BBK9 Grand Finale: ರೂಪೇಶ್ ರಾಜಣ್ಣ ಕಪ್ ಎತ್ತುತ್ತಾರಾ..? ಪ್ಲಸ್ ಏನು..? ಮೈನಸ್ ಏನು?
ಬಿಗ್ ಬಾಸ್ ಕನ್ನಡ ಸೀಸನ್ 9.. ಶುಕ್ರವಾರ ಮತ್ತು ಶನಿವಾರ ಫಿನಾಲೆ ಅದ್ದೂರಿಯಾಗಿ ನೆರವೇರಲಿದೆ. ಈ ಅದ್ದೂರಿ ವೇದಿಕೆಯಲ್ಲಿ ಆ ಕಡೆ ಒಬ್ಬರು ಈ ಕಡೆ ಒಬ್ಬರು ನಿಲ್ಲಲಿದ್ದಾರೆ. ಕಿಚ್ಚ ಸುದೀಪ್ ಯಾರ ಕೈಯನ್ನು ಮೇಲಕ್ಕೆ ಎತ್ತಿ ಇವರೇ ರನ್ನರ್ ಎಂದು ಘೋಷಿಸುತ್ತಾರೋ ಎಂಬ ಕುತೂಹಲದ ಘಟ್ಟಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ.
ಈ ಬಾಕಿ ಇರುವ ಗಂಟೆಯಲ್ಲಿ ಒಂದಷ್ಟು ಜನರ ಕಣ್ಣು ರೂಪೇಶ್ ರಾಜಣ್ಣ ಅವರ ಮೇಲೆಯೂ ಇದೆ. ರಾಜಣ್ಣ ಅವರ ಬೆಂಬಲಿಗರದ್ದು ಒಂದೇ ಆಸೆ ರಾಜಣ್ಣ ಗೆಲ್ಲ ಬೇಕು. ರಾಜಣ್ಣ ಕಪ್ ತರಬೇಕು ಎಂಬುದು. ಆದರೆ ಬಿಗ್ ಬಾಸ್ ಕಪ್ ಗೆಲ್ಲುವುದು ಯಾರು ಎಂಬುದನ್ನು ಜನರ ವೋಟ್ ನಿರ್ಧಾರ ಮಾಡಿರುತ್ತೆ.

ನವೀನರಾಗಿ ಬಂದಿದ್ದ ರಾಜಣ್ಣ
ರೂಪೇಶ್ ರಾಜಣ್ಣ.. ಕನ್ನಡಪರ ಹೋರಾಟಗಳನ್ನು ಮಾಡುತ್ತಾ ಫೇಮಸ್ ಆದವರು. ಈ ಮೂಲಕವೇ ಬಿಗ್ ಬಾಸ್ ಸೀಸನ್ 9ಗೆ ನವೀನರಾಗಿ ಎಂಟ್ರಿ ಪಡೆದರು. ಬಿಗ್ ಬಾಸ್ ನೋಡಿ ಅನುಭವವಿದ್ದವರಿಗೆ ಸಡನ್ ಎಂಟ್ರಿ ಸಿಕ್ಕರೆ ಹೇಗಾಗಬೇಡ? ಮನೆಯೊಳಗೆ ಬಂದ ರಾಜಣ್ಣನಿಗೆ ಜೊತೆಯಾಗಿದ್ದು ಪ್ರಶಾಂತ್ ಸಂಬರ್ಗಿ. ಇಬ್ಬರು ಹೋರಾಟಗಾರರೇ ಆಗಿದ್ದ ಕಾರಣ ಮೊದ ಮೊದಲಿಗೆ ಇಬ್ಬರ ನಡುವೆ ಬೆಂಕಿಯೇ ಹೊತ್ತಿಕೊಂಡಿತ್ತು. ಕನ್ನಡ ಪರ ಸಂಘಟನೆಗಳ ಬಗ್ಗೆ ಮಾತಾಡಿದ್ದಕ್ಕೆ ಸಂಬರ್ಗಿ ವಿರುದ್ಧ ಹೊರಗಡೆ ಪ್ರತಿಭಟನೆಗಳು ನಡೆದವು. ಬಳಿಕ ಇಬ್ಬರು ಖಾಸಾ ದೋಸ್ತಿಗಳಾಗಿ ಬಿಟ್ಟರು.

