ನೋಡ್ತೀರಿ, ಅಶ್ವಿನಿ ಗೌಡ ಮತ್ತು ಜಾಹ್ನವಿ ಸ್ನೇಹದಲ್ಲಿ ಬಿರುಕು ಮೂಡುತ್ತೆ ; ಬಿಗ್ ಬಾಸ್4 ರನ್ನರ್ ಅಪ್ ಕಿರಿಕ್ ಕೀರ್ತಿ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ. ವಿವಾದಾತ್ಮಕ ವ್ಯಕ್ತಿಗಳನ್ನು ...
ವಿಚಿತ್ರ ವ್ಯಕ್ತಿಗಳನ್ನು... ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿಯ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಆದರೆ.. ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲಿ ''ಕಿರಿಕ್ ಪಾರ್ಟಿ''ಗಳ ಸಂಖ್ಯೆ ಕಡಿಮೆ ಇದೆ. ಈ ಕೊರತೆಯನ್ನು ನೀಗಿಸುವ ಭರದಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಯಡವಟ್ಟು ಮಾಡಿಕೊಂಡಿದ್ದಾರೆ. ರಕ್ಷಿತಾ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿ ''ಬಿಗ್ ಬಾಸ್'' ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಹಲವಾರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ಧಾರೆ.

ಈ ಆಕ್ರೋಶದ ಜ್ವಾಲೆಯಿಂದ ಇವರು ಪಾರಾಗಬೇಕು ಅಂದರೆ ಈಗ ಇಬ್ಬರು ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ ಎಂದು ಮುನ್ನಡೆಯಬೇಕು. ಖುದ್ದು ಸುದೀಪ್ ಕೂಡ ನಿನ್ನೆಯ (ಅಕ್ಟೋಬರ್ 18) ಪಂಚಾಯ್ತಿಯಲ್ಲಿ ಈ ವಿಚಾರವನ್ನೇ ಹೇಳಿದ್ದಾರೆ ಕೂಡ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ಬಿಗ್ ಬಾಸ್ ಕನ್ನಡ'' 4 ರನ್ನರ್ ಅಪ್ ಕಿರಿಕ್ ಕೀರ್ತಿ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿದ್ದಾರೆ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಆಟದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಗೆ ಪ್ರತಿಕ್ರಿಯೆ ನೀಡಿರುವ ಕಿರಿಕ್ ಕೀರ್ತಿ ''ಬಿಗ್ ಬಾಸ್ ಮನೆ ಅಂದರೆ ಅಲ್ಲಿ ವಿವಾದ ಇರಬೇಕು, ನಕರಾತ್ಮಕ ವ್ಯಕ್ತಿತ್ವಗಳಿರಬೇಕು. ಅದ್ರಂತೆ ಈ ವರ್ಷ ಅಶ್ವಿನಿ ಗೌಡ ಮತ್ತು ಜಾಹ್ನವಿ ಇದ್ದಾರೆ. ಆದರೆ ಇವರು ಇಬ್ಬರು ಇಲ್ಲದಿದ್ದರೆ ಆ ಮನೆಯಲ್ಲಿ ಎಲ್ಲರೂ ಒಂದಾಗಿದ್ದರೆ ಎಲ್ಲ ಚಿಂತೆಗೆ ಜಾಗ ಇಲ್ಲ ಎಂದು ಹಾಡು ಹಾಡುತ್ತಾ ಕೂರುತ್ತಿದ್ದರು'' ಎಂದು ಹೇಳಿದ್ದಾರೆ.
ಇನ್ನೂ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಗೇಮ್ ಪ್ಲ್ಯಾನ್ ಕುರಿತು ಮಾತನಾಡಿರುವ ಕಿರಿಕ್ ಕೀರ್ತಿ, ''ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಇಡೀ ಮನೆಯನ್ನು ತಮ್ಮ ಹದ್ದು ಬಸ್ತಿನಲ್ಲಿಡಬೇಕೆಂಬ ಆಸೆ. ಎಲ್ಲರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬೇಕು ಎನ್ನುವ ಆಸೆ. ಆದರೆ ಇಬ್ಬರ ಈ ಆಸೆ ಈ ಮನೆಯಲ್ಲಿ ಈಡೇರುವುದಿಲ್ಲ. ಯಾಕೆಂದರೆ ಇದು ಬಿಗ್ ಬಾಸ್ ಮನೆ. ಇಲ್ಲಿ ಯಾರು ಯಾರ ಮಾತನ್ನು ಯಾವುದೇ ಕಾರಣಕ್ಕೂ ಕೇಳಲು ಸಾಧ್ಯ ಇಲ್ಲ. ಯಾಕೆಂದರೆ ಒಂದಲ್ಲೊಂದು ವಾರ ಒಬ್ಬರಲ್ಲೊಬ್ಬರು ಮನೆಯ ಹೊರಗಡೆ ಹೋಗಲೇಬೇಕು'' ಎಂದು ಹೇಳಿದ್ದಾರೆ.

