ಬಿಗ್ ಬಾಸ್ ಮನೆಯಿಂದ ಹೊರ ಬಂದ ಟಾಸ್ಕ್ ಕ್ವೀನ್ ; ರಂಗೇರಿದ ಫಿನಾಲೆ-ಹೇಳಿದ್ದೇನು ರಾಶಿಕಾ ?
''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಈ ನಿಯಮದಡಿಯಲ್ಲಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಈಗ ಇದೇ ನಿಯಮದಡಿ ಈ ವಾರ (ಜನವರಿ 11) ಟಾಸ್ಕ್ ಕ್ವೀನ್ ರಾಶಿಕಾ ಶೆಟ್ಟಿ ಹೊರ ಬಂದಿದ್ದಾರೆ.

ಹೌದು, ಅಸಲಿಗೆ ಈ ವಾರ ಮನೆಯಲ್ಲಿ ಕ್ಯಾಪ್ಟನ್ ಧನುಷ್ ಅವರನ್ನು ಹೊರತು ಪಡಿಸಿದರೆ ಎಲ್ಲರ ಮೇಲೆ ತೂಗುಕತ್ತಿ ನೇತಾಡುತ್ತಿತ್ತು. ಯಾರು ಹೊರ ಬರಬಹುದೆನ್ನುವ ಕುತೂಹಲ ಕೂಡ ಎಲ್ಲರಲ್ಲಿತ್ತು. ಆ ಪೈಕಿ ಕಿಚ್ಚನ ಪಂಚಾಯ್ತಿಯಲ್ಲಿ ಶನಿವಾರ (ಜನವರಿ 10) ಅಶ್ವಿನಿ ಗೌಡ ಅವರು ಮೊದಲಿಗೆ ಪಾರಾದರು.
ಆ ನಂತರ ನಿನ್ನೆ ಅಂದರೆ ಭಾನುವಾರ (ಜನವರಿ 11) ಗಿಲ್ಲಿ ಮತ್ತು ರಕ್ಷಿತಾ ಅವರನ್ನು ಮೊದಲು ಉಳಿಸಿಕೊಳ್ಳಲಾಯ್ತು. ಆ ನಂತರ ಧ್ರುವಂತ್ ಮತ್ತು ಕಾವ್ಯ ಅವರಿಗೆ ಬಿಗ್ ಬಾಸ್ ಆಶೀರ್ವಾದ ಸಿಕ್ಕಿತು. ಕೊನೆಯಲ್ಲಿ ಉಳಿದುಕೊಂಡಿದ್ದು ಇಬ್ಬರೇ. ಒಬ್ಬರು ರಘು ಮತ್ತೊಬ್ಬರು ರಾಶಿಕಾ ಶೆಟ್ಟಿ.
ಈ ಇಬ್ಬರಲ್ಲಿ ರಾಶಿಕಾ ಶೆಟ್ಟಿ ಅವರಿಗೆ ಅದೃಷ್ಟ ಕೈ ಕೊಡ್ತು. ಮನೆಯಿಂದ ಕೊನೆಗೆ ಅನಿವಾರ್ಯವಾಗಿ ಹಲವು ಪ್ರೇಕ್ಷಕರಿಂದ ''ಟಾಸ್ಕ್ ಕ್ವೀನ್'' ಎಂದೇ ಬಿರುದಾಂಕಿತರಾದ ರಾಶಿಕಾ ಶೆಟ್ಟಿ ಹೊರಬರಬೇಕಾಯ್ತು. ಈ ಮೂಲಕ ರಘು ಅವರಿಗೆ ಫಿನಾಲೆ ವೀಕ್ಗೆ ಪ್ರವೇಶ ಸಿಕ್ಕಿತು.