ಟೋನ್ನಿಂದ ದುಷ್ಮನ್.. ಮುಗ್ಧತೆಯಿಂದ ದೋಸ್ತಿ
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಸ್ಸು ಗೆಲ್ಲುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ರಾಜಣ್ಣ ಮೊದ ಮೊದಲಿಗೆ ಸೈಲೆಂಟ್ ಆಗಿಯೇ ಇದ್ದರು. ಸಂಬರ್ಗಿ ಅವರ ಜೊತೆ ಸೇರಿ ಮನೆಯೊಳಗೆ ಆಟವನ್ನು ಹೇಗೆ ಆಡಬಹುದು ಎಂಬ ಲೆಕ್ಕಾಚಾರವನ್ನು ಚೆನ್ನಾಗಿ ಅರಿತರು ಎನಿಸುತ್ತೆ. ಅದಕ್ಕೆ ಬರಬರುತ್ತಾ ರಾಜಣ್ಣ ಜೋರಾಗಿಯೇ ಇರುತ್ತಿದ್ದರು. ಈ ವಿಚಾರವಾಗಿ ಸಂಬರ್ಗಿ ಕೂಡ ವೇದಿಕೆ ಮೇಲೆ ಸುದೀಪ್ ಜೊತೆ "ನನ್ನ ಸ್ಥಾನವನ್ನು ರಾಜಣ್ಣ ಕಿತ್ತುಕೊಂಡು ಬಿಟ್ಟಿದ್ದರು" ಅಂತ ಹೇಳಿದ್ದರು. ಅವರ ವಾಯ್ಸ್ ಅವರಿಗೆ ಮೈನಸ್ ಪಾಯಿಂಟ್ ಆಗಿದ್ದರೆ, ಮುಗ್ಧತೆ ಎಂಬುದು ಪ್ಲಸ್ ಪಾಯಿಂಟ್ ಆಗಿದೆ. ರಾಜಣ್ಣನಿಗೆ ಸುಲಭವಾಗಿ ಬಕ್ರ ಮಾಡಬಹುದಿತ್ತು. ಒಮ್ಮೊಮ್ಮೆ ಏನಾದರೂ ಹೇಳಿದರೆ ನಿಜವಾಗಿಯೂ ನಂಬಿ ಬಿಡುತ್ತಿದ್ದರು. ಅದು ಎಲ್ಲರಿಗೂ ಅವರ ನೈಜ ಸ್ವಭಾವವನ್ನು ತೋರಿಸಿತ್ತು. ಅದೇ ಇನ್ನೊಂದು ಕಡೆ ಅವರು ಮಾಡಿದ ತಪ್ಪನ್ನು ಹೇಳಿದರೆ ರಿಸೀವ್ ಮಾಡಿಕೊಳ್ಳುವ ಗುಣ ಅವರಲ್ಲಿ ಕಾಣಿಸುತ್ತಿರಲಿಲ್ಲ. ಅದನ್ನು ಸುದೀಪ್ ತಮ್ಮ ವೇದಿಕೆಯಲ್ಲೂ ಹೇಳಿದ್ದರು.

ಫ್ರೆಂಡ್ಸ್ ಆಗಿದ್ದವರಿಗೆ ಪತ್ರದ ಮೂಲಕ ಬೇಸರ
ರಾಜಣ್ಣ ಸಂಬಂಧ ಮತ್ತು ಹೋರಾಟ ಎರಡನ್ನು ಒಟ್ಟಿಗೆ ಮಾಡಿ ಬಿಡುತ್ತಾರೆ ಎಂಬ ಅಭಿಪ್ರಾಯ ಮನೆ ಮಂದಿಯಲ್ಲಿ ಇತ್ತು. ಅದನ್ನು ಹೊರಗೆ ಹಾಕಿದ್ದರು. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಮತ್ತು ಆರ್ಯವರ್ಧನ್ ಈ ಮೂರು ಜನ ಮನೆಯಲ್ಲಿ ಒಂದು ಟೀಂ ಆಗಿದ್ದರು. ಬೆಸ್ಟ್ ಫ್ರೆಂಡ್ಸ್ ಅಂತಾನೇ ಗುರುತಿಸಿಕೊಂಡಿದ್ದರು. ಆದರೆ ಒಮ್ಮೆ ಪತ್ರದ ಮೂಲಕ ಮನದಾಳದ ಮಾತನ್ನು ತಿಳಿಸಿ ಎಂದಾಗ, ರೂಪೇಶ್ ಹಾಗೂ ಆರ್ಯವರ್ಧನ್ ಬಗ್ಗೆ ಫೇಕ್ ಎಂಬ ರೀತಿಯ ಪದಗಳನ್ನು ಬಳಕೆ ಮಾಡಿದ್ದರು. ಅಲ್ಲಿಂದ ಮೂವರಲ್ಲೂ ಕೊಂಚ ಮನ:ಸ್ತಾಪ ಉಂಟಾಗಿತ್ತು. ಇದು ಮನೆಯವರಿಗೂ ಬೇಸರ ತರಿಸಿತ್ತು.

