Bhagyalakshmi: ತಾಂಡವ್ ಮೇಲೆ ಮನೆಯವರಿಗೆ ಅನುಮಾನ: ಗಂಡನನ್ನು ಪ್ರಶ್ನೆ ಮಾಡಿದ ಭಾಗ್ಯ
ಶ್ರೇಷ್ಠ ಹಾಗೂ ತಾಂಡವ್ ನಾಟಕ ಕೊನೆಗೂ ಬಯಲಾಗಲೇ ಇಲ್ಲ. ಇದಂತೂ ಪ್ರೇಕ್ಷಕರಿಗೆ ಬಹಳ ನಿರಾಸೆ ಉಂಟು ಮಾಡಿದೆ. ಪ್ರೇಕ್ಷಕರು ತಾಂಡವ್ ಹಾಗೂ ಶ್ರೇಷ್ಠ ಈಗ ಸಿಕ್ಕಿ ಬೀಳ್ತಾರೆ, ಆಗ ಸಿಕ್ಕಿ ಬೀಳ್ತಾರೆ ಎಂದು ಕಾತುರದಿಂದ ಕಾಯುತ್ತಾ ಇದ್ದರು. ಆದರೆ ಪ್ರೇಕ್ಷಕರ ಆಸೆ ಈಡೇರಲೇ ಇಲ್ಲ.
ಶ್ರೇಷ್ಠ ತನ್ನ ತಂದೆ ತಾಯಿಯನ್ನು ತಾಂಡವ್ ಮನೆಯ ಹಿಂಬಾಗಿಲ ಮೂಲಕ ಮನೆಯಿಂದ ಕರೆದುಕೊಂಡು ಹೋಗಿದ್ದಾಳೆ. ಈ ಮೂಲಕ ತಾಂಡವ್ ಕಳ್ಳಾಟ ಬಯಲು ಆಗಲೇ ಇಲ್ಲ. ಸದ್ಯಕ್ಕೆ ತಾಂಡವ್ ನೂರೆಂಟು ನಾಟಕವಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾನೆ.
ಈ ಕಡೆ ಮನೆಯೊಳಗೆ ಕುಸುಮಾ ಹಾಗೂ ಸುನಂದಾ ಬರುವ ವೇಳೆಗೆ ಶ್ರೇಷ್ಠ ಸರ್ಕಸ್ ಮಾಡಿ ತನ್ನ ಮನೆಯವರನ್ನು ಕರೆದುಕೊಂಡು ಹೋಗುವಷ್ಟರಲ್ಲಿ ಸಾಕು ಸಾಕಾಗಿ ಹೋಗಿದೆ. ಕೊನೆಗೆ ಡೋರ್ ಲಾಕ್ ಆಗಿದೆ ಎಂದು ತಾಂಡವ್ ಕಾರ್ಪೆಂಟರ್ ಕರೆದುಕೊಂಡು ಬರಲು ಹೋಗಿದ್ದಾನೆ. ಬರೋದು ಲೇಟ್ ಆಗುತ್ತದೆ ಎಂದು ಮೇಸೇಜ್ ಮಾಡಿದ್ದಾನೆ. ಹಿಂದಿನ ಡೋರ್ನಲ್ಲಿ ಹೋಗೋಣ ಎಂದು ತಾಂಡವ್ ಮನೆಯಿಂದ ಶ್ರೇಷ್ಟಾ ಪೋಷಕರನ್ನು ಕರೆದುಕೊಂಡು ಹೋಗಿದ್ದಾಳೆ. ನಾವೇನು ಕಳ್ಳರಾ? ಎಂದೆಲ್ಲಾ ಶ್ರೇಷ್ಠ ತಂದೆ ಶ್ರೀವರ ಬೇಸರ ವ್ಯಕ್ತಪಡಿಸಿದ್ದಾರೆ.

