BBK 12 : ಕ್ಷಮೆ ಕೇಳುತ್ತಾ ಮನೆ ಸುತ್ತಿದ ಅಶ್ವಿನಿ ಗೌಡ, ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ. ವಿವಾದಾತ್ಮಕ ವ್ಯಕ್ತಿಗಳನ್ನು ... ವಿಚಿತ್ರ ವ್ಯಕ್ತಿಗಳನ್ನು...
ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಈ ಬಾರಿ ಒಬ್ಬರಿಗಿಂತ ಒಬ್ಬರು ಮನೆಯಲ್ಲಿದ್ದಾರೆ. ಸೇರಿ ಸವ್ವಾ ಸೇರು ಎಂಬ ಮನಸ್ಥಿತಿಯವರು ಇದ್ದಾರೆ. ಉದಾಹರಣೆಗೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಅವರನ್ನೇ ತೆಗೆದುಕೊಳ್ಳಿ.

ಹೌದು, ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಎರಡನೇ ದಿನವೇ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಗಿಲ್ಲಿ ಹೋಗೇ..ಬಾರೇ..ಎಂದು ಏಕವಚನದಲ್ಲಿಯೇ ಮಾತನಾಡಿದ್ದರು. ಆಗ ಕೆರಳಿದ್ದ ಅಶ್ವಿನಿ ಗೌಡ ಎಚ್ಚರಿಕೆ ನೀಡಿದ್ದರು. ಇಲ್ಲಿಂದ ಶುರುವಾದ ಇವರ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬಂತು.
ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದ ಅಶ್ವಿನಿ ಗೌಡ, ಈ ಹಿಂದೆ ಎಲ್ಲೋ ಒಂದು ಕಡೆ ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನಟ ನನ್ನನ್ನು ತುಂಬಾ ಪರ್ಸನಲಿ ಟಾರ್ಗೆಟ್ ಮಾಡ್ತಿದ್ದಾರೆ ಎಂದು ನನಗೆ ಅನ್ನಿಸ್ತಾ ಇದೆ. ಗೇಮ್ ಅಂತ ಬಂದರೆ ತುಂಬಾ ಸ್ವಾರ್ಥಿ ಆಗಿರುತ್ತಾರೆ ಎಂದು ಹೇಳಿದ್ದರು.
ಹೀಗೆ ಕಾಲ ಕಾಲಕ್ಕೆ ಕಿತ್ತಾಡಿಕೊಳ್ಳುತ್ತಲೇ ಬರುತ್ತಿರುವ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಈಗ ಮತ್ತೊಂದು ಸಮರ ಶುರುವಾಗಿದೆ. ಹೌದು, ಅಸಲಿಗೆ ''ಬಿಗ್ ಬಾಸ್'' ಮನೆಯಲ್ಲಿ ಕೆಲ ನಿಯಮಗಳಿವೆ. ಉದಾಹರಣೆಗೆ ಮೈಕ್ ಹಾಕಿಕೊಳ್ಳುವುದು.. ಲೈಟ್ ಆಫ್ ಮಾಡಿದಾಗಲೇ ನಿದ್ದೆ ಮಾಡಬೇಕು ಎನ್ನುವುದು..
ಇಂತಹ ಮೂಲ ನಿಯಮಗಳನ್ನು ಈ ಬಾರಿ ಈ ಮನೆಯಲ್ಲಿ ಅತಿ ಹೆಚ್ಚು ಉಲ್ಲಂಘನೆ ಮಾಡಿದ್ದು ಯಾರು ಎನ್ನುವ ಪ್ರಶ್ನೆಯನ್ನು ಸ್ಫರ್ಧಿಗಳಿಗೆ ಕೇಳಲಾಗಿತ್ತು. ಆಗ ಕ್ಯಾಪ್ಟನ್ ರಘು, ರಾಶಿಕಾ ಶೆಟ್ಟಿ, ಸೇರಿ ಹಲವರು ಹಲವರ ಉತ್ತರ ಅಶ್ವಿನಿ ಗೌಡ ಎಂದೇ ಆಗಿತ್ತು. ಇನ್ನೂ ಗಿಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಶ್ವಿನಿ ಗೌಡ ಅವರಿಗೆ ಕಠಿಣವಾದ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸಿದರು.

