BBK10: ಬಿಗ್ಬಾಸ್ ಮನೆ ಬಾಗಿಲುಗಳೆಷ್ಟು? ಜೈಲು ಕಂಬಿಗಳೆಷ್ಟು?: ಉತ್ತರಿಸಲು ಸ್ಪರ್ಧಿಗಳ ತಿಣುಕಾಟ
ಬಿಗ್ಬಾಸ್ ಕನ್ನಡ ಸೀಸನ್ 10 ದಿನದಿಂದ ದಿನಕ್ಕೆ ವೀಕ್ಷಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಆದರೆ ಕೊನೆ ವಾರಗಳಲ್ಲಿ ಕೊಡಬೇಕಾದ ಟಾಸ್ಕ್ಗಳನ್ನು ಬಹಳ ಬೇಗ ಕೊಡುತ್ತಿದ್ದಾರೆ ಎನ್ನುವ ವಾದ ಕೆಲವರದ್ದು. ಸದ್ಯ ಬಿಗ್ಬಾಸ್ ಸ್ಪರ್ಧಿಗಳಿಗೆ ತಮ್ಮ ಮನೆಯವರಿಂದ ಪತ್ರಗಳು ಬಂದಿವೆ. ಆದರೆ ಅದು ಸಿಗೋದು ಅಷ್ಟು ಸುಲಭ ಅಲ್ಲ.
ಇತ್ತೀಚೆಗೆ ದೀಪಾವಳಿ ಹಬ್ಬದ ವಿಶೇಷವಾಗಿ ಸ್ಪರ್ಧಿಗಳಿಗೆ ಮನೆ ಊಟ ಸವಿಯುವ ಅವಕಾಶ ಸಿಕ್ಕಿತ್ತು. ಇದೀಗ ಮನೆಯವರ ಪ್ರೀತಿ ತುಂಬಿದ ಪತ್ರಗಳನ್ನು ಓದುವ ತವಕ. ಆದರೆ ಆ ಪತ್ರಗಳು ಅಷ್ಟು ಸುಲಭವಾಗಿ ಸ್ಪರ್ಧಿಗಳ ಕೈಗೆ ಸಿಗುತ್ತಿಲ್ಲ. ಪ್ರತಿ ಪತ್ರಕ್ಕೂ ಟಾಸ್ಕ್ಗಳನ್ನು ಎದುರಿಸುವಂತಾಗಿದೆ. ಗೆದ್ದವರಿಗೆ ಮಾತ್ರ ಪತ್ರ ಕೊಡುವುದಾಗಿ ಬಿಗ್ ಬಾಸ್ ಹೇಳಿದ್ದಾರೆ.

ಈಗಾಗಲೇ ನಮ್ರತಾ ಗೌಡ ಹಾಗೂ ವಿನಯ್ ಗೌಡ ತಮ್ಮ ತಮ್ಮ ಮನೆಯಿಂದ ಬಂದ ಪತ್ರಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಕೆಲವರಿಗೆ ಸಿಕ್ಕಿಲ್ಲ. ಇನ್ನುಳಿದ ಸದಸ್ಯರು ಪತ್ರಗಳನ್ನು ಪಡೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದವರು ಮನೆಯಿಂದ ಪತ್ರ ಪಡೆಯಲಿದ್ದಾರೆ. ನೋಡೊಕೆ ಬಹಳ ಸಿಂಪಲ್ ಎನಿಸಿದರೂ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭ ಏನಲ್ಲ.
ಬಿಗ್ಬಾಸ್ ಮನೆಗೆ ಸಂಬಂಧಿಸಿದಂತೆ ಒಂದಷ್ಟು ಪ್ರಶ್ನೆಗಳನ್ನು ಸ್ಪರ್ಧಿಗಳ ಮುಂದಿಟ್ಟಿದ್ದಾರೆ. ಆದರೆ ಉತ್ತರಿಸಲು ಎಲ್ಲರೂ ತಿಣುಕಾಡುತ್ತಿದ್ದಾರೆ. ಈ ಪ್ರೋಮೊ ಸಖತ್ ಸದ್ದು ಮಾಡ್ತಿದೆ.

