Bhagyalakshmi: ಕುಸುಮಾ - ಭಾಗ್ಯಾ ಬುದ್ದಿವಂತಿಕೆಯ ಮುಂದೆ ಕನ್ನಿಕಾ ಆಟ ನಡೆಯುತ್ತಾ?
ಭಾಗ್ಯಾ ಸ್ಕೂಲಿಗೆ ಹೋಗಬಾರದು, ಎಸ್ಎಸ್ಎಲ್ಸಿ ಪಾಸ್ ಆಗಬಾರದು ಅಂತ ತಾಂಡವ್ ಪಟ್ಟ ಪ್ರಯತ್ನವೇನು ಕಡಿಮೆ ಇರಲಿಲ್ಲ. ಭಾಗ್ಯಾ ತುಂಬಾ ಬುದ್ದಿವಂತಿಕೆ, ಬೆರಳು ಕೊಟ್ಟರೆ ಹಸ್ತವನ್ನೇ ನುಂಗುವಷ್ಟು ಬುದ್ಧಿವಂತಿಕೆ ಅವಳಲ್ಲಿ ಇದೆ ಎಂಬುದು ಅತ್ತೆ ಕುಸುಮಾಗೆ ಗೊತ್ತಿತ್ತು. ಹೀಗಾಗಿಯೇ ಮಗನನ್ನೇ ದೂರ ಮಾಡಿಕೊಂಡರು ಚಿಂತೆ ಇಲ್ಲ ಎಂಬಂತೆ ಸೊಸೆಯ ಪರವಾಗಿ ನಿಂತಳು.
ಸೊಸೆಯ ಒಳ್ಳೆಯತನ, ಜಾಣತನವೇ ಅತ್ತೆ-ಸೊಸೆಗೆ ಸಾಕಷ್ಟು ಸನ್ಮಾನಕ್ಕೆ ದಾರಿ ಮಾಡಿಕೊಟ್ಟಿತ್ತು. ಮನೆಯಲ್ಲಿ ಗಂಡನೇ ಶತ್ರುವಾದರೆ ಶಾಲೆಯಲ್ಲಿ ಆಡಳಿತ ಮಂಡಳಿಯ ಒಬ್ಬಾಕೆಯೂ ಶತ್ರುವೆ ಸರಿ. ಕನ್ನಿಕಾಳ ಕುತಂತ್ರಕ್ಕೆ ತನ್ವಿ ಹಾಗೂ ಭಾಗ್ಯಾಳ ಭವಿಷ್ಯ ಬೀದಿಗೆ ಬಂದಿತ್ತು. ಆದರೆ ಅತ್ತೆಯ ಬುದ್ದಿವಂತಿಕೆ ಸೊಸೆಯನ್ನು ಕಾಪಾಡುವಂತೆ ಮಾಡಿದೆ.

ಭಾಗ್ಯಾಳ ಮೇಲೆ ಕಾಪಿ ಹೊಡೆದ ಆರೋಪ
ಭಾಗ್ಯಾ ಎಸ್ಎಸ್ಎಲ್ಸಿ ಪರೀಕ್ಷೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡೆ ಬಂದಿದ್ದಳು. ಅಮ್ಮನ ಮುಂದೆ ಸೋಲಬಾರದು ಅಂತ ಹೇಳಿ ತನ್ವಿ ಕೂಡ ಚೆನ್ನಾಗಿಯೇ ಓದಿದ್ದಳು. ಕನ್ನಿಕಾಗೆ ಚೆನ್ನಾಗಿ ಗೊತ್ತಿತ್ತು. ಭಾಗ್ಯಾ ಫಸ್ಟ್ ಕ್ಲಾಸ್ ಬಂದೇ ಬರುತ್ತಾಳೆ ಅಂತ. ಹೀಗಾಗಿಯೇ ಪ್ಲ್ಯಾನ್ ಮಾಡಿ, ಅಮ್ಮ ಮಗಳ ಮೇಲೆ ಕಾಪಿ ಚೀಟಿ ಆರೋಪ ಬರುವಂತೆ ಮಾಡಿ, ಪರೀಕ್ಷಾ ಕೇಂದ್ರದಿಂದಾನೇ ಹೊರ ಹಾಕಿಸಿದ್ದಾಳೆ.
ಪಪ್ಪನ ಮಾತಿಂದ ತನ್ವಿಗೆ ನೋವು
ತನ್ವಿ ನೋವು ಮಾಡಿಕೊಂಡು ಹೊರಗೆ ಬಂದಾಗ ತಾಂಡವ್ ಎದುರಿಗೆ ಕಂಡ. ಪಪ್ಪನ ಬಳಿ ಸಂಕಟ ಹೇಳಿಕೊಳ್ಳುವಾಗಲೇ ತಾಂಡವ್, ಇಬ್ಬರ ಮೇಲೂ ಅನುಮಾನ ಪಟ್ಟಿದ್ದಾನೆ. ಇದು ತನ್ವಿಗೆ ಕೊಂಚವೂ ಇಷ್ಟವಾಗಲಿಲ್ಲ. ಪಪ್ಪನ ಬಳಿಯೂ ಆ ರೀತಿ ಎಲ್ಲಾ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ತಾಂಡವ್ ಗೆ ಅವಕಾಶ ಸಿಕ್ಕಿದರೆ ಸಾಕು ಭಾಗ್ಯಾಳನ್ನು ನಿಂದಿಸುತ್ತಲೇ ಇರುತ್ತಾನೆ. ಆದರೆ ಈ ವಿಚಾರದಲ್ಲಿ ಭಾಗ್ಯಾ ಕೂಡ ಸುಮ್ಮನೆ ಇರುವವಳಲ್ಲ. ಎಲುಬಿಲ್ಲದ ನಾಲಿಗೆ ಅಂತ ಹರಿಬಿಟ್ಟ ತಾಂಡವ್ ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.

