Kruthika Ravindra: ನಟಿ ಕೃತಿಕಾ ರವೀಂದ್ರ ಕಿರುತೆರೆ ಹಾಗೂ ಸಿನಿಮಾ ಜರ್ನಿ
ಬಣ್ಣದ ಲೋಕವೇ ಹಾಗೆ, ಈಗ ಇದ್ದವರು ಕೆಲವೇ ದಿನಗಳಲ್ಲಿ ಮಾಯಾವಾಗುತ್ತಾರೆ. ಪುನಃ ವರ್ಷಗಳು ಉರುಳಿದ ಮೇಲೆ ತೆರೆಮೇಲೆ ಕಾಣಿಸಿಕೊಂಡು ಅಚ್ಚರಿಯಾಗುವಂತೆ ಮಾಡುತ್ತಾರೆ.
ಬಣ್ಣದ ಲೋಕದಲ್ಲಿ ಶಾಶ್ವತವಾಗಿ ಇರುವುದು ತುಂಬಾ ಕಷ್ಟ. ಸದಾ ಕೈ ಹಿಡಿದು ಮೇಲೆತ್ತುವವರು ಒಬ್ಬರು ಇರಬೇಕು. ಕಲಾವಿದರಿಗೆ ಒಳ್ಳೆ ಒಳ್ಳೆ ಅವಕಾಶ ಸಿಗುತ್ತಲೇ ಇರಬೇಕು. ಅದೃಷ್ಟವೂ ಅದಕ್ಕೆ ಜೊತೆಯಾಗಬೇಕು.
ಸ್ವಲ್ಪ ಹೆಚ್ಚು ಕಡಿಮೆಯಾದರೂ ಬಣ್ಣದ ಲೋಕದಿಂದ ಮರೆಯಾಗಿ ಬಿಡುತ್ತಾರೆ. ಇನ್ನು ಧಾರಾವಾಹಿಗಳ ನಾಯಕ-ನಾಯಕಿಯರು ಮತ್ತೊಂದು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಬಹಳ ಸಮಯ ಹಿಡಿಯುತ್ತದೆ.

ಕಲಾವಿದರ ಪಾತ್ರಗಳು
ಪ್ರೇಕ್ಷಕರು ಹಿಟ್ ಆದ ಧಾರಾವಾಹಿಯ ಪಾತ್ರಗಳ ಮೂಲಕವೇ ಕಲಾವಿದರನ್ನು ಗುರುತಿಸುತ್ತಾರೆ. ಆಗ ಅಂತಹ ಕಲಾವಿದರಿಗೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಒಂದು ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ನಟಿಸಿದವರಿಗೆ ಮತ್ತೊಂದು ಧಾರಾವಾಹಿಯಲ್ಲಿ ನಟಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಕನ್ನಡ ಕಿರುತೆರೆಯಲ್ಲಿ ಹಿಟ್ ಆದ ಧಾರಾವಾಹಿಗಳಲ್ಲಿ 'ರಾಧಾ ಕಲ್ಯಾಣ', 'ಶ್ರೀರಸ್ತು ಶುಭಮಸ್ತು', 'ಅಗ್ನಿಸಾಕ್ಷಿ', 'ಮನೆಯೊಂದು ಮೂರು ಬಾಗಿಲು', 'ಮುಕ್ತ ಮುಕ್ತ ಮುಕ್ತ', 'ಮಾಯಾಮೃಗ', 'ಅಮೃತವರ್ಷಿಣಿ' ಹೀಗೆ ಹೇಳುತ್ತಾ ಹೋದರೆ ಪಟ್ಟಿ ಮುಂದುವರೆಯುತ್ತದೆ.

