BBK 11: "ಹನುಮಂತ ಬದಲು ಬೇರೆಯವ್ರು ಗೆಲ್ಲಬೇಕಿತ್ತು"; ತ್ರಿವಿಕ್ರಮ್ ತಾಯಿ ಹೇಳಿಕೆ
ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ತೆರೆ ಬಿದ್ದಿದೆ. ಸುದೀಪ್ ನಿರೂಪಣೆಯಲ್ಲಿ ಇದೇ ಕೊನೆ ಸೀಸನ್. ಇನ್ನು ಈ ಬಾರಿ ಹನುಮಂತ ಲಮಾಣಿ ಟ್ರೋಫಿ ಎತ್ತಿ ಹಿಡಿದು ಎಲ್ಲರ ಹುಬ್ಬೇರಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಚಿಲ್ಲೂರ ತಾಂಡ ಹೈದ ಕೊನೆಗೆ ಗೆದ್ದುಬಿಟ್ಟಿದ್ದಾನೆ.
ಹನುಮಂತ ವಿನ್ನರ್ ಆಗಿದ್ದರೆ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗಿ ಅಬ್ಬರಿಸಿದ್ದ ರಜತ್ 3ನೇ ಸ್ಥಾನಕ್ಕೆ ಖುಷಿಪಟ್ಟಿದ್ದಾರೆ. ಈ ಬಾರಿ ಒಟ್ಟು 20 ಜನ ಜನ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಿದ್ದರು. ಅದರಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಶೋಭಾ ಶೆಟ್ಟಿ ಹಾಗೂ ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಕ್ಕಾಗಿ ಶೋ ಕ್ವಿಟ್ ಮಾಡಿದ್ದರು.

ತ್ರಿವಿಕ್ರಮ್ ಗೆಲ್ಲುತ್ತಾರೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಮಗ ಗೆಲ್ಲಬೇಕು ಎಂದು ತ್ರಿವಿಕ್ರಮ್ ತಾಯಿ ಬಯಸಿದ್ದರು. ಅಂತಿಮ ಕ್ಷಣದವರೆಗೂ ಮಗನ ಗೆಲುವಿಗಾಗಿ ಪ್ರಾರ್ಥಿಸಿದ್ದರು. ಇದೀಗ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳಿಗೆ ಅವರು ಮಾತನಾಡಿದ್ದಾರೆ. ಹನುಮಂತನ ಬದಲು ಬೇರೆಯವರು ಗೆಲ್ಲಬೇಕಿತ್ತು ಎಂದು ಹೇಳಿರುವುದು ಭಾರೀ ವೈರಲ್ ಆಗುತ್ತಿದೆ.
ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು ನಡುವೆ ಭಾರೀ ಪೈಪೋಟಿ ಇತ್ತು. ಆದರೆ ಮಂಜು 5ನೇ ಸ್ಥಾನಕ್ಕೆ ಇಳಿಯುತ್ತಿದ್ದಂತೆ ತ್ರಿವಿಕ್ರಮ್ ಗೆಲುವು ಖಚಿತ ಎಂದು ಕೆಲವರು ಭಾವಿಸಿದ್ದರು. ಆದರೆ ಅಂತಿಮವಾಗಿ ಹನುಮಂತ ಗೆದ್ದರು. ಬಾಸ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತ್ರಿವಿಕ್ರಮ್ ತಾಯಿ ಮಾತನಾಡಿದ್ದಾರೆ.
"ತ್ರಿವಿಕ್ರಮ್ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದಾನೆ. ರಜತ್ ಹಾಗೂ ನನ್ನ ಮಗ ಟಾಪ್-2ಗೆ ಬರಬೇಕಿತ್ತು ಎನ್ನುವುದು ನನ್ನ ಅನಿಸಿಕೆ. ಹನುಮಂತನಲ್ಲಿ ಗೆಲ್ಲುವಂತದ್ದು ನನಗೆ ಏನು ಕಾಣಲಿಲ್ಲ. ಅವನಿಗೆ ಟ್ರೋಫಿ ಸಿಗುವುದು ಬೇರೆ ಯಾರಿಗಾದರೂ ಸಿಕ್ಕಿದ್ದರೆ ನನಗೆ ಸಂತೋಷ ಆಗುತ್ತಿತ್ತು. ನನ್ನ ಮಗನೇ ಗೆಲ್ಲಬೇಕಿತ್ತು ಎನ್ನುವ ಸ್ವಾರ್ಥ ನನಗಿಲ್ಲ. ಅಷ್ಟು ಜನರಲ್ಲಿ ಬೇರೆ ಯಾರಿಗಾದರೂ ಸಿಗಬೇಕಿತ್ತು" ಎಂದು ತಿಳಿಸಿದ್ದಾರೆ.
"ತ್ರಿವಿಕ್ರಮ್ ಗೆಲ್ಲಲಿಲ್ಲ ಅಂತ ನನ್ನ ಮಗಳು(ತ್ರಿವಿಕ್ರಮ್ ಸಹೋದರಿ) ಅತ್ತೇಬಿಟ್ಲು. ನನ್ನ ತಮ್ಮನಿಗೆ ಮೋಸ ಆಯ್ತು ಎಂದಳು. ಆ ರೀತಿ ಹೇಳಬೇಡ, ಒಳ್ಳೆ ರೀತಿ ವೆಲ್ಕಮ್ ಮಾಡು ಎಂದು ಸಮಾಧಾನ ಮಾಡಿದೆ. ತ್ರಿವಿಕ್ರಮ್ ಇದೇ ರೀತಿ ಜನರಿಗೆ ಮನರಂಜನೆ ಕೊಡಬೇಕು, ಕರ್ನಾಟಕದ ಜನತೆ ಅವನನ್ನು ನೋಡಿ ಹರಸಬೇಕು" ಎಂದು ತ್ರಿವಿಕ್ರಮ್ ಅವರ ತಾಯಿ ಹೇಳಿದ್ದಾರೆ.
"ಬಡವರ ಮನೆ ಹುಡುಗಿ ಆಗಿದ್ದರೂ ಪರವಾಗಿಲ್ಲ, ನನ್ನ ಮಗನನ್ನು ಅರ್ಥ ಮಾಡಿಕೊಂಡು ಹೋಗುವಂತಹ ಹುಡುಗಿ ಸಿಗಬೇಕು ಎನ್ನುವುದು ನನ್ನ ಬಯಕೆ. ಬಿಗ್ಬಾಸ್ ಮನೆಗೆ ತ್ರಿವಿಕ್ರಮ್ ಹೋದಮೇಲೆ ಕೆಲ ಮದುವೆ ಪ್ರಪೋಸಲ್ಗಳು ಸಹ ಬಂದಿದೆ. ನಮ್ಮ ಮಗಳನ್ನು ಬಂದು ನೋಡಿಕೊಂಡು ಹೋಗಿ ಎಂದವರು ಇದ್ದಾರೆ. ಆಗಲಿ ಎಂದು ನಾನು ಹೇಳಿದ್ದೀನಿ. ಎರಡ್ಮೂರು ಸಂಬಂಧಗಳು ಬಂದಿದ್ದವು. ಅವನು ಯಾರನ್ನು ಮದುವೆ ಆದರೂ ಅಭ್ಯಂತರವಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೂ ಪರವಾಗಿಲ್ಲ, ಅವನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹುಡುಗಿ ಸಿಗಬೇಕು" ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











