BBK 10: ಈ ವಾರದ ಕಳಪೆ ಆಗ್ತಾರಾ ನೀತೂ..? ಮನೆಯವರ ಕಾರಣ ಕೇಳಿ ಬೇಸರ..!
ಬಿಗ್ ಬಾಸ್ ಮನೆಯಲ್ಲಿ ವಾರವಿಡಿ ಒಂದು ರೀತಿ ಇದ್ದರೆ, ವಾರದ ಕೊನೆಯಲ್ಲಿ ಕೆಲವೊಂದು ವಿಶೇಷತೆಗಳಿರುತ್ತವೆ. ಅದುವೇ ಕಿಚ್ಚನ ಚಪ್ಪಾಳೆ, ಕಳಪೆ - ಉತ್ತಮ, ಕ್ಯಾಪ್ಟನ್ ಆಯ್ಕೆ, ನಾಮಿನೇಷನ್. ಈ ವಿಚಾರಗಳಿಗಾಗಿಯಾದರೂ ಉತ್ತಮವಾಗಿ ಆಡಬೇಕಾಗುತ್ತದೆ. ಮನೆ ನಿಭಾಯಿಸುವುದು, ಟಾಸ್ಕ್ ಗಳಲ್ಲಿ ಗೆಲ್ಲುವುದು. ಹೀಗೆ ಎಲ್ಲಾ ವಿಚಾರಗಳು ಬಹಳ ಮುಖ್ಯವಾಗುತ್ತದೆ.
ಈ ವಾರವೂ ಕಳಪೆ ಮತ್ತು ಉತ್ತಮ ಅವಾರ್ಡ್ ಕೊಡುವ ಸಮಯ ಬಂದಿದೆ. ಇಂದು ಮನೆ ಮಂದಿಯಲ್ಲಿ ಸಾಕಷ್ಡು ಜನ ನೀತೂ ಹೆಸರೇಳಿದ್ದಾರೆ. ನಿಯಮದ ಪ್ರಕಾರ, ಯಾರಿಗೆ ಹೆಚ್ಚು ವೋಟ್ ಬೀಳುತ್ತವೆಯೋ ಅವರೇ ಕಳಪೆ ಪಟ್ಟ ಹೊತ್ತು ಜೈಲು ಸೇರುತ್ತಾರೆ. ಹೀಗಾಗಿ ಈ ವಾರ ನೀತೂ ಜೈಲು ಸೇರಲಿದ್ದಾರೆ.

ನೀತೂಗೆ ಕಳಪೆ ಪಟ್ಟ
ಮನೆಯಲ್ಲಿ ಟಾಸ್ಕ್ ಆಡದೆ, ಆಕ್ಟೀವ್ ಆಗಿಲ್ಲದೆ, ಮನೆಯ ವಾತಾವರಣ ಹಾಳು ಮಾಡಿದವರಿಗೆ ಕಳಪೆ ಕೊಡುವುದು ಪದ್ಧತಿ. ಕಳಪೆ ಪಡೆದವರು ಮುಂದಿನ ವಾರದಿಂದ ಬದಲಾಗಬೇಕು ಎಂಬ ಉದ್ದೇಶ. ಅದರಲ್ಲೂ ಜೈಲಿಗೆ ಹೋಗಿ ಬರುವುದು ಎಂದರೆ ಸುಮ್ಮನೆ ಅಲ್ಲ. ಆದರೆ, ಈ ಬಾರಿಯ ಸೀಸನ್ನಲ್ಲಿ ಕಳಪೆ, ಉತ್ತಮ, ನಾಮಿನೇಷನ್ ಯಾವುದಕ್ಕೂ ಅರ್ಥವಿಲ್ಲದಂತೆ ಆಡಲು ಶುರು ಮಾಡಿದ್ದಾರೆ. ಈ ವಾರ ಕಳಪೆ ಪಟ್ಟವನ್ನು ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀತೂಗೆ ಕಟ್ಟಿದ್ದಾರೆ.