ಸಿನಿಮಾಗಳಲ್ಲೂ ಕೃತಿಕಾ ಬ್ಯುಸಿ
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿಯಾಗಿ ಕೃತಿಕಾ ರವೀಂದ್ರ ಅವರು ನಟಿಸಿದ್ದರು. 9 ವರ್ಷಗಳ ಹಿಂದೆ ಮೂಡಿ ಬಂದಿದ್ದ ಈ ಧಾರಾವಾಹಿಯಲ್ಲಿ ಕೃತಿಕಾ ಅವರ ಜೋಡಿಯಾಗಿ ನಟ ಚಂದನ್ ಅಭಿನಯಿಸಿದ್ದರು. ಇಂದಿಗೂ ಕೃತಿಕಾ ಅವರನ್ನು ಜನ ರಾಧಾ ಎಂದೇ ಗುರುತಿಸುತ್ತಾರೆ. ಬಳಿಕ 2015ರಲ್ಲಿ ಬಿಗ್ ಬಾಸ್ ಸ್ಪರ್ಧಿ ಆಗಿದ್ದರು. ಇದಾದ ಬಳಿಕ 'ಪಟ್ರೆ ಲವ್ಸ್ ಪದ್ಮಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟರು. ನಂತರ ಕೃತಿಕಾ ಅವರು 'ಶಾರ್ದುಲ' ಎಂಬ ಚಿತ್ರದಲ್ಲಿ ನಟಿಸಿದರು. ನಂತರ ವೀಡಿಯೋ ಆಲ್ಬಂಗಳಲ್ಲಿ ಬ್ಯುಸಿಯಾದರು. ಅಷ್ಟೇ ಅಲ್ಲದೇ 'ಆಟ', 'ಕೆಂಗುಲಾಬಿ', 'ಲಿಫ್ಟ್ ಕೊಡ್ಲಾ', 'ರಾಜನಿವಾಸ', 'ಯಾರಿಗುಂಟು ಯಾರಿಗಿಲ್ಲ' ಚಿತ್ರಗಳಲ್ಲೂ ನಟಿಸಿದರು.

ಮೂಲತಃ ಮಲೆನಾಡಿನ ಬೆಡಗಿ
ಬಾಲನಟಿಯಾಗಿ ಕಿರುತೆರೆಗೆ ಬಂದ ಮಲೆನಾಡ ಹುಡುಗಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು. ಜಿಂಬಾ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಉದಯ ಟಿವಿಯಲ್ಲಿ ಪ್ರಸಾರವಾದ 'ಮನೆಮಗಳು' ಧಾರಾವಾಹಿಗೆ ಬಣ್ಣ ಹಚ್ಚಿದರು. ಕೃತಿಕಾ ಅವರ ತಂದೆ ಹೆಸರು ರವೀಂದ್ರ, ತಾಯಿ ಮೀನಾಕೃತಿ. ನಟನೆಯ ನಂಟಿಲ್ಲದಿದ್ದರೂ ಕೃತಿಕಾ ಅವರಿಗೆ ತಾನಾಗಿಯೇ ಒಲಿದು ಬಂದಿತ್ತು. ಇವರ ತಂದೆ ಆಯುರ್ವೇದ ವೈದ್ಯರಾದ್ದರು. ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಕೃತಿಕಾ ತಾಯಿ ಮಡಿಲಲ್ಲಿ ಬೆಳೆದವರು.

ಹೊಸ ಪಾತ್ರದಲ್ಲಿ ಎಂಟ್ರಿ
ಇನ್ನು ಇಷ್ಟು ವರ್ಷ ಬಣ್ಣದ ಲೋಕದಿಂದ ಮರೆಯಾಗಿದ್ದ ಕೃತಿಕಾ ಅವರು ಈಗ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಧೆಯಾಗಿದ್ದ ಕೃತಿಕಾ ಈಗ ಬೇರೊಂದು ಪಾತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ 'ಭೂಮಿಗೆ ಬಂದ ಭಗವಂತ' ಎಂಬ ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಸಾರಗೊಳ್ಳಲಿದೆ. ಇದರಲ್ಲಿ ಕೃತಿಕಾ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೋಮೋ ಪ್ರಸಾರಗೊಂಡಿದ್ದು, ಧಾರಾವಾಹಿ ಶುರುವಾಗಬೇಕಿದೆ.


Click it and Unblock the Notifications










