ಕೃಷ್ಣನನ್ನು ಅರಸಿ ದೆಹಲಿಗೆ ಬಂದ ಬೆಂಗಳೂರು ಗೋಪಿಕೆ ಪೊಲೀಸರ ವಶದಲ್ಲಿ!
ಸಿನಿಮಾ, ಟಿವಿ ನಟ-ನಟಿಯರ ಮೇಲೆ ಅಭಿಮಾನ ಸಾಮಾನ್ಯ. ಮೆಚ್ಚಿನ ನಟ-ನಟಿಯರನ್ನು ಒಮ್ಮೆ ಭೇಟಿ ಮಾಡಬೇಕು ಎಂಬ ಆಸೆ ಬಹುತೇಕ ಅಭಿಮಾನಿಗಳಿಗೆ ಇರುವುದೇ. ಆದರೆ ಬೆಂಗಳೂರಿನ 13 ವರ್ಷದ ಪೋರಿಯೊಬ್ಬಾಕೆ ಮೆಚ್ಚಿನ ನಟನನ್ನು ನೋಡಲು ಮನೆಯವರಿಗೆ ತಿಳಿಸದೇ ದೆಹಲಿ ರೈಲು ಹತ್ತಿದ್ದಾಳೆ!
ಹೌದು, ಟಿವಿಯಲ್ಲಿ ಪ್ರಸಾವಾಗುತ್ತಿರುವ 'ರಾಧಾ-ಕೃಷ್ಣ' ಧಾರಾವಾಹಿಯಲ್ಲಿ ಕೃಷ್ಣನ ಸುಂದರತೆಗೆ ಮಾರುಹೋಗಿ ಆತನನ್ನು ಅರಸಿ ಬೆಂಗಳೂರಿನಿಂದ ಒಂಟಿಯಾಗಿ ದೆಹಲಿಗೆ ಹೋಗಿದ್ದಾಳೆ.
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿಯು ಕೃಷ್ಣನನ್ನು ನೋಡಲೆಂದು ಬೆಂಗಳೂರಿನಲ್ಲಿ ಮನೆ ಬಿಟ್ಟು, ದೆಹಲಿಗೆ ರೈಲು ಹತ್ತಿದ್ದಾಳೆ. ಆಕೆಯ ವರ್ತನೆ, ಆಕೆಯ ಬಳಿ ಲಗೇಜು ಇಲ್ಲದಿರುವುದು, ಊಟ-ತಿಂಡಿಗೆ ಹಣ ಇಲ್ಲದಿರುವುದು ಗಮನನಿಸಿದ ಪ್ರಯಾಣಿಕರಿಗೆ ಅನುಮಾನ ಬಂದಿದೆ.

ಆಕೆಯ ಬಗ್ಗೆ ವಿಚಾರಿಸಿದ ಪ್ರಯಾಣಿಕರಿಗೆ, ತಾನು ದೆಹಲಿಯಲ್ಲಿ ಅಜ್ಜಿಯ ಮನೆಯಲ್ಲಿದ್ದೆ. ನಂತರ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿದ್ದೆ. ಈಗ ದೆಹಲಿಗೆ ವಾಪಸ್ ಹೋಗುತ್ತಿದ್ದೇನೆ ಎಂದಿದ್ದಾಳೆ. ಆಕೆಯ ಉತ್ತರದಿಂದ ತೃಪ್ತರಾಗದ ಪ್ರಯಾಣಿಕರು, ರೈಲ್ವೆ ಪೊಲೀಸರಿಗೆ ಆಕೆಯನ್ನು ಒಪ್ಪಿಸಿದ್ದಾರೆ.
ರೈಲ್ವೆ ಪೊಲೀಸರು ಬಾಲಕಿಯನ್ನು ವಿಚಾರಿಸಲಾಗಿ, 'ರಾಧಾ-ಕೃಷ್ಣ' ಧಾರಾವಾಹಿಯಲ್ಲಿ ರಾಧೆಯು ಕೃಷ್ಣನನ್ನು ಹುಡುಕಿ ಬೇರೆಡೆ ಹೋಗುತ್ತಾಳೆ. ಅದರಿಂದ ಪ್ರೇರಣೆಗೊಂಡು ನಾನು ಕೃಷ್ಣ ಪಾತ್ರಧಾರಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ' ಎಂದು ಹೇಳಿದ್ದಾಳೆ.
ಇತ್ತ ಬೆಂಗಳೂರಿನಲ್ಲಿ ಬಾಲಕಿಯ ಪೋಷಕರು ಮಗಳು ಕಾಣದಿದ್ದುದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ರೈಲ್ವೆ ಪೊಲೀಸರು, ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದು, ಬಾಲಕಿಯ ಪೋಷಕರು ಮಗಳನ್ನು ಕರೆದೊಯ್ಯಲು ದೆಹಲಿಗೆ ಹೋಗುತ್ತಿದ್ದಾರೆ.
ಆನ್ಲೈನ್ ತರಗತಿಗೆಂದು ಬಾಲಕಿಯ ಪೋಷಕರು ಮೊಬೈಲ್ ಕೊಡಿಸಿದ್ದರು. ಆದರೆ ಬಾಲಕಿಯು ಧಾರಾವಾಹಿ ವೀಕ್ಷಣೆ, ಸಾಮಾಜಿಕ ಜಾಲತಾಣ ವೀಕ್ಷಣೆಯಲ್ಲಿಯೇ ಸಮಯ ಕಳೆಯುತ್ತಿದ್ದಳು ಎನ್ನಲಾಗಿದೆ.


Click it and Unblock the Notifications