ಮುಂದುವರೆದು ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ಸ್ನೇಹದ ಕುರಿತು ಕೂಡ ಮಾತನಾಡಿರುವ ಕಿರಿಕ್ ಕೀರ್ತಿ ''ಬೇಕಿದ್ದರೆ ನೀವು ನೋಡಿ ನಾಳೆಯಿಂದ ( ಅಕ್ಟೋಬರ್ 20 ) ಅಶ್ವಿನಿ ಗೌಡ ಮತ್ತು ಜಾಹ್ನವಿ ಸ್ನೇಹದಲ್ಲಿಯೂ ಬಿರುಕು ಮೂಡಿಯೇ ಮೂಡುತ್ತೆ. ಯಾಕೆಂದರೆ ಬಿಗ್ ಬಾಸ್ ಅವರಿಗೆ ನಿನ್ನೆಯ ಸಂಚಿಕೆಯಲ್ಲಿ ಖಡಕ್ ಎಚ್ಚರಿಕೆ ನೀಡಿದೆ. ಎಚ್ಚೆತ್ತುಕೊಳ್ಳುವಂತೆ ಹೇಳಿದೆ. ಹೀಗಂತ ಹೇಳಿದ ನಂತರ ಹೊರಗಡೆ ಜನ ನಮ್ಮನ್ನು ಇಷ್ಟ ಪಡ್ತಿಲ್ಲ ಎನ್ನುವ ವಿಚಾರ ಅವರಿಗೆ ಗೊತ್ತಾಗಿರುತ್ತೆ. ಆಡುವ ಆಟ ವ್ಯೆಯಕ್ತಿಕವಾಗಿ ಯಾವತ್ತು ತಿರುಗಬಾರದು. ಸುದೀಪ್ ಸರ್ ಹೇಳಿದಂತೆ ಯಾರೊಬ್ಬರ ಆತ್ಮ ಗೌರವ ಯಾರಪ್ಪನ ಆಸ್ತಿಯೂ ಆಗಬಾರದು'' ಎಂದು ಹೇಳಿದ್ದಾರೆ.
ರಕ್ಷಿತಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಕಿರಿಕ್ ಕೀರ್ತಿ, ''ರಕ್ಷಿತಾ ಅಲ್ಲಿ ಸುಮ್ಮನೆ ಬಂದು ಕುಳಿತಿಲ್ಲ. ಅವರಿಗೆ ಅರ್ಹತೆ ಇದೆ ಎಂದೇ ಅಲ್ಲಿ ಕರೆದು ಕೂರಿಸಲಾಗಿದೆ. ಇನ್ನು ಅವರು ಮಾತನಾಡುವುದು ತುಳು ಮತ್ತು ಹಿಂದಿ. ಆದರೆ ಆ ಹುಡುಗಿಯಷ್ಟು ಕನ್ನಡ ಮಾತನಾಡುವ ಪ್ರಯತ್ನವನ್ನು ನನ್ನ ಪ್ರಕಾರ ಆ ಮನೆಯಲ್ಲಿ ಯಾರು ಬೇರೆಯವರು ಮಾಡಲಿಕ್ಕಿಲ್ಲ. ಕಷ್ಟಪಟ್ಟಾದರೂ ಕೂಡ ರಕ್ಷಿತಾ ಕನ್ನಡ ಮಾತನಾಡುವ ಪ್ರಯತ್ನ ಮಾಡ್ತಿದ್ದಾರೆ. ನಾವು ಅವರಿಗೆ ಅದಕ್ಕೆ ಗೌರವ ಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಾಕ್ರೋಚ್ ಸುಧಿ ಅವರ ಜೊತೆ ಹೋಲಿಸಿದರೆ ರಕ್ಷಿತಾ ಸಾಧನೆಯಲ್ಲಿ ಮತ್ತು ವಯಸ್ಸಿನಲ್ಲಿ ಸಣ್ಣವರು. ಆದರೆ ಗೇಮ್ ವಿಚಾರ ಬಂದಾಗ ರಕ್ಷಿತಾ ಯಾರನ್ನು ಬಿಡಲಿಲ್ಲ. ಕಾಕ್ರೋಚ್ ಸುಧಿಗೆ ಹೆದರಿಲ್ಲ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ಕೂಡ ಬಿಡಲಿಲ್ಲ'' ಎಂದು ಹೇಳಿದ್ದಾರೆ.
