BBK 12 Grand Finale : ಕರವೇಯಲ್ಲಿ ಬಿಗ್ ಬಾಸ್ ಕದನ-ಅಶ್ವಿನಿ ಪರ ನಾರಾಯಣಗೌಡ, ಗಿಲ್ಲಿಗೆ ಪ್ರವೀಣ ಶೆಟ್ಟಿ ಸಪೋರ್ಟ್
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಇಪ್ಪತ್ತು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದರ್ಥದಲ್ಲಿ ''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಅಲ್ಲ. ಹಲವರ ಪಾಲಿಗೆ ಭಾವನಾತ್ಮಕವಾದ ರಣರಂಗ. ಇನ್ನೂ ಸ್ಫರ್ಧಿಗಳ ಪಾಲಿಗೆ ಬದುಕು ಬದಲಿಸಬಲ್ಲ.. ಅಪಾರವಾದ ಹೆಸರನ್ನು ನೀಡಬಲ್ಲ.. ದೊಡ್ಡ ಮೊತ್ತದ ಹಣವನ್ನು ಕೂಡ ಕೊಡಬಲ್ಲ.. ಕಾರ್ಯಕ್ರಮ ''ಬಿಗ್ ಬಾಸ್''.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ಕನ್ನಡದಲ್ಲಿ ಇಂದು(ಜನವರಿ 18)ತೆರೆ ಬೀಳಲಿದೆ. ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸಹಜವಾಗಿ ಯಾರು ವಿನ್ನರ್ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಯಾಕೆಂದರೆ ಈ ಬಾರಿ ಸ್ಫರ್ಧೆ ರಣರೋಚಕವಾಗಿದೆ. ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಜಿದ್ದಾಜಿದ್ದಿನ ಯುದ್ಧ ನಡೆಯುತ್ತಿದೆ. ರಕ್ಷಿತಾ ಕೂಡ ಹಲವರ ಮೇಲೆ ಪ್ರಭಾವ ಬೀರಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ನೆಚ್ಚಿನ ಸ್ಫರ್ಧಿಯ ಪರ ಪ್ರಚಾರ ಮಾಡುತ್ತಿದ್ದಾರೆ. ಕೆಲವರ ಪ್ರಕಾರ ಈ ಬಾರಿ ಗಿಲ್ಲಿ ''ಬಿಗ್ ಬಾಸ್'' ಆದರೆ ಇನ್ನು ಕೆಲವರ ಪ್ರಕಾರ ಅಶ್ವಿನಿ ಗೌಡ ಟ್ರೋಫಿ ಮುಡಿಗೇರಿಸಿಕೊಳ್ಳಲಿದ್ದಾರೆ.
ಇನ್ನೂ ಕೇವಲ ಜನಸಾಮಾನ್ಯರ ಮೇಲೆ ಮಾತ್ರವಲ್ಲ. ಈ ಬಾರಿಯ ''ಬಿಗ್ ಬಾಸ್'' ಚಿತ್ರರಂಗದ ತಾರೆಯರಿಂದ ಹಿಡಿದು ಹೋರಾಟಗಾರರ ಮೇಲೆ ಕೂಡ ಮೋಡಿ ಮಾಡಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಶಿವಣ್ಣ ಕೂಡ ಟೇಬಲ್ ತಟ್ಟಿ ಭವಿಷ್ಯ ಹೇಳಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ಮತ್ತು ಪ್ರವೀಣ್ ಶೆಟ್ಟಿ ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಬ್ಬರ ಅಭಿಪ್ರಾಯಗಳು ಭಿನ್ನವಾಗಿರುವುದು ವಿಶೇಷ.
ಹೌದು, ''ಬಿಗ್ ಬಾಸ್'' ಕರವೇ ಪಾಲಿಗೆ ಕೂಡ ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಶ್ವಿನಿ ಗೌಡ ಗೆಲ್ಲಬೇಕು ಎಂದು ನಾರಾಯಣ ಗೌಡರು ಹೇಳಿದರೆ ಗಿಲ್ಲಿಯ ಪರವಾಗಿ ಪ್ರವೀಣ್ ಶೆಟ್ಟಿ ವಕಾಲತ್ತು ಮಾಡಿದ್ದಾರೆ. ಈ ಕುರಿತು ''ಪಬ್ಲಿಕ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಾರಾಯಣ ಗೌಡರು ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಬಡವರ ನೋವು, ದುಃಖ ದುಮ್ಮಾನಗಳಿಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಅನೇಕ ಸಂದರ್ಭದಲ್ಲಿ ಕೇಸ್ ಹಾಕಿಸಿಕೊಂಡು, ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲ ಅನುಭವಗಳಿಂದ ಅಶ್ವಿನಿ ಇಂದು ಗಟ್ಟಿಯಾಗಿ ನಿಂತು ಫೈನಲ್ ತಲುಪಿದ್ದಾರೆ ಎಂದು ಹೇಳಿರುವ ನಾರಾಯಣ ಗೌಡರು ಗಿಲ್ಲಿ ಗೆದ್ರೆ ನಾಳೆ ಸಮಾಜಕ್ಕೆ ಏನು ಕೊಡಬಹುದು? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರನ್ನ ಕಾಲು ಎಳೆದುಕೊಂಡು, ನಗಿಸಿಕೊಂಡು ಇರೋ ವ್ಯಕ್ತಿಯನ್ನ ಬೆಂಬಲಿಸಬೇಕಾ? ಎಂದು ಕೇಳಿದ್ದಾರೆ.
ಮತ್ತೊಂದು ಕಡೆ ಗಿಲ್ಲಿ ಎಲ್ಲರನ್ನೂ ನಗಿಸುವಂತಹ ಹುಡುಗ. ಎಂಥಾ ಸಂದರ್ಭದಲ್ಲೂ ಯಾರನ್ನ ಬೇಕಾದ್ರೂ ನಗಿಸ್ತಾನೆ. ದ್ವೇಷ ಮಾಡುವಂತದ್ದು, ವಿರೋಧ ಮಾಡುವಂತದ್ದು ಗಿಲ್ಲಿಗೆ ಗೊತ್ತಿಲ್ಲ ಅನಿಸುತ್ತೆ ಎಂಬ ಅಭಿಪ್ರಾಯವನ್ನು ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಬಡವರ ಮನೆ ಹುಡುಗ, ಗಿಲ್ಲಿ ಗೆಲ್ಲಬೇಕು. ನಗುವಿನ ಚಕ್ರವರ್ತಿ, ನಗಿಸುವ ಚಕ್ರವರ್ತಿ ಗಿಲ್ಲಿ ಗೆಲ್ಲಬೇಕು ಅನ್ನೋದು ಕನ್ನಡಿಗರ ಆಶಯ ಎಂದು ಹೇಳಿರುವ ಪ್ರವೀಣ್ ಶೆಟ್ಟಿ ನನ್ನ ಆಶಯ ಕೂಡ ಅದೇ ಎಂದು ಹೇಳಿದ್ದಾರೆ. ಯಾರೇ ಗೆದ್ದರೂ ಕೂಡ ಕನ್ನಡ ಹೋರಾಟಗಾರರು ಒಪ್ಪಿಕೊಳ್ಳಬೇಕು,ಬಣ ಬಣಗಳ ನಡುವೆ ಕಿತ್ತಾಟ ಬೇಡ ಎಂದು ಮನವಿಯನ್ನು ಕೂಡ ಮಾಡಿದ್ದಾರೆ.


Click it and Unblock the Notifications











