Weekend With Ramesh: ಈ ವಾರದ ಅತಿಥಿಗಳನ್ನು ಕಂಡು ಇವರು ನಮ್ಮಜ್ಜಿಗೂ ಗೊತ್ತು ಎಂದ ವೀಕ್ಷಕರು

ಕನ್ನಡ ಜನತೆ ಹಾಗೂ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಟಿವಿ ಟಾಕ್ ಶೋ ವೀಕೆಂಡ್ ವಿತ್ ರಮೇಶ್ ಐದನೇ ಆರ್ವತ್ತಿ ಸದ್ಯ ನಡೆಯುತ್ತಿದ್ದು, ಜನರ ಮನ ಗೆಲ್ಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ. ಇನ್ನು ಇಷ್ಟು ವರ್ಷಗಳ ಕಾಲ ಒಮ್ಮೆಯೂ ವಿವಾದಕ್ಕಾಗಲಿ ಹಾಗೂ ಟೀಕೆಗಾಗಲಿ ಗುರಿಯಾಗದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ಬಾರಿ ಎರಡು ವಿಷಯಗಳಲ್ಲಿ ಆರಂಭದಲ್ಲಿಯೇ ವಿವಾದಕ್ಕೆ ಸಿಲುಕಿಕೊಂಡಿತು.
ಒಂದು ಯುಟ್ಯೂಬರ್ ಡಾ ಬ್ರೋ ಅವರನ್ನು ನಿಮ್ಮ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕರೆಸುತ್ತೀರ ಎಂದು ಕೇಳಿದ ಪ್ರಶ್ನೆಗೆ ಜೀ ಕನ್ನಡ ಮನರಂಜನಾ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಡಾ ಬ್ರೋ ನಿಮ್ಮ ಅಜ್ಜಿ, ತಾಯಿಗೆ ಗೊತ್ತಾ ಎಂದು ಪ್ರಶ್ನೆ ಕೇಳಿದ್ದು ಹಾಗೂ ಮತ್ತೊಂದು ರಮ್ಯಾ ಅವರ ಸಂಚಿಕೆ ಇಂಗ್ಲಿಷ್ಮಯವಾಗಿದ್ದು.
ಹೌದು, ಡಾ ಬ್ರೋ ಅವರನ್ನು ಕರೆಸುವ ಯೋಜನೆ ಇಲ್ಲ ಎಂದಿದ್ದ ರಾಘವೇಂದ್ರ ಹುಣಸೂರು ಅವರು ರಮ್ಯಾ ಸಂಚಿಕೆಯಲ್ಲಿ ಆಂಗ್ಲಭಾಷೆ ಹೆಚ್ಚಿದ್ದ ಕಾರಣಕ್ಕೆ ಟ್ರೋಲ್ ಆಗಿದ್ದರು. ಹೀಗೆ ಮೊದಲ ಸಂಚಿಕೆಯಲ್ಲಿಯೇ ಸಾಧಕರ ವಿಷಯದ ಕುರಿತಾಗಿ ಸಾಕಷ್ಟು ದೊಡ್ಡ ಮಟ್ಟದ ವಿರೋಧ ಹಾಗೂ ಟೀಕೆಗಳನ್ನು ಎದುರಿಸಿದ ವೀಕೆಂಡ್ ವಿತ್ ರಮೇಶ್ ಎರಡನೇ ಸಾಧಕರನ್ನಾಗಿ ಇಂಡಿಯನ್ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಯನ್ನು ಪಡೆದಿರುವ ಪ್ರಭುದೇವ ಅವರನ್ನು ಕರೆಸಿ ಕನ್ನಡಿಗರಿಂದ ಪ್ರಶಂಸೆ ಗಿಟ್ಟಿಸಿಕೊಂಡಿತು.
