"ಜಗ್ಗೇಶ್ ದೊಡ್ಡವ್ರು.. ನಾವು ಕೆಳಗಿನ ಮಟ್ಟದವ್ರು.. ಅವ್ರ ಚಪ್ಪಲಿಗೂ ಸಮವಲ್ಲ": ಡ್ರೋನ್ ಪ್ರತಾಪ್ ತಂದೆ ಮರಿಮಾದಯ್ಯ
ಯುವ ವಿಜ್ಞಾನಿ, ಡ್ರೋನ್ಗಳ ತಯಾರಿಕೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾಗಿ ಹೇಳಿ ಡ್ರೋನ್ ಪ್ರತಾಪ್ ಕೆಲ ವರ್ಷಗಳ ಹಿಂದೆ ಭಾರೀ ಸುದ್ದಿ ಆಗಿದ್ದರು. ತಮ್ಮ ಭಾಷಣಗಳಿಂದ ಮೋಡಿ ಮಾಡಿದ್ದರು. ಬಳಿಕ ಅದೆಲ್ಲ ಸುಳ್ಳು ಎಂದು ಸುದ್ದಿಯಾಯಿತು. ಅದಕ್ಕೆ ಸ್ಪಷ್ಟನೆ ನೀಡುವಲ್ಲಿ ಸೋತು ಪ್ರತಾಪ್ ಭಾರೀ ಟ್ರೋಲ್ಗೆ ಗುರಿಯಾಗಿದ್ದರು.
ನಟ ಜಗ್ಗೇಶ್ ಸೇರಿದಂತೆ ಹಲವರು ಪ್ರತಾಪ್ ಬೆಂಬಲಕ್ಕೆ ನಿಂತಿದ್ದರು. ನಂತರ ಪ್ರತಾಪ್ ನಿಜ ಬಣ್ಣ ಬಯಲಾಯಿತು, ನಾನು ಎಂತಹ ತಪ್ಪು ಮಾಡಿಬಿಟ್ಟೆ, ಇನ್ನೆಂದು ಹಿಂದೆ ಮುಂದೆ ನೋಡದೇ ಯಾರನ್ನು ಬೆಂಬಲಿಸುವುದಿಲ್ಲ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಿಗ್ಬಾಸ್ ಮನೆ ಪ್ರವೇಶಿಸಿರುವ ಡ್ರೋನ್ ಪ್ರತಾಪ್ ಮತ್ತೆ ಸುದ್ದಿಯಲ್ಲಿದ್ದಾರೆ. ನಿಧಾನವಾಗಿ ತಮ್ಮ ಉತ್ತಮ ಪ್ರದರ್ಶನದಿಂದ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಪ್ರತಾಪ್ ತಮ್ಮ ತಪ್ಪು ತಿದ್ದಿಕೊಂಡು ಬಿಗ್ಬಾಸ್ ಮನೆಯಿಂದ ಒಳ್ಳೆ ವ್ಯಕ್ತಿಯಾಗಿ ಹೊರ ಬರುತ್ತಾರೆ ಎನ್ನುವವರು ಇದ್ದಾರೆ. ಇದೀಗ ಮಗನ ಬಗ್ಗೆ ತಂದೆ ಮರಿಮಾದಯ್ಯ ಮಾತನಾಡಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ನಟಿ ತಾರಾ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಆಕೆಯ ಬಳಿ ಪ್ರತಾಪ್ ತಮ್ಮ ನೋವು ತೋಡಿಕೊಂಡಿದ್ದರು. "ನಿನ್ನ ಮಗನನ್ನು ಯಾಕೆ ಉಳಿಸಿದ್ದೀಯಾ? ಊಟದಲ್ಲಿ ಏನಾದ್ರೂ ಹಾಕಿ ಸಾಯಿಸಿಬಿಡು ಎಂದು ಸಂಬಂಧಿಕರು ನನ್ನ ತಾಯಿಗೆ ಹೇಳಿದ್ದರು. ಎಲ್ಲರ ಬಳಿ ಹಣ ತೆಗೆದುಕೊಂಡಿದ್ದೀನಿ ಅಂತೆಲ್ಲಾ ಹೇಳಿದ್ದರು" ಎಂದು ಭಾವುಕರಾಗಿದ್ದರು.
