Bettada Hoo: ಇಕ್ಕಟ್ಟಿನಲ್ಲಿ ಹೂವಿ : ಸತ್ಯ ಹೇಳುತ್ತಾನಾ ರಾಹುಲ್..?
ಇಂಥದ್ದೊಂದು ಪರಿಸ್ಥಿತಿ ಯಾವತ್ತು ಬರಬಾರದು ಎಂದುಕೊಳ್ಳುತ್ತಿರುವಾಗಲೇ ರಾಹುಲ್ ಮತ್ತು ಹೂವಿಯ ಗಮನಕ್ಕೆ ಬಾರದೆ ಬಂದೇ ಬಿಟ್ಟಿದೆ. ಸತ್ಯ ಅನ್ನೋದು ಹೆಚ್ಚು ದಿನ ಮುಚ್ಚಿಡುವುದಕ್ಕೆ ಆಗೋದಿಲ್ಲ. ಒಂದಲ್ಲ ಒಂದು ದಿನ ಅದು ಹೊರಬೀಳಲೇಬೇಕು. ಇವತ್ತು ಹೂವಿ ಮತ್ತು ರಾಹುಲ್ ಜೀವನದಲ್ಲಿಯೂ ಅದೇ ನಡೆದಿದೆ.
ಯಾರಿಗೂ ಗೊತ್ತಾಗದಂತೆ ಹೂವಿ ಏನೋ ವ್ರತ ಮಾಡಿ ಮುಗಿಸಿಕೊಂಡು ಬಂದಿದ್ದಾಳೆ. ಮುತ್ತೈದೆಯರಿಗೆ ಬಾಗಿನ ಕೊಟ್ಟು, ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಒಳ್ಳೆಯದಾಗಲಿ ಎಂದು ಕಠಿಣ ವ್ರತ ಮಾಡಿದ್ದಾಳೆ. ಅದೆಲ್ಲವನ್ನೂ ಮನೆಯವರು ನೋಡಿದ್ದಾರೆ. ಈಗ ಎಲ್ಲರೆದುರು ಸತ್ಯ ತಿಳಿಯಲು ಕಾಯುತ್ತಿದ್ದಾರೆ.

ಹೂವಿಗಾಗಿ ಕಾಯುತ್ತಿರುವ ಮನೆಯವರು
ಹೂವಿಯ ವ್ರತವನ್ನು ಮನೆಯವರೆಲ್ಲ ನೋಡಿದ್ದು ಆಗಿದೆ.ಗಾಬರಿಯಾಗಿದ್ದು ಆಗಿದೆ. ಈಗ ಅದಕ್ಕೆಲ್ಲ ಉತ್ತರ ಪಡೆಯಬೇಕು ಎಂದರೆ ಹೂವಿ ಬಳಿಯೇ ಪಡೆಯಬೇಕಾಗಿದೆ. ಅದಕ್ಕೂ ಮುನ್ನ ಮನೆಯವರೆಲ್ಲಾ ಕೋಪದಲ್ಲಿಯೇ ಕುಳಿತಿದ್ದಾರೆ. ಅಷ್ಟು ನಂಬಿದ್ದರು ಹೂವಿ ನಮ್ಮ ಬಳಿ ಸತ್ಯ ಮುಚ್ಚಿಟ್ಟು ಬಿಟ್ಟಳಲ್ಲ ಎಂಬ ಕೋಪ ಅವರಲ್ಲಿ ಎದ್ದು ಕಾಣುತ್ತಿದೆ. ರಾಹುಲ್, ದೀಪ್ತಿ ಏನೇ ಕೇಳಿದರೂ ಉತ್ತರ ಬರುತ್ತಿಲ್ಲ. ರಾಹುಲ್ಗೆ ನಿಂತಲ್ಲಿಯೇ ಹೆದರಿಕೆಯಾಗುತ್ತಿದೆ.

