ಗೆದ್ದ 'ಸೀತಾ ರಾಮ': ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೀತಾ ಜೀ ವಾಹಿನಿ? ನಿರ್ಮಾಪಕರು ಏನಂತಾರೆ?
ಕನ್ನಡ ಕಿರುತೆರೆ ವಾಹಿನಿಗಳೇ ಇನ್ನು ಮುಂದೆ ಧಾರಾವಾಹಿ ಹಾಗೂ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುತ್ತವೆಯೇ? ಈಗೊಂದು ಚರ್ಚೆ ಈಗ ಶುರುವಾಗಿದೆ. ಅದಕ್ಕೆ ಕಾರಣ ಜೀ ವಾಹಿನಿ ನಿರ್ಮಿಸಿದ 'ಸೀತಾ ರಾಮ' ಧಾರಾವಾಹಿ ಗೆಲುವು. ಸಾಮಾನ್ಯವಾಗಿ ಒಂದಷ್ಟು ಕಿರುತೆರೆ ನಿರ್ಮಾಣ ಸಂಸ್ಥೆಗಳು ಧಾರಾವಾಹಿಗಳನ್ನು ನಿರ್ಮಿಸಿ ವಾಹಿನಿಗಳಿಗೆ ಕೊಡುತ್ತಾ ಬರುತ್ತಿದ್ದಾರೆ. ಈ ಸಂಪ್ರದಾಯವನ್ನು ಈಗ ಜೀ ಮುರಿದಿದೆ.
ಸಿಹಿ ಕಹಿ ಚಂದ್ರು, ಬಿ. ಸುರೇಶ್, ಬಾಲಾಜಿ ಟೆಲಿ ಫಿಲಂಸ್, ರವಿಕಿರಣ್, ಶ್ರುತಿ ನಾಯ್ಡು, ರಾಮ್ಜೀ, ಆರೂರು ಜಗದೀಶ್, ಸ್ವಪ್ನ ಕೃಷ್ಣ ಹೀಗೆ ಹಲವರು ನಿಯಮಿತವಾಗಿ ಹೊಸ ಹೊಸ ಕಥೆಗಳನ್ನು ಧಾರಾವಾಹಿ ರೂಪದಲ್ಲಿ ಚಿತ್ರಿಸಿ ಹಲವು ವರ್ಷಗಳಿಂದ ವಾಹಿನಿಗಳಿಗೆ ನೀಡುತ್ತಿದ್ದಾರೆ. ಪ್ರತಿ ಸಂಚಿಕೆಗೆ ಇಷ್ಟು ಎಂದು ವಾಹಿನಿಗಳು ಅದಕ್ಕೆ ಹಣ ಕೊಡುತ್ತಿವೆ. ಆದರೆ ಪದೇ ಪದೆ ನಿರ್ಮಾಪಕರು ಮತ್ತು ವಾಹಿನಿಗಳ ನಡುವೆ ನಾನಾ ಕಾರಣಕ್ಕೆ ಕಿರಿಕ್ ಸರ್ವೇ ಸಾಧರಣವಾಗಿಬಿಟ್ಟಿದೆ. ಇದೆಲ್ಲದರ ಜೊತೆಗೆ ನಿರ್ಮಾಪಕರು ನಾವು ನಷ್ಟದಲ್ಲಿ ಇದ್ದೇವೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಇದಕ್ಕೆ ಪರಿಹಾರ ಎನ್ನುವಂತೆ ಜೀ ವಾಹಿನಿ ಸ್ವಂತವಾಗಿ 'ಸೀತಾ ರಾಮ' ಧಾರಾವಾಹಿ ನಿರ್ಮಿಸಿದೆ.