ಕಳೆದ ವಾರ ಪ್ರಸಾರಗೊಂಡ ಪ್ರಭುದೇವ ಎಪಿಸೋಡ್ಗಳಲ್ಲಿ ಚಾಮರಾಜನಗರದ ಅಪ್ಪಟ ಕನ್ನಡ, ಇಂಗ್ಲಿಷ್ ಬಳಕೆ ಅತಿ ಕಡಿಮೆ ಇರುವ ಸ್ವಚ್ಚಂದ ಕನ್ನಡ ಕೇಳಿದ ವೀಕ್ಷಕರು ಇದಪ್ಪಾ ಸಂಚಿಕೆ ಎಂದರೆ ಎಂದು ಹೊಗಳಿದ್ದರು. ಹೀಗೆ ಮೊದಲ ಸಂಚಿಕೆಯಲ್ಲಿ ಟ್ರೋಲ್ ಮಾಡಿದ್ದ, ಟೀಕಿಸಿದ್ದವರನ್ನು ತನ್ನ ಎರಡನೇ ಸಾಧಕ ಪ್ರಭುದೇವ ಸಂಚಿಕೆಗಳ ಮೂಲಕ ತಣ್ಣಗಾಗುವಂತೆ ಮಾಡಿದ ಜೀ ಕನ್ನಡ ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಂದಿನ ಇಬ್ಬರು ಸಾಧಕರು ಯಾರೆಂದು ಊಹಿಸಿ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ವೀಕ್ಷಕರ ಮನ ಗೆದ್ದಿದೆ. ಈ ವಾರ ಬರುತ್ತಿರುವ ಸಾಧಕರು ಯಾರೆಂದು ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.
ಒಬ್ಬರು ಹೃದಯ ಕಾಯುವ ಡಾಕ್ಟರು ಹಾಗೂ ಇನ್ನೊಬ್ಬರು ಹೃದಯ ಗೆಲ್ಲುವ ಆಕ್ಟರು, ಈ ಇಬ್ಬರು ಯಾರೆಂದು ಗೆಸ್ ಮಾಡಿ ಎಂದು ಇಬ್ಬರು ಸಾಧಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಕುಳಿತಿರುವ ಫೋಟೊವನ್ನು ಹಂಚಿಕೊಂಡು, ಅದನ್ನು ಬ್ಲರ್ ಮಾಡಿದೆ. ಈ ಫೋಟೊದಲ್ಲಿನ ಸಾಧಕರು ಯಾರೆಂಬುದನ್ನು ನೆಟ್ಟಿಗರು ಸುಲಭವಾಗಿ ಪತ್ತೆ ಹಚ್ಚಿದ್ದು, ಒಬ್ಬರು ಡಾ ಮಂಜುನಾಥ್ ಹಾಗೂ ಇನ್ನೊಬ್ಬರು ಹಿರಿಯ ನಟ ದತ್ತಣ್ಣ ಎಂದು ಕಾಮೆಂಟ್ಗಳನ್ನು ಮಾಡಿದ್ದಾರೆ.
ಹೌದು, ಈ ಬಾರಿಯ ವೀಕೆಂಡ್ನಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿ ಮೇಲೆ ಶ್ರೀ ಜಯದೇವ ಹೃದ್ರೋಗ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿರುವ ಡಾ ಮಂಜುನಾಥ್ ಹಾಗೂ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದತ್ತಣ್ಣ ಕುಳಿತು ತಮ್ಮ ಜೀನನದ ಹಾದಿಯ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಪೋಸ್ಟ್ಗೆ ಕಾಮೆಂಟ್ ಮಾಡಿರುವ ವೀಕ್ಷಕರು ಈ ಇಬ್ಬರೂ ನಮ್ಮ ಅಜ್ಜಿಗೆ ಗೊತ್ತಿದೆ, ಇದು ಒಳ್ಳೆಯ ಆಯ್ಕೆ ಎಂದು ಡಾ ಬ್ರೋ ವಿಷಯವಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದ ರಾಘವೇಂದ್ರ ಹುಣಸೂರು ಕಾಲೆಳೆದಿದ್ದಾರೆ.
ಇನ್ನು ಈ ವಾರ ಇಬ್ಬರ ಸಾಧಕರು ಬರಲಿದ್ದಾರೆ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದ್ದು, ಶನಿವಾರ ಡಾ ಮಂಜುನಾಥ್ ಅವರ ಸಂಚಿಕೆ ಪ್ರಸಾರವಾದರೆ, ಭಾನುವಾರ ದತ್ತಣ್ಣ ಸಂಚಿಕೆ ಪ್ರಸಾರವಾಗಲಿದೆ.


Click it and Unblock the Notifications