ಹಾಡು ಪ್ಲಸ್ ಪಾಯಿಂಟ್ ಆಗಿತ್ತು
ಬಿಗ್ ಬಾಸ್ ಮನೆಯಲ್ಲಿ ಎಂಟರ್ಟೈನ್ಮೆಂಟ್ ಬಹಳ ಮುಖ್ಯವಾಗುತ್ತದೆ. ಫೋನ್ ಇರಲ್ಲ, ಟಿವಿ ಇರಲ್ಲ ಅಷ್ಟೇ ಯಾಕೆ ಬಿಗ್ ಬಾಸ್ ಮನೆ ಬಿಟ್ಟರೆ ಬೇರೆ ಕಡೆ ಹೋಗುವಂತಿಲ್ಲ. ಹೀಗಾಗಿ ಮನೆಯೊಳಗಿರುವವರು ತಮ್ಮ ಕಲೆಯನ್ನು ಬಳಸಿಕೊಂಡು ಮನರಂಜನೆ ನೀಡಬೇಕಾಗಿತ್ತು. ರಾಜಣ್ಣ ಹಾಡಿನ ಮೂಲಕ ಎಲ್ಲರನ್ನು ರಂಜಿಸುತ್ತಾ ಇದ್ದರು. ಮನೆಗೆ ಬಂದ ಪೋಷಕರು ಕೂಡ ಅವರ ಹಾಡನ್ನು ಮೆಚ್ಚಿದ್ದರು. ಒಂದು ಹಾಡು ಹೇಳಿ ಅಂತ ಮನವಿ ಮಾಡುತ್ತಿದ್ದರು. ಕಿಚ್ಚ ಕೂಡ ವೇದಿಕೆ ಮೇಲೆಯೇ ಅವರ ಕಂಠಕ್ಕೊಂದು ಮೆಚ್ಚುಗೆ ಸೂಚಿಸಿದ್ದರು. ಜೊತೆಗೆ ಟಾಸ್ಕ್ ಗಳಲ್ಲೂ ಅಷ್ಟೇ ತುಂಬಾ ಆಕ್ಟೀವ್ ಆಗಿ ಆಡಿದ್ದಾರೆ.

ರಾಜಣ್ಣ ಕೈಗೆ ಸಿಕ್ಕರೆ ವಸ್ತುಗಳು ಪೀಸ್ ಪೀಸ್
ಮನೆಯಲ್ಲಿರುವ ವಸ್ತುಗಳನ್ನು ಹಾಳು ಮಾಡಿದರೆ ಬಿಗ್ ಬಾಸ್ ಖಂಡಿತ ಶಿಕ್ಷೆ ನೀಡುತ್ತದೆ. ಇರುವಷ್ಟು ದಿನ ಆ ಮನೆಯ ಜವಾಬ್ದಾರಿ ಸದಸ್ಯರದ್ದೇ ಆಗಿರುತ್ತದೆ. ಆದ್ರೆ ರಾಜಣ್ಣ ಮನೆಯೊಳಗಿನ ವಸ್ತುಗಳನ್ನು ಹಾಳು ಮಾಡುವುದರಲ್ಲಿ ಮೊದಲಿಗರಾಗಿದ್ದರು. ಅದಕ್ಕೆಂದೇ ಮನೆಯವರು ಭಯ ಬೀಳುತ್ತಿದ್ದರು.

ರಾಜಣ್ಣ ಗೆಲ್ಲುತ್ತಾರಾ..?
ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಗಾಗಲಿ, ನಟನೆಯ ಕ್ಷೇತ್ರಕ್ಕಾಗಲೀ ಹೊಸಬರೇ. ಪ್ರವೀಣರ ಜೊತೆಗೆ ಫೈನಲ್ ತನಕ ಬರುವುದು ಸುಲಭದ ಮಾತಲ್ಲ. ಟಾಸ್ಕ್ ವಿಚಾರದಲ್ಲಾಗಲೀ, ಮನರಂಜನೆಯ ವಿಚಾರದಲ್ಲಾಗಲೀ ಹಿಂದೆ ಬಿದ್ದಿಲ್ಲ. ಜೊತೆಗೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಹೀಗಾಗಿ ರಾಜಣ್ಣ ಕೂಡ ಬಿಗ್ ಬಾಸ್ ವಿನ್ನರ್ ಆಗಬಹುದು ಎನ್ನಲಾಗುತ್ತಿದೆ.


Click it and Unblock the Notifications