ತಾಂಡವ್ಗೆ ಶ್ರೇಷ್ಠ ಕಾಲ್ ಮಾಡಿದ್ದು ಈ ವೇಳೆ ಶ್ರೇಷ್ಠ ತಂದೆ ಶ್ರೀವರ ಫೋನ್ನಲ್ಲಿ ಚೆನ್ನಾಗಿ ಬೈದು ಜೋರಾಗಿ ಕಿರುಚಾಡಿದ್ದಾರೆ. ಏನಯ್ಯ ಮನೆಗೆ ನಮ್ಮನ್ನು ಕರೆಸಿ ನೀನು ಎಲ್ಲಿಗೆ ಹೋದೆ? ಬರೀ ನಿನ್ನ ಕೆಲಸ ಇದೆ ಆಯ್ತು ನಾವು ಕಳ್ಳರ ರೀತಿ ಮನೆಯ ಹಿಂಬಾಗಿಲಿನಿಂದ ಹೋಗುವ ರೀತಿಯಲ್ಲಿ ಮಾಡಿದೆ. ಇದೇನಾ ನಿನ್ನ ಸಂಸ್ಕೃತಿ ಎಂದೆಲ್ಲ ತಾಂಡವ್ಗೆ ಛೀಮಾರಿ ಹಾಕಿದ್ದಾರೆ. ತಾಂಡವ್ಗೆ ಏನು ಹೇಳಿ ಸಮಾಧಾನ ಮಾಡಬೇಕು ಎಂಬುದೇ ತಿಳಿಯುತ್ತಾ ಇಲ್ಲ, ಸುಮ್ಮನೆ ಬೈಸಿಕೊಂಡಿದ್ದಾನೆ.
ತಾಂಡವ್ಗೆ ಪ್ರಶ್ನೆ ಮಾಡಿದ ಭಾಗ್ಯ
ಇತ್ತ ತಾಂಡವ್ಗೆ ಹನಿ ಎಂಬ ಹೆಸರಿನ ಕರೆ ಬಂದಿದ್ದು ಯಾರು ಹನಿ ಎಂದು ಭಾಗ್ಯ ಪ್ರಶ್ನೆ ಮಾಡಿದ್ದಾಳೆ. ಕೊನೆಗೆ ತಾಂಡವ್ ಅವನು ನನ್ನ ಗೆಳೆಯ ಹನೀಫ್, ನಾನು ಶಾರ್ಟ್ ಆಗಿ ಹನಿ ಎಂದು ಸೇವ್ ಮಾಡಿಕೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾನೆ. ಮತ್ತೆ ಯಾಕೆ ಫೋನ್ನಲ್ಲಿ ಕಿರುಚಾಟ ಮಾಡಿದರು ಎಂದಾಗ ಸಾವಿರ ಆಫೀಸ್ ಟೆನ್ಷನ್ ಇರುತ್ತದೆ. ಅದೆಲ್ಲ ನೀನು ಪ್ರಶ್ನೆ ಮಾಡುತ್ತೀಯಾ? ಎಂದು ತಾಂಡವ್, ಭಾಗ್ಯಳ ಬಾಯಿ ಮುಚ್ಚಿಸಿದ್ದಾನೆ.

