ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
ಅಭಿನಯದ ತುಡಿತವಿದ್ದು ಅದೆಷ್ಟೋ ಜನ ತಮ್ಮ ಕೆಲಸವನ್ನು ತ್ಯಜಿಸಿದರೆ, ಇನ್ನು ಕೆಲವರು ವಿದ್ಯಾಭ್ಯಾಸವನ್ನು ಮಾಡುತ್ತಲೇ ಕಲಾ ಸೇವೆಗಿಳಿಯುತ್ತಾರೆ. ಕೆಲವರ ಪಾಲಿಗೆ ಇದು ಆಯಸ್ಕಾಂತದಂತೆ ಆಕರ್ಷಣೀಯ. ನಟನೆಗೆ ಹೆಣ್ಣು ಗಂಡೆಂಬ ಭೇದವಿಲ್ಲ.
ಪ್ರತಿಭೆಗನುಸಾರ ಹೆಸರು ಗಳಿಸಬಹುದಾದ ಈ ರಂಗದಲ್ಲಿ ಎಲ್ಲರಿಗೂ ಖ್ಯಾತರಾಗಬೇಕೆನ್ನುವ ಆಸೆ, ತಮ್ಮಿಂದ ಪರರು ಏನನ್ನಾದರೂ ಉತ್ತಮವಾದುದನ್ನು ತಿಳಿಯಬೇಕೆನ್ನುವ ಬಯಕೆ. ಹೀಗಿರುವಾಗ ಕನ್ನಡ ಧಾರಾವಾಹಿಯ ಮೂಲಕವೂ ಬಾಲಕಲಾವಿದೆಯರಾಗಿ ಅಭಿನಯಕ್ಕಿಳಿದ ಹಲವರು ನಮ್ಮಲ್ಲಿದ್ದಾರೆ. ಕೆಲವರಿಗೆ ಅಚಾನಕ್ ಆಗಿ ನಟಿಸುವ ಅವಕಾಶ ಸಿಗುತ್ತದೆ. ಕೆಲವರಿಗೆ ಎಷ್ಟೇ ಸೈಕಲ್ ಹೊಡೆದರೂ ಅವಕಾಶ ಸಿಗಲ್ಲ. ಸಿಕ್ಕಿದರೂ ದೊಡ್ಡಮಟ್ಟದ ಯಶಸ್ಸು ಅಷ್ಟು ಸುಲಭ ಅಲ್ಲ.
ಬಣ್ಣದ ಮಾಯೇ ಅಂಥಾದ್ದು. ಒಮ್ಮೆ ನಟನೆ ಗೀಳು ಹತ್ತಿಬಿಟ್ಟತೆ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಬಾಲ ನಟಿಯರಾಗಿ ಕನ್ನಡ ಕಿರುತೆರೆಗೆ ಬಂದವರು ಈಗ ದೊಡ್ಡವರಾಗಿ ಧಾರಾವಾಹಿಯ ಲೀಡ್ ರೋಲ್ಗಳಲ್ಲಿ ನಟಿಸ್ತಿದ್ದಾರೆ. ಅಂತವರ ಪರಿಚಯ ಇಲ್ಲಿದೆ ನೋಡಿ.

ಅಂಕಿತಾ ಅಮರ್ ಮೋಡಿ
ಕಲರ್ಸ್ ಕನ್ನಡ ಪ್ರೇಕ್ಷಕರಲ್ಲಿ 'ನಮ್ಮನೆ ಯುವರಾಣಿ' ಧಾರಾವಾಹಿಯನ್ನು ಅರಿಯದವರಿಲ್ಲ. ಒಂದೊಳ್ಳೆಯ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದ ಈ ಧಾರಾವಾಹಿಯಲ್ಲಿನ ಮೀರಾ ಎಂಬ ಪಾತ್ರ ಎಲ್ಲರಿಗೂ ಅಚ್ಚು ಮೆಚ್ಚು. ಈ ಪಾತ್ರವನ್ನು ನಿಭಾಯಿಸಿದ ಅಂಕಿತಾ ಅಮರ್ ಇಂದು ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಗೆಂದು ಇವರದ್ದು ಇದೇ ಮೊದಲ ಧಾರವಾಹಿಯೇನಲ್ಲ. ಹಿಂದೊಮ್ಮೆ ಮನೆ ಮನೆಯ ಧಾರಾವಾಹಿಯಾಗಿದ್ದ 'ಪುಟ್ಟಗೌರಿ ಮದುವೆ'ಯಲ್ಲಿನ ಸುಗುಣ ಪಾತ್ರವನ್ನು ನಿಭಾಯಿಸಿದ್ದು ಇದೇ ಅಂಕಿತಾ. ವಿದ್ಯಾಭ್ಯಾಸದ ಕಾರಣದಿಂದ ನಟನೆಗೆ ಸ್ವಲ್ಪ ವಿರಾಮ ನೀಡಿದ್ದ ಅಂಕಿತಾ 'ಕುಲವಧು' ಧಾರವಾಹಿಯ ಮೂಲಕ ಮತ್ತೆ ಕಿರುತೆರೆಯನ್ನು ಪ್ರವೇಶಿಸಿದರು. ತಮ್ಮ ಅದ್ಭುತ ನಟನೆಯಿಂದ ಜನ ಮೆಚ್ಚುಗೆಯನ್ನು ಗಳಿಸಿರುವ ಈ ನಟಿ ಇದೀಗ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