2 ವಾರಗಳಲ್ಲಿ 'ಸೀತಾ ರಾಮ' ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಒಳ್ಳೆ ಟಿಆರ್ಪಿ ಕೂಡ ಬರಲು ಆರಂಭಿಸಿದೆ. ಒಟ್ನಲ್ಲಿ ವಾಹಿನಿ ತನ್ನ ಸಮಸ್ಯೆಗೆ ತಾನೇ ಪರಿಹಾರ ಕಂಡುಕೊಂಡಂತೆ ಕಾಣುತ್ತಿದೆ. ಜೀ ವಾಹಿನಿಯ ರಾಘವೇಂದ್ರ ಹುಣಸೂರ್ ಹಾಗೂ ಪ್ರೊಡಕ್ಷನ್ ವಿಭಾಗದ ಪ್ರಭಾಕರ್ ಕೈಗೊಂಡ ಗಟ್ಟಿ ನಿರ್ಧಾರಗಳಿಂದ ಈ ಬೆಳವಣಿಗೆಯಾಗಿದೆ ಎನ್ನುವ ಮಾತುಗಳು ಕಿರುತೆರೆ ಲೋಕದಲ್ಲಿ ಕೇಳಿಬರ್ತಿದೆ.
ಒಂದೇ ಕಲ್ಲಿನಲ್ಲಿ 2 ಹಕ್ಕಿ?
'ಸೀತಾ ರಾಮ' ಧಾರಾವಾಹಿಯ ಸಕ್ಸಸ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪದೇ ಪದೇ ಕ್ಯಾತೆ ತೆಗೆಯುವ, ನಷ್ಟ ಎನ್ನುವ ನಿರ್ಮಾಪಕರಿಗೆ ಜೀ ವಾಹಿನಿಯ ಈ ನಡೆಯಿಂದ ಶಾಕ್ ಆಗಿದೆ ಎನ್ನಲಾಗ್ತಿದೆ. ವಾಹಿನಿ ಹಣ ಉಳಿಸಿದಂತಾಗಿದೆ, ವಾಹಿನಿಗಳಿಗೂ ಧಾರಾವಾಹಿಯ ನಿರ್ಮಾಣದ ಲಾಭ- ನಷ್ಟದ ಅರಿವಾಗಿದೆ. ಈ ಮೂಲಕ ಜೀ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಂತೆ ಆಗಿದೆ ಅನ್ನೋದು ಕೆಲವರ ವಾದ. ಆದರೆ ಇದು ಹೀಗೆ ಮುಂದುವರೆದರೆ ಹೇಗೆ? ವಾಹಿನಿಗಳಿಗೆ ಮುಂದಿನ ದಿನಗಳಲ್ಲಿ ಧಾರಾವಾಹಿ ನಿರ್ಮಾಪಕರ ಅಗತ್ಯ ಇರುವುದಿಲ್ಲವೇ? ಎನ್ನುವ ಚರ್ಚೆ ಶುರುವಾಗಿದೆ.

