BBK12: ಪತ್ರದ ವಿಚಾರದಲ್ಲಿ ರಕ್ಷಿತಾಗೆ ಕಣ್ಣೀರು ಹಾಕಿಸಿದ ಅಶ್ವಿನಿ ಗೌಡ
ಬಿಗ್ಬಾಸ್ ಕನ್ನಡ ಸೀಸನ್ 12 ಇದೀಗ 6ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಯಾವುದೇ ಟಾಸ್ಕ್ ಕೂಡ ಇಲ್ಲ. ಸದ್ಯ ಭಾವನಾತ್ಮಕವಾಗಿ ಬಿಗ್ಬಾಸ್ ಸ್ಪರ್ಧಿಗಳನ್ನು ಕೆಣಕುವ ಕೆಲಸ ನಡೆಯುತ್ತಿದೆ. ಸ್ಪರ್ಧಿಗಳಿಗೆ ತಮ್ಮ ತಮ್ಮ ಮನೆಯಿಂದ ಪತ್ರಗಳು ಬರುತ್ತಿವೆ. ಅದನ್ನು ಓದಲು ಒಬ್ಬರಿಗೊಬ್ಬರು ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗ್ತಿದೆ. ಇದು ಸ್ಪರ್ಧಿಗಳ ನಡುವೆ ಬಿರುಕಿಗೆ ಕಾರಣವಾಗ್ತಿದೆ.
ಮನೆಗೆ ಬರುತ್ತಿರುವ ಪತ್ರಗಳನ್ನು ಓದುವುದು ಅಷ್ಟು ಸುಲಭವಲ್ಲ. ಒಬ್ಬರು ಪತ್ರ ಓದಲು ಮತ್ತೊಬ್ಬರು ತ್ಯಾಗ ಮಾಡಬೇಕಿದೆ. ಪತ್ರ ಸಿಕ್ಕವರು ಓದಿ ಭಾವುಕರಾದರೆ ಸಿಗದವರು ನೋವು ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ರಾಶಿಕಾ ಹಾಗೂ ರಕ್ಷಿತಾ ಮನೆಗಳಿಂದ ಇಬ್ಬರಿಗೂ ಪತ್ರಗಳು ಬಂದಿವೆ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪತ್ರ ಸಿಗಲಿದೆ. ಅದು ಯಾರಿಗೆ ಎನ್ನುವುದನ್ನು ಮನೆಯ ಇತರ ಸ್ಪರ್ಧಿಗಳು ನಿರ್ಧರಿಸಬೇಕಾದ ಸವಾಲು ಎದುರಾಗಿದೆ.

ಯಾರಿಗೆ ಪತ್ರ ಸಿಗಬೇಕು ಎಂದು ನಿರ್ಧರಿಸುವ ಕೆಲಸ ನಡೆದಿದೆ. ಕೆಲವರು ರಾಶಿಕಾಗೆ ಪತ್ರ ಸಿಗಬೇಕು ಅಂದ್ರೆ, ರಘು ಸೇರಿ ಕೆಲವರು ರಕ್ಷಿತಾಗೆ ಪತ್ರದ ಅವಶ್ಯಕತೆ ಇದೆ ಎಂದಿದ್ದಾರೆ. ಇದೇ ಕಾರಣಕ್ಕೆ ಈಗ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ಹೊಸ ಪ್ರೋಮೊದಲ್ಲಿ ಗೊತ್ತಾಗುತ್ತಿದೆ. ರಾಶಿಕಾ ಪರ ಧ್ರುವಂತ್, ಕಾಕ್ರೋಚ್ ಸುಧಿ, ಸ್ಪಂದನಾ, ಸೂರಜ್ ಹಾಗೂ ಅಶ್ವಿನಿ ಗೌಡ ವೋಟ್ ಮಾಡಿದ್ದಾರೆ.