'ಲಕ್ಷಣ' ಕಥೆಯಲ್ಲಿ ಶ್ವೇತಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಧಾರವಾಹಿಯ ಎಲ್ಲ ಪಾತ್ರಗಳೂ ಒಂದು ರೀತಿಯಲ್ಲಿ ಜನಮನವನ್ನು ತಲುಪಿದವೇ ಆಗಿದ್ದವು. ಇದರ ಮೂಲಕ ಮನಗೆದ್ದವರಲ್ಲಿ ಅಂಜಲಿ ಪಾತ್ರದ ಸುಕೃತಾ ನಾಗ್ ಕೂಡ ಒಬ್ಬರು. ಬಾಲಕಲಾವಿದೆಯಾಗಿ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಮುಂದೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಶ್ವೇತಾ ಆಗಿ ಅಭಿನಯಿಸುತ್ತಿದ್ದಾರೆ.

ಬಿಗ್ಬಾಸ್ ಮನೆಯಲ್ಲೂ ಸಾನ್ಯಾ ಹವಾ
ಇತ್ತೀಚೆಗೆ ಬಿಗ್ ಬಾಸ್ನ ಮೂಲಕ ಮತ್ತೆ ಟ್ರೆಂಡಿನಲ್ಲಿರುವ ಸಾನಿಯಾ ಕನ್ನಡಿಗರಿಗೆ ಹೊಸ ಪರಿಚಯವಲ್ಲ. 'ಸಾಕ್ಷಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸಾನಿಯಾ ಅಯ್ಯರ್, ನಟಿ ರೂಪಾ ಅಯ್ಯರ್ ಅವರ ಪುತ್ರಿ. ಸಾನಿಯಾಗೆ ಕನ್ನಡ ಕಿರುತೆರೆಯಲ್ಲಿ ಉತ್ತಮ ಇಮೇಜನ್ನು ತಂದುಕೊಟ್ಟ ಧಾರವಾಹಿ ಎಂದರೆ ಅದು 'ಪುಟ್ಟಗೌರಿ ಮದುವೆ'. ಪುಟ್ಟಗೌರಿ ಪಾತ್ರದ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದ ನಟಿ ಅದಲ್ಲದೆ 'ಕುಸುಮಾಂಜಲಿ', 'ಸಿಂಧೂರ' ,'ನಮ್ಮೂರ ಶಾರದೆ' ,'ಅರಸಿ' ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇನ್ನು ಇವರು ಸಿನಿಮಾ ರಂಗಕ್ಕೂ ಹೊಸಬರೇನಲ್ಲ. 'ಅನು', 'ವಿಮುಕ್ತಿ', 'ಬೆಳಕಿನೆಡೆಗೆ' ಸೇರಿದಂತೆ ಹಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಶಿವಾನಿಯಾಗಿ ನಮ್ರತಾ ಕಮಾಲ್
'ನಾಕುತಂತಿ' ಧಾರಾವಾಹಿಯ ಮೂಲಕ ಅಭಿನಯ ರಂಗಕ್ಕೆ ಕಾಲಿಟ್ಟ ನಮೃತಾ ಗೌಡ ಇಂದು ಶಿವಾನಿಯಾಗಿ ಮಿಂಚುತ್ತಿದ್ದಾರೆ. ಹೌದು, 'ನಾಗಿಣಿ- 2' ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಶಿವಾನಿ ಬಾಲಕಲಾವಿದೆಯಾಗಿ ಕಿರುತೆರೆಗೆ ಪ್ರವೇಶಿಸಿದವರು. ಇವರು ಕೂಡ ವಿದ್ಯಾಭ್ಯಾಸದೊಂದಿಗೆಯೇ ನಟನೆಯನ್ನು ನಿಭಾಯಿಸಿದವರು. 'ನಾಕುತಂತಿ'ಯ ನಂತರ ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಧಾರಾವಾಹಿ 'ಸಿಲ್ಲಿ-ಲಲ್ಲಿ'ಯಲ್ಲೂ ಅಭಿನಯಿಸಿದ್ದರು. ಅಲ್ಲದೆ 'ವಾತ್ಸಲ್ಯ', 'ಚೆಲುವಿ', 'ಆಕಾಶ ದೀಪ' ಧಾರಾವಾಹಿಗಳಲ್ಲಿ ಉತ್ತಮ ಪಾತ್ರವನ್ನು ನಿಭಾಯಿಸಿದ್ದರು.


Click it and Unblock the Notifications











