ಮೊದಲ ಬಾರಿಗೆ ಸರ್ಫ್ ರೈಡ್ ಮಾಡಿದ ಕುಂದಾಪುರದ ಕುವರಿ ಹೇಳಿದ್ದೇನು ಗೊತ್ತೆ?
ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಕುಂದಾಪುರದ ಕುವರಿ ಮುಂದೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಟಾಮ್ ಬಾಯ್ ಅರ್ಥಾತ್ ಬೋಲ್ಡ್ ಆಗಿರುವ ಭೂಮಿ ಶೆಟ್ಟಿ ಸಮಯ ಸಿಕ್ಕಾಗಲೆಲ್ಲಾ ಹೊಸದಾದ ಅಡ್ವೆಂಚರ್ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಬೈಕ್ ಓಡಿಸುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಭೂಮಿ ಶೆಟ್ಟಿ ಬೆಂಗಳೂರಿನಿಂದ ಕುಂದಾಪುರಕ್ಕೆ ಒಬ್ಬರೇ ಬೈಕ್ನಲ್ಲಿ ಬಂದು ಹೋಗಿದ್ದು ಇದೆ.
ಇದರ ನಡುವೆ ಮಗದೊಂದು ಸಾಹಸಮಯ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ ಭೂಮಿ ಶೆಟ್ಟಿ. ಹೌದು, ಸರ್ಫ್ ರೈಡ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ ನಟಿ ಭೂಮಿ ಶೆಟ್ಟಿ. ಅಬ್ಬರಿಸಿ ಬರುವ ಅಲೆಗಳನ್ನು ಹ್ಯಾಂಡಲ್ ಮಾಡಿಕೊಂಡು ಸರ್ಫ್ ಮಾಡಿರುವ ಈಕೆ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದ ಹಾಗೇ ಮುಖ್ಯವಾದ ವಿಚಾರವೆಂದರೆ ಈ ಸಾಹಸವನ್ನು ಕೈಗೆತ್ತಿಕೊಳ್ಳುವ ಮೊದಲು ಐದು ದಿನಗಳ ಕಾಲ ಈಕೆ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದಾರೆ.

ಹೌದು, ಸರ್ಫರ್ಗಳ ಸಹಾಯದಿಂದ ಪ್ರತಿದಿನ ಪ್ರ್ಯಾಕ್ಟೀಸ್ ಮಾಡಿದ ಭೂಮಿ ಶೆಟ್ಟಿ ಈ ವಿಶೇಷವಾದ ಅನುಭವವನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಸರ್ಫಿಂಗ್ ಎಂಬುದು ಒಂದು ಸಾಹಸ ಕ್ರೀಡೆ. ನುರಿತ ತಜ್ಞರ ಸಹಾಯದಿಂದ ನಾಜೂಕಿನ ಅಲೆಗಳ ಮೇಲೆ ರೈಡ್ ಮಾಡುವುದೇ ಸರ್ಫಿಂಗ್. ಏಪ್ರಿಲ್, ಮೇ ತಿಂಗಳಲ್ಲಿ ಸರ್ಫಿಂಗ್ ಮಾಡುವುದಕ್ಕೆ ಅವಕಾಶ ಜಾಸ್ತಿ. ಅದರಲ್ಲೂ ಮಂಗಳೂರಿನ ಬೀಚ್ಗಳು ಸರ್ಫಿಂಗ್ಗೆ ಹೇಳಿ ಮಾಡಿಸಿದ್ದು" ಎಂದು ಬರೆದುಕೊಂಡಿರುವ ಭೂಮಿ ಶೆಟ್ಟಿ ತರಬೇತುದಾರರಾಗಿರುವ ಸಚಿನ್ ನಾಯಕ್ ಅವರಿಗೆ ಧನ್ಯವಾದಗಳನ್ನು ಹೇಳಿಕೊಂಡಿದ್ದಾರೆ.
ಇನ್ನು ನಟನೆಯ ವಿಚಾರವೆಂದರೆ ಕಳೆದ ವರ್ಷ ಬಿಡುಗಡೆಯಾದ ತೆಲುಗು ಸಿನಿಮಾ "ಶರತಲು ವರ್ತಿಸ್ತಾಯಿ" ಯಲ್ಲಿ ನಾಯಕಿಯಾಗಿ ನಟಿಸಿದ್ದ ಭೂಮಿ ಶೆಟ್ಟಿ ಪರಭಾಷೆಯ ಸಿನಿರಂಗದಲ್ಲಿ ನಟನಾ ಛಾಪನ್ನು ಪಸರಿಸಿದ್ದರು. ಸದ್ಯ ನಟನೆಯಿಂದ ಕೊಂಚ ದೂರವೇ ಉಳಿದಿರುವ ಕುಂದಾಪುರದ ಕುವರಿ ಕಿರುತೆರೆಗೆ ಕಾಲಿಟ್ಟಿದ್ದು ಕಿನ್ನರಿಯಾಗಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯ ಮಣಿಯಾಗಿ ಕಿರುತೆರೆ ಪಯಣ ಶುರು ಮಾಡಿದ ಭೂಮಿ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿದರು. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಭೂಮಿ ಶೆಟ್ಟಿ ಮತ್ತ್ಯಾವ ಕನ್ನಡ ಧಾರಾವಾಹಿಯಲ್ಲಿ ಇಲ್ಲಿಯ ತನಕ ಬಣ್ಣ ಹಚ್ಚಿಲ್ಲ ಎಂಬುದು ಕಿರುತೆರೆ ವೀಕ್ಷಕರಿಗೆ, ಭೂಮಿ ಶೆಟ್ಟಿ ಅಭಿಮಾನಿಗಳಿಗೆ ನಿಜವಾಗಿಯೂ ಬೇಸರದ ಸಂಗತಿ.
'ಕಿನ್ನರಿ' ಧಾರಾವಾಹಿಯ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿದ ಈಕೆ 'ನಿನ್ನೆ ಪೆಳ್ಳಡ್ತಾ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಮಿಂಚಿದರು. ಆ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟ ಕುಂದಾಪುರದ ಕುವರಿ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡರು.
ತದ ನಂತರ 'ಅತ್ತರಿಂತಲೋ ಅಕ್ಕ ಚೆಲುಲು' ಧಾರಾವಾಹಿಯಲ್ಲಿಯೂ ಈಕೆ ನಾಯಕಿ ಧರಣಿಯಾಗಿ ಕಮಾಲ್ ಮಾಡಿದರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಗಳ ಪೈಕಿ ಬಿಗ್ ಬಾಸ್ ಕೂಡಾ ಒಂದು. 'ಬಿಗ್ ಬಾಸ್ ಸೀಸನ್ 7' ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಶೆಟ್ಟಿ ತಮ್ಮ ನಡೆ, ನುಡಿಯ ಮೂಲಕ ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು. ಮಾತ್ರವಲ್ಲ ಆ ಶೋವಿನಲ್ಲಿ ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಇನ್ನು ಕೊವಿಡ್ ಸಮಯದಲ್ಲಿ ಬಿಡುಗಡೆಯಾದ 'ಇಕ್ಕಟ್' ಸಿನಿಮಾದಲ್ಲಿ ನಾಯಕಿ ಜಾನ್ವಿ ಆಲಿಯಾಸ್ ಜಾನು ಆಗಿ ಅಭಿನಯಿಸಿದ್ದರು ಭೂಮಿ ಶೆಟ್ಟಿ. ಆ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಭೂಮಿ ಶೆಟ್ಟಿ ನಾಗಭೂಷಣ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡಿತ್ತು.


Click it and Unblock the Notifications











