ತುತ್ತು ಅನ್ನಕ್ಕೂ ಕಷ್ಟ,ಮನೆ ಬಾಡಿಗೆ ಕಟ್ಟಿಲ್ಲ ಅಂತ ಮನೆ ಮಾಲೀಕ ; 'ಶ್ರಾವಣಿ ಸುಬ್ರಮಣ್ಯ' ಆಸಿಯಾ ಫಿರ್ದೋಸ್ ಭಾವುಕ
ಹೆಚ್ಚೇನು ಇಲ್ಲ... 5 ವರ್ಷದ ಹಿಂದೆ ಕೊರೊನಾ ಎಂಬ ಪೀಡೆ ವಕ್ಕರಿಸಿಕೊಂಡು ಹಲವರ ಬದುಕು ಸರ್ವನಾಶವಾಯ್ತು. ದೊಡ್ಡವರು- ಚಿಕ್ಕವರು.. ಶ್ರೀಮಂತರು-ಬಡವರು- ಜಾತಿ-ಧರ್ಮದ ಯಾವ ಭೇದವೂ ಇಲ್ಲದೇ ಎಲ್ಲರನ್ನು ಮನೆಯೊಳಗೆ ಈ ಕೊರೊನಾ ಕೂಡಿ ಹಾಕಿತ್ತು. ಇನ್ನು.. ಕೊರೊನಾ ಶುರುವಾದಾಗ ಹೇಳದೇ.. ಕೇಳದೇ.. ಯಾವ ಮುನ್ಸೂಚನೆಯನ್ನು ಕೂಡ ನೀಡದೇ ಏಕಾಏಕಿ ಲಾಕ್ ಡೌನ್ ಅನೌನ್ಸ್ ಮಾಡಿದರಲ್ಲಾ.. ಆಗ..
ಅಕ್ಷರಶಃ ರೆಕ್ಕೆ ಪುಕ್ಕ ಕಿತ್ತು ಮನೆಯಲ್ಲಿ ಕೂರಿಸಿದಂತಾ ಅನುಭವ ಅನೇಕರಿಗಾಗಿತ್ತು. ದುಡಿಮೆಯನ್ನೇ ನಂಬಿಕೊಂಡ.. ಬೆಳಗ್ಗೆಯಿಂದ ರಾತ್ರಿಯವರೆಗೆ ಕೆಲಸವನ್ನು ಮಾಡುತ್ತಿದ್ದ ಅನೇಕರು ಮನೆಯೊಳಗೆ ಒದ್ದಾಡಿದರು. ನೊಂದು ಬೆಂದು ಹೋದರು. ತುತ್ತು ಅನ್ನಕ್ಕೂ ಕೂಡ ಪರದಾಡಿದರು. ಆ ಪೈಕಿ ಆಸಿಯಾ ಫಿರ್ದೋಸ್ ಕೂಡ ಒಬ್ಬರು.

ಹೌದು, ಆಸಿಯಾ ಫಿರ್ದೋಸ್ .. ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರತಿಭಾವಂತೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಮೂಲಕ ಇಂದು ಕರುನಾಡಿನ ಮನೆ ಮತ್ತು ಮನವನ್ನು ತಲುಪಿರುವ ಆಸಿಯಾ ಸದ್ಯ ಕೈ ತುಂಬಾ ಸಂಪಾದನೆ ಮಾಡುತ್ತಿರಬಹುದು.
ಆದರೆ .. ಒಂದು ಕಾಲದಲ್ಲಿ ಇವರು ಬೇರೆಯವರ ಬಳಿ ಸಹಾಯ ಕೇಳಿ ಕೈ ಒಡ್ಡಿದ್ದಾರೆ. ಬದುಕಲು ಕೆಲ ಕಾಲ ಅವಕಾಶ ನೀಡಿ ಎಂದು ಮನೆ ಮಾಲೀಕರ ಬಳಿ ಕೈ ಮುಗಿದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಖುದ್ದು ಆಸಿಯಾ ಈ ವಿಚಾರವನ್ನು ಹೇಳಿದ್ದಾರೆ.
