ಪೌರಾಣಿಕ ಧಾರಾವಾಹಿಗಳ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ಈ ನಟನ್ಯಾರು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿಪ್ರಧಾನ ಧಾರಾವಾಹಿಗಳ ಪೈಕಿ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯೂ ಒಂದು. 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ಮಾದೇಶ್ವರ ಆಗಿ ಅಭಿನಯಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನಟನ ಹೆಸರು ಆರ್ಯನ್ ರಾಜ್. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀದೇವಿ ಮಹಾತ್ಮೆ' ಧಾರಾವಾಹಿಯಲ್ಲಿ ಮಹಾವಿಷ್ಣುವಾಗಿ ಅಭಿನಯಿಸುತ್ತಿರುವ ಆರ್ಯನ್ ರಾಜ್ ಇನ್ನು ಮುಂದೆ ಅರಿಹಂತನಾಗಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀದೇವಿ ಮಹಾತ್ಮೆ' ಧಾರಾವಾಹಿಯಲ್ಲಿ ಮಹಾವಿಷ್ಣುವಿನ ಅರಿಹಂತದ ಅವತಾರದಲ್ಲಿ ಕಿರುತೆರೆ ನಟ ಆರ್ಯನ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ 'ಶ್ರೀದೇವಿ ಮಹಾತ್ಮೆ' ಧಾರಾವಾಹಿಯಲ್ಲಿ ಆರ್ಯನ್ ರಾಜ್ ಅವರು ಮಹಾವಿಷ್ಣುವಾಗಿ ನಟಿಸುತ್ತಿದ್ದರು. ಇದೀಗ ಅರಿಹಂತ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ಈಗಾಗಲೇ ಅರಿಹಂತ ಅವತಾರದ ಫೋಟೋಗಳನ್ನು ಆರ್ಯನ್ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ನೆಟ್ಟಿಗರು ಮನ ಸೆಳೆದಿದ್ದಾರೆ. ಅಂದ ಹಾಗೇ ನಟ ಆರ್ಯನ್ ರಾಜ್ ಅವರು ಪೌರಾಣಿಕ ಪಾತ್ರಗಳಲ್ಲಿಯೇ ನಟಿಸಿದ್ದು ಹೆಚ್ಚು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರಹರ ಮಹಾದೇವ' ಧಾರಾವಾಹಿಯ ವಿಷ್ಣುವಾಗಿ ಕಿರುತೆರೆಗೆ ಕಾಲಿಟ್ಟ ಆರ್ಯನ್ ರಾಜ್ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದರು. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್' ಧಾರಾವಾಹಿಯಲ್ಲೂ ವಿಷ್ಣು ಪಾತ್ರಕ್ಕೆ ಜೀವ ತುಂಬಿದ ಆರ್ಯನ್ ರಾಜ್ ಮುಂದೆ ಮಾದೇಶ್ವರನಾಗಿ ಮೋಡಿ ಮಾಡಿದ್ದಾರೆ.
ಭಕ್ತಿಪ್ರಧಾನ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಆರ್ಯನ್ ರಾಜ್ ಅವರು ಸಹಜ ನಟನೆಯ ಮೂಲಕ ಗುರುತಿಸಿಕೊಂಡಿರುವ ಹ್ಯಾಂಡ್ಸಮ್ ಹುಡುಗ. ರಾಯಚೂರಿನ ಮಸ್ಕಿ ಗ್ರಾಮದ ಹುಡುಗ ಆರ್ಯನ್ ರಾಜ್ ಅವರು ಇಂದು ನಟನಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಕನ್ನಡ ಶಿಕ್ಷಕ ಆದಪ್ಪ ಅವರೇ ಕಾರಣ ಎಂದರೆ ತಪ್ಪಾಗಲಾರದು.

ದ.ರಾ ಬೇಂದ್ರೆ ಅವರು ಬರೆದಿರುವ ಕಿಸಾಗೌತಮಿಯನ್ನು ನಾಟಕ ರೂಪಕ್ಕೆ ತಂದ ಶಿಕ್ಷಕ ಆದಪ್ಪ, ಈ ಏಕಪಾತ್ರಭಿನಯವನ್ನು ಆರ್ಯನ್ ರಾಜ್ ಅವರಿಂದ ಮಾಡಿಸಿದ್ದರು. ಇದರಿಂದ ಪ್ರೇರಣೆಗೊಂಡ ಆರ್ಯನ್ ರಾಜ್ ಅವರು ಏಕಪಾತ್ರಾಭಿನಿಯವನ್ನೇ ಮುಂದುವರೆಸಿದರು.
ಜಿಲ್ಲೆ ಮಾತ್ರವಲ್ಲದೇ, ರಾಜ್ಯ ಮಟ್ಟದಲ್ಲೂ ಏಕಪಾತ್ರಾಭಿನಯ ಮಾಡಿದರು. ಮುಂದೆ ನಾಟಕಗಳಲ್ಲಿ ಸಕ್ರಿಯವಾಗಿ ಅಭಿನಯಿಸಿ ಗುರುತಿಸಿಕೊಂಡಿರುವ ಆರ್ಯನ್ ರಾಜ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರೂ ಹೌದು. ಮೆಕ್ಯಾನಿಕಲ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಆರ್ಯನ್ ರಾಜ್ ಮುಂದೆ ಇಂಜಿನಿಯರಿಂಗ್ ಕಲಿಯುವ ಸಲುವಾಗಿ ಮಹಾನಗರಿ ಬೆಂಗಳೂರಿಗೆ ಕಾಲಿಟ್ಟರು. ಅದೇ ಸಮಯದಲ್ಲಿ ಮಾಡೆಲಿಂಗ್ ಜಗತ್ತು ಕೈ ಬೀಸಿ ಕರೆದ ಕಾರಣದಿಂದ ಆರ್ಯನ್ ರಾಜ್ ಅವರು ಮಾಡೆಲಿಂಗ್ ನತ್ತ ಮುಖ ಮಾಡಿದರು.
ಸುಮಾರು ಮೂರು ವರ್ಷಗಳ ಕಾಲ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಆರ್ಯನ್ ರಾಜ್ ಅವರು ಮೂರು ವರ್ಷಗಳ ಕಾಲ ರೂಪದರ್ಶಿಯಾಗಿ ಮಿಂಚಿದರು. ಕೂಲ್ ಪಿಕ್ಚರ್ ಕ್ಯಾಲೆಂಡರ್ನ ಮಾಡೆಲ್ ಆಗಿಯೂ ಕಾಣಿಸಿಕೊಂಡಿದ್ದ ಇವರು ಮುಂದೆ ಕಿರುತೆರೆಗೂ ಕಾಲಿಟ್ಟರು. ಇದೀಗ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಆರ್ಯನ್ ರಾಜ್ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ.
ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ನಟ ಆರ್ಯನ್ ರಾಜ್ ಮುಂದೊಂದು ದಿನ ಸ್ಯಾಂಡಲ್ವುಡ್ಗೆ ಕಾಲಿಟ್ಟರೆ ಆಶ್ಚರ್ಯವಿಲ್ಲ.


Click it and Unblock the Notifications











