Sushma Shekhar: ಭುವನೇಶ್ವರಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರೋ ಸುಷ್ಮಾ ಶೇಖರ್ ಹಿನ್ನೆಲೆಯೇನು?
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಜನನಿ' ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ 'ಜನನಿ' ಧಾರಾವಾಹಿಯಲ್ಲಿ ಭುವನೇಶ್ವರಿ ಅನ್ನೋ ಹೊಸ ಪಾತ್ರ ಎಂಟ್ರಿಯಾಗಿದೆ. ಕಿರುತೆರೆ ನಟಿ ಸುಷ್ಮಾ ಶೇಖರ್ ಇದೇ ಭುವನೇಶ್ವರಿ ಪಾತ್ರದ ಮೂಲಕ ಜನನಿ ತಂಡ ಸೇರಿದ್ದು ವೀಕ್ಷಕರ ಮನ ಸೆಳೆಯುತ್ತಿದ್ದಾರೆ.
'ಜನನಿ' ಧಾರಾವಾಹಿಯಲ್ಲಿ ತಾನು ನಟಿಸುತ್ತಿರುವ ವಿಚಾರವನ್ನು ಸ್ವತಃ ಸುಷ್ಮಾ ಶೇಖರ್ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೊಂದು ವಿಭಿನ್ನವಾದ ಪಾತ್ರ ಎಂದು ಹೇಳಿದ್ದಾರೆ. ಜೊತೆಗೆ ಈಗಾಗಲೇ ಅವರು ಜನನಿ ಧಾರಾವಾಹಿಯ ತಂಡವನ್ನು ಸೇರಿಕೊಂಡಿದ್ದು, ಸಕತ್ ಖುಷಿಯಲ್ಲಿದ್ದಾರೆಯಂತೆ. ಧಾರಾವಾಹಿಯ ಕಲಾವಿದರುಗಳು, ಟೆಕ್ನಿಷಿಯನ್ಸ್ ಎಲ್ಲರೂ ಸಂತಸದಿಂದ ಮಾತನಾಡಿಸುವ ಕಾರಣ ಹೊಸ ತಂಡ ಎಂದೇನಿಸಲಿಲ್ಲ ಎಂದು ಹೇಳುತ್ತಾರೆ ಸುಷ್ಮಾ ಶೇಖರ್.

ನೇಹಾ ಆಗಿ ಕಿರುತೆರೆಯಲ್ಲಿ ಮೋಡಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸದ್ಯ ಮುಕ್ತಾಯದ ಹಂತದಲ್ಲಿರುವ ಧಾರಾವಾಹಿ 'ಗಿಣಿರಾಮ'. ಈ ಧಾರಾವಾಹಿಯಲ್ಲಿ ನಾಯಕ ಶಿವರಾಮನ ಪ್ರೇಯಸಿ ನೇಹಾ ಆಗಿ ಸುಷ್ಮಾ ಶೇಖರ್ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ನೆಗೆಟಿವ್ ಛಾಯೆಯಿರುವ ಪಾತ್ರ ಇದಾಗಿದ್ದರೂ ತದ ನಂತರ ಪಾಸಿಟಿವ್ ಆಗಿ ಬದಲಾಗಿತ್ತು. ಅರಳು ಹುರಿದಂತೆ ಪಟಪಟನೆ ಉತ್ತರಕನ್ನಡ ಭಾಷೆ ಮಾತನಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಸುಷ್ಮಾ ಶೇಖರ್ಗೆ ಇದು ಮೊದಲನೇ ಧಾರಾವಾಹಿಯಲ್ಲ.
'ವೆಂಕಟೇಶ್ವರ ಮಹಿಮೆ' ಮೂಲಕ ಕಿರುತೆರೆಗೆ ಎಂಟ್ರಿ
'ವೆಂಕಟೇಶ್ವರ ಮಹಿಮೆ' ಧಾರಾವಾಹಿ ಮೂಲಕ ನಟನಾ ಪಯಣ ಶುರು ಮಾಡಿದ ಸುಷ್ಮಾ ಶೇಖರ್ ಮುಂದೆ 'ಕುಸುಮಾಂಜಲಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕುಮಿ' ಧಾರಾವಾಹಿಯಲ್ಲಿ ನಾಯಕಿ ಲಕುಮಿ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಸುಷ್ಮಾ ಶೇಖರ್ ತದ ನಂತರ 'ಕನಕ' ಧಾರಾವಾಹಿಯಲ್ಲಿ ನಾಯಕಿ ಕನಕ ಆಗಿ ಮೋಡಿ ಮಾಡಿದರು.

ಓದಿನ ಸಲುವಾಗಿ ನಟನೆಗೆ ಬ್ರೇಕ್
'ಕನಕ' ಧಾರಾವಾಹಿಯ ನಂತರ ಶಿಕ್ಷಣದ ಕಾರಣಕ್ಕಾಗಿ ಅಭಿನಯದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಸುಷ್ಮಾ ಬಿಬಿಎ ಪದವೀಧರೆ ಹೌದು. ಪದವಿಯ ಬಳಿಕ ಶ್ರುತಿ ನಾಯ್ಡು ನಿರ್ದೇಶನದ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಕೂಡಾ ಈಕೆ ಪಡೆದುಕೊಂಡರು. 'ಯಾರೇ ನೀ ಮೋಹಿನಿ' ಧಾರಾವಾಹಿಯ ಬೆಳ್ಳಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಸುಷ್ಮ ಆ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು.


Click it and Unblock the Notifications