ಹೌದು, ಕಳೆದ ಕೆಲ ದಿನಗಳ ಹಿಂದೆ 'ರಾಜೇಶ್ ಗೌಡ' ಅವರ ಯೂಟ್ಯೂಬ್ ಚಾನೆಲ್ಗೆ ಆಸಿಯಾ ಫಿರ್ದೋಸ್ ಸಂದರ್ಶನವನ್ನು ನೀಡಿದ್ದರು. 1 ಗಂಟೆ 44 ನಿಮಿಷ 30 ಸೆಕೆಂಡ್ನ ಈ ಸುದಿರ್ಘವಾದ ಸಂದರ್ಶನದಲ್ಲಿ ಆಸಿಯಾ ಹಲವಾರು ವಿಚಾರಗಳನ್ನು ಮಾತನಾಡಿದ್ದರು.
ಆ ಪೈಕಿ ಕೊರೊನಾ ದಿನಗಳಲ್ಲಿ ತಾವು ಅನುಭವಿಸಿದ ನರಕಯಾತನೆಯನ್ನು ಕೂಡ ಆಸಿಯಾ ನೆನಪು ಮಾಡಿಕೊಂಡಿದ್ದರು. ಈ ತುಣುಕನ್ನು 'ರಾಜೇಶ್ ಗೌಡ' ಅವರು ತಮ್ಮ 'ಯೂಟ್ಯೂಬ್ ಚಾನೆಲ್'ನಲ್ಲಿ ಈಗ ಹಂಚಿಕೊಂಡಿದ್ದಾರೆ.

ರಾಜೇಶ್ ಗೌಡ ಅವರು ಹಂಚಿಕೊಂಡ ಈ ಭಾಗದಲ್ಲಿ ಮಾತನಾಡಿರುವ ಆಸಿಯಾ ನಾನು ವಿದ್ಯಾಭ್ಯಾಸ ಮಾಡುತ್ತಲೇ ಹಲವಾರು ಆಡಿಷನ್ಗಳನ್ನು ನೀಡಿದ್ದೇ ಆದರೆ ಎಲ್ಲಿಯೂ ಕೂಡ ಅವಕಾಶ ಸಿಕ್ತಿರಲಿಲ್ಲ ಎಂದಿದ್ದಾರೆ. ಬೆಂಗಳೂರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅವಕಾಶಕ್ಕೆ ನಾನು ಅಲೆದಾಡುತ್ತಿದ್ದ ಸಮಯದಲ್ಲಿ 'ನಾನು ನನ್ನ ಕನಸು' ಎಂಬ ಧಾರಾವಾಹಿಯಲ್ಲಿ ಒಂದು ಪಾತ್ರ ಸಿಕ್ಕಿತ್ತು ಎಂದು ಹೇಳಿರುವ ಆಸಿಯಾ ಇವತ್ತು ನನ್ನ ಬರ್ತ್ಡೇ.. ಮಾರನೇ ದಿನ ಚಿತ್ರೀಕರಣ.. ಅದರ ಮರು ದಿನ ಲಾಕ್ ಡೌನ್ ಆಗೋಯ್ತು ಆ ನಂತರ ಆ ಧಾರಾವಾಹಿ ಕೂಡ ನಿಂತು ಹೋಯ್ತು ಎಂದು ಹೇಳಿದ್ದಾರೆ.
ಮುಂದುವರೆದು ಸೀರಿಯಲ್ ಮೇಲಿನ ನಂಬಿಕೆಯಿಂದ ನಾನು ಆಗ ಕ್ಯಾಂಪಸ್ ಇಂಟರ್ವ್ಯೂವ್ ಕೂಡ ನೀಡಿರಲಿಲ್ಲ, ಹೀಗಾಗಿ ಏಕಾಏಕಿ ಧಾರಾವಾಹಿ ನಿಂತ ಮೇಲೆ ಮುಂದೇನು ಎನ್ನುವ ಪ್ರಶ್ನೆ ಕಾಡಲು ಶುರುವಾಯ್ತು ಎಂದಿರುವ ಆಸಿಯಾ ಆ ಸಮಯದಲ್ಲಿ ಬಾಡಿಕೆ ಕಟ್ಟೋಕೆ ಕೂಡ ನಮ್ಮ ಬಳಿ ದುಡ್ಡು ಇರುತ್ತಿರಲಿಲ್ಲ ಎಂದು ಹೇಳಿದ್ಧಾರೆ.