ಸ್ನೇಹಿತ್- ನಮ್ರತಾ, ವಿನಯ್- ಸಿರಿ, ಕಾರ್ತಿಕ್- ಮೈಖೆಲ್, ಪ್ರತಾಪ್- ಭಾಗ್ಯಶ್ರೀ ಹೀಗೆ ನಾಲ್ಕು ಜೋಡಿಗಳನ್ನು ಮಾಡಿ ಪ್ರತ್ಯೇಕವಾಗಿ ಕರೆದು ಬಿಗ್ಬಾಸ್ ಮನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಬೆಡ್ರೂಮ್ನಲ್ಲಿರುವ ಕನ್ನಡಿಗಳು ಎಷ್ಟು? ಈ ಮನೆಯಲ್ಲಿರುವ ಒಟ್ಟು ಬಾಗಿಲುಗಳು ಎಷ್ಟು? ಬಿಗ್ಬಾಸ್ ಮನೆ ಜೈಲಿನಲ್ಲಿರುವ ಕಂಬಿಗಳು ಎಷ್ಟು? ಹೀಗೆ ಪ್ರಶ್ನೆಗಳನ್ನು ಕೇಳಲಾಗಿದೆ.
24 ಗಂಟೆಗಳ ಕಾಲ ಒಂದೇ ಮನೆಯಲ್ಲಿರುವ ಸ್ಪರ್ಧಿಗಳು ಮನೆಯ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ? ಎಷ್ಟು ಸೂಕ್ಷ್ಮವಾಗಿ ಮನೆಯನ್ನು ಗಮನಿಸಿದ್ದಾರೆ? ಎನ್ನುವುದು ಈ ರಸಪ್ರಶ್ನೆ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಆದರ ಉತ್ತರಿಸೋದು ಅಷ್ಟು ಸುಲಭವಾಗಿರಲಿಲ್ಲ. ಇಂತಹ ಪ್ರಶ್ನೆಗಳನ್ನು ಯಾರೂ ಊಹಿಸಿರಲಿಲ್ಲ. ಪ್ರೋಮೊದಲ್ಲಿ ಇಂದೆಂಥ ಕ್ವಿಜ್ ಗುರೂ ಎಂದು ತುಕಾಲಿ ಸಂತು ಶಾಕ್ ಆಗಿರೋದನ್ನು ನೋಡಬಹುದು.
ಸಂಗೀತಾ ಶೃಂಗೇರಿ, ಇಶಾನಿ ಹಾಗೂ ಸಿರಿ ಮನೆಯವರು ಬರೆದ ಪತ್ರ ಓದಲು ಸಿಗಲಿಲ್ಲ ಎಂದು ಭಾವುಕರಾಗಿದ್ದಾರೆ. ಇನ್ನು ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಚರ್ಚೆ ಕುಡ ನಡೀತಿದೆ. ಈ ವಾರ ನೀತು, ಕಾರ್ತಿಕ್, ತನಿಷಾ, ವಿನಯ್ ಗೌಡ, ತುಕಾಲಿ ಸಂತು, ಈಶಾನಿ, ನಮ್ರತಾ ನಾಮಿನೇಟ್ ಆಗಿದ್ದಾರೆ. ಈ ಬಾರಿ ಲೂಡೋ ಆಟದ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಇದಕ್ಕು ಮುನ್ನ ಕ್ಯಾಪ್ಟನ್ ಮೈಖಲ್, ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದ್ದರು.
ನಾಮಿನೇಷನ್ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿರಿಕ್ ಉಂಟಾಗಿತ್ತು. ವಾಗ್ವಾದವೂ ನಡೀತು. ಯಾರು ಯಾರನ್ನು ಸೇಫ್ ಮಾಡಿದರು? ಯಾಕೆ? ಎನ್ನುವ ವಿಚಾರದಿಂದ ಬಹಳ ಆಪ್ತರಾಗಿದ್ದವರ ನಡುವೆಯೇ ಬಿರುಕು ಮೂಡುವಂತಾಯಿತು. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಭಾಗ್ಯಶ್ರೀ, ನೀತು ಹಾಗೂ ಇಶಾನಿ ಕೊಂಚ ಡಲ್ ಎನಿಸುತ್ತಿದ್ದಾರೆ. ಹಾಗಾಗಿ ಈ ವಾರ ಈ ಮೂವರಲ್ಲಿ ಒಬ್ಬರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಎನ್ನುವ ಚರ್ಚೆ ನಡೀತಿದೆ. ಬಿಗ್ಬಾಸ್ ಕನ್ನಡ 10 ಶೋ 24 ಗಂಟೆಗಳ ಕಾಲ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದಾಗಿದೆ.


Click it and Unblock the Notifications