ಆರೂರು ಜಗದೀಶ್ ಮಾತು
ಹೀಗೆ ವಾಹಿನಿಯೇ ಧಾರಾವಾಹಿ ನಿರ್ಮಾಣ ಮಾಡುವ ಬೆಳವಣಿಗೆ ಬಗ್ಗೆ ಫಿಲ್ಮಿಬೀಟ್ ನಿರ್ಮಾಪಕರಾದ ಆರೂರು ಜಗದೀಶ್ ಹಾಗೂ ಸ್ವಪ್ನ ಕೃಷ್ಣ ಅವರನ್ನು ಸಂಪರ್ಕಿಸಿತ್ತು. ಆರೂರು ಜಗದೀಶ್ ಮಾತನಾಡಿ "ಹಾಕಿದ ದುಡ್ಡು ಬರಬೇಕು. ಟಿಆರ್ಪಿ ಬಂದ ತಕ್ಷಣ ಧಾರಾವಾಹಿ ಸಕ್ಸಸ್ ಎಂದು ಹೇಳಲು ಸಾಧ್ಯವಿಲ್ಲ. ಟಿಆರ್ಪಿ ನೋಡಿ ನಂಬರ್ 1 ಎಂದುಕೊಳ್ಳಬಹುದು. ಆದರೆ ಹಾಕಿದ ದುಡ್ಡು ಯಾವಾಗ ಬರುತ್ತದೆ? ಬಂದಿದ್ದು ವರ್ಕೌಟ್ ಆಗುತ್ತಾ? ಅದರ ಮೇಲೆ ಸಕ್ಸಸ್ ನಿರ್ಧಾರವಾಗುತ್ತದೆ. 'ಜೊತೆ ಜೊತೆಯಲಿ' ಹಿಟ್ ಸೀರಿಯಲ್. ಒಟ್ಟು 953 ಸಂಚಿಕೆಗಳಾಗಿ ಪ್ರದರ್ಶನ ಕಂಡಿದೆ. ಆದರೆ ನನ್ನ ಸ್ವಯಂಕೃತ ಅಪರಾಧಗಳಿಂದ ನನಗೂ ಲಕ್ಷ ಲಕ್ಷ ನಷ್ಟ ಆಗಿದೆ. ನಾನು ಅದ್ಧೂರಿಯಾಗಿ ಧಾರಾವಾಹಿ ಬರಬೇಕು ಎಂದು ಹೆಚ್ಚು ಖರ್ಚು ಮಾಡಿದ್ದೆ. ಆದರೆ ಅಷ್ಟು ವಾಪಸ್ ಬರಲಿಲ್ಲ"
ಯಾರು ಧಾರಾವಾಹಿ ನಿರ್ಮಿಸಿದರೂ ಕಷ್ಟ
"ಟಿಆರ್ಪಿ ಬಂದಾಕ್ಷಣ ನಮಗೆ ಹಣ ಬರಲ್ಲ. ನಾವು ಒಂದು ಎಪಿಸೋಡ್ಗೆ ಎಷ್ಟು ಮಾತನಾಡಿರುತ್ತೇವೆಯೋ ಅಷ್ಟೇ ಇರುತ್ತದೆ. ದುನಿಯಾದಲ್ಲಿ ಪ್ರತಿಯೊಂದರ ಬೆಲೆ ಜಾಸ್ತಿ ಆಗುತ್ತದೆ. ನಮ್ಮ ಸ್ಲಾಟ್ ಅಮೌಂಟ್ ಚೇಂಜ್ ಆಗಲ್ಲ. ಧಾರಾವಾಹಿ ಲಾಂಚ್ ಸಮಯದಲ್ಲಿ ಸಿಕ್ಕಾಪಟ್ಟೆ ಖರ್ಚು ಆಗಿರುತ್ತದೆ. ಹಾಕಿದ್ದು ಬರಬೇಕು, ಬ್ರೇಕ್ಈವನ್ ಆಗಬೇಕು ಅಂದರೆ 700 ಎಪಿಸೋಡ್ಗಳಾಗಬೇಕು. ಈ ಕಾಲದಲ್ಲಿ ವಾಹಿನಿಯವರೇ ಧಾರಾವಾಹಿ ನಿರ್ಮಿಸಿದರೂ, ನಾವು ನಿರ್ಮಿಸಿದರೂ ಕಷ್ಟ ಇದೆ."