ಅಮ್ಮ ಟೈಲರಿಂಗ್ ಕೆಲಸ ಮಾಡ್ತಿದ್ದರು ಅಣ್ಣ ಪ್ರತೈಕವಾಗಿ ವಾಸ ಮಾಡಲು ಶುರು ಮಾಡಿದ್ದರು ನಾನು ಒಂದ್ಕಡೆ ಕಾಲೇಜ್ ಮತ್ತೊಂದ್ಕಡೆ ಆಡಿಷನ್ ಅಂತ ಓಡಾಡ್ತಿದ್ದೆ ಹೀಗಾಗಿ ತುಂಬಾ ಕಷ್ಟ ಇತ್ತು ಎಂದು ಹೇಳಿರುವ ಆಸಿಯಾ ಕೊರೊನಾ ದಿನಗಳಲ್ಲಿ ಮೊದಲ ಲಾಕ್ ಡೌನ್ ಸಮಯದಲ್ಲಿ ನಮ್ಮ ಮನೆಯಲ್ಲಿ ರೇಷನ್ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ.
ಆಗ ನನ್ನ ಕೆಲ ಸ್ನೇಹಿತರು ಬಡವರ ಮನೆಗಳಿಗೆ ರೇಷನ್ ಕೊಡ್ತಿದ್ದರು ಆದರೆ ನನಗೆ ಅವರ ಬಳಿ ಸಹಾಯ ಕೇಳಲು ನಾಚಿಕೆ, ನಮ್ಮ ಮನೆಯಲ್ಲಿನ ಕಷ್ಟ ಅವರಿಗೆ ಹೇಗೆ ಹೇಳುವುದು ಎನ್ನುವುದು ನನ್ನ ಯೋಚನೆಯಾಗಿತ್ತು ಎಂದಿರುವ ಆಸಿಯಾ ಹೀಗಾಗಿ ನಾನು ಬೇರೆಯವರಿಗೆ ಬೇಕು ಅಂತೇಳಿ ಅವರ ಬಳಿ ತೆಗೆದುಕೊಂಡೆ ಆ ನಂತರ ಆ ಸ್ನೇಹಿತರಲ್ಲಿ ಒಬ್ಬರಿಗೆ ನಮ್ಮ ಮನೆಯ ಪರಿಸ್ಥಿತಿ ಗೊತ್ತಿತ್ತು ಅವರು ಸಹಾಯ ಮಾಡಿದರು ಎಂದು ಭಾವುಕರಾಗಿದ್ದಾರೆ.
ಇನ್ನು ಬಾಡಿಗೆ ಕಟ್ಟಿ ಮೂರು-ನಾಲ್ಕು ತಿಂಗಳಾಗಿತ್ತು. ಮನೆ ಮಾಲೀಕರು ಯಾರೇ ಇರಲಿ ಅವರಾದರೂ ಹೇಗೆ ತಡೆದುಕೊಳ್ತಾರೆ ಹೀಗಾಗಿ ಅದೊಂದು ದಿನ ಮನೆ ಓನರ್ ಬಂದರು, ಮನೆ ಖಾಲಿ ಮಾಡಿ ಎಂದರು ಎಂದು ಹೇಳಿರುವ ಆಸಿಯಾ ಲಾಕ್ ಡೌನ್ ಮುಗಿಯುವರೆಗೆ ಟೈಮ್ ಕೊಡಿ ಎಂದು ನಾನು ಅವರ ಬಳಿ ಮನವಿ ಮಾಡಿಕೊಂಡೆ ಆ ನಂತರ ಲಾಕ್ ಡೌನ್ ಮುಗಿದ ನಂತರ ಕಾಲೇಜ್ನಲ್ಲಿ ಎಕ್ಸಾಂ ಬರೆದು ಹತ್ತು ಹದಿನೈದು ದಿನದಲ್ಲಿ ಮನೆ ಖಾಲಿ ಮಾಡಿದ್ವಿ ಎಂದು ಹೇಳಿದ್ದಾರೆ. ಸ್ನೇಹಿತರ ಬಳಿ ಹಣ ಪಡೆದು 50,000 ಅಡ್ವಾನ್ಸ್ ನೀಡಿ ಆ ನಂತರ ಬೇರೆ ಮನೆ ಮಾಡಿದ್ವಿ ಎಂದು ಕೂಡ ಆಸಿಯಾ ಹೇಳಿದ್ದಾರೆ.


Click it and Unblock the Notifications