ತಾಂಡವ್ ಬೇಸರ
ಮನೆಯ ಬಳಿ ತನ್ವಿ ಕೈಯನ್ನು ತಾಂಡವ್ ಹಿಡಿದುಕೊಂಡಿದ್ದಾನೆ. ತನ್ವಿ, ತಾಂಡವ್ ಮೇಲೆ ಕೋಪ ಮಾಡಿಕೊಂಡು ಕೈಯನ್ನು ಬಿಡಿಸಿಕೊಂಡು ಮನೆ ಒಳಗೆ ಹೋಗಿದ್ದಾಳೆ ಇದರಿಂದ ತಾಂಡವ್ಗೆ ಬೇಸರವಾಗಿದೆ. ತಾಂಡವ್ಗೆ ಭಾಗ್ಯ ಬುದ್ಧಿ ಮಾತುಗಳನ್ನು ಹೇಳಿದ್ದಾಳೆ. ಮಕ್ಕಳು ತುಂಬಾ ಸೂಕ್ಷ್ಮ ಮನಸಿನವರು ಮುದ್ದು ಮಾಡೋದಷ್ಟೇ ಅಲ್ಲ ಅವರಿಗೆ ಪ್ರೀತಿಯನ್ನು ಸಹ ಕೊಡಬೇಕು ಎಂದಿದ್ದಾಳೆ. ಶ್ರೇಷ್ಠಾಳಿಂದ ನನಗೆ ನೆಮ್ಮದಿಯಿಲ್ಲ, ತನ್ವಿಗೆ ಈ ರೀತಿ ಆಯಿತು, ಅಮ್ಮನಿಗೆ ಕಾಲು ಮುರಿಯಿತು ಎಂದು ತಾಂಡವ್ ಯೋಚನೆ ಮಾಡಿದ್ದಾನೆ. ಅಷ್ಟೇ ಅಲ್ಲ ಈ ಭಾಗ್ಯ ಬಳಿ ಬುದ್ದಿ ಮಾತನ್ನು ಕೇಳುವ ಪರಿಸ್ಥಿತಿಗೆ ನನ್ನ ತಂದು ನಿಲ್ಲಿಸಿ ಬಿಟ್ಟಳು ಎಂದು ಬೇಸರ ಮಾಡಿಕೊಂಡಿದ್ದಾನೆ.
ತಾಂಡವ್ ಮೇಲೆ ಅನುಮಾನ
ಮನೆಯವರಿಗೆಲ್ಲರಿಗೂ ಸಹ ಅನುಮಾನ ಬರುತ್ತಿದೆ. ಯಾಕೆಂದರೆ ತಾಂಡವ್ ನಡವಳಿಕೆ ಆ ರೀತಿಯಾಗಿ ಇದೆ. ಗುಪ್ತಗುಪ್ತವಾಗಿ ಏನನ್ನೋ ಮಾತನಾಡುತ್ತಿದ್ದಾನೆ ಎಂದು ಧರ್ಮರಾಜ್ ಅನುಮಾನ ವ್ಯಕ್ತಪಡಿಸಿದ್ದಾನೆ. ಇದೇ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಟೀ ಮಾಡಲು ಹೋಗಿ ಎಲ್ಲವನ್ನು ಚೆಲ್ಲಲಾಗಿದೆ. ಇನ್ನೂ ಟೇಬಲ್ ಮೇಲೆ ಮೂರ್ನಾಲ್ಕು ಕಪ್ಪುಗಳು ಇವೆ ಎಂದು ಭಾಗ್ಯ ಸಹ ಹೇಳಿದಾಗ ಮತ್ತಷ್ಟು ಅನುಮಾನ ಹೆಚ್ಚಾಗಿದೆ. ಇವರು ನಿಜವಾಗಿಯೂ ನನ್ನ ಮೇಲೆ ಅಂದು ಪ್ರಮಾಣ ಮಾಡಿದ್ದು ಸುಳ್ಳು ಎಂದು ಭಾಗ್ಯಳನ್ನು ಕಾಡುತ್ತಿದೆ. ತಾಂಡವ್ ಮಾತ್ರ ಎಲ್ಲದ್ದಕ್ಕೂ ಸಹ ಉತ್ತರ ರೆಡಿಯಾಗಿ ಇಟ್ಟುಕೊಂಡಿದ್ದಾನೆ. ತಂದೆ ತಾಯಿ ಕೇಳುವ ಪ್ರಶ್ನೆಗಳಿಗೆ ರೆಡಿಮೇಡ್ ಉತ್ತರ ರೆಡಿಯಾಗಿ ಇರುತ್ತದೆ.


Click it and Unblock the Notifications