ಇನ್ನೂ ಟಾಸ್ಕ್ ಗೆದ್ದು ಈ ಸೀಸನ್ನ ಮೊದಲ ಮಹಿಳಾ ಕ್ಯಾಪ್ಟನ್ ಪಟ್ಟಕ್ಕೇರಿದ್ದರು ರಾಶಿಕಾ ಶೆಟ್ಟಿ. ಆದರೆ ಈಗ ಫಿನಾಲೆ ವಾರದಲ್ಲಿ ಅವರೇ ಇಲ್ಲ. ಹೀಗಾಗಿಯೇ ಭಾರವಾದ ಹೃದಯದಿಂದಲೇ ಹೊರ ಬಂದ ರಾಶಿಕಾ ಕೊನೆಯ ಹಂತದವರೆಗೆ ಹೋಗುವ ಭರವಸೆ ಇತ್ತು ಆದರೆ ಕೊನೆಯಲ್ಲಿ ಎಡವಿದ್ದು ಬೇಸರವಾಯ್ತು ಎಂದು ಹೇಳಿದರು. ನನ್ನಲ್ಲಿ ಇಷ್ಟು ಧೈರ್ಯ ಇದೆ ಎನ್ನುವ ವಿಚಾರ ಖುದ್ದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ ರಾಶಿಕಾ ಇಲ್ಲಿ ವಿಟಿ ನೋಡಿದ ಮೇಲೆ ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ ಎಂದು ಹೇಳಿದರು.

''ಬಿಗ್ಬಾಸ್''ಗೆ ಬರೋದು ನನ್ನ ಬದುಕಿನಲ್ಲಿ ನಾನು ತೆಗೆದುಕೊಂಡ ದೊಡ್ಡ ನಿರ್ಧಾರ ಎಂದು ಹೇಳಿದ ರಾಶಿಕಾ, ಇದೇ ವೇಳೆ ಸುದೀಪ್ ಅವರ ನಿರೂಪಣೆಯನ್ನು ಕೊಂಡಾಡಿದರು. ವೀಕೆಂಡ್ನಲ್ಲಿ ನೀವು ಬರೋದನ್ನೇ ನಾವೆಲ್ಲ ಕಾಯುತ್ತಿದ್ದೆವು ಎಂದು ಹೇಳಿದ ರಾಶಿಕಾ ನಿಮ್ಮ ಮಾತುಗಳು ಮುಂದಿನ ಒಂದು ವಾರಕ್ಕೆ ನಮಗೆ ಸ್ಪೂರ್ತಿ ನೀಡುತ್ತಿತ್ತು ಎಂದು ಹೇಳಿದರು. ನಿಮ್ಮನ್ನು ನಾನು ಮಿಸ್ ಮಾಡಿಕೊಳ್ತೇನೆ ''ಬಿಗ್ ಬಾಸ್'' ಎಂದು ಭಾವುಕರಾದರು. ಇಷ್ಟೇ ಅಲ್ಲ ನಮ್ಮ ತಂದೆಯ ಧ್ವನಿ ಹೊರತು ಪಡಿಸಿದರೆ ನಾನು ಯಾವುದಾರೂ ವಾಯ್ಸ್ ಕೇಳಿ ಭಯಪಟ್ಟಿದ್ದೇನೆ ಎಂದರೆ ಅದು ''ಬಿಗ್ಬಾಸ್'' ವಾಯ್ಸ್ ಮಾತ್ರ ಎಂದು ಕೂಡ ರಾಶಿಕಾ ಹೇಳಿದರು.
ಹೀಗೆ ಸದ್ಯ ರಾಶಿಕಾ ಮನೆಯಿಂದ ಹೊರ ಬಂದ ಹಿನ್ನೆಲೆ ಮನೆಯಲ್ಲಿ ಧನುಷ್.. ಅಶ್ವಿನಿ ಗೌಡ.. ಗಿಲ್ಲಿ ನಟ.. ರಕ್ಷಿತಾ.. ಧ್ರುವಂತ.. ಕಾವ್ಯ.. ರಘು..ಉಳಿದುಕೊಂಡಿದ್ದಾರೆ. ಈ 7 ಜನರಲ್ಲಿ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಇಬ್ಬರು ಹೊರ ಬರುತ್ತಾರೆ. ಕೊನೆಯಲ್ಲಿ ಉಳಿಯುವುದು 5 ಜನ ಮಾತ್ರ. ಗ್ರ್ಯಾಂಡ್ ಫಿನಾಲೆಗೆ ಕಾಲಿಡುವ ಆ 5 ಜನ ಯಾರು, ವಾರದ ಮಧ್ಯದಲ್ಲಿ ಮನೆಯಿಂದ ಹೊರ ಬರುವ ಆ 2 ಸ್ಫರ್ಧಿಗಳು ಯಾರು ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











