ವೋಟ್ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್; ಬಿಗ್ಬಾಸ್ ಫಲಿತಾಂಶವನ್ನೇ ಒಪ್ಪದ ಅಶ್ವಿನಿ ಗೌಡ
ಬಿಗ್ಬಾಸ್ ಕನ್ನಡ ಸೀಸನ್-12 ಮುಕ್ತಾಯವಾಗಿದೆ. ಗಿಲ್ಲಿ ನಟ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ ಹೊರಗಡೆ ಮತ್ತೆ ಹೈಡ್ರಾಮಾ ಶುರುವಾಗಿದೆ. ಗಿಲ್ಲಿ ಗೆಲುವಲ್ಲ, ನನ್ನ ಸೋಲು ಸೋಲಲ್ಲ ಎನ್ನುವಂತೆ ಅಶ್ವಿನಿ ಗೌಡ ಮಾತನಾಡುತ್ತಿದ್ದಾರೆ.
ಗಿಲ್ಲಿ ಬಡವನ ರೀತಿ ನಾಟಕ ಮಾಡಿ ಗೆದ್ದಿದ್ದಾನೆ ಎಂದು ಇತ್ತೀಚೆಗೆ ಮಾಧ್ಯಮಗಳ ಜೊತೆ ಅಶ್ವಿನಿ ಗೌಡ ಮಾತನಾಡಿದ್ದಾರೆ. ಇದೀಗ ವೋಟ್ಗಳ ಲೆಕ್ಕ ಹೊರಗಿಟ್ಟರೆ ನಾನೇ ವಿನ್ನರ್ ಎಂದು ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಹೇಳಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆ ಮೂಲಕ ಬಿಗ್ಬಾಸ್ ಫಲಿತಾಂಶವನ್ನೇ ಒಪ್ಪಲು ಅಶ್ವಿನಿ ಸಿದ್ಧರಿಲ್ಲ ಎನ್ನುವಂತೆ ಕಾಣ್ತಿದೆ. ಗಿಲ್ಲಿ ಕ್ರೇಜ್, ಆತನಿಗೆ ಬಿದ್ದಿರುವ ಮತಗಳ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಆದರೆ ಅಶ್ವಿನಿ ಗೌಡ ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ ಎನ್ನುವುದೇ ವಿಪರ್ಯಾಸ.

ಅಶ್ವಿನಿ ರನ್ನರ್ ಅಪ್ ಆಗುತ್ತಾರೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಸೆಕೆಂಡ್ ರನ್ನರ್ ಅಪ್ ಆಗಿಬಿಟ್ಟರು. ಅಚ್ಚರಿ ಎನ್ನುವಂತೆ ರಕ್ಷಿತಾ 2ನೇ ಸ್ಥಾನಕ್ಕೆ ಏರಿದರು. ಗಿಲ್ಲಿ ಅಂತಿಮವಾಗಿ ಗೆದ್ದು ಬೀಗಿದರು. "ನನ್ನ ಕೋಪ ಬಳಸಿಕೊಂಡು ಬಿಗ್ ಬಾಸ್ ಗೆದ್ದ ಗಿಲ್ಲಿ" ಎಂದು ಅಶ್ವಿನಿ ಹೇಳಿದ್ದಾರೆ. ಬಿಗ್ಬಾಸ್ ಮನೆಗೆ ಬಂದ ಒಂದು ವಾರದಲ್ಲಿ ಇಡೀ ಮನೆಯವರ ಬಗ್ಗೆ ಗಿಲ್ಲಿ ಅರಿತುಕೊಂಡು ಸ್ಟ್ರ್ಯಾಟರ್ಜಿ ಮಾಡಿ ಗೆದ್ದಿದ್ದಾರೆ. ಎಲ್ಲವೂ ಗೇಮ್ ಪ್ಲ್ಯಾನ್ ಎಂದು ತಿಳಿಸಿದ್ದಾರೆ.