ಸ್ವಪ್ನ ಕೃಷ್ಣ ಪ್ರತಿಕ್ರಿಯೆ
ಇದೇ ವಿಚಾರದ ಬಗ್ಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಕೂಡ ಮಾತನಾಡಿದ್ದಾರೆ. "ವಾಹಿನಿಯವರು ಧಾರಾವಾಹಿ ನಿರ್ಮಾಣ ಮಾಡುವುದು ಒಳ್ಳೆಯ ಬೆಳವಣಿಗೆ. ಇದರಿಂದ ಅವರಿಗೂ ನಮ್ಮ ಶ್ರಮ ಗೊತ್ತಾಗುತ್ತದೆ. ಅವರಿಗೂ ಗೊತ್ತು. ಆದರೆ ಮತ್ತಷ್ಟು ಹತ್ತಿರದಿಂದ ನೋಡಿದಂತಾಗುತ್ತದೆ. ಒಂದು ಸಂಸ್ಥೆ ಧಾರಾವಾಹಿ ನಿರ್ಮಾಣ ಮಾಡುವ ವಿಚಾರ ಸಂತೋಷ. ನಾವು ನಿರ್ಮಾಪಕರು ಸಾಕಷ್ಟು ಒತ್ತಡಗಳ ನಡುವೆ ಕೆಲಸ ಮಾಡುತ್ತೇವೆ. ತಂಡ ಕಟ್ಟುವುದು ಅಷ್ಟು ಸುಲಭ ಅಲ್ಲ. ಅಂತಹ ತಂಡ ಇನ್ನೊಬ್ಬರು ಕಟ್ಟುತ್ತಿದ್ದಾರೆ ಎಂದಾಗ ಬೆಂಬಲಿಸಬೇಕು. ಆದರೆ ಜಗ್ಗಿ (ಆರೂರು ಜಗದೀಶ್) ಹೇಳಿದ್ದಂತೆ ಇದು ಅಷ್ಟು ಸುಲಭ ಇಲ್ಲ."
ನಿರ್ಮಾಪಕನ ಮೇಲೆ ಹೆಚ್ಚಿನ ಒತ್ತಡ
"ಧಾರಾವಾಹಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಹೋಗ್ತಾ ಹೋಗ್ತಾ ಸೆಟ್ ವಾತಾವರಣ ಬದಲಾಗುತ್ತೆ. ಆ ಒತ್ತಡ ನಿರ್ಮಾಪಕನ ಮೇಲೆ ಬೀಳುತ್ತದೆ. ವಾಹಿನಿಗೆ ನಾವು ಮಾತು ಕೊಟ್ಟಿರುತ್ತೇವೆ. ಹಾಗಾಗಿ ಎಲ್ಲಾ ಒತ್ತಡವನ್ನು ನಾವು ತೆಗೆದುಕೊಳ್ಳುತ್ತೇವೆ. ಅದನ್ನು ವಾಹಿನಿಯೇ ತೆಗೆದುಕೊಳ್ಳಲು ಮುಂದಾಗಿದೆ ಅಂದರೆ ಒಳ್ಳೆಯದಾಗಲಿ. ಇಲ್ಲಿ ಯಾವುದು ಸುಲಭ ಅಲ್ಲ. ಅದೇ ರೀತಿ ಯಾವುದು ಕಷ್ಟ ಕೂಡ ಅಲ್ಲ. ಅನ್ನೋದು ನನ್ನ ಅಭಿಪ್ರಾಯ.
ಈ ಬೆಳವಣಿಗೆ ಸ್ವಾಗತಾರ್ಹ
ಆರಂಭದ 50 ಎಪಿಸೋಡ್ಗಳು ಬಹಳ ಕಷ್ಟ. ಈ ಸಮಯದಲ್ಲಿ ಸಾಕಷ್ಟು ನಷ್ಟ ಆಗುತ್ತದೆ. ಅದನ್ನು ಲಾಭವಾಗಿ ಬದಲಾಯಿಸೋದು ನಮ್ಮ ಚಾಲೆಂಜ್. ನಿರ್ಮಾಪಕರಿಗೆ ಯಾವಾಗ ಲಾಭ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಧಾರಾವಾಹಿ ನಿರ್ಮಾಣದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಈಗ ವಾಹಿನಿಯೇ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿರೋದು ಸ್ವಾಗತಾರ್ಹ" ಎಂದು ಸ್ವಪ್ನ ಕೃಷ್ಣ ವಿವರಿಸಿದ್ದಾರೆ.


Click it and Unblock the Notifications