ಅದರಂತೆ ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ''ಬಿಗ್ ಬಾಸ್'' ಶಿಕ್ಷೆ ವಿಧಿಸಿದ್ದಾರೆ. ಕೊರಳಿಗೆ ಐ ಆಮ್ ಸಾರಿ ಎಂಬ ಬೋರ್ಡ್ ಮತ್ತು ಹಣೆಯ ಮೇಲೆ ನಾಮಿನೇಟಡ್ ಎಂಬ ಹಣೆ ಪಟ್ಟಿಯನ್ನು ಹಚ್ಚಿ, ಮನೆಯ ಎಲ್ಲ ಸದ್ಯಸರ ಮುಂದೆ ಹೋಗಿ ಬಸ್ಕಿ ಹೊಡೆದು ಕ್ಷಮೆ ಕೇಳುವಂತೆ ಹೇಳಿದ್ದಾರೆ. ಇನ್ಮುಂದೆ ರೂಲ್ಸ್ ಬ್ರೇಕ್ ಮಾಡಲ್ಲ ಎಂದು ಹೇಳಬೇಕು ಎಂದು ಹೇಳಿದ್ದಾರೆ.
''ಬಿಗ್ ಬಾಸ್'' ಆದೇಶದಂತೆ ಅಶ್ವಿನಿ ಗೌಡ ಕೊರಳಿಗೆ ಬೋರ್ಡ್ ಹಾಕಿಕೊಂಡು, ಎಲ್ಲ ಸ್ಫರ್ಧಿಗಳ ಎದುರು ಹೋಗಿ ಕ್ಷಮೆ ಕೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ಕೆಣಕಿದ್ದಾರೆ. ಕಾಲ್ಮೇಲೆ ಕಾಲು ಹಾಕಿಕೊಂಡು ಕುಂತಿದ್ದಾರೆ.
ಗಿಲ್ಲಿಯ ಈ ವರ್ತನೆ ಅಶ್ವಿನಿಗೆ ಇಷ್ಟವಾಗಿಲ್ಲ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅಶ್ವಿನಿ ಗೌಡ ಕಾಲು ಕೆಳಗೆ ಇಳಿಸುವಂತೆ ಗಿಲ್ಲಿಗೆ ಹೇಳಿದ್ದಾರೆ. ಆದರೆ ಗಿಲ್ಲಿ ಮಾತ್ರ ಜಗ್ಗದ ಜವಾರಿ ಹುಡುಗ. ಅಶ್ವಿನಿ ಮಾತುಗಳಿಗೆ ಸೊಪ್ಪು ಹಾಕಲಿಲ್ಲ. ಇದರಿಂದ ಇನ್ನೂ ರೊಚ್ಚಿಗೆದ್ದ ಅಶ್ವಿನಿ ಸದ್ಯ ತೀರಾ ಓವರ್ ಆಗಿ ಆಡಲು ಹೋಗಬೇಡ. ದವಲತ್ತು, ಧಿಮಾಕು ನನ್ನ ಹತ್ತಿರ ಇಟ್ಕೊಬೇಡ ಎಂದೆಲ್ಲಾ ಗಿಲ್ಲಿಗೆ ಹೇಳಿದ್ದಾರೆ. ಇಲ್ಲಿಯೂ ಕೂಡ ಗಿಲ್ಲಿ ನಗು ನಗುತ್ತಾ ಕುಂತಿದ್ದಾರೆ. ಹೇಗಾದ್ರೂ ಕುಳಿತುಕೊಳ್ಳಬಹುದು ಎಂದು ಹೇಳಿದ್ದಾರೆ.
ಸದ್ಯ ಇಂದು ( ನವೆಂಬರ್ 17 ) ಬಿಡುಗಡೆಯಾದ ಈ ಪ್ರೋಮೋ ಕುತೂಹಲ ಕೆರಳಿಸಿದ್ದು, ಗಿಲ್ಲಿ ಕಾಲ್ಮೇಲೆ ಕಾಲು ಹಾಕಿಕೊಂಡು ಕುಂತರು ಕೂಡ ಗಿಲ್ಲಿ ಮುಂದೆ ಅಶ್ವಿನಿ ಗೌಡ ಬಸ್ಕಿ ಹೊಡೆದು ಕ್ಷಮೆ ಕೇಳುತ್ತಾರಾ..? ಅಥವಾ ಇಬ್ಬರ ನಡುವೆ ಜಗಳ ತಾರಕಕ್ಕೇರುತ್ತಾ ..? ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.


Click it and Unblock the Notifications











