BBK 12: ನೆಟ್ಟು ಬೋಲ್ಟು.. ಬಿಗ್ಬಾಸ್ ಬಂದ್ ವಿಚಾರ; ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ
ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದ ಬೆನ್ನಲ್ಲೇ ಬಿಗ್ಬಾಸ್ -12 ಶೋಗೂ ಸಂಕಷ್ಟ ಎದುರಾಗಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್ ಸ್ಟುಡಿಯೋಸ್ ಸೀಸ್ ಆಗಿದೆ. ಅದರ ಒಳಗೆ ಸೆಟ್ ಹಾಕಿ ಚಿತ್ರೀಕರಿಸುತ್ತಿದ್ದ ಬಿಗ್ಬಾಸ್ ಶೋಗೂ ವಿಘ್ನ ಎದುರಾಗಿದೆ. ಸ್ಪರ್ಧಿಗಳು, ತಂತ್ರಜ್ಞರು, ಸಿಬ್ಬಂದಿ ಎಲ್ಲರೂ ಮನೆ ಖಾಲಿ ಮಾಡಿ ರೆಸಾರ್ಟ್ ಸೇರಿದ್ದಾರೆ.
ಬಿಗ್ಬಾಸ್ ಶೋಗೆ ವಿಘ್ನ ಎದುರಾದ ಬೆನ್ನಲ್ಲೇ ಸಾಕಷ್ಟು ಚರ್ಚೆ, ಊಹಾಪೋಹ ಶುರುವಾಗಿತ್ತು. ಬಿಗ್ಬಾಸ್ ಶೋ ನಿಲ್ಲಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ಬಿಗ್ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಈ ಹಿಂದೆ "ನಮಗೆ ಕನ್ನಡ ಚಿತ್ರರಂಗದ ನಟ್ಟು ಬೋಲ್ಟ್ ಟೈಟ್ ಮಾಡೋದು ಹೇಗೆ ಅನ್ನೋದು ಗೊತ್ತು" ಎಂದು ಡಿಸಿಎಂ ಎಚ್ಚರಿಕೆ ನೀಡಿದ್ದರು. ಇದೇ ಕಾರಣಕ್ಕೆ ಈಗ ಬಿಗ್ಬಾಸ್ ಶೋ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಸಂಬರಗಿ ಹೇಳಿದ್ದರು.

ಜಾಲಿವುಡ್ ಸ್ಟುಡಿಯೋ ಬಂದ್ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. "ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ. "ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮುಖ್ಯ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದು ಅದಕ್ಕೆ ಅವಕಾಶ ಕೊಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ" ಎಂದಿದ್ದಾರೆ.
"ಬರೀ ಬಿಗ್ಬಾಸ್ ಮಾತ್ರವಲ್ಲ, ಎಲ್ಲಾ ಮನರಂಜನೆ ಕಾರ್ಯಕ್ರಮಗಳು ನಡೆಯಬೇಕು. ಜಾಲಿವುಡ್ ಸ್ಟುಡಿಯೋದವರು ಪರಿಸರ ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಕೊಟ್ಟಿದೆ. ಆ ಆದೇಶದಂತೆ ಕ್ರಮ ಕೈಗೊಂಡಿದ್ದಾರೆ. ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದಾರೆ. ನಾನು ಮಾಧ್ಯಮಗಳಲ್ಲಿ ಈ ವಿಚಾರ ನೋಡಿ ತಿಳಿದುಕೊಂಡೆ" ಎಂದು ಡಿಕೆಶಿ ತಿಳಿಸಿದ್ದಾರೆ.
"ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್" ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ "ಅವರು ಏನಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಮಾಡಲಿ, ಅಥವಾ ಮೇಲಿನಿಂದ ಯಾರನ್ನಾದರೂ ಕರೆದುಕೊಂಡು ಬಂದು ಮಾಡಿಕೊಳ್ಳಲಿ. ಈ ವಿಚಾರದಲ್ಲಿ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನೆಮ್ಮದಿ ಇಲ್ಲ, ನಿದ್ದೆ ಇಲ್ಲ" ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಒಟ್ಟಾರೆ ಡಿಕೆ ಶಿವಕುಮಾರ್ ಮಾತು ಕೇಳಿದರೆ ಶೀಘ್ರದಲ್ಲೇ ಜಾಲಿವುಡ್ ಸ್ಟುಡಿಯೋಗೆ ರಿಲೀಫ್ ಸಿಗುವ ಸೂಚನೆ ಸಿಕ್ಕಿದೆ. ಬಿಗ್ಬಾಸ್ 12 ಶೋ ಚಿತ್ರೀಕರಣ ಕೂಡ ಆದಷ್ಟು ಬೇಗ ಪುನರಾರಂಭವಾಗುವ ಸಾಧ್ಯತೆಯಿದೆ. ಸದ್ಯ ಸ್ಪರ್ಧಿಗಳನ್ನು ರಾಮನಗರದ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದೆ. ಅಲ್ಲಿ ಕೂಡ ಸ್ಪರ್ಧಿಗಳಿಗೆ ಕಠಿಣ ನಿಯಮಗಳಿವೆ. ಇನ್ನು ಜಾಲಿವುಡ್ ಸ್ಟುಡಿಯೋಸ್ನ ಮಾತೃ ಸಂಸ್ಥೆ ವೇಲ್ಸ್ ಸ್ಟುಡಿಯೋ ತಾತ್ಕಾಲಿಕ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ನಾವು ಕೆಲವು ನಿಮಯಗಳನ್ನು ಸರಿಯಾಗಿ ಪಾಲಿಸಿಲ್ಲ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದೆ ಈ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ. ನಮಗೆ 15 ದಿನಗಳ ಅವಕಾಶ ಕೊಡಿ ಅಷ್ಟರಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ, ಸದ್ಯಕ್ಕೆ ನಮಗೆ ತಾತ್ಕಾಲಿಕ ಅನುಮತಿ ನೀಡಿ, ಆ ನಂತರ ಪರಿಶೀಲನೆ ನಡೆಸಿ ಅನುಮತಿಯನ್ನು ನವೀಕರಣಗೊಳಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಎರಡು ದಿನಕ್ಕೆ ಆಗುವಷ್ಟು ಕಂಟೆಂಟ್ ಬಿಗ್ಬಾಸ್ ಆಯೋಜಕರ ಬಳಿಯಿದೆ. ನಿನ್ನೆ(ಅಕ್ಟೋಬರ್ 7) ಸಂಜೆ ಬಿಗ್ಬಾಸ್ ಮನೆಯಿಂದ ಸ್ಪರ್ಧಿಗಳು ಹೊರಗೆ ಬಂದರೂ ಎಂದಿನಂತೆ ಎಪಿಸೋಡ್ ಪ್ರಚಾರವಾಗಿತ್ತು. ಇಂದು ರಾತ್ರಿ ಕೂಡ ಎಪಿಸೋಡ್ ಪ್ರಚಾರವಾಗಲಿದ್ದು ಈಗಾಗಲೇ ಪ್ರೋಮೊ ಸಹ ಬಿಡುಗಡೆಯಾಗಿದೆ.


Click it and Unblock the Notifications