ತಾಂಡವ್ ಮಾತಿನಿಂದ ಸಿಕ್ಕಿತು ಸುಳಿವು
ತಾಂಡವ್ ಯಾರ ಮಾತನ್ನು ಕೇಳದೆ ಒಂದೇ ಸಮನೆ ರೇಗುತ್ತಿದ್ದ. ನೀವಲ್ಲದೇ ಬೇರೆ ಯಾರಾದರೂ ಬಂದು ಬರೆದು ಹೋಗಿ ಬಿಡುತ್ತಾರಾ ಅಂತ. ಆ ಮಾತನ್ನು ಅತ್ತೆ ಸೊಸೆ ಇಬ್ಬರು ಆಲಿಸಿದರು, ಸೂಕ್ಷ್ಮವಾಗಿ ಚಿಂತನೆ ಮಾಡಿದರು. ಕಡೆಗೆ ಕನ್ನಿಕಾಳ ಮೇಲೆಯೇ ಅನುಮಾನ ಬಂತು. ಮೊದಲೇ ಕನ್ನಿಕಾಗೆ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ತನ್ವಿಯದ್ದು ಸೇರಿ ಸಮಸ್ಯೆ ಮಾಡಿದ್ದಾಳೆ ಅಂತ ಕುಸುಮಾಗೆ ಅನ್ನಿಸಿದೆ. ಇದರ ಜಾಡು ಹಿಡಿದು ಅತ್ತೆ ಸೊಸೆ ಹೊರಟಿದ್ದಾರೆ.
ಕನ್ನಿಕಾಳಿಗೆ ಬುದ್ದಿ ಕಲಿಸುತ್ತಾಳಾ ಭಾಗ್ಯಾ..?
ಕುಸುಮಾ ಹಾಗೂ ಭಾಗ್ಯಾ ತಪ್ಪಿತಸ್ಥರ ಹುಡುಕಾಟಕ್ಕೆ ಹೊರಟಾಗ ಕಣ್ಣಿಗೆ ಬಿದ್ದಿದ್ದೆ ತಪ್ಪು ಮಾಡಿದವನು. ಬೆಂಚ್ ಮೇಲೆ ಹಾಲ್ ಟಿಕೆಟ್ ನಂಬರ್ ಬರೆಯುವಾತನನ್ನು ವಿಚಾರಿಸಲು ಹೊರಟರು. ಆತ ಮೊದಲೇ ಕೊಂಚ ಗಾಬರಿಯಾದ. ಆದರೂ ಹಣ ತೆಗೆದುಕೊಂಡಿದ್ದನಲ್ಲ, ಹೀಗಾಗಿ ಸ್ವಲ್ಪ ನಡುಗಿದ. ಜೋರಾಗಿ ಗದರಿಸುವ ಪ್ರಯತ್ನ ಮಾಡಿದ. ಅಷ್ಟರಲ್ಲಿ ಕನ್ನಿಕಾಳ ಫೋನ್ ಆತನ ಮೊಬೈಲ್ಗೆ ಬಂತು. ಭಾಗ್ಯಾಳೆ ಕಿತ್ತುಕೊಂಡು, ಆ ಕಡೆಯಿಂದ ಬಂದ ಪ್ರಶ್ನೆ ಕೇಳಿಸಿಕೊಂಡಳು. ಉತ್ತರವೂ ಸಿಕ್ಕಿತ್ತು. ಕನ್ನಿಕಾಗೆ ಉತ್ತರವನ್ನು ಕೊಟ್ಟಳು. ಅಷ್ಟಕ್ಕೆ ಕನ್ನಿಕಾ ಕೂಡ ಗಾಬರಿಯಾದಳು, ಇತ್ತ ಹಾಲ್ ಟಿಕೆಟ್ ಬರೆದಾತನು ಭಯಕ್ಕೆ ಓಡಿ ಹೋಗಿದ್ದಾನೆ.


Click it and Unblock the Notifications











