ್ಕೆ ಮನೆಯವರೆಲ್ಲರ ವಿರೋಧದ ನಡುವೆಯೂ ದಿಗಂತ್ನನ್ನು ಕರೆದುಕೊಂಡು ಬಂದವಳು, ಅಪಘಾತದಿಂದಲೂ ಪಾರಾದಳು.
ಹಾಗಂತ ದೇವಸ್ಥಾನಕ್ಕೆ ಬಂದ ಮೇಲೂ ಕಷ್ಟಗಳು ತಪ್ಪಲಿಲ್ಲ. ಬದಲಿಗೆ ಪ್ರಾಣಕ್ಕೆ ಕುತ್ತು ತರುವಂತ ಸಮಸ್ಯೆಗಳು ಬಂದರು ಅದನ್ನೆಲ್ಲಾ ಎದುರಿಸಿದಳು. ಉರುಳಿ ಸೇವೆ ಮಾಡುವಾಗ ಗಾಜುಗಳಿದ್ದರೂ ಅದನ್ನು ದಾಟಿ ಉರುಳು ಸೇವೆ ಮಾಡಿದಳು. ನದಿಯಲ್ಲಿ ಮುಳುಗುವಾಗ ಮೊಸಳೆಯಿಂದಾನೇ ಬಲಿಯಾಗಬೇಕಿತ್ತು. ಆದರೆ ಅದರಿಂದ ಕೂಡ ಅದಿತಿ ಪಾರಾಗಿದ್ದಾಳೆ. ಆದರೆ ಯಾವಾಗಲೂ ಅಪ್ಪಯ್ಯನ ಹಿತ ಬಯಸುವ ನಾಟಕವಾಡುತ್ತಿರುವ ಸೌಭಾಗ್ಯ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅದಿತಿಯ ಭಕ್ತಿಗೆ ಒಲಿಯುತ್ತಾಳಾ ಬನಶಂಕರಿ ತಾಯಿ?
ಅರ್ಚಕರೊಬ್ಬರ ಮಾತನ್ನು ಕೇಳಿದ ಅದಿತಿ ಮನೆಯವರನ್ನೆಲ್ಲಾ ಎದುರು ಹಾಕಿಕೊಂಡು ಬನಶಂಕರಿ ತಾಯಿ ಸನ್ನಿದಾನಕ್ಕೆ ದಿಗಂತ್ನನ್ನು ಕರೆದುಕೊಂಡು ಬಂದಿದ್ದಾಳೆ. ಪ್ರತಿ ದಿನ ತಾಯಿಗೆ ಪೂಜೆ ಮಾಡಿ, ಸೇವೆಯನ್ನು ಸಲ್ಲಿಸುತ್ತಿದ್ದಾಳೆ. ಇದೀಗ ದಿಗಂತ್ ಹುಷಾರಾಗುವುದಕ್ಕೆ ದಿನ ಹತ್ತಿರವಾಗಿದೆ. ಇವತ್ತು ವಿಶೇಷ ಪೂಜೆ ಮಾಡಿದರೆ ಆಯಿತು ದಿಗಂತ್ ಗುಣಮುಖನಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ದೇವರೇ ಕೊಟ್ಟ ತ್ರಿಶೂಲದಿಂದ ಅದಿತಿ ಬಚಾವ್
ಕಡೆ ದಿನವಾದ ಇಂದು ವಿಶೇಷ ಪೂಜೆ ಮಾಡುವುದಕ್ಕೆಂದೆ ಅದಿತಿ ನದಿಗಿಳಿದಿದ್ದಾಳೆ. ನದಿಯಲ್ಲಿ ಮೂರು ಸಲ ಮುಳುಗಿ ಏಳುವಷ್ಟರಲ್ಲಿ ಮೊಸಳೆ ಪಕ್ಕದಲ್ಲಿಯೇ ಬಂದಿದೆ. ಆ ಮೊಸಳೆಯಿಂದ ತನ್ನನ್ನು ರಕ್ಷಿಸಿ ಎಂದು ಅದಿತಿ ಕಿರುಚಿಕೊಳ್ಳುತ್ತಿದ್ದಾಳೆ. ಆದರೆ ಯಾರು ಕೂಡ ಆ ಜಾಗಕ್ಕೆ ಬರಲೇ ಇಲ್ಲ. ಕಡೆಗೆ ಆ ತಾಯಿಯ ಹೆಸರನ್ನೇ ಅದಿತಿ ಜೋರಾಗಿ ಕೂಗಿದ್ದಾಳೆ. ಕಾಪಾಡು ತಾಯಿ ಎಂದಿದ್ದಾಳೆ. ನದಿಯ ದಡದಲ್ಲಿ ಇದ್ದ ತ್ರಿಶೂಲ ಅದೇಗೆ ಅದಿತಿ ಕೈ ಸೇರಿತೋ ಗೊತ್ತಿಲ್ಲ. ಎಲ್ಲರಿಗೂ ಸಿಕ್ಕಾಪಟ್ಟೆ ಆಶ್ಚರ್ಯ. ತನ್ನ ಪ್ರಾಣವನ್ನು ತೆಗೆದುಕೊಳ್ಳಲು ಬಂದಿದ್ದ ಮೊಸಳೆಗೆ ಚುಚ್ಚಿ ಮೇಲೆ ಬಂದಿದ್ದಾಳೆ. ಇದನ್ನು ನೋಡಿದ ಅರ್ಚಕರಿಗೂ ಆಶ್ಚರ್ಯ. ಬಳಿಕ ನೆಲದ ಮೇಲೆ ಊಟ ಮಾಡುವುದಕ್ಕೆ ಪ್ರಸಾದ ನೀಡಿದ್ದಾರೆ.