"ನನ್ನಿಂದಾಗಿ ನಮ್ಮಮ್ಮ ಒಂದೇ ಒಂದು ಮದುವೆ- ಮುಂಜಿಗೂ ಹೋಗಲಿಲ್ಲ. ಊರಲ್ಲಿ ಮನೆ ಕಟ್ಟಿದರು. ಅದರ ಗೃಹ ಪ್ರವೇಶಕ್ಕೆ ಕರೆದರು. ನಾನು ಹೋಗಲಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದು ಹೇಳಿದ್ದೇನೆ ಅಂತ ಕಣ್ಣೀರಾಗಿದ್ದರು. ನನ್ನ ಅಪ್ಪ, ಅಪ್ಪ, ತಂಗಿ ಎಲ್ಲರ ಫೋನ್ ನಂಬರ್ ಬ್ಲಾಕ್ ಮಾಡಿದ್ದೀನಿ. ಅವರೊಟ್ಟಿಗೆ ಮಾತನಾಡುತ್ತಿಲ್ಲ" ಎಂದು ಪ್ರತಾಪ್ ಹೇಳಿದ್ದರು. ಸದ್ಯ ಪ್ರತಾಪ್ ತಂದೆ ಮರಿಮಾದಯ್ಯ ಸುವಿಯ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
"ನನ್ನ ಮಗನ ಜೊತೆ ಮಾತನಾಡಲು ನಾನು ಟ್ರೈ ಮಾಡ್ತಿದ್ದೆ. ಅವ್ನು ಬೇಸರದಿಂದ ಫೋನ್ ತೆಗೆದಿರಲಿಲ್ಲ. ನಮ್ಮ ನಂಬರ್ ಬ್ಲಾಕ್ ಮಾಡಿರುವುದು ಸತ್ಯ. ಆತನೊಟ್ಟಿಗೆ ಮಾತನಾಡುವ ಅವಕಾಶ ಸಿಕ್ಕರೆ ಮಾತನಾಡುತ್ತೀನಿ. ಮಗನೊಟ್ಟಿಗೆ ಮಾತನಾಡುವ ಆಸೆ ನಮಗೂ ಇದೆ. ಅವನು ನಮಗೇನು ತಪ್ಪು ಮಾಡಲಿಲ್ಲ. ಅದು ಜನರ ತೀರ್ಪು. ಕರ್ನಾಟಕ, ಭಾರತದ ಜನ ನನ್ನ ಮಗನನ್ನು ಗೆದ್ದು ಕಳುಹಿಸಲಿ ಅಂತ ಮನವಿ ಮಾಡುತ್ತೇನೆ."
ಜಗ್ಗೇಶ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ "ಬಿಡಿ ಬಿಡಿ, ಅವ್ರು ದೊಡ್ಡವ್ರು.. ನಾವು ಕೆಳಗಿನ ಮಟ್ಟದವರು. ಅವ್ರ ಕಾಲಿನ ಚಪ್ಪಲಿಗೂ ಸಮವಲ್ಲ. ಆ ರೀತಿ ಇರುವವರು. ಅವರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ. ಅವ್ರು ಏನೇ ಮಾತನಾಡಿದ್ದರು. ಅವರಿಗೆ ಸೇರಿದ್ದು. ಜನ ತಿಳ್ಕೊಬೇಕು ಅಷ್ಟೇ. ಬಿಗ್ಬಾಸ್ ಮನೆಯಲ್ಲಿ ಅವಮಾನದ ಮಾತು ಬಿಡಿ. ಅದಕ್ಕೆಲ್ಲ ನಾನು ಬೇಸರ ಮಾಡಿಕೊಳ್ಳಲ್ಲ. ಯಾಕೆಂದರೆ ಅದು ಆಟ"