ವೇದಿಕೆ ಮೇಲೆ ಸುದೀಪ್ ಅವರಾಡಿದ ಮಾತುಗಳನ್ನು ಪ್ರಸ್ತಾಪ ಮಾಡಿರುವ ಕಿರಿಕ್ ಕೀರ್ತಿ, ''ಮನೆಯಲ್ಲಿನ ವಾತಾವರಣ ಹೊರಗಡೆಯ ವಾತಾವರಣ ಅರ್ಥ ಮಾಡಿಕೊಂಡು ಅಶ್ವಿನಿಗೌಡ ಮತ್ತು ಜಾಹ್ನವಿ ಮನೆಯಲ್ಲಿ ಉಳಿಯುವ ಪ್ರಯತ್ನ ಮಾಡದೇ ಇದ್ದರೆ ಮುಂಬರುವ ದಿನಗಳಲ್ಲಿ ತುಂಬಾ ಕಷ್ಟ. ಯಾಕೆಂದರೆ ಈಗ ಮನೆಗೆ ವೈಲ್ಡ್ ಕಾರ್ಡ್ ಸ್ಫರ್ಧಿಗಳು ಬರ್ತಾರೆ. ಅವರು ಬರುವಾಗ ಯಾರು ಬಲಿಷ್ಠರು ದುರ್ಬಲರು ಎಂದು ನೋಡಿಕೊಂಡೇ ಮನೆಗೆ ಹೋಗಿರುತ್ತಾರೆ. ಇನ್ಮುಂದೆ ವೈಲ್ಡ್ ಕಾರ್ಡ್ನಲ್ಲಿ ಬರುವರೆಲ್ಲರ ಮೊದಲ ಟಾರ್ಗೆಟ್ ಅಶ್ವಿನಿ ಮತ್ತು ಜಾಹ್ನವಿ ಅವರೇ ಆಗಿರುತ್ತಾರೆ. ಯಾಕೆಂದರೆ ಹೊರಗಡೆ ಜನರಿಗೆ ನಾವು ಇಷ್ಟವಾಗಬೇಕು ಅಂದರೆ ಅವರ ವಿರುದ್ಧ ನಿಲ್ಲಬೇಕು ಎಂಬ ಧೋರಣೆಯಲ್ಲಿಯೇ ಮುಂದೆ ಎಲ್ಲ ಮನೆಗೆ ಬರ್ತಾರೆ'' ಎಂದು ಹೇಳಿದ್ದಾರೆ.
ಇನ್ನು ಮಂಜು ಭಾಷಿಣಿ ಮತ್ತು ಅಶ್ವಿನಿ ಮನೆಯಾಚೆ ಹೋಗಿದ್ದರ ಕುರಿತು ಕೂಡ ಮಾತನಾಡಿರುವ ಕಿರಿಕ್ ಕೀರ್ತಿ ''''ಹಾಗೇ ನೋಡಿದರೆ ಈ ಬಾರಿಯ ಮನೆಯಲ್ಲಿ ಮಂಜು ಭಾಷಿಣಿ ಅವರು ತುಂಬಾ ಸ್ಟ್ರಾಂಗ್ ಆದ ಸ್ಫರ್ಧಿಯಾಗಿದ್ದರು. ಆದರೆ.. ಸದ್ದು ಗದ್ದಲದಿಂದ ತುಂಬಿರುವ ಮನೆಯಲ್ಲಿ ಅವರು ಮಂಕಾದರು ಅನ್ಸುತ್ತೆ'' ಎಂದು ಹೇಳಿದ್ದಾರೆ. ''ಇನ್ನೂ..ಅಶ್ವಿನಿ ಅವರಿಗೆ ಜಂಟಿಯಿಂದ ಒಂಟಿಯಾದ ಮೇಲೆ ಅವರಿಗೆ ಕಷ್ಟವಾಯ್ತು. ಅವರು ಗೇಮ್ ಅರ್ಥ ಮಾಡಿಕೊಳ್ಳುವಲ್ಲಿ ಅವರು ವಿಫಲರಾದರು ಅನ್ಸುತ್ತೆ'' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ಧಾರೆ.
ಮನೆಯ ಉಳಿದ ಸ್ಫರ್ಧಿಗಳ ಕುರಿತು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕಿರಿಕ್ ಕೀರ್ತಿ, ''ರಾಶಿಕಾಗೆ ಕೈ ಹಿಡಿದಿದ್ದು ಕೊನೆಯ ಎರಡು ದಿನಗಳು ಎನ್ನುಉದು ನನ್ನ ಭಾವನೆ. ಪಂಚಾಯ್ತಿಯ ಮುನ್ನ ಇದ್ದ ಎರಡು ದಿನ ಅವರು ತುಂಬಾ ಚೆನ್ನಾಗಿ ಆಡಿದರು. ಸಿಕ್ಕ ಅವಕಾಶ ಉಪಯೋಗ ಮಾಡಿಕೊಂಡರು.ಇನ್ನು ಸ್ಪಂದನಾ ಮನೆಯ ಗ್ಲಾಮರ್ ಗೊಂಬೆ. ಧ್ರುವಂತ್ ಜೊತೆ ಅವರು ಮಾಡಿಕೊಂಡ ಜಗಳ ಮತ್ತು ಅವರ ಮುಗ್ದತೆ ಅವರನ್ನು ಉಳಿಸಿರಬಹದು'' ಎಂದು ಹೇಳಿದ್ದಾರೆ.


Click it and Unblock the Notifications