ಹೂವಿಯ ಪರ ನಿಂತ ರಾಹುಲ್
ಮನೆಯವರೆಲ್ಲಾ ಫುಲ್ ಸೀರಿಯಸ್ ಆಗಿ ಹೂವಿಗಾಗಿ ಕಾಯುತ್ತಾ ಇದ್ದರು. ಅದರಂತೆ ಹೂವಿಯ ಎಂಟ್ರಿ ಕೂಡ ಆಯ್ತು. ಅಷ್ಟು ಕೇಳಿಕೊಂಡರು ಮಾತನಾಡದವರು ಹೂವಿಗಾಗಿ ಕಾಯುತ್ತಿದ್ದನ್ನು ಕಂಡು ದೀಪ್ತಿ ಹಾಗೂ ರಾಹುಲ್ಗೆ ಆತಂಕವಾಗಿತ್ತು. ಹೂವಿ ಬಂದೋಡನೆ, ಎಲ್ಲಿ ಹೋಗಿದ್ದೆ..? ಯಾಕೆ ಹೋಗಿದ್ದೆ..? ಹೀಗೆ ನಾನಾ ಪ್ರಶ್ನೆಗಳನ್ನು ಕೇಳುವುದಕ್ಕೆ ಶುರು ಮಾಡಿದರು. ಹೂವಿಗೆ ಎಲ್ಲಿ ಎಲ್ಲವೂ ಗೊತ್ತಾಯ್ತೋ ಎಂಬ ಭಯಕ್ಕೆ ಕೈಯೆಲ್ಲಾ ನಡುಗುತ್ತಾ ಇತ್ತು. ತಕ್ಷಣಕ್ಕೆ ರಾಹುಲ್, ಹೂವಿಯ ಬೆಂಬಲಕ್ಕೆ ಬಂದ. "ಯಾಕೆ ಅವಳನ್ನು ಎಲ್ಲರೂ ಅಷ್ಟೊಂದು ಪ್ರಶ್ನೆ ಮಾಡುತ್ತಾ ಇದ್ದೀರಾ. ನೋಡಿ ಅವಳು ಎಷ್ಟೊಂದು ಹೆದರಿದ್ದಾಳೆ. ಹೂವಿ ನೀನು ಒಳಗಡೆ ಹೋಗು" ಅಂತ ರಾಹುಲ್ ಕಳುಹಿಸುವುದಕ್ಕೆ ಹೊರಟಾಗ ದೊಡ್ಡಮ್ಮ ತಡೆದು ನಿಲ್ಲಿಸಿದ್ದಾರೆ.

ತಾಳಿ ಕಂಡು ಉಳಿದವರು ಶಾಕ್
ದೇವಸ್ಥಾನದಲ್ಲಿ ಹೂವಿ ಏನೆಲ್ಲಾ ಮಾಡಿದಳು ಎಂಬುದು ಮನೆಯವರು ಕಣ್ಣಾರೆ ನೋಡಿದ್ದರು. ಎಷ್ಟೇ ಕೇಳಿದರು ಸತ್ಯ ಬಾಯಿ ಬಿಡುವುದಕ್ಕೆ ಹೂವಿ ಸಿದ್ದಳಿರಲಿಲ್ಲ. ಆದರೆ ರಾಹುಲ್ ದೊಡ್ಡಮ್ಮ ಬಿಡುವುದಕ್ಕೂ ಸಿದ್ದಳಿರಲಿಲ್ಲ. ಹೀಗಾಗಿ ದೊಡ್ಡಮ್ಮನೇ ಹೋಗಿ ಹೂವಿ ಸ್ವೆಟರ್ನಲ್ಲಿ ಮುಚ್ಚಿಟ್ಟಿದ್ದ ತಾಳಿಯನ್ನು ಹೊರತೆಗೆದರು. ಎಲ್ಲರಿಗೂ ಗೊತ್ತಿದ್ದ ಸತ್ಯವಾಗಿದ್ದರಿಂದ ಮುಂದೇನು ಎಂಬ ಆತಂಕವೇ ಜಾಸ್ತಿಯಾಗಿತ್ತು.

ಹೂವಿಗೆ ಸತ್ಯ ಹೇಳದೆ ದಾರಿಯಿಲ್ಲ
ದೀಪ್ತಿ ಮತ್ತು ರಾಹುಲ್ ಸದಾ ಹೂವಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದು ಮನೆಯವರಿಗೆ ಗೊತ್ತು. ಅದಕ್ಕೆಂದೆ ಮೊದಲೇ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. "ಇದು ನಂದೇ ತಾಳಿ. ಹೂವಿ ಬಳಿ ಇತ್ತು ಎಂಬೆಲ್ಲಾ ಸುಳ್ಳುಗಳು ಈಗ ನಡೆಯಲ್ಲ. ಏನೇ ಇದ್ದರೂ ಸತ್ಯವನ್ನು ಹೇಳಲೇಬೇಕೆಂದು" ದೊಡ್ಡಮ್ಮ ಹಠ ಮಾಡಿದ್ದಾರೆ. ಹೂವಿಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ರಾಹುಲ್ ಕೂಡ ಗಾಬರಿಯಾಗಿದ್ದಾನೆ. ಚಾಂದಿನಿಯೆ ಹೆಣೆದ ಬಲೆಯಾಗಿರುವ ಕಾರಣ ಮಜಾ ತೆಗೆದುಕೊಳ್ಳುತ್ತಿದ್ದಾಳೆ. ಮಾಲಿನಿಗೆ ಕೂಡ ಕುತೂಹಲ ಜೊತೆಗೆ ಸ್ವಲ್ಪ ಭಯವೂ ಇದ್ದಂತೆ ಕಾಣುತ್ತಿದೆ. ಆದರೆ ಈಗ ರಾಹುಲ್, ಹೂವಿಯನ್ನು ಕಾಪಾಡುತ್ತಾನಾ ಅಥವಾ ಹೂವಿಯೇ ಮತ್ತೊಂದು ಸುಳ್ಳನ್ನು ಹೇಳುತ್ತಾಳಾ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.


Click it and Unblock the Notifications