"ಅವ್ರು ಆಟ ಆಡುತ್ತಿರುತ್ತಾರೆ. ಏನೋ ಒಂದು ಅಂತಾರೆ. ಅದಕ್ಕೆ ಬೇಸರ ಮಾಡಿಕೊಳ್ಳಬಾರದು. ಅವ್ರು ನಮ್ಮ ಮಕ್ಕಳು ಇದ್ದಂತೆ. ಪ್ರತಾಪ್ ಅತ್ತರೆ ಅಳಲಿ ಬಿಡಿ. ಉಳಿದವ್ರ ಬಗ್ಗೆ ಮಾತನಾಡಬಾರದು. ಅವರಿಗೂ ನಾವು ಮಾಡಿದ್ದು ತಪ್ಪು ಎಂದು ಅರಿವಾಗುತ್ತೆ. ಅವ್ರ ತಂದೆ ತಾಯಿ ನಮ್ಮಂಗೆ ಮಕ್ಕಳನ್ನು ಕಳುಹಿಸಿದ್ದಾರೆ. ಅವ್ರು ನಮ್ಮಂತೆ ಬಡವರೋ ಶ್ರೀಮಂತರೋ ಅದು ನನಗೆ ಗೊತ್ತಿಲ್ಲ. ಅಲ್ಲಿ ತಿಳ್ಕೊಳ್ದೇ ಇದ್ದರೂ ಹೊರಗೆ ಬಂದ್ಮೇಲೆ ಹೀಗೆ ಮಾತಾಡಿದ್ವಿ ಅಲ್ಲಾ? ಅಂತ ಗೊತ್ತಾಗುತ್ತೆ"

ಬಿಗ್ಬಾಸ್ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಪ್ರತಾಪ್ ಕೆಟ್ಟದಾಗಿ ನೋಡುತ್ತಾರಾ? ಎನ್ನುವ ಚರ್ಚೆ ಕಳೆದ ವಾರ ನಡೆದಿತ್ತು. ಈ ವೇಳೆ ಕೆಲವರು ಆತನ ನೋಟ ಸರಿಯಿಲ್ಲ ಎಂದಿದ್ದರು. ಇಶಾನಿ ಕೂಡ ಆರೋಪ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಮರಿ ಮಾದಯ್ಯ "ಆ ತರ ಇದ್ದಿದ್ರೆ ಅವ್ನು ಯಾವುದೋ ಮಟ್ಟಕ್ಕೆ ಹೋಗುತ್ತಿದ್ದ. ನಾವು ಅವನನ್ನು ಆ ಮಟ್ಟಕ್ಕೆ ಬೆಳೆಸಲಿಲ್ಲ. ಅಲ್ಲೇ ಮತ್ತೆ ಹೇಳಿದ್ರಲ್ಲ. ಹೆಣ್ಣು ಮಕ್ಕಳೇ ಹೇಳಿದ್ರಲ್ಲ."
"ಅವ್ನು ಹೆಣ್ಣು ಮಕ್ಕಳು ಅಂದ್ರೆ ಅಕ್ಕ, ತಂಗಿ, ಒಡಹುಟ್ಟಿದವರು ಎಂದು ತಿಳ್ಕೊಂಡಿದ್ದಾನೆ ಹೊರತು ಬೇರೆ ತರ ಯಾವ್ದು ಅಲ್ಲ. ಬಿಗ್ಬಾಸ್ ಶೋ ಡೈಲಿ ನೋಡ್ತಿದ್ದೀವಿ. ನೋಡ್ಲೇಬೇಕಲ್ಲ, ಮಗ ಅಲ್ವಾ? ಅವನನ್ನು ಶೋನಲ್ಲಿ ನೋಡಿದ್ರೆ ಖುಷಿ ಆಗುತ್ತೆ. ನಮ್ಮ ಗ್ರಾಮದಲ್ಲಿ ಎಲ್ಲರೂ ನೋಡ್ತಿದ್ದಾರೆ. ಯಾಕಂದ್ರೆ ಅಭಿಮಾನ ಅಲ್ವಾ? ಮಗನೇ ಒಳ್ಳೆ ರೀತಿಯಲ್ಲಿ ಯಾರ ಮನಸ್ಸು ನೋಯಿಸದೇ ಗೆದ್ದು ಬಾ ಮಗನೇ, ಯಾರು ಏನೇ ಅಂದ್ರ ಒಳ್ಳೆದಕ್ಕೆ ಅಂದ್ಕೋ" ಎಂದು ಮರಿಮಾದಯ್ಯ ಮಗನಿಗೆ ಹಾರೈಸಿದ್ದಾರೆ.


Click it and Unblock the Notifications