ಅರ್ಚಕರಿಂದ ವಿಶೇಷ ಚಿಕಿತ್ಸೆ
ಅದಿತಿಯ ವಿಶೇಷ ಸೇವೆಯ ಜೊತೆಗೆ ಅರ್ಚಕರು ಕೂಡ ದಿಗಂತ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪೂಜೆಯ ಬಳಿಕ ಆಯುರ್ವೇದ ಚಿಕಿತ್ಸೆ ನೀಡಿದ್ದಾರೆ. ದಿಗಂತ್ ಕೂಡ ಈ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ದಿಗಂತ್ ನ ಸ್ಪಂದನೆ ನೋಡಿ ಗುರುಗಳಿಗೂ ನಂಬಿಕೆ ಬಂದಿದೆ. ದಿಗಂತ್ ಇನ್ನು ಹುಷಾರಾಗುತ್ತಾನೆ ಎಂಬ ನಂಬಿಕೆಯ ನಗು ಅವರ ಮುಖದಲ್ಲಿ ಮೂಡಿದೆ. ಚಿಕಿತ್ಸೆ ಎಲ್ಲಾ ಮುಗಿದ ಮೇಲೆ ಅವನಿಗೆ ನಿದ್ದೆ ಮಾಡಲು ಬಿಡಿ ಎಂದು ಅಲ್ಲಿಂದ ಹೊರ ನಡೆದಿದ್ದಾರೆ.

ಮಹಾರಾಜನ ಕತ್ತನ್ನು ಮುರಿದದ್ದು ಯಾಕೆ?
ದಿಗಂತ್ ಅಪ್ಪ ಅಮ್ಮನನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವಿರುವುದು ಸೌಭಾಗ್ಯಗೆ ಮಾತ್ರ. ಮನೆಗೆ ತಂಗಿಯಂತೆ ಆದರೆ ನಡೆದುಕೊಳ್ಳುವುದು ಯಜಮಾನಿಯಂತೆ. ಎಲ್ಲಾ ಕಣ್ಣಲ್ಲೂ ಒಳ್ಳೆಯವಳಂತೆ ನಟಿಸುವ ಸೌಭಾಗ್ಯ ಮನಸ್ಸಲ್ಲಿ ದೊಡ್ಡ ಮಟ್ಟದ ದ್ವೇಷವೇ ತುಂಬಿ ತುಳುಕುತ್ತಿದೆ. ಅಪ್ಪಯ್ಯ ಹುಷಾರಾಗಲಿ ಎಂದು ಮನೆಯವರೆಲ್ಲಾ ಮುಂದೆ ಬಯಸುವ ಸೌಭಾಗ್ಯ ಅವನಿಂದ ಬೇರೆ ಏನನ್ನೋ ನಿರೀಕ್ಷೆ ಮಾಡುತ್ತಿದ್ದಾಳೆ ಎಂಬುದಂತು ಸ್ಪಷ್ಟವಾಯಿತು. ದಸರಾ ಹಬ್ಬದ ಗೊಂಬೆಗಳಲ್ಲಿ ಮಹಾರಾಜನ ಗೊಂಬೆಯನ್ನು ತೆಗೆದು ಕತ್ತು ಕಿತ್ತು ಬಿಸಾಕಿದ್ದಾಳೆ.


Click it and Unblock the Notifications