ಈ ಹಿಂದಿನ 11 ಸೀಸನ್ಗಳಿಗೆ ಇಲ್ಲದ ಕ್ರೇಜ್ ಈ ಸೀಸನ್ಗೆ ಇತ್ತು. ಇದನ್ನು ಸ್ವತಃ ಸುದೀಪ್ ಹೇಳಿದ್ದರು. ಅದಕ್ಕೆ ತಕ್ಕಂತ ದಾಖಲೆ ಮಟ್ಟದಲ್ಲಿ ಜನ ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಒಂದು ದಿನಕ್ಕೂ ಮುನ್ನ ಈ ಬಾರಿಗ ಬಿಗ್ಬಾಸ್ ವಿನ್ನರ್ಗೆ 37 ಕೋಟಿ ಮತಗಳು ಬಂದಿದೆ ಎಂದು ಸುದೀಪ್ ಹೇಳಿದ್ದರು. ಅಂದ್ರೆ ಗಿಲ್ಲಿಗೆ ಅಷ್ಟು ವೋಟ್ ಬಂದಿದೆ. ಆದರೆ ವೋಟ್ ಲೆಕ್ಕ ಹೊರಗಿಟ್ಟರೆ ನಾನೇ ವಿನ್ನರ್ ಎಂದು ಅಶ್ವಿನಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಅಶ್ವಿನಿ ಮಾತನಾಡಿ "ನನಗೆ ಮಾಹಿತಿ ಪ್ರಕಾರ ಅವರಿಗೆ ಬಂದಿರುವ ವೋಟ್ಗಳಿಗೂ ನನಗೆ ಬಂದಿರುವ ವೋಟ್ಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ವೋಟ್ ಲೆಕ್ಕ ಹೊರಗಿಟ್ಟರೆ ನಾನೇ ವಿನ್ನರ್.. ಇದು ಕಾಮಿಡಿ ಶೋ ಅಲ್ಲ. ಇದು ವ್ಯಕ್ತಿತ್ವದ ಆಟ. ಆದರೆ ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಇಡೀ ಮನೆಗೆ ನಾನು ಸಮರ್ಪಿಸಿ ಕೊಂಡಿದ್ದೆ. ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡಿದ್ದೀನಿ. ಇಲ್ಲಿಯವರೆಗೂ ಬಿಗ್ಬಾಸ್ಗೆ ನನ್ನಂತ ಪ್ರಬಲ ಸ್ಪರ್ಧಿ ಬಂದಿಲ್ಲ. ಆ ಹೆಮ್ಮೆ ಇದೆ" ಎಂದಿದ್ದಾರೆ.
ನಟಿ ಶ್ರುತಿ ಬಳಿಕ ಬಿಗ್ಬಾಸ್ ಕನ್ನಡದಲ್ಲಿ ಮಹಿಳಾ ಸ್ಪರ್ಧಿ ಟ್ರೋಫಿ ಗೆಲ್ಲಲಿಲ್ಲ. ಈ ಬಾರಿ ಮಹಿಳಾ ಸ್ಪರ್ಧಿ ಗೆಲ್ಲಬಹುದು ಎಂದು ಕೆಲವರು ಭಾವಿಸಿದ್ದರು. ಇದೇ ವಿಚಾರ ಪ್ರಸ್ತಾಪಿಸಿರುವ ಅಶ್ವಿನಿ "ಈ ಸಲ ಸುದೀಪ್ ಸರ್ ಹೆಣ್ಣುಮಗಳ ಕೈ ಮೇಲೆ ಎತ್ತುತ್ತಾರೆ ಎಂದುಕೊಂಡಿದ್ದೆ. ಕೈಬಿಡ್ತಾರೆ ಎಂದುಕೊಂಡಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಸರಿಯಾಗಿ ಬರೆಯೋಕೆ ಬರಲ್ಲ, ಎಂತಹ ಕನ್ನಡ ಹೋರಾಟಗಾರ್ತಿ ಎಂದು ಅಶ್ವಿನಿ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಈ ಬಗ್ಗೆ ಕೂಡ ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. "ನಾನು ಓದಿದ್ದು ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಆದರೆ ನಾನು ಇವತ್ತು ಕನ್ನಡಪರ ಹೋರಾಟಗಾರ್ತಿ. ನಾನು ಚೆನ್ನಾಗಿ ಕನ್ನಡ ಓದುತ್ತೇನೆ. ಬರೆಯುವಾಗ ಕೊಂಚ ಕಷ್ಟ ಆಗುತ್ತದೆ. ಕಾರಣ ಓದಿದ್ದು ಆಂಗ್ಲ ಮಾಧ್ಯಮ. ಛಲಗಾತಿ ಎಂದು ಅಶ್ವಿನಿ ಬರೆದುಕೊಟ್ರು. ಹಾಗಾಗಿ ತಪ್ಪಾಯಿತು" ಎಂದು ಅಶ್ವಿನಿ ವಿವರಿಸಿದ್ದಾರೆ.


Click it and Unblock the Notifications