ಈ ಮನೆಯಲ್ಲಿ ಮನಸ್ಥಿತಿಗಳು ಮನಸ್ಸುಗಳು ಹಾಳಾಗಲು ಮೂಲ ಕಾರಣ ರಕ್ಷಿತಾ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಒಮ್ಮತ ಬರದಿದ್ದರೆ ಇಬ್ಬರಿಗೂ ಪತ್ರ ಸಿಗಲ್ಲ ಎಂದು ಜಾನ್ವಿ ಹೇಳಿದ್ದಾರೆ. ಅದಕ್ಕೆ ಏನು ಮಾಡೋಣ, ನನ್ನ ವ್ಯಕ್ತಿತ್ವವನ್ನು ಇನ್ನೊಂದು ರೀತಿ ತಿರುಚಿ ಅವಮಾನ ಆಗಲು ಕಾರಣ ರಕ್ಷಿತಾ ಮಾಡಿದ ಅವಮಾನ. ಅದಕ್ಕೆ ಕ್ಷಮೆನೇ ಇಲ್ಲ ಎಂದು ಅಶ್ವಿನಿ ಗೌಡ ವಾದಿಸಿದ್ದಾರೆ. ಕೊನೆಗೆ ಇಬ್ಬರಲ್ಲಿ ಒಬ್ಬರ ಪತ್ರ ನುಚ್ಚು ನೂರಾಗಿದೆ. ಅದು ಯಾರದ್ದು ಎನ್ನುವುದು ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಒಂದ್ಕಡೆ ಪತ್ರ ಸಿಗಲ್ಲ ಎನ್ನುವ ನೋವು, ಮತ್ತೊಂದು ಕಡೆ ಅಶ್ವಿನಿಯ ಖಾರವಾದ ಮಾತುಗಳಿಗೆ ರಕ್ಷಿತಾ ಕಣ್ಣೀರು ಹಾಕಿದ್ದಾರೆ. ಮೊದಲಿನಿಂದ ಮನೆಯೊಳಗೆ ರಕ್ಷಿತಾ ಹಾಗೂ ಅಶ್ವಿನಿ ಗೌಡ ನಡುವೆ ಸಂಘರ್ಷ ಏರ್ಪಡುತ್ತಲೇ ಇದೆ. ವೈಯಕ್ತಿಕ ದ್ವೇಷದಿಂದಲೇ ಪತ್ರದ ವಿಚಾರದಲ್ಲಿ ಅಶ್ವಿನಿ ಗೌಡ ಕ್ಯಾತೆ ತೆಗೆದಿರುವುದು ಗೊತ್ತಾಗುತ್ತಿದೆ.
ಗೆಜ್ಜೆ ಸದ್ದಿನ ವಿಚಾರಕ್ಕೆ ಮನೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತ್ತು. ಅಶ್ವಿನಿ ಹಾಗೂ ಜಾಹ್ನವಿ ಸೇರಿ ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ಆಗ ಕೂಡ ರಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಬಳಿಕ ಅದಕ್ಕೆ ಆಕೆ ತಿರುಗೇಟು ನೀಡಿದ್ದರು. "ದೊಡ್ಡ ನಾಗವಲ್ಲಿ ನೀವೇ" ಎಂದು ಇಬ್ಬರ ಮೇಲೆ ರಕ್ಷಿತಾ ತಿರುಗಿ ಬಿದ್ದಿದ್ದರು. ಇನ್ನು ರಕ್ಷಿತಾ ಬಗ್ಗೆ ಮಾತನಾಡುವಾಗ ಅಶ್ವಿನಿ ಬಳಸಿದ ಪದವೊಂದು ವೀಕ್ಷಕರು ಬೇಸರಕ್ಕೂ ಕಾರಣವಾಗಿತ್ತು.
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಈ ವಾರ ಯಾರು ಮನೆಗೆ ಗುಡ್ಬೈ ಹೇಳುತ್ತಾರೆ ಎನ್ನುವ ಚರ್ಚೆ ನಡೀತಿದೆ.


Click it and Unblock the Notifications











