ಚಿಕ್ಕಮಗಳೂರಿನ ಎಸ್ಟೇಟ್ ಶೂಟಿಂಗ್ ನೋಡಲು ಹೋದವರು ನಟಿಯಾದ ಕಥೆ: ಈಗ ಸಿನಿಮಾಗೂ ಎಂಟ್ರಿ!
ಕಳೆದ ವಾರವಷ್ಟೇ ಬಿಡುಗಡೆಯಾಗಿರುವ 'ಭಾವ ತೀರ ಯಾನ' ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಕಥೆ, ಪಾತ್ರವರ್ಗದ ಹೊರತಾಗಿ ಸಂಗೀತದ ಮೂಲಕವೂ ಈ ಸಿನಿಮಾ ಸಿನಿಪ್ರಿಯರ ಮನ ಸೆಳೆದಿದೆ. ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಭಾವನೆಗಳ ಯಾನ ಎಂದು ಹೇಳಬಹುದು.
'ಭಾವ ತೀರ ಯಾನ' ಸಿನಿಮಾದಲ್ಲಿ ಸ್ಪರ್ಶ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ನಟಿ ಆರೋಹಿ ನೈನಾ. ತಮ್ಮ ಅಭಿನಯದ ಮೂಲಕ ಸಿನಿಪ್ರಿಯರ ಮನ ಸೆಳೆದಿರುವ ಆರೋಹಿ ನೈನಾ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ 'ಶ್ರೀಗೌರಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. 'ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕ ಅಪ್ಪು ತಂಗಿ ಅರ್ಚನಾ ಪಾತ್ರಕ್ಕೆ ಜೀವ ತುಂಬಿದ್ದ ಆರೋಹಿ ಖಳನಾಯಕಿಯಾಗಿ ತೆರೆಯ ಮೇಲೆ ಮಿಂಚಿದ್ದರು.

'ಇವಳು ಸುಜಾತ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಕಾಫಿ ನಾಡಿನ ಕುವರಿ ಮೊದಲ ಸಿನಿಮಾದಲ್ಲಿಯೇ ಸಿನಿಪ್ರಿಯರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಮೂಲದ ಆರೋಹಿ ನೈನಾ ಯಾವತ್ತೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಬದಲಿಗೆ ಆಕಸ್ಮಿಕವಾಗಿ ಬಂದ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟು ಇದೀಗ ಹಿರಿತೆರೆಯಲ್ಲೂ ಮಿಂಚುವ ಸುವರ್ಣಾವಕಾಶ ಪಡೆದುಕೊಂಡ ಬೆಡಗಿ ಈಕೆ.
ಚಿಕ್ಕಮಗಳೂರಿನ ಎಸ್ಟೇಟ್ ಒಂದರಲ್ಲಿ ನಡೆಯುತ್ತಿದ್ದ ಶೂಟಿಂಗ್ ನೋಡಲು ಹೋಗಿದ್ದರು ಆರೋಹಿ. ಶೂಟಿಂಗ್ ನೋಡಲು ಹೋಗಿದ್ದ ಆರೋಹಿ ಅವರನ್ನು ಕಂಡ ಮ್ಯಾನೇಜರ್ ನೀವು ಕೂಡಾ ಯಾಕೆ ನಟಿಸಬಾರದು ಎಂದು ಕೇಳಿದರು. ಬಂದ ಅವಕಾಶವನ್ನು ಬೇಡ ಎನ್ನಲು ಮನಸ್ಸಾಗದೇ ಒಪ್ಪಿಕೊಂಡ ಆರೋಹಿ ಆಡಿಶನ್ ಗಳಿಗೆ ಹೋಗುವ ಆಲೋಚನೆ ಮಾಡಿದರು.
ಒಂದಷ್ಟು ಆಡಿಶನ್ಗಳ ನಂತರ 'ಇವಳು ಸುಜಾತ' ಧಾರಾವಾಹಿಯ ಮೂಲಕ ನಟನೆಗೂ ಈಕೆ ಕಾಲಿಟ್ಟರು. ಮುಂದೆ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ನಟಿಸಿದ ಈಕೆ ಕಾಣಿಸಿಕೊಂಡಿದ್ದು ಪೋಷಕ ಪಾತ್ರದಲ್ಲಿ. ಆದರೂ ನಟನೆಯ ಮೂಲಕ ಗುರುತಿಸಿಕೊಂಡರು. ವಯಸ್ಸಿಗೂ ಮೀರಿದ ಪಾತ್ರದಲ್ಲಿ ಅಭಿನಯಿಸಿ ಶಹಬ್ಬಾಸ್ ಪಡೆದುಕೊಂಡಿದ್ದರು.
ನಂತರ 'ಕನ್ನಡತಿ' ಧಾರಾವಾಹಿಯ ಸಾನಿಯಾ ಆಗಿ ನಟಿಸಿದ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಅಂದ ಹಾಗೇ 'ಕನ್ನಡತಿ' ಧಾರಾವಾಹಿ ಆರಂಭವಾದಾಗ ನಟಿ ರಮೋಲಾ ಸಾನಿಯಾ ಪಾತ್ರದಲ್ಲಿ ನಟಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ರಮೋಲಾ ಅವರು ಸಾನಿಯಾ ಪಾತ್ರಕ್ಕೆ ವಿದಾಯ ಹೇಳಿದಾಗ ಆರೋಹಿ ಅವರು ಆ ಜಾಗಕ್ಕೆ ಬಂದರು.
ಆರೋಹಿ ನೈನಾ ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರೂ, ಆರಂಭದ ದಿನಗಳಲ್ಲಿ ಕೊಂಚ ಭಯವಿತ್ತು. ನೆಗೆಟಿವ್ ಪಾತ್ರ ಎಂಬುದು ಒಂದು ಕಡೆಯಾದರೆ, ಈಗಾಗಲೇ ಒಬ್ಬರು ನಟಿಸಿರುವಂತಹ ಪಾತ್ರ. ಜನ ಸಾನಿಯಾ ಆಗಿ ಅವರನ್ನು ಸ್ವೀಕರಿಸಿದ್ದಾರೆ. ಇದೀಗ ನನ್ನನ್ನು ಸ್ವೀಕರಿಸುತ್ತಾರಾ ಎಂಬ ಭಯ ಇನ್ನೊಂದೆಡೆ. ಎಲ್ಲಾ ಅಡೆತಡೆಗಳನ್ನು ಮೀರಿ ಸಾನಿಯಾ ಆಗಿ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.
'ಕನ್ನಡತಿ' ಧಾರಾವಾಹಿಯ ಮುಕ್ತಾಯಗೊಂಡ ಬಳಿಕ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರದ ಈಕೆ ನಂತರ 'ಶ್ರೀಗೌರಿ' ಧಾರಾವಾಹಿಯಲ್ಲಿ ಅರ್ಚನಾ ಆಗಿ ಮೋಡಿ ಮಾಡಿದರು. ಇದೀಗ 'ಭಾವ ತೀರ ಯಾನ' ದಲ್ಲಿ ಆರೋಹಿ ಅಭಿನಯಿಸಿದ್ದು ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಈಕೆ ನಟನಾ ಛಾಪನ್ನು ಪಸರಿಸಿದ್ದಾರೆ.


Click it and Unblock the Notifications