ನೀತೂಗೆ ಕಳಪೆ ಕೊಡಲು ಕಾರಣವೇನು
ಯಾವುದೇ ಪ್ರಕ್ರಿಯೆ ಆದರೂ ಬಿಗ್ ಬಾಸ್ ಮನೆಯಲ್ಲಿ ಸೂಕ್ತ ಕಾರಣಗಳೊಂದಿಗೆ ತಿಳಿಸಬೇಕು. ನಾಮಿನೇಷನ್ ಪ್ರಕ್ರಿಯೆಯಲ್ಲೂ ಅಷ್ಟೇ. ನೀತೂ ಹೆಸರು ತೆಗೆದುಕೊಂಡ ಹಲವರಲ್ಲಿ, ಬೇರೆಯವರ ಮನಸ್ತಾಪವನ್ನು ನೀವೂ ಟೀಂಗೆ ತಂದಿದ್ದು ಇಷ್ಟವಾಗಿಲ್ಲ. ಒಂದು ಟೀಂ ಹಾಳಾಗುವುದು ಇಷ್ಟವಿಲ್ಲ ಎಂಬೆಲ್ಲಾ ಅಭಿಪ್ರಾಯಗಳು ಕೇಳಿ ಬಂದಿದೆ. ಈ ವಾರದಲ್ಲಿಯೇ ನಮ್ರತಾ ಹಾಗೂ ನೀತೂ ನಡುವೆ ಜೋರು ಜಗಳವೂ ಎದ್ದಿತ್ತು. ಅದರಲ್ಲೂ ಒಂದೇ ಟೀಂನವರಾಗಿದ್ದುಕೊಂಡು, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೇಳುವುದು ಇಷ್ಟ ಆಗಲ್ಲ ಎಂದೇ ಜಗಳವಾಡಿದ್ದರು.
ಪ್ರತಾಪ್ ಹೆಸರಲ್ಲೂ ಕಳಪೆ ಪಟ್ಟ
ಕಳಪೆ ಪಟ್ಟವನ್ನು ನೀತೂ ಜೊತೆಗೆ ಇಶಾನಿ ಹಾಗೂ ಪ್ರತಾಪ್ ಕೂಡ ಕಟ್ಟಿಕೊಂಡಿದ್ದಾರೆ. ಗೊಂಬೆ ಆಟದಲ್ಲಿ ನೀತೂ ಹಾಗೂ ಪ್ರತಾಪ್ ತೆಗೆದುಕೊಂಡ ನಿರ್ಧಾರ ತಮಗೆ ಇಷ್ಟವಾಗಲಿಲ್ಲ ಎಂದೇ ಸಿರಿ ಹೇಳಿದ್ದಾರೆ. ಈ ಮೂಲಕ ಪ್ರತಾಪ್ಗೆ ಕಳಪೆ ಕೊಟ್ಟಿದ್ದಾರೆ. ಇಶಾನಿಯನ್ನು ಸಂಗೀತಾ ಕಳಪೆ ಎಂದಿದ್ದಾರೆ. ಟಾಸ್ಕ್ ಒಂದರಲ್ಲಿ ಇಶಾನಿ, ಮೈಕೆಲ್ ಬಳಿ ಹೋಗಿ ಜಡ್ಜ್ಮೆಂಟ್ ಬದಲಾಯಿಸಿದ್ದರು. ಆ ಕಾರಣ ಇಟ್ಟುಕೊಂಡು ಸಂಗೀತಾ ಕಳಪೆ ನೀಡಿದ್ದಾರೆ. ಆದರೆ ಇದಕ್ಕೆ ಇಶಾನಿ ಕೂಡ ತಿರುಗೇಟು ನೀಡಿದ್ದು, ಏನಾದರೂ ಇದ್ದಿದ್ದರೆ ಮುಂದುಗಡೆ ಬಂದು ಮಾತಾಡಬೇಕಿತ್ತು ಎಂದಿದ್ದಾರೆ.
ಕಳಪೆ ಎಂದಾಗ ನೀತೂ ಹೇಳಿದ್ದೇನು..?
ಈ ಬಾರಿ ನೀತೂಗೆ ಹೆಚ್ಚಿನ ವೋಟ್ ಬಿದ್ದಿದೆ. ಆದರೆ ಇದನ್ನು ನೀತೂ ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಮನೆಯವರು ಕೊಟ್ಟ ಕಾರಣಗಳಿಗೆ ಅವರು ತಿರುಗೇಟು ನೀಡಿದ್ದಾರೆ. "ತಂಡವಾಗಿ ನೋಡಿದಾಗ ನಾನು ಸಮಾನವಾಗಿ ಕೆಲಸ ಮಾಡುತ್ತಿದ್ದೆ. ಸೋತಾಗ ನನ್ನ ಹೆಸರು ಹೇಳುತ್ತಾ ಇದ್ದರು. ಇದು ನಿನ್ನಿಂದ ಆಯ್ತು ಅಂತ. ನೀವೂ ಕಳಪೆ ಕೊಡುವುದು ಸರಿ ಅನ್ನಿಸುತ್ತಾ ಇಲ್ಲ" ಎಂದು ಅಲ್ಲಿಂದ ಹೊರ ನಡೆದಿದ್ದಾರೆ.


Click it and Unblock the Notifications











